Homeಅಂಕಣಗಳುರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ರೈತರ ವಿರುದ್ಧವೂ ಝಳಪಿಸಿದ ಹತಾರ: ’ದೇಶದ್ರೋಹ’ವೆಂಬ ಹಳೆಯ ಹುನ್ನಾರ

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ.

- Advertisement -
- Advertisement -

ಸುಮಾರು ಎರಡು ಲಕ್ಷ ಮಂದಿ ಪಾಲ್ಗೊಂಡಿರುವ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಐತಿಹಾಸಿಕ ಸ್ವರೂಪದ್ದು. ಪಕ್ಷ ರಾಜಕಾರಣವನ್ನು ದೂರವಿಟ್ಟು ನಡೆಯುತ್ತಿರುವ ಅನನ್ಯ ಶಾಂತಿಯುತ ಆಂದೋಲನ. ವಿಶ್ವವೇ ಗಮನಿಸುತ್ತಿರುವ ವಿದ್ಯಮಾನ.

ಈ ಆಂದೋಲನದ ಆಳ ಅವಿವೇಕಿಗಳಿಗೆ ತಿಳಿದಂತಿಲ್ಲ. ಪಂಜಾಬಿನ ಇಡೀ ಸಾಮಾಜಿಕ-ರಾಜಕೀಯ-ಸಾಹಿತ್ಯ-ಸಾಂಸ್ಕೃತಿಕ-ವೈಚಾರಿಕ ಬದುಕು ಈ ಪ್ರತಿಭಟನೆಗೆ ಧುಮುಕಿದೆ. ಹಳ್ಳಿ ಹಳ್ಳಿಗಳ ಮನೆ ಮನೆಗಳಲ್ಲಿ ಈ ಆಂದೋಲನದ ಬೇರುಗಳಿವೆ. ದೆಹಲಿಯ ಗಡಿಗಳತ್ತ ಸಾಗುವ ಮುನ್ನ ಐವತ್ತೈದು ದಿನಗಳ ಕಾಲ ಕಿಚ್ಚಿನಂತೆ ವ್ಯಾಪಿಸಿದ್ದ ಪ್ರತಿಭಟನೆಯಿದು. ಹಳ್ಳಿ ಹಳ್ಳಿಗಳು ಆಹಾರ ಧಾನ್ಯ, ತರಕಾರಿ, ಹಾಲು, ಹಣ್ಣು, ಹಣವನ್ನು ಸಂಗ್ರಹಿಸಿ ದೆಹಲಿ ಗಡಿಯ ಪ್ರತಿಭಟನೆಗೆ ರವಾನಿಸುತ್ತಿದೆ. ಖಾಸಗಿ ಬಸ್ಸುಗಳು ಕ್ವಿಂಟಾಲ್‌ಗಟ್ಟಲೆ ದಿನಸಿಗಳು ಹಾಲು ಹೈನನ್ನು ಉಚಿತವಾಗಿ ಸಾಗಿಸುತ್ತಿವೆ. ಪಂಜಾಬಿನ ಮದುವೆಗಳಲ್ಲಿ ಉಡುಗೊರೆಗಳ ಬದಲಿಗೆ ವಂತಿಗೆ ಸಂಗ್ರಹಿಸಿ ಕಳಿಸಲಾಗುತ್ತಿದೆ. ಈ ಸತ್ಯಾಗ್ರಹದ ಬೇರುಗಳ ಜನಪದದಲ್ಲಿವೆ. ಅವುಗಳನ್ನು ಕತ್ತರಿಸುವುದು ಸುಲಭವಲ್ಲ. ಸಿಡಿದೆದ್ದಿರುವ ಈ ಭುಗಿಲನ್ನು ಸದ್ಯಕ್ಕಾದರೂ ಶಾಂತಗೊಳಿಸುವ ಏಕೈಕ ಸುಲಭದ ದಾರಿಯೆಂದರೆ ರೈತರ ಬೇಡಿಕೆಗಳನ್ನು ಒಪ್ಪುವುದು.

ಬ್ಲಾಕ್
PC: PTI

ದೆಹಲಿ-ಹರಿಯಾಣದ ಟಿಕ್ರಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮೊನ್ನೆ ಬಹಾದೂರ್‌ಗಢ ಬೈಪಾಸ್ ಹೆದ್ದಾರಿಯುದ್ದದ ವಿಭಜಕದಲ್ಲಿ (ಡಿವೈಡರ್) ಉಳುಮೆ ಮಾಡತೊಡಗಿದರು. ತಮ್ಮ ಅಡುಗೆಗೆ ನಿತ್ಯ ಬೇಕಿರುವ ತರಕಾರಿಗಳು ಮತ್ತು ಸೊಪ್ಪು ಬೆಳೆಯುವುದು ಅವರ ವಿನೂತನ ಪ್ರತಿಭಟನೆಯ ಪರಿ.

ರಾಜಸ್ತಾನ, ಹರಿಯಾಣ, ಪಶ್ಚಿಮೀ ಉತ್ತರಪ್ರದೇಶ, ಮಹಾರಾಷ್ಟ್ರ ಮಾತ್ರವಲ್ಲದೆ ದಕ್ಷಿಣ ರಾಜ್ಯಗಳ ರೈತರೂ ಈ ಪ್ರತಿಭಟನೆಯನ್ನು ಕೂಡಿಕೊಳ್ಳತೊಡಗಿದ್ದಾರೆ. ಮುಂಬರುವ ದಿನಗಳು ಉಬ್ಬರವನ್ನು ಕಾಣುವುವೇ ವಿನಾ ಇಳಿತವನ್ನಲ್ಲ. ಅರ್ಥಾತ್ ’ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’.

ಕೇಂದ್ರ ಸರ್ಕಾರ ಮಾತ್ರವಲ್ಲದೆ, ಅಂಬಾನಿ-ಅದಾನಿಯಂತಹ ಭಾರಿ ಲಾಭಬಡುಕ ಕಾರ್ಪೊರೇಟ್‌ಗಳು ಹಾಗೂ ಕೇಂದ್ರ ಸರ್ಕಾರ ಮತ್ತು ಕಾರ್ಪೊರೇಟುಗಳ ತುತ್ತೂರಿಗಳಾಗಿರುವ ಸಮೂಹ ಮಾಧ್ಯಮಗಳನ್ನು ಈ ಆಂದೋಲನ ಕಟಕಟೆಯಲ್ಲಿ ನಿಲ್ಲಿಸಿದೆ. ರಾಜ್ಯ ಸರ್ಕಾರಗಳು ಮತ್ತು ರೈತ ಸಮುದಾಯಗಳೊಂದಿಗೆ ಸಮಾಲೋಚನೆಯನ್ನೇ ನಡೆಸದೆ ಏಕಪಕ್ಷೀಯವಾಗಿ ಕೃಷಿ ಕಾಯಿದೆಗಳನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರ, ಒಕ್ಕೂಟ ಗಣತಂತ್ರದ ತಿರುಳು ಮತ್ತು ಸತ್ವವನ್ನೇ ಗಾಳಿಗೆ ತೂರಿರುವ ನಡೆಯನ್ನು ಪ್ರಶ್ನಿಸಿರುವ ಚಳವಳಿಯಿದು.

ಜೈ ಜವಾನ್-ಜೈ ಕಿಸಾನ್ ಎಂಬುದು ಭಕ್ತಗಣ ಮತ್ತು ಆಳುವವರ ಪರ ನಿಂತಿರುವ ಜನವಿರೋಧಿ ತಮಟೆ-ತುತ್ತೂರಿ ಮೀಡಿಯಾ ಇತ್ತೀಚಿನವರೆಗೆ ಜಪಿಸುತ್ತಿದ್ದ ಮಂತ್ರ. ಆದರೆ ಕುರುಡುಭಕ್ತಿಗೆ ಇತಿಮಿತಿಗಳು ಹದ್ದುಬಸ್ತುಗಳು ಉಂಟೇನು? ತಮ್ಮ ಚಂಡಪ್ರಚಂಡ ನಾಯಕನಿಗೆ ಎದುರಾಗಿ ನಿಂತರೆಂದು ರೈತರಿಗೆ ದೇಶದ್ರೋಹಿಗಳ ಪಟ್ಟ ಕಟ್ಟಲಾಗಿದೆ. ಖಾಲಿಸ್ತಾನಿಗಳೆಂದು ಸಾರಲಾಗಿದೆ. ದೇಶ ರಕ್ಷಣೆಗೆ ಒರೆಯಿಂದ ಹಿರಿದ ಖಡ್ಗವೆಂದೇ ಪಂಜಾಬನ್ನು ಬಣ್ಣಿಸುವುದುಂಟು. ಅದಕ್ಕೆ ಐತಿಹಾಸಿಕ ಕಾರಣಗಳಿವೆ. ಸೇನೆಯಿಂದ ನಿವೃತ್ತಿಯ ನಂತರ ರೈತಾಪಿಗಳಾಗಿರುವ ಸಾವಿರಾರು ಮಾಜಿ ಯೋಧರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

PC : Singhstation

ಖಾಲಿಸ್ತಾನಿಗಳ ವಿರುದ್ಧ ಹೋರಾಡಿ ಹುತಾತ್ಮರಾದ ದೇಶಪ್ರೇಮಿಗಳ ರೈತ ಕೂಲಿ ಸಂಘಟನೆ ಇದೆ. ಅದರ ಹೆಸರು ಕೀರ್ತಿ ಕಿಸಾನ್ ಯೂನಿಯನ್. ಖಾಲಿಸ್ತಾನಿಗಳ ಭಯೋತ್ಪಾದನೆಯನ್ನು ಮಾತ್ರವಲ್ಲ, ಅಮಾಯಕರನ್ನು ಭಯೋತ್ಪಾದರೆಂದು ಘೋಷಿಸಿ ಕೊಂದ ಪ್ರಭುತ್ವದ ಭಯೋತ್ಪಾದನೆ, ಸಿಖ್ ಧರ್ಮದ ಸಂಪ್ರದಾಯವಾದವನ್ನೂ ವಿರೋಧಿಸಿದ ಸಂಘಟನೆಯಿದು. ’ಅತಿ ಅಪಾಯಕಾರಿ ವಾರ್ತೆಯೆಂದರೆ ನಮ್ಮ ಕನಸುಗಳು ಕೊನೆಯುಸಿರೆಳೆವುದು…’ ಎಂಬ ಪಂಜಾಬಿನ ಕ್ರಾಂತಿಕಾರಿ ಕವಿ ಅವತಾರ್ ಸಿಂಗ್ ಪಾಶ್ ಅವರ ಕವಿತೆ ಜನಜನಿತ. ಖಾಲಿಸ್ತಾನಿಗಳನ್ನು ವಿರೋಧಿಸಿದ ಅವರು ಅವರಿಂದಲೇ ಹತರಾಗುತ್ತಾರೆ. ಅವರ ಜಮೀನನ್ನು ಯಾರೂ ಉಳುಮೆ ಮಾಡಕೂಡದೆಂದು ಖಾಲಿಸ್ತಾನಿಗಳು ಬೆದರಿಕೆ ಹಾಕಿರುತ್ತಾರೆ. ಆದರೆ ಈ ಬೆದರಿಕೆಗೆ ಬಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಪಾಶ್ ಅವರ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳೆಯಿತು ಕೀರ್ತಿ ಕಿಸಾನ್ ಯೂನಿಯನ್ ಸಂಘಟನೆ. ಈ ಸಂಘಟನೆಯ ಹದಿಮೂರು ಮಂದಿ ಕಾರ್ಯಕರ್ತರು ಮತ್ತು ಮೂವರು ಅಧ್ಯಕ್ಷರನ್ನು ಕೊಂದು ಹಾಕಿದ್ದರು ಖಾಲಿಸ್ತಾನಿಗಳು. ಈ ಸಂಘಟನೆಯ ಅಧ್ಯಕ್ಷ ರಾಜೇಂದ್ರಸಿಂಗ್ ದೀಪ್ ಸಿಂಗ್ ವಾಲಾ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವ ರೈತ ನಿಯೋಗದ ಅತ್ಯಂತ ಕಿರಿಯ ವಯಸ್ಸಿನ ಸದಸ್ಯ. ಹತ್ತೆಕರೆಗೂ ಕಮ್ಮಿ ಹೊಲಗದ್ದೆಗಳ ರೈತರು ಮತ್ತು ಕೂಲಿಕಾರರ ಕೊರಳ ದನಿಯಾಗಿರುವ ಸಂಘಟನೆಯಿದು. ಅಪಪ್ರಚಾರಕ್ಕೆಂದೇ ನೇಮಕಗೊಂಡಿರುವ ಸೇನೆಯ ಕುರುಡು ಕಣ್ಣುಗಳಿಗೆ ಈ ಸತ್ಯ ಕಾಣುವುದಾದರೂ ಎಂತು?

ಪ್ರತಿಭಟನೆಯನ್ನು ಸೇರಿಕೊಳ್ಳುತ್ತಿರುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತೊಡಗಿದೆ. ಊಟ ತಿಂಡಿ ಮುಂತಾದ ಅನುಕೂಲಗಳು ಹೇರಳ. ಆದರೆ ಸ್ನಾನ ಶೌಚದ ಸಮಸ್ಯೆ ಬಿಗಡಾಯಿಸಿದೆ. ರೈತ ಮಹಿಳೆಯರ ಪಾಡು ಹೇಳತೀರದು. ಹರಿಯಾಣ ಮತ್ತು ಉತ್ತರಪ್ರದೇಶ ಸರ್ಕಾರಗಳು ಮಾಡಿರುವ ಸಂಚಾರಿ ಶೌಚಾಲಯಗಳ ಸಂಖ್ಯೆ ಸಾಲದೇ ಸಾಲದು. ಈ ಶೌಚಾಲಯಗಳು ಕೂಡ ಬಳಸಲಾರದಷ್ಟು ಕೊಳಕಾಗಿವೆ. ಸಮೀಪದ ಹೊಲಗದ್ದೆಗಳು, ಕಾಲುದಾರಿಗಳೇ ಗತಿ. ಹೋಟೆಲುಗಳನ್ನು ಹುಡುಕಿಕೊಂಡು ಹೋಗಬೇಕೆಂದರೆ ಹತ್ತು ಕಿ.ಮೀ.ದೂರ ಕ್ರಮಿಸಬೇಕು. ಉತ್ತರಪ್ರದೇಶ-ದೆಹಲಿಯ ಘಾಜೀಪುರ ಗಡಿಯಲ್ಲಿ ಮುಗಿಲೆತ್ತರ ನಿಂತ ಕಸದ ಹೊಲಸಿನ ಬೆಟ್ಟವೇ ಪ್ರತಿಭಟನಾ ನಿರತ ರೈತರ ನೆರೆಹೊರೆ. ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಕಾಟ. ದೆಹಲಿಯ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯು ಸೊಳ್ಳೆ ನಿರೋಧಕ ಬತ್ತಿ- ಮುಲಾಮುಗಳು, ಟೂತ್ ಪೇಸ್ಟ್, ಬ್ರಶ್, ಸೋಪು ಹಾಗೂ ಶಾಂಪೂ ಹೊಂದಿದ ಸಾವಿರಾರು ’ಕಿಟ್’ ಗಳನ್ನು ರೈತರಿಗೆ ಹಂಚತೊಡಗಿದೆ. ಕಳೆದ ಎರಡು ವಾರಗಳಲ್ಲಿ ವಿಪರೀತ ಚಳಿಯ ವಾತಾವರಣ ಮತ್ತು ಅಪಘಾತಗಳ ಕಾರಣ ಒಟ್ಟು 14 ಮಂದಿ ಪ್ರತಿಭಟನಕಾರರು ಸಾವಿಗೀಡಾಗಿದ್ದಾರೆ. ಥರಗುಟ್ಟಿಸುವ ಥಂಡಿ ಕೊರೆದು ಕಾಡುವ ಬಯಲಿನಲ್ಲಿ ವಾರಗಟ್ಟಲೆ ಬದುಕುವುದು ಸುಲಭವಲ್ಲ. ಸಾವು ನೋವುಗಳಿಗೆ ನೀಡುವ ಆಹ್ವಾನವದು.

ಏನನ್ನು ಬೇಕಾದರೂ ಜಗಿದು ನುಂಗಿ ಅರಗಿಸಿಕೊಂಡೇವು ಎನ್ನುವ ಪ್ರಚಂಡ ಜೋಡಿಗೆ ಎದುರಾದಂತಿದೆ ಕಬ್ಬಿಣದ ಕಡಲೆ.


ಇದನ್ನೂ ಓದಿ: ರೈತ ಹೋರಾಟ ರಾಷ್ಟ್ರೀಯ ಸಮಸ್ಯೆಯಾಗುವ ಮುನ್ನ ಬಗೆಹರಿಸಿ: ಕೇಂದ್ರಕ್ಕೆ ಸುಪ್ರೀಂ ಸಲಹೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...