ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರ ಹಿಂಸಾಚಾರದ ವಿಚಾರದಲ್ಲಿ ನೇರವಾಗಿ ಹೃದಯದಿಂದ ಮಾತನಾಡಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ರಾಜಕೀಯವಾಗಿ ಮಾತನಾಡಿದ್ದಾರೆ ಎಂದು ಶೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಹೇಳಿದೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾದ ರಾಹುಲ್, ”ಕೇಂದ್ರ ಸರ್ಕಾರವು ಮಣಿಪುರ ಹಿಂಸಾಚಾರ ತಡೆಗೆ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದ್ದಾರೆ.
”ನನ್ನ ತಾಯಿ (ಸೋನಿಯಾ ಗಾಂಧಿ) ಸದನದಲ್ಲಿ ಕುಳಿತಿದ್ದಾರೆ. ಬಿಜೆಪಿಯ ರಾಜಕೀಯದಿಂದ ಮಣಿಪುರದಲ್ಲಿ ನನ್ನ ಮತ್ತೊಬ್ಬ ತಾಯಿಯಾದ ಭಾರತ ಮಾತೆಗೆ ಕಲೆಯಾಗಿದೆ. ಅಲ್ಲಿ ಭಾರತದ ಧ್ವನಿಯೂ ಅಡಗಿದೆ. ನೀವು ನಿಜವಾದ ದೇಶಭಕ್ತರಲ್ಲ, ದೇಶದ್ರೋಹಿಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಮಾತನಾಡಿರುವ ಟಿಎಂಸಿ ಸಂಸದ ಸೌಗತಾ ಥಾಯ್, ”ರಾಹುಲ್ ಗಾಂಧಿ ಅವರು ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ, ಪ್ರಸ್ತಾಪಿಸಿದ್ದಾರೆ ಮಣಿಪುರ ಪರಿಸ್ಥಿತಿಯ ಬಗ್ಗೆ ಹೃದಯದಿಂದ ಮಾತನಾಡಿದ್ದಾರೆ. ಇಡೀ ದೇಶದ ಭಾವನೆಯೂ ಅದೇ ಆಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ” ಎಂದಿದ್ದಾರೆ.
”ಕೇಂದ್ರ ಸರ್ಕಾರವು ಮಣಿಪುರಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಆದರೆ ಆ ವಿಚಾರವನ್ನು ರಾಹುಲ್ ಗಾಂಧಿ ಅವರು ಸೂಕ್ತ ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ” ಎಂದು ಹೇಳಿದ್ದಾರೆ.
”ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಣಿಪುರ ವಿಚಾರವಾಗಿ ಸಮರ್ಪಕವಾಗಿ ಧ್ವನಿ ಎತ್ತಿದ್ದಾರೆ. ಸಂಸತ್ತಿನಲ್ಲಿ ಈ ವಿಚಾರವನ್ನು ಚರ್ಚೆ ನಡೆಸುವುದು ಕೇಂದ್ರ ಸರ್ಕಾರಕ್ಕೆ ಇಷ್ಟವಿಲ್ಲ. ಆದರೆ, ಅವಿಶ್ವಾಸ ನಿರ್ಣಯದ ಮೂಲಕ ಈ ಬಗ್ಗೆ ಮಾತನಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು. ರಾಹುಲ್ ಗಾಂಧಿ ಯಾವೆಲ್ಲ, ವಿಚಾರಗಳನ್ನು ಹೇಳಿದ್ದಾರೋ ಅವೆಲ್ಲವೂ ಸರಿಯಾಗಿಯೇ ಇವೆ. ಅವರು ಮಣಿಪುರದಲ್ಲಿ ಅನ್ಯಾಯ ನಡೆಯುತ್ತಿರುವುದನ್ನು ಎತ್ತಿ ತೋರಿಸಿದ್ದಾರೆ” ಎಂದು ಸೌಗತಾ ಥಾಯ್ ಅವರು ಅಭಿಪ್ರಾಯಪಟ್ಟಿದ್ದಾರೆ.
”ಇನ್ನೂ ಅಮಿತ್ ಶಾ ಮಾಡಿದ ಭಾಷಣವು ಕೇಂದ್ರ ಸರ್ಕಾರದ ಅಸಮರ್ಥತೆಯನ್ನು ಸಮರ್ಥಿಸಿಕೊಳ್ಳುವ ರಾಜಕೀಯ ಭಾಷಣವಾಗಿತ್ತು” ಎಂದು ರಾಯ್ ಆರೋಪಿಸಿದ್ದಾರೆ.
”ಅಮಿತ್ ಶಾ ಅವರು ರಾಜಕೀಯ ಹೇಳಿಕೆಯನ್ನು ನೀಡಿದ್ದಾರೆ. ವಿರೋಧ ಪಕ್ಷಗಳನ್ನು ತೆಗಳುವ ಮೂಲಕ ಕೇಂದ್ರ ಸರ್ಕಾರದ ಜವಾಬ್ದಾರಿಗಳಿಂದ ಪಲಾಯನ ಮಾಡಲು ಮತ್ತು ಕೇಂದ್ರದ ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಕೇಂದ್ರದ ನೀತಿಯಿಂದಾಗಿ ಮಣಿಪುರ ಹೊತ್ತಿ ಉರಿಯುತ್ತಿದೆ” ಎಂದು ಕಿಡಿಕಾರಿದ್ದಾರೆ.
ಮೇ 3ರಂದು ಹಿಂಸಾಚಾರ ಆರಂಭವಾದ ಬಳಿಕ ಮಣಿಪುರದಲ್ಲಿ ಈವರೆಗೂ 180ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.