ಲಂಡನ್: ಟೋರಿ ನಿಧಿಸಂಗ್ರಹಣೆಯ ಔತಣಕೂಟದಲ್ಲಿ ಏರ್ಪಡಿಸಲಾಗಿದ್ದ ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರ ಭಾಷಣದ ವೇಳೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಜನಾಂಗೀಯವಾದ” ಪ್ರತಿಪಾದಿಸುವ ರುವಾಂಡಾ ನಿರಾಶ್ರಿತರ ಯೋಜನೆಯನ್ನು ರದ್ದುಗೊಳಿಸುವಂತೆ ಪ್ರೀತಿ ಪಟೇಲ್ ಅವರನ್ನು ಒತ್ತಾಯಿಸಿದ್ದಾರೆ.
ಗ್ರೀನ್ ನ್ಯೂ ಡೀಲ್ ರೈಸಿಂಗ್ನ ಹೋರಾಟಗಾರರು ಬಾಸ್ಸೆಟ್ಲಾ ಕನ್ಸರ್ವೇಟಿವ್ ಪಾರ್ಟಿಯ ಸ್ಪ್ರಿಂಗ್ ಡಿನ್ನರ್ನಲ್ಲಿ ಪಾಲ್ಗೊಂಡರು. ಈ ಸಮಾರಂಭದಲ್ಲಿ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅತಿಥಿಯಾಗಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಒಬ್ಬೊಬ್ಬರಾಗಿ ಎದ್ದುನಿಂತು ಪ್ರತಿಭಟನೆ ನಡೆಸುತ್ತಿರುವ ರೀತಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. ಪ್ರಜಾಪ್ರಭುತ್ವದ ರೀತಿ ಇದೆಂದು ಬಣ್ಣಿಸಲಾಗುತ್ತಿದೆ. “ನಿಮ್ಮ ಜನಾಂಗೀಯ ನೀತಿಗಳು ಜನರನ್ನು ಕೊಲ್ಲುತ್ತಿವೆ. ಸಮಾಜದಲ್ಲಿ ನ್ಯಾಯಯುತ ಮತ್ತು ಸಹಾನುಭೂತಿಯಿಂದ ಬದುಕಲು ಬಯಸುವ ಯುವಕರಾದ ನಾವು ನಿರಾಶ್ರಿತರ ಕುರಿತ ನಿಮ್ಮ ವರ್ತನೆಯ ಕಾರಣ ಅಸಹ್ಯಪಡುತ್ತೇವೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಭದ್ರತಾ ಸಿಬ್ಬಂದಿ ಒಬ್ಬೊಬ್ಬರನ್ನು ಗೌರವಯುತವಾಗಿ ಹೊರಗೆ ಕರೆದೊಯ್ಯುತ್ತಿರುವ ವಿಡಿಯೊ ವೈರಲ್ ಆಗುತ್ತಿದೆ. “ಜೋರಾಗಿ ಹೇಳಿ, ಸ್ಪಷ್ಟವಾಗಿ ಹೇಳಿ, ನಿರಾಶ್ರಿತರಿಗೆ ಇಲ್ಲಿ ಸ್ವಾಗತವಿದೆ” ಎಂದು ಘೋಷಣೆಗಳನ್ನು ಹೋರಾಟಗಾರರು ಕೂಗಿದ್ದಾರೆ.
The best video you’ll see today:
pic.twitter.com/n0MeBTczIT— Dr Shan Hussain 💙 (@DrShanHussain) May 7, 2022
ಪ್ರತಿಭಟನೆಯ ಭಾಗವಾಗಿದ್ದ ಗ್ರೀನ್ ನ್ಯೂ ಡೀಲ್ ರೈಸಿಂಗ್ ಕಾರ್ಯಕರ್ತ ಹಾಲಿ ಹಡ್ಸನ್, “ಜನರು ಎಲ್ಲಿಂದ ಬಂದರೂ ಕಾಳಜಿ ಮತ್ತು ಗೌರವವನ್ನು ನೀಡುವ ಸಮಾಜದಲ್ಲಿ ನಾನು ಬೆಳೆಯಲು ಬಯಸುತ್ತೇನೆ. ಪ್ರೀತಿ ಪಟೇಲ್ ಅವರ ರುವಾಂಡಾ ಯೋಜನೆ ಮತ್ತು ಪ್ರೀತಿಯವರ ಬಗ್ಗೆ ನನಗೆ ಅಸಹ್ಯವಿದೆ. ವಲಸೆ ನೀತಿಗಳು ಹಿಂಸಾತ್ಮಕ, ಕಾನೂನುಬಾಹಿರವಾಗಿವೆ. ಅಮಾನವೀಯ ನೀತಿಗಳು ಸಮಾಜದಾದ್ಯಂತ ಖಂಡಿಸಲ್ಪಟ್ಟಿವೆ” ಎಂದಿದ್ದಾರೆ.
“ಈ ಮಸೂದೆಯು ಸುರಕ್ಷತೆಯನ್ನು ಬಯಸುವವರಿಗೆ ಹಾನಿಯುಂಟುಮಾಡಿದೆ. ನಾವು ಯಾರೇ ಆಗಿರಲಿ, ನಾವೆಲ್ಲರೂ ಸುರಕ್ಷತೆ ಮತ್ತು ಸಹಾನುಭೂತಿಗೆ ಅರ್ಹರಾಗಿದ್ದೇವೆ. ಅದಕ್ಕಾಗಿಯೇ ನಾವು ಇಂದು ಕ್ರಮ ಕೈಗೊಂಡಿದ್ದೇವೆ” ಎಂದಿದ್ದಾರೆ.
ರುವಾಂಡ ಜನರನ್ನು ವಾಪಸ್ ಕಳುಹಿಸುವ ಈ ಯೋಜನೆಯು ಕ್ರೂರವಾಗಿದ್ದು, ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಸುಲಿಗೆ ವೆಚ್ಚವನ್ನು ಹೆಚ್ಚಿಸಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
ಇದನ್ನೂ ಓದಿರಿ: ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ನನ್ನ ವಿರುದ್ಧ ಸ್ಪರ್ಧಿಸಲಿ: ಸಂಸದೆ ನವನೀತ್ ಸವಾಲು
ಸರ್ಕಾರಿ ಅಂಕಿಅಂಶಗಳ ವಿಶ್ಲೇಷಣೆಯ ಪ್ರಕಾರ, 7,000ಕ್ಕೂ ಹೆಚ್ಚು ಆಶ್ರಯಾರ್ಥಿಗಳು ಯುಕೆಯಲ್ಲಿದ್ದಾರೆ. ಸುಮಾರು 1,972 ಜನರು ಏಪ್ರಿಲ್ 14ರ ನಡುವೆ ಯುಕೆಗೆ ಬಂದಿದ್ದಾರೆ. ಯುಕೆ ಸರ್ಕಾರ ರುವಾಂಡದೊಂದಿಗೆ ಸಹಿ ಹಾಕಿದ ಬಳಿಕ ವಿವಾದ ಭುಗಿಲೆದ್ದಿದೆ.
“ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿರುವವರು ಯುದ್ಧ, ಬಡತನ ಮತ್ತು ಹವಾಮಾನ ದುರಂತದ ಬಹು ಬಿಕ್ಕಟ್ಟುಗಳನ್ನು ಹೊತ್ತುಕೊಂಡು ಭಯಾನಕ ಸನ್ನಿವೇಶಗಳಿಂದ ಪಾರಾಗುತ್ತಿರುವ ಜನರನ್ನು ರಾಕ್ಷಸರನ್ನಾಗಿ ಮಾಡುವ ಪ್ರೀತಿ ಪಟೇಲ್ ಅವರ ಕ್ರೂರ ಯೋಜನೆಗಳ ವಿರುದ್ಧವೂ ನಿಲ್ಲುತ್ತಾರೆ. ಪ್ರೀತಿ ಪಟೇಲ್ ಅಪಾಯಕಾರಿ ರುವಾಂಡಾ ವಲಸೆ ಯೋಜನೆಯನ್ನು ಕೈಬಿಡಬೇಕು. ವಲಸಿಗರು, ನಿರಾಶ್ರಿತರು ಮತ್ತು ಆಶ್ರಯ ಬಯಸುವ ಜನರಿಗೆ ಬೆಂಬಲ ಮತ್ತು ಸುರಕ್ಷತೆಯನ್ನು ಒದಗಿಸಬೇಕೆಂದು ನಾವು ಬಯಸುತ್ತೇವೆ” ಎಂದಿದ್ದಾರೆ ಹೋರಾಟಗಾರರು.