ದಲಿತ ಯುವ ನಾಯಕ, ಗುಜರಾತ್ನ ವಡ್ಗಾಮ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿಗ್ನೇಶ್ ಮೇವಾನಿ ಸೋತಿದ್ದಾರೆಂದು ಫಲಿತಾಂಶ ಪ್ರಕಟಣೆಗೂ ಮುನ್ನವೇ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಗುಜರಾತ್ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರೂ ಜಿಗ್ನೇಶ್ ಮೇವಾನಿ ಗೆಲುವಿನ ನಗೆ ಬೀರಿದ್ದಾರೆ. 2017ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಮೇವಾನಿ, ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಆರಂಭಿಕ ಹಿನ್ನಡೆಯನ್ನು ಅನುಭವಿಸಿದರೂ ಸವಾಲುಗಳ ನಡುವೆ ಗೆಲುವಿನ ನಗೆಬೀರಿದ್ದಾರೆ. ಕೊನೆಯ ಹಂತದ ಮತ ಎಣಿಕೆಯವರೆಗೂ ಸೋಲು ಗೆಲುವಿನ ಹಾವು ಏಣಿ ನಡೆದಿತ್ತು.
ವಡ್ಗಾಮ್ ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಕ್ಷೇತ್ರವಾಗಿದ್ದು, ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಮುಸ್ಲಿಂ ಮತದಾರರು ಸುಮಾರು 90,000 ಇದ್ದಾರೆಂದು ಅಂದಾಜಿಸಲಾಗಿದೆ. ವಡ್ಗಾಮ್ನ 2.94 ಲಕ್ಷ ಮತದಾರರಲ್ಲಿ ಮೂರನೇ ಒಂದು ಭಾಗದಷ್ಟು ಮುಸ್ಲಿಮರಿದ್ದಾರೆ. ಸುಮಾರು 44,000 ದಲಿತ ಮತದಾರರು ಮತ್ತು 15,000 ರಜಪೂತರು ಇದ್ದಾರೆ. ಉಳಿದಂತೆ ಒಬಿಸಿ ಸಮುದಾಯವಿದೆ.
ಶೇ.48 ಮತ ಹಂಚಿಕೆಯೊಂದಿಗೆ ಒಟ್ಟು 94,765 ಮತಗಳನ್ನು ಗಳಿಸುವಲ್ಲಿ ಜಿಗ್ನೇಶ್ ಯಶಸ್ವಿಯಾಗಿದ್ದಾರೆ. 89,837 ಮತಗಳನ್ನು ಗಳಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮಣಿಭಾಯ್ ಜೇತಾಭಾಯಿ ವಘೇಲಾ ಅವರನ್ನು ಸೋಲಿಸಿ 4,922 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಎಎಪಿ ಅಭ್ಯರ್ಥಿ ದಲ್ಪತ್ ಭಾಟಿಯಾ ಕೂಡ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
ವಡ್ಗಾಮ್ ಕ್ಷೇತ್ರದ ಫಲಿತಾಂಶದ ವಿಚಾರದಲ್ಲಿ ಕೆಲವು ಮಾಧ್ಯಮಗಳು ಮಾಡಿದ ಸುಳ್ಳು ಸುದ್ದಿಗಳು ಗಮನ ಸೆಳೆದಿವೆ. ಜಿಗ್ನೇಶ್ ಮೇವಾನಿ ಸೋತಿದ್ದಾರೆಂದು ಅಂತಿಮ ಫಲಿತಾಂಶ ಹೊರಬೀಳುವ ಮೊದಲೇ ಸುಳ್ಳು ಸುದ್ದಿಗಳನ್ನು ಪ್ರಕಟಿಸಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ. ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿದ ಬಳಿಕ ಸುದ್ದಿಯನ್ನು ತಿದ್ದಿವೆ ಅಥವಾ ಡಿಲೀಟ್ ಮಾಡಿವೆ. ಆ ಮೂಲಕ ಅಪಹಾಸ್ಯಕ್ಕೆ ಈಡಾಗಿವೆ. ಕನ್ನಡದ ಜನಪ್ರಿಯ ಮಾಧ್ಯಮವಾದ ‘ವಿಜಯಕರ್ನಾಟಕ’, ಇಂಗ್ಲಿಷ್ನ ‘ಹಿಂದೂಸ್ತಾನ್ ಟೈಮ್ಸ್’, ‘ದಿ ವೀಕ್’ ಸಂಸ್ಥೆಯ ಜಾಲತಾಣಗಳಲ್ಲಿ ಜಿಗ್ನೇಶ್ ಸೋತಿರುವುದಾಗಿ ವರದಿ ಪ್ರಕಟಿಸಲಾಗಿತ್ತು.
ಸುಳ್ಳು ಸುದ್ದಿ ವರದಿ ಮಾಡಿದ ಬಳಿಕ ಮಾಧ್ಯಮಗಳು ಮಾಹಿತಿಯನ್ನು ತಿದ್ದಿವೆ. ಆದರೆ ವರದಿಗಳನ್ನು ಸರಿಪಡಿಸುವ ಮೊದಲೇ ಓದುಗರು ಹಂಚಿಕೊಂಡಿರುವ ಸುದ್ದಿಯ ಸ್ಕ್ರೀನ್ ಶಾಟ್ಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ನಂಬಿಕಾರ್ಹ ಸುದ್ದಿ ಜಾಲತಾಣಗಳೇ ಸುಳ್ಳು ಸುದ್ದಿಪ್ರಕಟಿಸಿರುವುದು ಏತಕ್ಕೆಂಬ ಪ್ರಶ್ನೆ ಉಳಿದಿದೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಯುವ ಹೋರಾಟಗಾರ ಸರೋವರ್ ಬೆಂಕಿಕೆರೆ, “ಕೆಲವು ಮಾಧ್ಯಮಗಳಲ್ಲಿ ಬಂದ ವರದಿಯನ್ನು ನಿಜವೆಂದೇ ಭಾವಿಸಿದ್ದೆವು. ಜಿಗ್ನೇಶ್ ಸೋತಿದ್ದಾರೆಂದು ನಿರಾಶೆಯಾಗಿತ್ತು. ಊನಾ ಚಳವಳಿಯ ಮೂಲಕ ಮುಂಚೂಣಿಗೆ ಬಂದ ಮೇವಾನಿ ಅವರನ್ನು ಸೋಲಿಸಲು ಬಿಜೆಪಿ ಶತಪ್ರಯತ್ನ ಮಾಡಿರುವುದನ್ನು ಗಮನಿಸಿದ್ದೆವು. ಆದರೆ ಮಾಧ್ಯಮಗಳಿಗೂ ಈ ಧಾವಂತವಿದೆ ಎಂಬ ಭಾವನೆಯನ್ನು ಅವುಗಳು ಪ್ರಕಟಿಸಿದ ಸುದ್ದಿಗಳು ಧ್ವನಿಸಿದವು. ಅಂತಿಮವಾಗಿ ಜಿಗ್ನೇಶ್ ಗೆಲುವು ಸಾಧಿಸಿದ್ದಾರೆಂದು ವರದಿಗಳು ಬಂದಾಗ, ಗೊಂದಲ ಉಂಟಾಯಿತು. ಜಿಗ್ನೇಶ್ ಸೋತಿದ್ದಾರೋ, ಗೆದ್ದಿದ್ದಾರೋ ಎಂದು ಮತ್ತೆ ಮತ್ತೆ ಹಲವು ಸುದ್ದಿವಾಹಿನಿಗಳ ವರದಿಗಳನ್ನು ಪರಿಶೀಲಿಸಬೇಕಾಯಿತು. ಮಾಧ್ಯಮಗಳು ಪಕ್ಷಪಾತಿಯಾಗಿ ವರದಿಯನ್ನು ಪ್ರಕಟಿಸಿವೆಯೇ ಎಂಬ ಅನುಮಾನ ಕಾಡಿತು. ವರದಿ ಬರೆಯುವ ಮುನ್ನ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಮುಗ್ದ ಓದುಗರನ್ನು ದಿಕ್ಕುತಪ್ಪಿಸಬಾರದು” ಎಂದು ಆಶಿಸಿದರು.
“ಜಿಗ್ನೇಶ್ ಮೇವಾನಿಯವರನ್ನು ಹೇಗಾದರೂ ಸರಿ (ಕಳ್ಳ ದಾರಿಯಿಂದ) ಸೋಲಿಸಿಯೇ ಸೋಲಿಸುತ್ತೇವೆ ಎಂಬ ಮಾಹಿತಿಯನ್ನು ಬಿಜೆಪಿಯವರು ಮಾಧ್ಯಮಗಳಿಗೆ ಮೊದಲೇ ತಿಳಿಸಿರುವ ಸಾಧ್ಯತೆಯೂ ಇರಬಹುದು, ಅದಕ್ಕಾಗಿಯೇ ಮಾಧ್ಯಮಗಳು ಹೀಗೆ ಸುದ್ದಿ ಮಾಡಿರಲು ಸಾಧ್ಯವಿದೆ” ಎಂದು ಆರೋಪಿಸಿದರು.