ಅದಾನಿ ಗ್ರೂಪ್ ಹಗರಣದ ಕುರಿತ ಹಿಂಡೆನ್ಬರ್ಗ್ ಸಂಶೋಧನಾ ವರದಿಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ನ ಮಧ್ಯಪ್ರದೇಶ ಘಟಕದ ರಾಜ್ಯ ಮುಖ್ಯಸ್ಥ ಕಮಲ್ ನಾಥ್ ನೇತೃತ್ವದಲ್ಲಿ ಸೋಮವಾರ ಭೋಪಾಲ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಮಲ್ ನಾಥ್ ಅವರು, ಮಧ್ಯಪ್ರದೇಶದಾದ್ಯಂತ 20,000ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಸಿ ಸಾಮೂಹಿಕವಾಗಿ ರಾಜಭವನದ ಮುತ್ತಿಗೆ ಹಾಕಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಪೊಲೀಸರು ಅವರನ್ನು ಮಧ್ಯದಲ್ಲೇ ತಡೆದರು. ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ದಾಟಲು ಪ್ರಯತ್ನಿಸಿದಾಗ, ಪೊಲೀಸರು ಅವರನ್ನು ಚದುರಿಸಲು ಜಲಫಿರಂಗಿ ಪ್ರಯೋಗಿಸಿದರು.
ಇದನ್ನೂ ಓದಿ: ರೌಡಿಶೀಟರ್ ಫೈಟರ್ ರವಿ ಎದುರು ಕೈಮುಗಿದು ನಿಂತ ಮೋದಿ, ಇದು ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್
ಈ ವೇಳೆ ಮಾಜಿ ಕೇಂದ್ರ ಸಚಿವ ಕಾಂತಿಲಾಲ್ ಭುರಿಯಾ, ಮಾಜಿ ಸಚಿವ ಸುರೇಶ್ ಪಚೌರಿ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಜೆಪಿ ಅಗರವಾಲ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, 50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿ, ಸ್ವಲ್ಪ ಸಮಯದ ಬಳಿಕ ಅವರನ್ನು ಬಿಡುಗಡೆ ಮಾಡಮಾಡಿದ್ದಾರೆ.
ಪೊಲೀಸರು ಪ್ರತಿಭಟನಾ ಮೆರವಣಿಗೆಯನ್ನು ತಡೆಯುವ ಮೊದಲು, ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಮಲ್ ನಾಥ್, ”ಮುಂದಿನ ಆರು ತಿಂಗಳು ನಮ್ಮೆಲ್ಲರ ಬದ್ಧತೆಯ ನಿಜವಾದ ಪರೀಕ್ಷೆಯಾಗಲಿದೆ” ಎಂದು ಹೇಳಿದರು.
”ಕಳೆದ ಹಲವು ವರ್ಷಗಳಿಂದ ನೀವೆಲ್ಲರೂ ಬಿಜೆಪಿಯ ಕ್ರೌರ್ಯದ ವಿರುದ್ಧ ಹೋರಾಡುತ್ತಿದ್ದೀರಿ, ಈಗ ಮಧ್ಯಪ್ರದೇಶದಿಂದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಟ ಮಾಡುವ ಸಮಯ ಬಂದಿದೆ. ಮುಂದಿನ ಆರು ತಿಂಗಳು ಪಕ್ಷದ ಕಾರ್ಯಕರ್ತರಿಗೆ ನಿಜವಾದ ಪರೀಕ್ಷೆಯಾಗಿದೆ” ಎಂದು ಅವರು ಹೇಳಿದರು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಈ ಪ್ರತಿಭಟನೆ ಮೂಲಕ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿದೆ. ವೇದಿಕೆಯಲ್ಲಿ ಕಮಲ್ ನಾಥ್ ಅವರೊಂದಿಗೆ ಅಜಯ್ ಸಿಂಗ್, ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್, ಮಾಜಿ ಸಚಿವ ಜಿತು ಪಟ್ವಾರಿ ಮತ್ತು ಅರುಣ್ ಯಾದವ್ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಭಾಗಿಯಾದರು. ಈ ವೇಳೆ ಎಲ್ಲ ನಾಯಕರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗ ನಡೆಸಿದ್ದರಿಂದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.