ದೇಶಾದ್ಯಂತ ಭುಗಿಲೆದ್ದಿರುವ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚುತ್ತುಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ರಾಜ್ಯದಲ್ಲಿ ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ರವರ ಭಿನ್ನಾಭಿಪ್ರಾಯದ ನಡುವೆಯೂ ನಿತೀಶ್ ಕುಮಾರ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಯ್ದೆಯನ್ನು ಬೆಂಬಲಿಸಿದ್ದರು. ಆದರೀಗ ದಿನೇ ದಿನೇ ಹೋರಾಟ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಜಾರಿ ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ.
ಬಿಹಾರದಲ್ಲಿ ನಿತೀಶ್ಕುಮಾರ್ರವರ ಜೆಡಿಯು ಪಕ್ಷವೂ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿವೆ. ಹಾಗಾಗಿ ನಿತೀಶ್ ಕುಮಾರ್ರವರ ಹೇಳಿಕೆಯ ಮಿತ್ರಪಕ್ಷ ಬಿಜೆಪಿಗೆ ಇರುಸುಮುರುಸು ಉಂಟುಮಾಡಿದೆ.
ನಿನ್ನೆ ತಾನೇ ಅವರು ಅಲ್ಪಸಂಖ್ಯಾತರರು ಭಯಪಡಬೇಕಾಗಿಲ್ಲ ಎಂದು ಅವರು ಘೋಷಿಸಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮೊದಲಿಂದಲೂ ಎನ್ಆರ್ಸಿ ಜಾರಿಗೆ ತನ್ನ ರಾಜ್ಯದಲ್ಲಿ ಅವಕಾಶವಿಲ್ಲ ಎಂದು ಘೋಷಿಸಿದ್ದರು. ಈಗ ಅವರ ಸಾಲಿಗೆ ನಿತೀಶ್ ಕುಮಾರ್ ಸೇರಿದ್ದಾರೆ.
ಜೆಡಿಯು ಸಿಎಬಿಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನಿರಾಶೆಗೊಂಡೆ. ಅದು ಧರ್ಮದ ಆಧಾರದ ಮೇಲೆ ಪೌರತ್ವದ ಹಕ್ಕನ್ನು ತಾರತಮ್ಯಗೊಳಿಸುತ್ತದೆ. ಮೊದಲ ಪುಟದಲ್ಲಿ ಮೂರು ಬಾರಿ ಜಾತ್ಯತೀತ ಪದವನ್ನು ಹೊಂದಿರುವ ಪಕ್ಷದ ಸಂವಿಧಾನ ಮತ್ತು ಗಾಂಧಿವಾದಿ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟ ನಾಯಕತ್ವವನ್ನು ಹೊಂದಿರುವವರಿಗೆ ಇದು ಹೊಂದಿಕೆಯಾಗುವುದಿಲ್ಲ ಎಂದು ಈ ಹಿಂದೆ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಈ ಹಿಂದೆ ಟ್ವೀಟ್ ಮಾಡಿದ್ದರು. ಇದಕ್ಕೆ ನಿತೀಶ್ ಕುಮಾರ್ ಸೊಪ್ಪು ಹಾಕದಿದ್ದಾಗ ಅವರು ರಾಜೀನಾಮೆ ನೀಡಲು ಸಹ ಮುಂದಾಗಿದ್ದರು.
ಈಗ ಎಲ್ಲದಕ್ಕೂ ತೆರೆ ಎಳೆಯುವಂತೆ ನಿತೀಶ್ ಕುಮಾರ್ ಮಾತನಾಡಿದ್ದು ಎನ್ಆರ್ಸಿ ಜಾರಿಗೊಳಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ಬಿಜೆಪಿ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದು ಸ್ವಲ್ಪದರಲ್ಲಿಯೇ ಗೊತ್ತಾಗಲಿದೆ.