Homeಎಕಾನಮಿಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದಾಗುವ ಆರ್ಥಿಕ ನಷ್ಟವೆಷ್ಟು?

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದಾಗುವ ಆರ್ಥಿಕ ನಷ್ಟವೆಷ್ಟು?

- Advertisement -
- Advertisement -

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಈ ದೇಶದ ಸಂವಿಧಾನದ ಮೂಲ ಆಶಯಗಳಾದ ಸಹಭಾಗಿತ್ವ, ಸಹೋದರತ್ವ, ಧರ್ಮನಿರಪೇಕ್ಷತೆ, ಜಾತ್ಯತೀತತೆಗಳಿಗೆ ವಿರುದ್ಧವಾಗಿರುವುದು ಬಹುತೇಕರಿಗೆ ಅರ್ಥವಾಗಿದೆ. ಇದು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆದು ಒಂದಿಡೀ ಸಮುದಾಯವನ್ನು ಮುಖ್ಯವಾಹಿನಿಯಿಂದ ಹೊರಗಿಡುವಂಥ ಅಮಾನವೀಯ ಕೆಲಸವಾಗಿದೆ. ಈ ದೇಶ ಸರ್ವಜನಾಂಗದ ಶಾಂತಿಯ ತೋಟ ಎಂಬ ಹಿರಿಮೆಗೇ ಮಸಿಬಳಿಯುವಂತಹುದೂ ಆಗಿದೆ.

ಇದನ್ನ ಮನಗಂಡೇ ದೇಶದಾದ್ಯಂತ ಜಾತಿಧರ್ಮಗಳನ್ನು ಮೀರಿ ನಾಗರಿಕರು ಅದರಲ್ಲೂ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಮುಂದೆ ನಿಂತು ಶಾಂತಿಯುತ ಪ್ರತಿಭಟನಾ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇಂಥಾ ಒಕ್ಕೊರಲ ಪ್ರತಿಭಟನೆಯಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಸಿಎಎ ಮತ್ತು ಎನ್‌ಆರ್‌ಸಿಯನ್ನು ತಮ್ಮ ರಾಜ್ಯಗಳಲ್ಲಿ ಮಾಡುವುದಿಲ್ಲ ಎಂದೂ ಹೇಳಿವೆ.

ಈ ಪೌರತ್ವ ಕಾಯ್ದೆಯು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವುದಷ್ಟೇ ಅಲ್ಲದೆ ದೇಶದ ಆರ್ಥಿಕತೆಯ ಮೇಲೆಯೂ ತಾಳಲಾರದಷ್ಟು ಆಘಾತ ಉಂಟುಮಾಡಲಿದೆ.

ಈ ಕಾಯ್ದೆಯ ಅನುಷ್ಟಾನದಿಂದ ದೇಶದ ಮೇಲೆ ಉಂಟಾಗುವ ಅರ್ಥಿಕ ಪರಿಣಾಮಗಳೇನು ಎಂದು ಸಂಕ್ಷಿಪ್ತವಾಗಿ ನೋಡುವ ಪ್ರಯತ್ನ ಮಾಡೋಣ.

ಕಡೆಯ ಆರು ವರ್ಷಗಳಲ್ಲಿ ಅಸ್ಸಾಮ್ ರಾಜ್ಯದಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಗೆ ಖರ್ಚಾದ ಹಣ ಹತ್ತಿರತ್ತಿರ 1500 ಕೋಟಿ ರೂಪಾಯಿಗಳು. ಜೊತೆಗೆ ಈ ಕೆಲಸಕ್ಕೆ ಬಳಸಿಕೊಂಡ ಸರ್ಕಾರೀ ಉದ್ಯೋಗಿಗಳ ಸಂಖ್ಯೆ ಐವತ್ತೈದು ಸಾವಿರ. ಅಸ್ಸಾಮ್ ಜನಸಂಖ್ಯೆ ಮೂರೂವರೆ ಕೋಟಿ. ಆ ಲೆಕ್ಕದಲ್ಲಿ ಇಡೀ ದೇಶದಲ್ಲಿ ಎನ್‌ಆರ್‌ಸಿ ಮಾಡಲು ಖರ್ಚಾಗುವ ಹಣ ಕನಿಷ್ಟ ಅರವತ್ತುಸಾವಿರ ಕೋಟಿ ರೂಪಾಯಿಗಳು. ಜೊತೆಗೆ ಬೇರೆ ಕೆಲಸಗಳನ್ನು ಬಿಟ್ಟು ಸಾವಿರಾರು ಉದ್ಯೋಗಿಗಳು ಎನ್‌ಆರ್‌ಸಿ ಕೆಲಸಕ್ಕೆ ಬಳಕೆಯಾದರೆ ತಗಲುವ ಪರೋಕ್ಷ ಖರ್ಚು ಇನ್ನೂ ಹಲವು ಸಾವಿರ ಕೋಟಿಗಳು.

ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಮೇಲೆತ್ತುವ ಮುಖ್ಯ ಕ್ರಮವಾದ ಗ್ರಾಮೀಣ ಉದ್ಯೋಗ ಖಾತ್ರಿಗೆ ಹೆಚ್ಚುವರಿಯಾಗಿ ಹತ್ತು ಸಾವಿರ ಕೋಟಿ ಕೊಡಲು ಸರ್ಕಾರದ ಬಳಿ ಹಣವಿಲ್ಲ.

ಕರ್ನಾಟಕದ ಪ್ರವಾಹ ಪೀಡಿತರಿಗೆ ಕೊಡಬೇಕಾದಷ್ಟರಲ್ಲಿ ಕನಿಷ್ಟ ಶೇಕಡಾ ಹತ್ತರಷ್ಟು ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ. ಅಂತಹುದರಲ್ಲಿ ಇಷ್ಟೊಂದು ದೊಡ್ಡ ಮೊತ್ತ (ಒಟ್ಟು ಕನಿಷ್ಟ ಒಂದು ಲಕ್ಷಕೋಟಿ ) ಸರ್ಕಾರದ ಹತ್ತಿರ ಎಲ್ಲಿದೆ?

ಸರ್ಕಾರ ಸಾಲ ಮಾಡಿಯೇ ಈ ಖರ್ಚನ್ನು ಹೊಂದಿಸಬೇಕಾಗುವುದರಿಂದ ನಮ್ಮೆಲ್ಲರ ತಲೆಯ ಮೇಲೆ ಮತ್ತಷ್ಟು ಸಾಲದ ಹೊರೆ ಬೀಳಲಿದೆ ಮತ್ತು ಅದರಿಂದ ದೇಶ ಇನ್ನಷ್ಟು ಆರ್ಥಿಕವಾಗಿ ಹಿಂದೆ ಬೀಳಲಿದೆ.

ಇನ್ನು, ಬೇರೆ ದೇಶದಿಂದ ಬಂದಿರುವ ಮುಸ್ಲಿಮರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗುವುದಿಲ್ಲ (ಸಿಎಎ ಪ್ರಕಾರ ಹಿಂದು,ಕ್ರೈಸ್ತ, ಜೈನ, ಪಾರ್ಸಿ ಮತ್ತು ಬೌದ್ಧರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ). ಪೌರತ್ವವಿಲ್ಲದ ಮುಸ್ಲಿಮರನ್ನು ಬೇರೆ ಯಾವುದೇ ದೇಶಕ್ಕೆ ಕಳಿಸಲಾಗುವುದೂ ಇಲ್ಲ. ಏಕೆಂದರೆ, ಆಗಿರುವವರ ಬಳಿ ಅವರು ಬೇರೆ ದೇಶದ ಪ್ರಜೆಗಳೆಂದು ಸಾಬೀತುಪಡಿಸುವ ದಾಖಲೆಗಳೂ ಇರುವುದಿಲ್ಲ. ಆಗ, ಅಂತವರನ್ನು ಸರ್ಕಾರದ ಪ್ರಕಾರ ಡಿಟೆನ್ಷನ್ ಸೆಂಟರುಗಳಲ್ಲಿ (Detention centre) ಇಡಲಾಗುತ್ತದೆ.

ಸುಮ್ಮನೆ ಒಂದು ಅಂದಾಜಿಗೆ ಆ ರೀತಿ ಪೌರತ್ವ ಇಲ್ಲದ ಇಪ್ಪತ್ತು ಲಕ್ಷ ಮುಸ್ಲಿಮರು ಸಿಗುತ್ತಾರೆಂದುಕೊಳ್ಳೋಣ (ಬಿಜೆಪಿ ಐಟಿ ಸೆಲ್ ಈ ಸಂಖ್ಯೆ ಎರಡು ಮೂರು ಕೋಟಿಯಷ್ಟಿದೆ ಎಂದು ಪ್ರಚಾರ ಮಾಡ್ತಿದೆ). ಈ ಇಪ್ಪತ್ತು ಲಕ್ಷ ಜನರನ್ನ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ನೋಡಿಕೊಳ್ಳುವುದಕ್ಕೆ ವರ್ಷಕ್ಕೆ ಕನಿಷ್ಟ ಹತ್ತು ಸಾವಿರ ಕೋಟಿಗಳಷ್ಟು ಖರ್ಚಾಗಲಿದೆ. ಒಂದು ಸೆಂಟರಿನಲ್ಲಿ ಅಂದಾಜು ಮೂರು ಸಾವಿರ ಜನ, ಊಟ, ಬಟ್ಟೆ, ಮಕ್ಕಳ ಸ್ಕೂಲು ಮತ್ತು ಉಸ್ತುವಾರಿ ಸಿಬ್ಬಂದಿಗಳ ವೆಚ್ಚ ಎಲ್ಲ ಸೇರಿದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ದಾಟಲಿದೆ. ಅಸ್ಸಾಮಿನಲ್ಲಿ ಪ್ರತಿ ಸೆಂಟರನ್ನು ಕಟ್ಟಲು ಐವತ್ತು ಕೋಟಿ ವ್ಯಯಿಸಲಾಗಿದೆ. ಆ ಲೆಕ್ಕದಲ್ಲಿ ಐನೂರು ಸೆಂಟರುಗಳನ್ನು ಕಟ್ಟಲು ಇಪ್ಪತ್ತೈದು ಸಾವಿರ ಕೋಟಿ ಒಟ್ಟಿಗೇ ಖರ್ಚಾಗಲಿದೆ.

ಇಲ್ಲಿ ಅಂದಾಜಿಸಿರುವ ಇಪ್ಪತ್ತು ಲಕ್ಷ ಜನ ಬದುಕಲು ಇವತ್ತು ಒಂದಲ್ಲ ಒಂದು ಕೆಲಸ ಮಾಡಿ (ಮೆಕ್ಯಾನಿಕ್, ಸೆಕ್ಯೂರಿಟಿ, ಸಣ್ಣ ಅಂಗಡಿ ಇತ್ಯಾದಿ) ಸಂಪಾದನೆ ಮಾಡುತ್ತಾ ದೇಶದ ಜಿಡಿಪಿಗೆ ತಮ್ಮ ಕಾಣಿಕೆಯನ್ನು ನೀಡುತ್ತಿದ್ದಾರೆ.

ದೇಶದ ತಲಾದಾಯ ಇವತ್ತು ತಿಂಗಳಿಗೆ ಹತ್ತು ಸಾವಿರದ ಐನೂರು ರೂಪಾಯಿಗಳು. ಈ ಲೆಕ್ಕದಲ್ಲಿ ಇಪ್ಪತ್ತು ಲಕ್ಷ ಜನರಿಂದ ಪ್ರತಿವರ್ಷ ಜಿಡಿಪಿಗೆ ಸಿಗುವ ಕೊಡುಗೆ ಹತ್ತಿರತ್ತಿರ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳು.

ಅಂದರೆ, ಅಷ್ಟು ಜನರನ್ನು ನೋಡಿಕೊಳ್ಳುವ ಮತ್ತು ನಿಂತುಹೋಗುವ ಸಂಪಾದನೆ ಈ ಎರಡರಿಂದ ಭಾರತಕ್ಕೆ ವಾರ್ಷಿಕವಾಗಿ ಆಗುವ ಒಟ್ಟು ಆರ್ಥಿಕ ನಷ್ಟ ಕನಿಷ್ಟ ಮೂವತ್ತೈದರಿಂದ ನಲವತ್ತು ಸಾವಿರ ಕೋಟಿ ರೂಪಾಯಿಗಳು.

ಅದಲ್ಲದೆ, ಮೇಲೆ ಹೇಳಿದಂತೆ ಈಗ ತಕ್ಷಣಕ್ಕೆ ಆಗುವ ನಷ್ಟ ಕನಿಷ್ಟ ಒಂದು ಲಕ್ಷ ಕೋಟಿ ರೂಪಾಯಿಗಳು.

ಇಷ್ಟರ ಜೊತೆಗೆ, ದೇಶದೊಳಗೆ ಸಿಎಎ ಕಾರಣಕ್ಕಾಗಿ ಅಶಾಂತಿಯ ವಾತಾವರಣವಿರುವಾಗ ಯಾವುದೇ ದೇಶ ಭಾರತದಲ್ಲಿ ಬಂಡವಾಳ ಹೂಡಲು ಮುಂಬರುವುದಿಲ್ಲ.

ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಹನ್ನೆರಡು ಸಾವಿರ ಕೋಟಿ ಹೂಡಬೇಕಾಗಿದ್ದ ಜಪಾನ್ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇದಲ್ಲದೆ, ದೇಶದ ಕೋಟ್ಯಂತರ ಮಂದಿ ತಮ್ಮ ಪೌರತ್ವ ಸಾಬೀತಿಗೆ ಅಲೆದಾಡುತ್ತ ಕಳೆಯುವುದರಿಂದ ಅವರ ಉತ್ಪಾದನಾ ಮಟ್ಟ ಕುಸಿದು ಅದೂ ಕೂಡ ಆರ್ಥಿಕತೆಗೆ ಮತ್ತೊಂದು ಭಾರೀ ಹೊಡೆತ ಕೊಡಲಿದೆ.

ತಾನೇ ಕೈಯಾರೆ ಮಾಡಿಕೊಂಡ (ನೋಟುಬಂದಿ ಮತ್ತು ಜಿಎಸ್ಟಿ) ತಪ್ಪುಗಳಿಂದಾಗಿ ಆರ್ಥಿಕ ದುಸ್ಥಿತಿಯಲ್ಲಿರುವ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿಯಿಂದುಂಟಾಗುವ ಆರ್ಥಿಕ ಹೊರೆ ತಾಳಿಕೊಳ್ಳುವ ಸ್ಥಿತಿಯಲ್ಲಂತು ಇಲ್ಲವೇ ಇಲ್ಲ.

ಒಟ್ಟಿನಲ್ಲಿ, ಈ ಸಿಎಎ ಮತ್ತು ಎನ್‌ಆರ್‌ಸಿ ದೇಶವನ್ನು ಧರ್ಮಾಧಾರಿತವಾಗಿ ಒಡೆದು ಸಮಾಜದೊಳಗಿನ ಸಾಮರಸ್ಯವನ್ನು ಹಾಳುಮಾಡುವುದರ ಜೊತೆಗೆ ಆರ್ಥಿಕವಾಗಿಯೂ ಕೂಡ ದೇಶವನ್ನು ಕೆಳತಳ್ಳಲಿದೆ.

ಒಟ್ಟಾರೆ, ಇದು ದೇಶವನ್ನು ನೈತಿಕವಾಗಿ ಮತ್ತು ಆರ್ಥಿಕವಾಗಿ ಪ್ರಪಾತಕ್ಕೆ ಬೀಳಿಸಲಿದೆ. ( ಜನಶಕ್ತಿಯಿಂದ ತಡೆಯದೇ ಹೋದರೆ)

ಹಾಗಾದರೆ, ಈ ಸರ್ಕಾರ ಯಾವ ಕಾರಣಕ್ಕಾಗಿ ಈ ಸಿಎಎ ಮತ್ತು ಎನ್‌ಆರ್‌ಸಿ ಮಾಡುತ್ತಿದೆ?

ಒಂದು, ಇದರ ಎಲ್ಲ ಪರಿಣಾಮಗಳ ಅಂದಾಜಿಲ್ಲದೆ ತಮ್ಮ ಹಿಂದುತ್ವ ಕಾರ್ಯಸೂಚಿಯ ಭಾಗವಾಗಿ ಇದನ್ನು ಮಾಡುತ್ತಿರಬಹುದು.

ಎರಡು, ಪರಿಣಾಮಗಳ ಅರಿವಿದ್ದು ಅದರಲ್ಲೂ ಆರ್ಥಿಕ ದುಷ್ಪರಿಣಾಮದ ಅರಿವಿದ್ದು ಕೇವಲ ರಾಜಕೀಯ ಲಾಭದ ಕಾರಣಕ್ಕೆ ಇದನ್ನು ಮಾಡುವಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಬಹುದು. ಅಂದರೆ, ಚುನಾವಣೆ ಹತ್ತಿರ ಬಂದಂತೆ ಐದಾರು ಸಾವಿರ ಜನರನ್ನು ಮಾತ್ರ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ಅದನ್ನೇ ಕೋಟಿ ಜನ ಎಂಬಂತೆ ಸೋಷಿಯಲ್ ಮೀಡಿಯ ಮೂಲಕ ನಂಬಿಸಿ ಹಿಂದೂಗಳ ಓಟು ಪಡೆಯುವ ಹುನ್ನಾರವೂ ಇರಬಹುದು.

ಯಾವ ಕಾರಣಕ್ಕೇ ಮಾಡುತ್ತಿದ್ದರೂ ಇದನ್ನು ಇಡೀ ದೇಶ ಈಗ ಮಾಡುತ್ತಿರುವಂತೆ ಒಗ್ಗಟ್ಟಿನಿಂದ ಶಾಂತಿಯುತವಾಗಿ ಎದುರಿಸಿ ದೇಶವನ್ನು ನೈತಿಕ ಮತ್ತು ಆರ್ಥಿಕ ಅಧಃಪತನದಿಂದ ಉಳಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...