ಕಳೆದ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳದ ಅಕ್ಕಿಯ ಕಣಜವಾಗಿರುವ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಮೂವರು ರೈತರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ರೈತರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿವೆ.
ಜವಾದ್ ಚಂಡಮಾರುತದಿಂದ ಸಂಭವಿಸಿದ ಅಕಾಲಿಕ ಮಳೆಯಿಂದಾಗಿ ಆಲೂಗೆಡ್ಡೆ ಮತ್ತು ಭತ್ತದ ಬೆಳೆಗಳು ನಾಶವಾದ ಹಿನ್ನೆಲೆ ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತರ ಕುಟುಂಬಗಳು ಹೇಳಿವೆ. ಘಟನೆ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.
ಶನಿವಾರ (ಡಿಸೆಂಬರ್ 18) ರೈನಾ ಫಸ್ಟ್ ಬ್ಲಾಕ್ನ ದೇಬಿಪುರ ಮತ್ತು ಬಂಟಿರ್ ಗ್ರಾಮಗಳಲ್ಲಿ ಇಬ್ಬರು ರೈತರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶುಕ್ರವಾರ (ಡಿಸೆಂಬರ್ 17) ಕಲ್ನಾ ಸೆಕೆಂಡ್ ಬ್ಲಾಕ್ನ ಬಿರುಹಾ ಗ್ರಾಮದ ತನ್ನ ಮನೆಯಲ್ಲಿ ಇನ್ನೊಬ್ಬ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ದುಷ್ಕರ್ಮಿಗಳಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ- 144 ಸೆಕ್ಷನ್ ಜಾರಿ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬರ್ಧಮಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ಸಿಂಗ್ಲಾ ತಿಳಿಸಿದ್ದಾರೆ.
ಆದರೆ, ಪ್ರಾಥಮಿಕ ತನಿಖೆಯ ನಂತರ, ಬೆಳೆ ನಷ್ಟದಿಂದ ಆತ್ಮಹತ್ಯೆಗಳು ಸಂಭವಿಸಿಲ್ಲ ಎಂದು ಕಂಡುಬಂದಿದೆ ಎಂದು ರೈನಾ ಫಸ್ಟ್ ಬ್ಲಾಕ್ ಬಿಡಿಒ ಸೌಮೆನ್ ಬಾನಿಕ್ ಹೇಳಿದ್ದಾರೆ. ಘಟನೆಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಮತ್ತು ಕೃಷಿ ಇಲಾಖೆಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಕೃಷಕ ಬಂಧು’ ಯೋಜನೆಯಡಿ ವಾರದ ಹಿಂದೆಯೇ ಈ ರೈತರು ಧನಸಹಾಯ ಪಡೆದಿರುವುದರಿಂದ ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ರಾಜ್ಯ ಸರ್ಕಾರದ ಕೃಷಿ ಸಲಹೆಗಾರ ಪ್ರದೀಪ ಮಜುಂದಾರ್ ಹೇಳಿದರು. ರೈನಾ ಶಾಸಕ ಶಂಪಾ ಧಾರ ಕೂಡ ಬೆಳೆ ವೈಫಲ್ಯದಿಂದ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.