Homeಮುಖಪುಟಸ್ವಾತಂತ್ರ್ಯ ಹರಣ ತಪ್ಪಿಸಲು ಸ್ವಾತಂತ್ರ್ಯ ಹೋರಾಟವೇ ಬೇಕು

ಸ್ವಾತಂತ್ರ್ಯ ಹರಣ ತಪ್ಪಿಸಲು ಸ್ವಾತಂತ್ರ್ಯ ಹೋರಾಟವೇ ಬೇಕು

ಪ್ರಜಾತಂತ್ರ, ಸಾಂವಿಧಾನಿಕ ಮೌಲ್ಯಗಳೇ ಮೂಲಗುಣವಾಗಿರುವ ಸ್ವಾತಂತ್ರ್ಯವು ಭಾರತದಲ್ಲಿ ಮರಳಿ ಬರುವತನಕ ನಡೆಯಬೇಕಾದ ಹೋರಾಟದಲ್ಲಿ ಪತ್ರಿಕೆಯೊಂದು ವಹಿಸಬೇಕಾದ ಪಾತ್ರವನ್ನು ನಿರ್ವಹಿಸಲು ನ್ಯಾಯಪಥ ಕಟಿಬದ್ಧವಾಗಿದೆ.

- Advertisement -
- Advertisement -

‘ನಾವು ಮಾಡಬೇಕಿರುವುದು ಮತ್ತೊಂದು ಸ್ವಾತಂತ್ರ್ಯ ಹೋರಾಟ’ ಎನ್ನುವುದು ಕ್ಲೀಷೆಯಾಗಿದೆ. ಇತ್ತೀಚೆಗೆ ಪದೇ ಪದೇ ಕೇಳಿದ್ದೇವೆ. ಕಳೆದ 30 ವರ್ಷಗಳಿಂದ ಸಾರ್ವಜನಿಕ ವಲಯದ ವಿದ್ಯಮಾನಗಳನ್ನು ಗಮನಿಸುತ್ತಾ ಬಂದಿರುವ ನಾನು ಯಾವಾಗ ಇದನ್ನು ಹೆಚ್ಚು ಕೇಳುತ್ತಾ ಬಂದೆ ಎಂದು ಕೇಳಿಕೊಂಡೆ. ‘90ರ ದಶಕದ ಬರಹಗಳಲ್ಲಿ ‘ಇನ್ನೊಂದು ಸ್ವಾತಂತ್ರ್ಯ ಹೋರಾಟ’ದ ರೆಫರೆನ್ಸ್ ಕಂಡಿದ್ದು ತುರ್ತು ಪರಿಸ್ಥಿತಿಯ ಸಂದರ್ಭದ್ದು. ಆಗ ಇಂದಿರಾಗಾಧಿಯವರ ಆಳ್ವಿಕೆಯ ವಿರುದ್ಧ ನಡೆದದ್ದು ಸ್ವಾತಂತ್ರ್ಯ ಹೋರಾಟವೇ ಎಂದು ಅದರಲ್ಲಿ ಭಾಗವಹಿಸಿದ್ದ ಹಲವರು ಭಾವಿಸಿದ್ದರು. ಅದೇ ರೀತಿ ರೈತ ದಲಿತ ಚಳವಳಿಗಳೂ ಸಹಾ ಆಗಾಗ್ಗೆ ಸ್ವಾತಂತ್ರ್ಯ ಹೋರಾಟ ಎಂಬ ಮಾತುಗಳನ್ನು ಬಳಸಿದ್ದರೂ ಸಹ ಒಂದು ರೀತಿಯಲ್ಲಿ ಅದು ಪ್ರಜಾತಂತ್ರದ (ಅರ್ಥಾತ್ ಸ್ವಾತಂತ) ವಿಸ್ತರಣೆಯ ಹೋರಾಟವಾಗಿತ್ತು.

1991ರ ನಂತರದಲ್ಲಿ ಹೊಸ ಆರ್ಥಿಕ ನೀತಿಯ ಭಾಗವಾಗಿ ಬಹು ರಾಷ್ಟ್ರೀಯ ಕಂಪನಿಗಳ ಬಂಡವಾಳವು ಭಾರತದ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ‘ಸಾಮ್ರಾಜ್ಯಶಾಹಿ ವಿರೋಧಿ ಹೋರಾಟ’ದ ಮಾತುಗಳು ಕೇಳಿಬರತೊಡಗಿದವು. ‘21ನೇ ಶತಮಾನದ ಹೊತ್ತಿಗೆ ಆ ಕಂಪೆನಿಗಳು ಭಾರತವನ್ನು ಸಂಪೂರ್ಣ ಆಕ್ರಮಿಸಿಬಿಡುತ್ತವೆ; ಅಂದು ಒಂದು ಈಸ್ಟ್ ಇಂಡಿಯಾ ಕಂಪೆನಿ ಭಾರತ ಉಪಖಂಡವನ್ನು ಆಕ್ರಮಿಸಿದ್ದರೆ, ಇಂದು ನೂರಾರು ಬಹು ರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶವನ್ನು ಕಬಳಿಸಲಿವೆ. ನಾವು ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ತಯಾರಾಗಬೇಕಿದೆ’ ಎಂಬುದು ಅಲ್ಲಲ್ಲಿ ಚರ್ಚೆಯಾಗುತ್ತಿತ್ತು.

ನೋಡನೋಡುತ್ತಿದ್ದಂತೆ ವಿದೇಶೀ ಕಂಪೆನಿಗಳು ಮಾತ್ರವಲ್ಲದೇ ದೇಶೀ ಕಾರ್ಪೋರೇಟ್‌ಗಳೂ ಸಹ ಬೃಹದಾಕಾರವಾಗಿ ಬೆಳೆದವು. ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಸಾಧಿಸಿದವು. ಜಗತ್ತಿನ ಭಾರೀ ಶ್ರೀಮಂತರಲ್ಲಿ ಭಾರತದ ಕುಬೇರರೂ ಸ್ಥಾನ ಪಡೆದುಕೊಂಡರು. ಅಂದರೆ ಸ್ವಾತಂತ್ರ್ಯ ಎಂದರೆ ಏನೆಲ್ಲವೆಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರು ಭಾವಿಸಿದ್ದರೋ ಆ ಸ್ವಾತಂತ್ರ್ಯ ಇಲ್ಲವಾಗತೊಡಗಿತ್ತು. ಸಂವಿಧಾನದ ಕಲಂ 39 (ಎ)(ಬಿ)(ಸಿ) ಮತ್ತಿತರ ಭಾಗಗಳು ಬಲವಾಗಿ ಪ್ರತಿಪಾದಿಸಿದ್ದ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳುಗಳನ್ನು ಗಾಳಿಗೆ ತೂರಲಾಗುತ್ತಿತ್ತು. ನಿರ್ದಿಷ್ಟವಾಗಿ ದೇಶದ ಶೋಷಿತ ಸಮುದಾಯಗಳ ಹಕ್ಕುಗಳಿಗೆ ಚ್ಯುತಿ ಬರತೊಡಗಿತು. ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಅರ್ಪಿಸಲು ಆದಿವಾಸಿಗಳ ಒಕ್ಕಲೆಬ್ಬಿಸುವಿಕೆ ಹೆಚ್ಚಾಯಿತು; ರೈತರ ಭೂಮಿ ಕಬಳಿಕೆ ಅಧಿಕವಾಯಿತು; ಕಾರ್ಮಿಕ ಕಾನೂನುಗಳಿಗೆ ಅರ್ಥವಿಲ್ಲದಾಯಿತು; ದಲಿತರ ಮೇಲಿನ ದೌರ್ಜನ್ಯದ ಕೇಸುಗಳು ಹೆಚ್ಚೆಚ್ಚು ಬೆಳಕಿಗೆ ಬಂದವು…

ಆರ್ಥಿಕ ಪಾರಮ್ಯಕ್ಕಾಗಿ ನಡೆದ ಈ ಬೆಳವಣಿಗೆಗಳು ಸಾಮಾಜಿಕ ದೌರ್ಜನ್ಯಗಳಿಗೆ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾದವು. ಇದೇ ಹೊತ್ತಿನಲ್ಲಿ ಭಾರತದಲ್ಲಿ ಕೋಮುವಾದಿ ರಾಜಕಾರಣವೂ ಬೆಳೆಯತೊಡಗಿತು. ಜಾಗತೀಕರಣದ ಜೈತ್ಯಯಾತ್ರೆಗೆ ಕೋಮುವಾದವು ರಥಚಕ್ರವಾಗಿ ಬಳಕೆಯಾಗುತ್ತಿದೆ ಮತ್ತು ದೇಶವಾಸಿಗಳ ಅಸಲೀ ಸಮಸ್ಯೆಗಳು ಪಕ್ಕಕ್ಕೆ ಸರಿಯುತ್ತಿವೆ ಎಂಬ ವಿಶ್ಲೇಷಣೆಯು ಬಲವಾಗಿ ಕೇಳಿಬಂದಿತು. ಆದರೆ ದೇಶದ ಜನರ ಕುರಿತು, ಪ್ರಜಾತಂತ್ರದ ಕುರಿತು, ಸಂವಿಧಾನದ ಆಶಯಗಳ ಕುರಿತು ಕಾಳಜಿಯಿದ್ದ ಹಲವರು ಸುಮ್ಮನಿರಲು ನಿರಾಕರಿಸಿದರು. ದೌರ್ಜನ್ಯಕ್ಕೊಳಗಾಗುತ್ತಿದ್ದ ಜನರ ಪರವಾಗಿ, ಅಸಮಾನತೆಯ ವಿರುದ್ಧವಾಗಿ ದನಿಯೆತ್ತಿದರು, ಬರೆದರು. ಹೋರಾಟಗಳಲ್ಲೂ ನೇರವಾಗಿ ಪಾಲ್ಗೊಂಡರು. ಇವರಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕರು, ವಿದ್ವಾಂಸರು, ಚಿಂತಕರುಗಳೂ ಇದ್ದರು. ಹೀಗೆ ನಡೆಯುತ್ತಿರುವಾಗಲೇ ದಿಕ್ಕೇಡಿ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ವಾಜಪೇಯಿ ಅವರ ನಾಯಕತ್ವದಡಿ ಅಧಿಕಾರಕ್ಕೆ ಬಂದಿತು. ಸದರಿ ಆರ್ಥಿಕ ನೀತಿಗಳನ್ನು ಮತ್ತಷ್ಟು ತೀವ್ರವಾಗಿ ಜಾರಿಗೆ ತಂದು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಘೋಷಿಸಿದ ಆ ಸರ್ಕಾರವನ್ನು ಅಂದಿನ ಸಮೀಕ್ಷೆಗಳಿಗೆ ವಿರುದ್ಧವಾಗಿ ಜನರು ಸೋಲಿಸಿದರು. ಆ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಜಾಗತೀಕರಣವನ್ನು ವಿಸ್ತರಿಸಲು ಸ್ಥಾಪಿಸಲಾಗಿದ್ದ ಸಂಸ್ಥೆ ಡಬ್ಲ್ಯು ಟಿಓಗೂ ಹಿನ್ನಡೆ ಉಂಟಾಗಿತ್ತು. ಭಾರತದಲ್ಲಿ ಆದಿವಾಸಿಗಳು ಮತ್ತು ರೈತರ ಹೋರಾಟವೂ ಜೋರಾಗಿತ್ತು. ಒರಿಸ್ಸಾ, ಛತ್ತೀಸ್‌ಗಢಗಳಲ್ಲಿ ಆದಿವಾಸಿಗಳು, ಪಶ್ಚಿಮ ಬಂಗಾಳದ ಸಿಂಗೂರಿನ ರೈತರು – ಹೀಗೆ ತೀವ್ರ ರೀತಿಯ ಹೋರಾಟಗಳು ನಡೆದು ವಿವಿಧ ಗಣಿಗಾರಿಕೆ ಹಾಗೂ ಒಕ್ಕಲೆಬ್ಬಿಸುವಿಕೆ ಯೋಜನೆಗಳು ನಿಲ್ಲಬೇಕಾಗಿ ಬಂದವು.

2004ರ ಚುನಾವಣೆಯಲ್ಲಿ ಭಾರತ ಪ್ರಕಾಶಿಸುತ್ತಿಲ್ಲ ಎಂಬ ಜನರ ಷರಾ, ನಂತರ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿತ್ತು. ಜೊತೆಗೆ ಈ ಹೋರಾಟಗಳು ಸೇರಿದ್ದರಿಂದ ಅಲ್ಲಿಂದ ಮುಂದಿನ10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರವು ಕೆಲವಾರು ಸುಧಾರಣೆಗಳನ್ನು ಮತ್ತು ಜನರ ಪರವಾದ ಕಾಯ್ದೆಗಳನ್ನು ಜಾರಿಗೆ ತರಬೇಕಾಯಿತು. ಒಂದೆಡೆ ಈ ಸುಧಾರಣೆಗಳನ್ನು ತರುತ್ತಿದ್ದ ಸರ್ಕಾರಗಳು ಇನ್ನೊಂದೆಡೆ ದಮನಕಾಂಡವನ್ನೂ ಮುಂದುವರೆಸಿದ್ದವು. ಮತ್ತೊಂದೆಡೆ ವಿಪರೀತ ಭ್ರಷ್ಟಾಚಾರವೂ ನಡೆದಿತ್ತು. ಅದರ ಜೊತೆಜೊತೆಗೇ ಕಾರ್ಪೋರೇಟ್ ಹಿತವನ್ನೂ ಕಾಪಾಡುವ ಹಲವಾರು ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿತ್ತು. ದೇಶದ ಕುಬೇರರು ಪ್ರಪಂಚದ ಕುಬೇರರಾಗತೊಡಗಿದ್ದು ಆಗಲೇ.

ಇವೆಲ್ಲಾ ಇದ್ದರೂ ಒಟ್ಟಾರೆ ‘ಅಭಿವೃದ್ಧಿಯ ದರ’ ಹೆಚ್ಚೇ ಇದ್ದುದರಿಂದ ಕುಬೇರರ ಜೊತೆಗೆ ಮಧ್ಯಮವರ್ಗವೂ ಬೆಳವಣಿಗೆಯಾಯಿತು; ಬಡವರೂ ಉಸಿರಾಡುತ್ತಿದ್ದರು. ಅಲ್ಲಲ್ಲಿ ಮಾತ್ರ ಹೋರಾಟಗಳು ಭುಗಿಲೇಳುತ್ತಿದ್ದವು. ಸರಿಯಾಗಿ ಇದೇ ಸಂದರ್ಭದಲ್ಲಿ ಮಧ್ಯಮವರ್ಗದ ಆಶೋತ್ತರಗಳನ್ನು ಪ್ರತಿಬಿಂಬಿಸಿದ ಎರಡು ವಿದ್ಯಮಾನಗಳು ಘಟಿಸಿದವು. ಒಂದು, ಭ್ರಷ್ಟಾಚಾರದ ವಿರುದ್ಧ ಭಾರತದ ಆಂದೋಲನ. ಇನ್ನೊಂದು ‘ಗುಜರಾತ್ ಮಾದರಿ’ಯೆಂಬ ಹುಸಿ ಮೋಡಿಯನ್ನು ಸೃಷ್ಟಿಸಿ ಅದರ ಮಾರ್ಕೆಟಿಂಗ್ ಮಾಡಿದ್ದು. ಮೊದಲನೆಯದ್ದು ಆದರ್ಶವಾದಿ ಮಧ್ಯಮವರ್ಗವನ್ನು ಸೆಳೆದರೆ, ಎರಡನೆಯದ್ದನ್ನು ಸೆಳೆದ ಮಧ್ಯಮವರ್ಗ ಬೇರೆ ರೀತಿಯದ್ದು. ಅದು ತಾನು ಮೇಲ್ಚಲನೆಯ ಬಯಕೆಯನ್ನು ಹೊಂದಿರುವಾಗಲೇ, ತಳಸಮುದಾಯಗಳ ಕುರಿತ ಅಸಹನೆಯನ್ನು, ಮುಸ್ಲಿಮರ ಕುರಿತು ಪೂರ್ವಗ್ರಹವನ್ನು ಬೆಳೆಸಿಕೊಂಡಿದ್ದ ಮಧ್ಯಮವರ್ಗ. ಇವೆರಡೂ ಮಾದರಿಗಳು, ಆಗಿದ್ದ ಭ್ರಷ್ಟಾಚಾರವನ್ನು ನಡೆದದ್ದಕ್ಕಿಂತ ವಿಪರೀತ ಹಿಗ್ಗಿಸಿದವು. ಅಸಮಾನತೆ, ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಸಾಮಾಜಿಕ ತಾರತಮ್ಯ ಇತ್ಯಾದಿಗಳನ್ನು ಪಕ್ಕಕ್ಕೆ ತಳ್ಳಲಾಯಿತು.

ಅವೆಲ್ಲದರ ಮುಖಾಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ವಾಸ್ತವದಲ್ಲಿ ಸ್ವಾತಂತ್ರ್ಯ ಹೋರಾಟದ ಮೂಲಕ 1947ರಲ್ಲಿ ಪಡೆದುಕೊಂಡ ವಿಮೋಚನೆ ಮತ್ತು 1950ರಲ್ಲಿ ಜಾರಿಗೊಳಿಸಿಕೊಂಡ ಸಂವಿಧಾನದ ಭರವಸೆಗಳ ವಿರುದ್ಧದ ಪ್ರತಿಕ್ರಾಂತಿ 2014ರಲ್ಲಿ ಸಂಭವಿಸಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ತಡವಾಯಿತು. ಏಕೆಂದರೆ 2019ರಲ್ಲಿ ಮತ್ತಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿಯು ಯಾವ ಅಭಿವೃದ್ಧಿಯ ಅಜೆಂಡಾದ ಮೇಲೂ ಜನಮನ್ನಣೆ ಪಡೆದುಕೊಂಡಿದ್ದಲ್ಲ. ತನ್ನ ಅಸಲೀ ಅಜೆಂಡಾದ ಮೇಲೆಯೇ ಅಧಿಕಾರಕ್ಕೆ ಬಂದಿತು ಮತ್ತು ಅದನ್ನೇ ಜಾರಿ ಮಾಡಲು ತೊಡಗಿದೆ. ಶೇ.39ರಷ್ಟು ಮತ ಮಾತ್ರ ಪಡೆದಿರುವ ಪಕ್ಷವು, ಒಂದು ವೇಳೆ ಶೇ.51ರಷ್ಟು ಮತ ಪಡೆದಿದ್ದರೂ ಪ್ರಜಾಪ್ರಭುತ್ವದಲ್ಲಿ ಉಳಿದ ದನಿಗಳನ್ನೂ ಗೌರವಿಸಬೇಕು ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳಿಗೆ ಮುಕ್ಕಾಗದಂತೆ ನಡೆದುಕೊಳ್ಳಬೇಕು ಎಂಬುದಕ್ಕೆ ಗೌರವ ಕೊಡುವ ಇರಾದೆ ಅದಕ್ಕಿಲ್ಲ.

ತನ್ನ ಅಜೆಂಡಾ ಜಾರಿಮಾಡಲು ತಾಂತ್ರಿಕವಾಗಿ ಪಡೆದುಕೊಂಡಿರುವ ಬಹುಮತವನ್ನಷ್ಟೇ ಅದು ಬಳಸುತ್ತಿಲ್ಲ. ಬದಲಿಗೆ ಸಮಾಜದ ಗಣನೀಯ ವಿಭಾಗಗಳಲ್ಲ್ಲಿ (ಮುಖ್ಯವಾಗಿ ಬಾಯಿಬಲ್ಲ ಜನವಿಭಾಗ ಹಾಗೂ ಬಾಯಿ ಮಾಡುತ್ತಿರುವ ಮಾಧ್ಯಮ) ತಂದಿರುವ ಮೌಲ್ಯಗಳ, ನೀತಿಸಂಹಿತೆಯ, ಅಭಿಪ್ರಾಯಗಳ ಬದಲಾವಣೆಯ ಮೂಲಕ ತೋಳೇರಿಸಿ ನಿಂತಿದೆ. ಎಲ್ಲಾ ನೈತಿಕ ಮೌಲ್ಯಗಳನ್ನೂ ಗಾಳಿಗೆ ತೂರಿ, ಸಾಂವಿಧಾನಿಕ ಸಂಸ್ಥೆಗಳನ್ನು ಹಿಂದೆ ಕಾಂಗ್ರೆಸ್ (ಮುಖ್ಯವಾಗಿ ಇಂದಿರಾಗಾಂಧಿ) ಆಡಳಿತದಲ್ಲಿ ದುರ್ಬಲಗೊಳಿಸಿದ್ದಕ್ಕಿಂತ 10 ಪಟ್ಟು ಹೆಚ್ಚು ಶಕ್ತಿಹೀನವಾಗಿಸಿ ತನ್ನ ತಾಳಕ್ಕೆ ಕುಣಿಸುತ್ತಿದೆ. ದನಿಯೆತ್ತಬಹುದಾದವರನ್ನು ಮೊದಲೇ ಮಣಿಸಲು ಅಸ್ತ್ರಗಳನ್ನು ಕಂಡುಕೊಂಡಿರುವುದಲ್ಲದೇ, ಅದರ ಮಧ್ಯೆಯೂ ಪ್ರಜಾತಂತ್ರದ ಪರ ನಿಲ್ಲಬಹುದಾದವರನ್ನು ದಮನಿಸಲು ಪ್ರಭುತ್ವ ಯಂತ್ರಾಂಗವನ್ನೇ ಬಳಸಿಕೊಳ್ಳಲಾಗುತ್ತಿದೆ.

ಅಂದರೆ ಭಾರತೀಯರು ವೀರೋಚಿತವಾದ ಸಂಗ್ರಾಮದ ಮೂಲಕಪಡೆದುಕೊಂಡಿದ್ದ ಸ್ವಾತಂತ್ರ್ಯವನ್ನು, ಆ ಹೋರಾಟದಲ್ಲಿ ಭಾಗಿಯಾಗದಿದ್ದವರು ಅಧಿಕಾರಕ್ಕೆ ಬಂದು ಕಿತ್ತುಕೊಳ್ಳತೊಡಗಿದ್ದಾರೆ. ಅದರ ಒಂದೇ ಒಂದು ನಿದರ್ಶನವೆಂದರೆ ಭಾರತದ ಗಣ್ಯ, ಮಾನ್ಯ ವಿದ್ವಾಂಸರು, ಚಿಂತಕರ ಬಂಧನ. ಭಾರತವು ಹೆಮ್ಮೆ ಪಟ್ಟುಕೊಳ್ಳಬೇಕಾದಂತಹ ಮೇಧಾವಿಗಳನ್ನು ಜೈಲಿನಲ್ಲಿಡಲಾಗಿದೆ.
ಹೀಗಾಗಿ ನ್ಯಾಯಪಥದ ತಂಡವು ಸ್ವಾತಂತ್ರ್ಯ ದಿನದಿಂದ ಗೌರಿದಿನವರೆಗೆ ತರಲಿರುವ ನಾಲ್ಕು ವಿಶೇಷಾಂಕಗಳ ಮೊದಲ ಸಂಚಿಕೆಯನ್ನು ಆ ಮೇಧಾವಿಗಳ ಕುರಿತ ಲೇಖನಗಳಿಗೆ ಮೀಸಲಿಡಲಾಗಿದೆ. ಈ ಸಂಚಿಕೆಯಿಂದ ಆರಂಭಿಸಿ ಮುಂದಿನ ಸಂಚಿಕೆಗಳಲ್ಲಿ ಭಾರತದ ಸ್ವಾತಂತ್ರ್ಯ ಹರಣ ಮತ್ತು ಅದನ್ನು ಮರಳಿ ಪಡೆಯುವ ಕುರಿತು (ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಇಂತಹುದೇ ವಿದ್ಯಮಾನದ ಕುರಿತು) ಭಾರತದ ಹಾಗೂ ಜಗತ್ತಿನ ಹಲವು ಚಿಂತಕರು, ಚಳವಳಿಕಾರರು ಬರೆಯಲಿದ್ದಾರೆ.

ಅಂತಿಮವಾಗಿ, ಹರಣವಾದ ಸ್ವಾತಂತ್ರ್ಯ ವನ್ನು ಮರಳಿ ಪಡೆಯಲು ಮತ್ತೊಂದು ಸ್ವಾತಂತ್ರ್ಯ ಹೋರಾಟವೇ ನಡೆಯಬೇಕಲ್ಲವೇ? ಅದಕ್ಕಾಗಿ ಈ ವಿಚಾರಗಳು ನಾಡಜನರಿಗೆ ದಾರಿದೀಪವಾಗಲಿ ಎಂಬ ಆಶಯ ನಮ್ಮದು. ಪ್ರಜಾತಂತ್ರ, ಸಾಂವಿಧಾನಿಕ ಮೌಲ್ಯಗಳೇ ಮೂಲಗುಣವಾಗಿರುವ ಸ್ವಾತಂತ್ರ್ಯವು ಭಾರತದಲ್ಲಿ ಮರಳಿ ಬರುವತನಕ ನಡೆಯಬೇಕಾದ ಹೋರಾಟದಲ್ಲಿ ಪತ್ರಿಕೆಯೊಂದು ವಹಿಸಬೇಕಾದ ಪಾತ್ರವನ್ನು ನಿರ್ವಹಿಸಲು ನ್ಯಾಯಪಥ ಕಟಿಬದ್ಧವಾಗಿದೆ. ಅದಕ್ಕೆ ನಮ್ಮ ಓದುಗರ ಬೆಂಬಲವು ಅತ್ಯಗತ್ಯವೆಂಬುದನ್ನು ಇನ್ನೊಮ್ಮೆ ಒತ್ತಿ ಹೇಳಬೇಕಿಲ್ಲ ಅಲ್ಲವೇ?


ಇದನ್ನೂ ಓದಿ: ಮೋದಿ ಸರ್ಕಾರದ ಮಹಾದ್ರೋಹ-ಮಾರಾಟವಾಗುತ್ತಿರುವ ’ಮಹಾರತ್ನಗಳು’: ಚಿಂತಕ ಶಿವಸುಂದರ್‌ ಬರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....