ಉಳುವವನೇ ಭೂಮಿಯ ಒಡೆಯ ಎಂದು ದೇವರಾಜ ಅರಸು ಕಾಲದಲ್ಲಿ ಕಾನೂನು ತರಲಾಯಿತು. ಆದರೆ ಈಗ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ಕಾನೂನು ತರಲು ಹೊರಟಿದ್ದಾರೆ. ಇದನ್ನು ರೈತರ ಮಕ್ಕಳಾದ ನಾವು ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟದ ಜನತಾ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ರೈತರು ಮಾತ್ರ ಭೂಮಿ ಕೊಳ್ಳಬಹುದು ಎಂಬ ಕಾನೂನು 1974ರಿಂದ ಜಾರಿಗೆ ಬಂದಿತು. ಭೂಮಿ ಕೊಳ್ಳುವ ಮೀತಿಯನ್ನೂ ನಿರ್ಧರಿಸಲಾಗಿತ್ತು. ಆದರೆ ಈಗಿನ ಸರ್ಕಾರ ಈ ಎರಡನ್ನೂ ತೆಗೆದುಹಾಕಿ, ಜಮೀನ್ದಾರಿ ಪದ್ಧತಿ ಮತ್ತೆ ಮುನ್ನೆಲೆಗೆ ಬರುವಂತೆ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಕೃಷಿ ವಲಯದಲ್ಲಿ ಆದಾಯ ಹೆಚ್ಚಾಗಿತ್ತು. ಕೈಗಾರಿಕಾ ವಲಯ ಮತ್ತು ಸೇವಾ ವಲಯಗಳ ಪಾಲು ಕಡಿಮೆಯಿತ್ತು. ಆದರೆ ಬರುಬರುತ್ತಾ ಕೃಷಿ ಆದಾಯ ಕಡಿಮೆಯಾಗಿ, ಕೈಗಾರಿಕಾ ಮತ್ತು ಸೇವಾ ವಲಯದ ಆದಾಯ ಹೆಚ್ಚಾಯಿತು. ಆದರೆ ಇಂದು ಎಲ್ಲದರ ಆದಾಯವೂ ಕಡಿಮೆಯಾಗಿದೆ ಇದಕ್ಕೆಲ್ಲ ಮೋದಿ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸಣ್ಣ ರೈತರು ತಮ್ಮ ಜಮೀನನ್ನು ಮಾರಿ, ಅದೇ ಜಮೀನಿನಲ್ಲಿ ಈಗ ಕೂಲಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಗಳು ನಿರ್ಮಾಣ ಆಗುವುದನ್ನು ತಡೆಯಬೇಕು. ಹಾಗಾಗಿ ಭೂಮಿಗಾಗಿನ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆಯೆಂದು ಅವರು ಘೋಷಿಸಿದರು.
ನರೇಂದ್ರಮೋದಿಯವರ ಆಡಳಿತದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ನಮ್ಮ ಧ್ವನಿಯನ್ನು ದಮನಿಸಲು ಮೋದಿ ಸರ್ಕಾರ ಮುಂದಾಗಿದೆ. ರಾಜ್ಯಸಭೆಯ ಸದಸ್ಯರನ್ನು ಅಮಾನತುಗೊಳಿಸಿ ಮಸೂದೆ ಪಾಸು ಮಾಡುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.
ರಾಜ್ಯದ ವಿಧಾನಪರಿಷತ್ತಿನಲ್ಲಿ ಭೂಮಿ ಕಿತ್ತುಕೊಳ್ಳುವ ಈ ಮಸೂದೆ ಅಂಗೀಕಾರವಾಗಲು ಬಿಡಬಾರದು. ಮಂಡನೆ ಮಾಡಲೂ ಬಿಡಬಾರದು. ಅಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹಾಗಾಗಿ ಜೆಡಿಎಸ್ ಸದಸ್ಯರು ಮತ್ತು ನಮ್ಮ ಪಕ್ಷದ ಸದಸ್ಯರೂ ಇದನ್ನು ವಿರೋಧಿಸಬೇಕು ಎಂದು ಅವರು ಕರೆ ನೀಡಿದರು.
ಭೂಮಿಯ ಹಕ್ಕು ರೈತರದ್ದು .ಭೂಮಿಯ ಹಕ್ಕು ಕಾರ್ಮಿಕರದ್ದು, ದಲಿತರದ್ದು, ಬಡವರದ್ದು. ಯಾವತ್ತಿಗೂ ಭೂಮಿಯ ಹಕ್ಕನ್ನು ಬಿಟ್ಟುಕೊಡಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಅಂಬೇಡ್ಕರ್ ಕನಸಿನ ಭೂ ಹಂಚಿಕೆ ಜಾರಿಯಾಗಲಿ: ನೂರ್ ಶ್ರೀಧರ್