“ಎಲ್ಲರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು. ಇದು ಪಾಕಿಸ್ತಾನ, ಭಾರತವಲ್ಲ” ಹೀಗೆಂದು ಹೇಳಿದವರು ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಆಥರ್ ಮಿನಲ್ಲಾ!..
ದೇಶದ್ರೋಹ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವೊಂದನ್ನು ಸೋಮವಾರ ವಿಚಾರಣೆ ನಡೆಸುತ್ತಿದ್ದ ಅವರು, ಎಲ್ಲದ್ದಕ್ಕೂ ದೇಶದ್ರೋಹ ಪ್ರಕರಣ ದಾಖಲಿಸಲು ಇದು ಭಾರತವಲ್ಲ ಎಂಬರ್ಥದ ಹೇಳಿಕೆ ನೀಡುವ ಮೂಲಕ ಭಾರತದಲ್ಲಿ ಪ್ರತಿಭಟನಾಕಾರರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಪಶ್ತುನ್ ತಹಾಫುಜ್ ಮೂವ್ಮೆಂಟ್ ಪಕ್ಷದ ಮುಖಂಡ ಮತ್ತು ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಮಂಜೂರ್ ಪಶ್ತೀನ್ ಅವರನ್ನು ಜನವರಿ 27 ರಂದು ಪೇಶಾವರದಲ್ಲಿ ಬಂಧಿಸಲಾಗಿತ್ತು. ಅವರ ಬಂಧನ ವಿರೋಧಿಸಿ ಜನವರಿ 28 ರಂದು ಪ್ರತಿಭಟಿಸಿದ ಅವಾಮಿ ವರ್ಕರ್ಸ್ ಪಾರ್ಟಿ ಮತ್ತು ಪಶ್ತುನ್ ತಹಾಫುಜ್ ಮೂವ್ಮೆಂಟ್ ಪಕ್ಷದ 23 ಕಾರ್ಯಕರ್ತರನ್ನು ಇಸ್ಲಾಮಾಬಾದ್ ಪೊಲೀಸರು ಬಂಧಿಸಿದ್ದಾರೆ.
ಜನವರಿ 28 ರಂದು ಇಸ್ಲಾಮಾಬಾದ್ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಗುಂಪಿನಲ್ಲಿದ್ದ ಇಬ್ಬರು ಪ್ರಮುಖ ವ್ಯಕ್ತಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಫೆಬ್ರವರಿ 2 ರಂದು ಅವರ ವಿರುದ್ಧದ ದೇಶದ್ರೋಹ ಆರೋಪವನ್ನು ಕೈಬಿಡಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದರೂ, ಭಯೋತ್ಪಾದನಾ ವಿರೋಧಿ ಕಾಯ್ದೆ (ಎಟಿಎ), 1997 ರ ಸೆಕ್ಷನ್ 7 ಅನ್ನು ಎಫ್ಐಆರ್ಗೆ ಸೇರಿಸಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಈ ಆರೋಪಗಳನ್ನು ಯಾವ ಆಧಾರದ ಮೇಲೆ ಸೇರಿಸಲಾಯಿತು ಎಂಬುದರ ಕುರಿತು ಮ್ಯಾಜಿಸ್ಟ್ರೇಟ್ ವಿವರಣೆ ನೀಡುವಂತೆ ನ್ಯಾಯಾಧೀಶ ಮಿನಲ್ಲಾ ಕೇಳಿದ್ದಾರೆ.
ಇದನ್ನೂ ಓದಿ: ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ
ಅಲ್ಲದೆ ಬಂಧಿತರಿಗೆ ಜಾಮೀನು ನೀಡುತ್ತಾ “ಚುನಾಯಿತ ಪ್ರಜಾಪ್ರಭುತ್ವ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ನಾವು ಟೀಕೆಗೆ ಭಯಪಡಬಾರದು. ನ್ಯಾಯಾಲಯಗಳು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತದೆ. ಇದು ಪಾಕಿಸ್ತಾನ, ಭಾರತವಲ್ಲ” ಎಂದು ಮಿನಲ್ಲಾ ಹೇಳಿದ್ದಾರೆ.
ನ್ಯಾಯಾಧೀಶರು ಈ ಹೇಳಿಕೆಯ ಮೂಲಕ ಅವರು ಏನು ಹೇಳುತ್ತಿದ್ದಾರೆಂದು ಸ್ಪಷ್ಟವಾಗಿ ತಿಳಿಸದಿದ್ದರೂ, “ಸರ್ಕಾರವನ್ನು ಪ್ರಶ್ನಿಸುತ್ತಿರುವ ಭಾರತದ ಯುವಜನರ ವಿರುದ್ಧ ಹೆಚ್ಚುತ್ತಿರುವ ದೇಶದ್ರೋಹ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನೀವು ಪ್ರತಿಭಟಿಸಲು ಬಯಸಿದರೆ ಪೊಲೀಸರ ಅನುಮತಿ ಪಡೆಯಿರಿ. ನಿಮಗೆ ಅನುಮತಿ ಸಿಗದಿದ್ದರೆ, ನ್ಯಾಯಾಲಯವಿದೆ ಎಂದು ಅವರು ಹೇಳಿದ್ದಾರೆ.
ಬಂಧಿತರಲ್ಲಿ ಒಬ್ಬರಾದ ಅಮ್ಮರ್ ರಶೀದ್ “ನಮ್ಮ ದೇಶದಲ್ಲಿ (ಪಾಕಿಸ್ತಾನ) ಭಿನ್ನಾಭಿಪ್ರಾಯ, ಶಾಂತಿಯುತ ಪ್ರತಿಭಟನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಪರಾಧೀಕರಣದ ವಿರುದ್ಧ ಈ ತೀರ್ಪು ಶಾಶ್ವತವಾದ ಉತ್ತಮ ನಿದರ್ಶನವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಗಳ ವಿರುದ್ದ ಟೀಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ 405 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 96% ಪ್ರಕರಣಗಳು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಾಖಲಾಗಿರುವುದಾಗಿದೆ.
ಆರ್ಟಿಕಲ್ 14’ ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆಯು, “ಪೋಸ್ಟರ್ಗಳನ್ನು ಹಿಡಿದುಕೊಳ್ಳುವುದು, ಅಂಟಿಸುವುದು, ಘೋಷಣೆಗಳನ್ನು ಕೂಗುವುದು, ಸಾಮಾಜಿಕ ಜಾಲತಾಣದಲ್ಲಿ ಬರೆಯುವುದು ಮತ್ತು ಪರಸ್ಪರ ವೈಯಕ್ತಿಕ ಸಂಭಾಷಣೆಗಳನ್ನು ಸಹ ’ದೇಶದ್ರೋಹ’ ಎಂದು ಪರಿಣಿಸಲಾಗಿದೆ” ಎಂದು ಹೇಳಿದೆ.
ಕೃಪೆ: ದಿ ವೈರ್
ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು! ..