ಟ್ವೀಟ್ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಡಿ ಬಂಧಿಸಿರುವ ನಟ ಚೇತನ್ ಪರ ನಟಿ ಮತ್ತು ಮಾಜಿ ಸಂಸದೆ ರಮ್ಯಾ ದಿವ್ಯಸ್ಪಂದನ ದನಿಯೆತ್ತಿದ್ದಾರೆ. ಚೇತನ್ ಮಾಡಿರುವ ಟ್ವೀಟ್ನಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಚೇತನ್ ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ನಟಿ, “ಚೇತನ್ರನ್ನು ಪೊಲೀಸರಿಗೆ ಬಂಧಿಸಲು ಈ ಟ್ವೀಟ್ನಲ್ಲಿ ತಪ್ಪೇನಿದೆ” ಎಂದು ಪ್ರಶ್ನಿಸಿ ಚೇತನ್ ಅವರನ್ನು ಟ್ಯಾಗ್ ಮಾಡಿದ್ದಾರೆ.
What is wrong with this tweet for the police to arrest Chetan? @ChetanAhimsa https://t.co/tSeRIBpgMi
— Divya Spandana/Ramya (@divyaspandana) February 23, 2022
ಅದೇ ರೀತಿ ಮತ್ತೊರ್ವ ಚಿತ್ರನಟ, ಕ್ರಿಕೆಟ್ ವೀಕ್ಷಕ ವಿವರಣೆಗಾರರಾದ ಕಿರಣ್ ಶ್ರೀನಿವಾಸ್ ಸಹ “ಚೇತನ್ರವರೆ ನಿಮ್ಮ ಜೊತೆ ನಾನು ಹಾಗು ಲಕ್ಷಾಂತರ ಕನ್ನಡಿಗರ ಬೆಂಬಲವಿದೆ” ಎಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ “ಆತ್ಮೀಯ ಗೆಳೆಯ ಚೇತನ್ ಇಂದು ನಿಮ್ಮ ಜನ್ಮದಿನ. ಇಂದು ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮನ್ನು ಪ್ರೀತಿಸುವವರೊಂದಿಗೆ ನೀವಿರಬೇಕಿತ್ತು. ಆದರೆ ಪೊಲೀಸರು ನಿಮ್ಮನ್ನು ಬಂಧಿಸಿದ್ದಾರೆ. ಇದರಿಂದ ನನಗೆ ಹಾಗೂ ಲಕ್ಷಾಂತರ ಅಭಿಮಾನಿಗೆ ಬೇಜಾರು, ದುಃಖ, ನೋವಾಗಿದೆ. ಯಾಕೆ ನಿಮ್ಮ ಮೇಲೆ ಈ ಕ್ರಮ ತೆಗೆದುಕೊಂಡಿದ್ದಾರೆ ಎಂಬ ಅರಿವು ನನಗಿದೆ. ನಿಮ್ಮ ಹೋರಾಟ, ನಿಮ್ಮ ದನಿ, ಸತ್ಯದ ಪರ, ಸಮಾಜದ ಪರ, ಜನರ ಪರ ಹೋರಾಟ ಏನಿದೆ ಅದು ಬೆಳೆದುಬಂದು ರಾಜ್ಯ ಮಾತ್ರವಲ್ಲದೆ ಇಡೀ ದೇಶಕ್ಕೆ ಹಬ್ಬಿದೆ. ಇದರಿಂದ ಭದ್ರಕೋಟೆಯಲ್ಲಿ ಕೂತು ದಂಧೆ ನಡೆಸುತ್ತಿರುವವರ ಗೋಡೆಯಲ್ಲಿ ಬಿರುಕುಗಳು ಉಂಟಾಗಿವೆ. ಅದರಿಂದ ಭಯಗೊಂಡಿದ್ದಾರೆ. ಅದಕ್ಕೆ ಕಾರಣ ನೀವು ಮತ್ತು ನಿಮ್ಮ ಜೊತೆ ನಿಂತಿರುವ ಲಕ್ಷಾಂತರ ಹೋರಾಟಗಾರರು ಮತ್ತು ಅದರಲ್ಲಿ ನಾನು ಒಬ್ಬನಾಗಿದ್ದೇನೆ. ನಿಮ್ಮ ಈ ಜನ್ಮದಿನ ನಿಮ್ಮ ಹೋರಾಟದ ಮುಖ್ಯ ಜನ್ಮದಿನವಾಗಿ ಮೂಡಿಬರಲಿದೆ. ಇಲ್ಲಿಂದ ಮುಂದೆ ಏನೇ ಆಗಲಿ ನಿಮ್ಮ ಹೋರಾಟದೊಂದಿಗೆ ನಾನು ಮತ್ತು ಲಕ್ಷಾಂತರ ಜನರು ನಿಂತೇ ನಿಲ್ಲುತ್ತೇವೆ. ನಿಮಗೆ ಜನ್ಮದಿನದ ಶುಭಾಶಯಗಳು. ಜೈ ಭಾರತ್, ಜೈಭೀಮ್” ಎಂದು ಕಿರಣ್ ಶ್ರೀನಿವಾಸ್ ಹೇಳಿದ್ದಾರೆ.
ಏನಿದು ಪ್ರಕರಣ?
ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಸ್.ರವಿ ಅವರ ದೂರಿನ ಅನ್ವಯ ಸಾಮಾಜಿಕ ಕಾರ್ಯಕರ್ತ ಚೇತನ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. “ನನ್ನ ಸರಹದ್ದಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಆಗಿದ್ದಾಗೇ ಸಾಮಾಜಿಕ ಜಾಲತಾಣಗಳ ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲಿ ಹೀಗೆ ಐದಾರು ದಿನಗಳ ಮುಂಚೆ ಟಿಟ್ವರ್ನಲ್ಲಿ ನಮ್ಮ ಠಾಣಾ ಸರಹದ್ದಿನಲ್ಲಿ ವಾಸವಿರುವ ಚೇತನ್ಕುಮಾರ್ ಅಹಿಂಸಾ ರವರು ಮಾಡಿರುವ ಟ್ವೀಟ್ ಅವಲೋಕಿಸಲಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಟ ಚೇತನ್ ತಮ್ಮ ಟ್ವೀಟ್ನಲ್ಲಿ “ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ನಾನು ಸುಮಾರು ಎರಡು ವರ್ಷಗಳ ಹಿಂದೆ ಬರೆದ ಟ್ವೀಟ್ ಇದು. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಪ್ರಕರಣದಲ್ಲಿ ಇಂತಹ ಗೊಂದಲದ ಕಾಮೆಂಟ್ಗಳನ್ನು ಮಾಡಿದ್ದಾರೆ. ಈಗ ಇದೇ ನ್ಯಾಯಾಧೀಶರು ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಸ್ವೀಕಾರಾರ್ಹವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಇವರಿಗೆ ಅಗತ್ಯವಿರುವ ಸ್ಪಷ್ಟತೆ ಇದೆಯೇ?” ಎಂದು ಪ್ರಶ್ನಿಸಿದ್ದರು. ಜೊತೆಗೆ ಹಳೆಯ ಟ್ವೀಟ್ ಅನ್ನು ಲಗತ್ತಿಸಿದ್ದರು.
ಹಳೆಯ ಟ್ವೀಟ್ನಲ್ಲಿ ನಟ ಚೇತನ್, “ಈ ವಾರ ಕರ್ನಾಟಕದ ಹೈಕೋರ್ಟ್ ನ್ಯಾಯಮೂರ್ತಿ ದೀಕ್ಷಿತ್ ಅವರು ಅತ್ಯಾಚಾರದ ಆರೋಪಿ ರಾಕೇಶ್ ಬಿ ಅವರಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ- “ಅತ್ಯಾಚಾರದ ನಂತರ ಮಲಗುವುದು ಒಬ್ಬ ಭಾರತೀಯ ಮಹಿಳೆಗೆ ನಾಚಿಕೆಗೇಡಿನ ಸಂಗತಿ; ಅಂತಹ ಸಮಯದಲ್ಲಿ ಮಹಿಳೆಯರು ಪ್ರತಿಕ್ರಿಸುವ ರೀತಿಯಲ್ಲ ಅದು” ಎಂದಿದ್ದಾರೆ. 21ನೇ ಶತಮಾನದಲ್ಲೂ ಕೂಡ ನ್ಯಾಯಾಂಗದ ದೀಕ್ಷಿತ್ ಅವರ ಈ ಸ್ತ್ರೀ ದ್ವೇಷ, ನಾಚಿಗೆಗೇಡಿನ ಸಂಗತಿ” ಎಂದು ಹೇಳಿದ್ದರು. ಈ ಟ್ವೀಟ್ನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಚೇತನ್ ಅವರು ಸಾಮಾನ್ಯ ಜನರಲ್ಲಿ ಮತ್ತು ಒಂದು ಕೋಮಿನ (ಮುಸ್ಲಿಂ) ಜನಾಂಗದವರಿಗೆ ಕಾನೂನು- ಸುವ್ಯವಸ್ಥೆ, ನ್ಯಾಯಾಂಗ, ಸರ್ಕಾರ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಅಪನಂಬಿಕೆ ಮತ್ತು ಆಕ್ರೋಶ ಬರುವ ಹಾಗೇ ಮೇಲ್ಕಂಡಂತೆ ಟ್ವೀಟ್ ಮಾಡಿ ಮುಸ್ಲಿಂ ಕೋಮಿನವರು ಮತ್ತು ಇತರೆ ಜನರು ಪ್ರತಿಭಟನೆ, ಗಲಭೆ, ಇತ್ಯಾದಿಗಳು ಮಾಡುವಂತೆ ಪ್ರಚೋದಿಸಿದ್ದಾರೆ” ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
“ಈ ರೀತಿ ಗಲಭೆ ಉಂಟಾಗಿ ನಮ್ಮ ರಾಜ್ಯದ ಹಾಗೂ ದೇಶದ ಸಮಗ್ರತೆಯು ನಾಶವಾಗಲೆಂದು ಪ್ರಚೋದಿಸಿರುತ್ತಾರೆ. ಹೀಗೆ ಭಾರತದ ಅನೇಕ ವರ್ಗಗಳ ಮತ್ತು ಕೋಮುಗಳ ನಡುವೆ ವೈರತ್ವ, ದ್ವೇಷ, ವೈಮಸ್ಸು ಉಂಟು ಮಾಡಿರುತ್ತಾರೆ. ಚೇತನ್ ಅವರು ಈ ರೀತಿಯ ಟ್ವೀಟ್ಗಳನ್ನು ಮಾಡಿ ಸಮಾಜದಲ್ಲಿ ಶಾಂತಿಭಂಗವನ್ನು ಉಂಟು ಮಾಡಿ ಜನರನ್ನು ಉದ್ರೇಕಿಸಲು ಉದ್ದೇಶಿಸಿದ್ದಾರೆ” ಎಂದು ದೂರಲಾಗಿದೆ.
“ನ್ಯಾಯಮೂರ್ತಿಯವರಿಗೆ ಅವಮಾನ ಮಾಡುವ, ಸದರಿ ನ್ಯಾಯಮೂರ್ತಿಯವರು ನ್ಯಾಯಾಲಯದಲ್ಲಿ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಕೈಬಿಡುವಂತೆ ಮಾಡುವ ಅಥವಾ ಅವರುಗಳು ನಿಷ್ಪಕ್ಷಪಾತ ವಿಚಾರಣೆ ಮತ್ತು ನ್ಯಾಯನಿರ್ಣಯ ಮಾಡುವುದರಿಂದ ಹಿಂದೆ ಸರಿಯುವಂತೆ ಮಾಡುವ ಉದ್ದೇಶವನ್ನು ಟ್ವೀಟ್ ಹೊಂದಿದೆ. ಆದ್ದರಿಂದ ಚೇತನ್ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರುತ್ತೇನೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಚೇತನ್ ಅವರ ಮೇಲೆ ಐಪಿಸಿ ಕಲಂ 154ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದ್ದು, ಸೆಕ್ಷನ್ 504, 505 (2) ಪ್ರಕರಣ ದಾಖಲಿಸಲಾಗಿದೆ. ಅವರ ಜಾಮೀನು ವಿಚಾರನೆಯ ವಾದಗಳು ಮುಗಿದಿದ್ದು ಫೆಬ್ರವರಿ 25 ರಂದು ತೀರ್ಪು ಹೊರಬರಲಿದೆ.
ಇದನ್ನೂ ಓದಿ: ಸಾಮಾನ್ಯ ಜನರ ಸ್ಥಿತಿ ನೆನೆದು ಆತಂಕವಾಗುತ್ತಿದೆ, ಇದಕ್ಕೆ ಹೋರಾಟವೊಂದೇ ಪರಿಹಾರ: ಮೇಘಾ
This is right
ನಾನು ಭೀಮ್ ಆರ್ಮಿ ತಾಲೂಕ ಅಧ್ಯಕ್ಷರು