ದೆಹಲಿ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಮನೆ ಮೇಲಿನ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿರುವ ಆಪ್ ಶಾಸಕ ರಾಘವ್ ಚಡ್ಡಾ ಸಿಬಿಐಗೆ ಸುಸ್ವಾಗತ, ನಮ್ಮ ನಾಯಕನ ಮನೆಯಲ್ಲಿ ನಿಮಗೇನೂ ಸಿಗದು, ಪೆನ್ಸಿಲ್ ಮತ್ತು ಜ್ಯಾಮಿತಿ ಬಾಕ್ಸ್ ಸಿಗಬಹುದು ಅಷ್ಟೇ ಎಂದಿದ್ದಾರೆ.
ದೆಹಲಿಯ ಶಿಕ್ಷಣ ವ್ಯವಸ್ಥೆಯ ಹೀರೋ ಮನೀಶ್ ಸಿಸೋಡಿಯಾ ಎಂದು ಕರೆದಿರುವ ಅವರು, 8 ವರ್ಷಗಳಿಂದ ಹಲವಾರು ಬಾರಿ ದಾಳಿಗಳಾಗಿವೆ. ಆದರೆ ಅವರಿಗೆ ಏನೂ ಸಿಕ್ಕಿಲ್ಲ. ಈಗಲೂ ಅದೇ ಮುಂದುವರೆಯಲಿದ್ದು ಸಿಬಿಐ ವಿಚಾರಣೆಗೆ ಪಕ್ಷದ ಕಾರ್ಯಕರ್ತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಶಿಕ್ಷಣ ಕ್ರಾಂತಿಯ ಬಗ್ಗೆ ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಮುಖಪುಟದ ಸುದ್ದಿಯನ್ನು ಮಾಡಿದ್ದು ಉಪಮುಖ್ಯಮಂತ್ರಿ ಸಿಸೋಡಿಯಾ ಅವರ ಚಿತ್ರವನ್ನು ಅದರಲ್ಲಿ ಪ್ರಕಟಿಸಿದೆ. ಅದೇ ದಿನ ಬಿಜೆಪಿಯು ಸಿಸೊಡಿಯಾ ಮನೆಯ ಮೇಲೆ ಸಿಬಿಐ ದಾಳಿ ಮಾಡಿಸಿದೆ ಎಂದು ರಾಘವ್ ಚಡ್ಡಾ ಆರೋಪಿಸಿದ್ದಾರೆ.
A proud moment for all Indians.
Delhi Government Schools turnaround makes it to the front page of 'The New York Times.'
The world is reading about the ‘Kejriwal Model of Governance.’ pic.twitter.com/SX7Z1MMtUt
— Raghav Chadha (@raghav_chadha) August 19, 2022
“ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಸರ್ಕಾರ ಮಾಡಿದ ಅತ್ಯುತ್ತಮ ಕೆಲಸದಿಂದ ಒಕ್ಕೂಟ ಸರ್ಕಾರಕ್ಕೆ ತೊಂದರೆಯಾಗಿದೆ. ಅದಕ್ಕಾಗಿಯೇ ಎರಡೂ ಇಲಾಖೆಗಳ ಮಂತ್ರಿಗಳನ್ನು ಗುರಿಯಾಗಿಸಲಾಗಿದೆ” ಎಂದು ಸಿಸೋಡಿಯಾ ಹೇಳಿದ್ದಾರೆ. ಇದೇ ರೀತಿಯ ದಾಳಿಗೊಳಗಾಗಿದ್ದ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮೇ ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ದೆಹಲಿ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಗಳ ಮೇಲೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿತು. ಆದರೆ ಈ ಆರೋಪಗಳನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ತೀವ್ರವಾಗಿ ನಿರಾಕರಿಸಿದೆ. ದೆಹಲಿಯಲ್ಲಿರುವ ಮನೀಶ್ ಸಿಸೋಡಿಯಾ ಅವರ ಮನೆ ಅಲ್ಲದೆ, ಏಳು ರಾಜ್ಯಗಳ 20 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ದೆಹಲಿಯ ಮಾಜಿ ಅಬಕಾರಿ ಕಮಿಷನರ್ ಎ.ಗೋಪಿಕೃಷ್ಣ ಅವರ ದಮನ್ ಮತ್ತು ದಿಯುವಿನ ಮನೆಯಲ್ಲೂ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ನಲ್ಲಿ ಎಎಪಿ ಸರ್ಕಾರವು ಪ್ರಾರಂಭಿಸಿದ ಹೊಸ ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಹೊಸ ನೀತಿಯ ಅಡಿಯಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿರುವ ತನಿಖಾ ಸಂಸ್ಥೆಯು ಎಫ್ಐಆರ್ ದಾಖಲಿಸಿದ್ದು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿಯ ಕೊಲೆ ಭೇದಿಸಲು ‘ಬಾಬಾ’ ಬಳಿ ತೆರಳಿದ ಪೊಲೀಸ್ ಅಧಿಕಾರಿ!