Homeಮುಖಪುಟಜಿಯೋ ಎಂಬ ಟೆಲಿಕಾಂ ಕಂಪನಿ ಉಳಿದವುಗಳನ್ನು ನುಂಗಿ ಏಕಸ್ವಾಮ್ಯ ಸಾಧಿಸಿದ್ದು ಹೇಗೆ ಗೊತ್ತೆ?

ಜಿಯೋ ಎಂಬ ಟೆಲಿಕಾಂ ಕಂಪನಿ ಉಳಿದವುಗಳನ್ನು ನುಂಗಿ ಏಕಸ್ವಾಮ್ಯ ಸಾಧಿಸಿದ್ದು ಹೇಗೆ ಗೊತ್ತೆ?

ಈ ದೇಶದಲ್ಲಿ ಕಾನೂನುಗಳಿಗೆ ಬೆಲೆ ಇಲ್ಲಿವೇ? ಹೀಗಾದರೆ ಈ ದೇಸ ತೊರೆಯುವುದೇ ಒಳ್ಳೇಯದು ಎಂದು ಜಿಯೋ ಹೊರತುಪಡಿಸಿ ಉಳಿದ ಕಂಪನಿಗಳಿಗೆ ಕಳೆದ ವಾರ ಸುಪ್ರೀಂ ಕೋರ್ಟ್‌ ಚಾಟಿ ಬೀಸಿತು.. ಯಾಕೀ ಪರಿಸ್ಥಿತಿ? ಇಲ್ಲಿದೆ ನೋಡಿ ಉತ್ತರ.

- Advertisement -
- Advertisement -

ಭಾರತದ ಟೆಲಿಕಾಂ ಕಾರ್ಪೊರೇಟ್ ವಿಭಾಗ ಕಳೆದ ಒಂದು ದಶಕದ ಅವಧಿಯಲ್ಲಿ ಯಶಸ್ಸಿನ ಉಚ್ಛಕ್ಕೆ ಏರಿದಂತೆ, ಅಕ್ಷರಶಃ ಪಾತಾಳವನ್ನೂ ಮುಟ್ಟಿದೆ. ಯಾವ ಮಟ್ಟಿನ ಪಾತಾಳ ಎಂದರೆ ಕೆಲವು ಕಂಪೆನಿಗಳು ಮತ್ತೆ ಮೈಕೊಡವಿ ನಷ್ಟದಿಂದ ಮೇಲೇಳುವುದು ದುಸ್ಸಾಧ್ಯ ಎಂದೇ ಹೇಳಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ರಿಲಾಯನ್ಸ್ ಜಿಯೋ ಮತ್ತು ಭಾರತದ ಟೆಲಿಕಾಂ ಮಾರುಕಟ್ಟೆ ಏಕಸ್ವಾಮ್ಯದತ್ತ ಹೆಜ್ಜೆ ಹಾಕುತ್ತಿರುವ ಅಪಾಯಕಾರಿ ಬೆಳವಣಿಗೆ ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ.

ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದ ದಿಗ್ಗಜರೆನಿಸಿಕೊಂಡಿದ್ದ ಭಾರ್ತಿ ಏರ್ಟೆಲ್, ವೋಡಾಫೋನ್ ಮತ್ತು ಐಡಿಯಾ ದಂತಹ ಕಂಪೆನಿಗಳು ಇಂದು ತಮ್ಮ ನಷ್ಟವನ್ನು ಭರಿಸಲಾಗದೆ ಮತ್ತೊಂದೆಡೆ ಸರ್ಕಾರಕ್ಕೆ ವಾರ್ಷಿಕ ಪರವಾನಗಿಗೆ ನೀಡಬೇಕಾದ ಹಣವನ್ನೂ ಪಾವತಿಸಲಾಗದೆ ಪರಿತಪಿಸುತ್ತಿವೆ. ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಐಡಿಯಾ ಮತ್ತು ವೊಡಾಪೋನ್ ಒಂದಾಗಿ ಕಾರ್ಯನಿರ್ವಹಿಸಲು ಮುಂದಾದರೂ ಪರಿಸ್ಥಿತಿ ಸುಧಾರಿಸಿಲ್ಲ.

ಪರಿಣಾಮ ಫೆ.14 ರಂದು ಟೆಲಿಕಾಂ ಕಂಪೆನಿಗಳಿಗೆ ತಪರಾಕಿ ಹಾಕಿರುವ ಸುಪ್ರೀಂ ಕೋರ್ಟ್, ಏರ್ಟೆಲ್, ವೊಡಾಪೋನ್ ಮತ್ತು ಐಡಿಯಾ ಕಂಪೆನಿಗಳು ಭಾರತದ ದೂರ ಸಂಪರ್ಕ ಇಲಾಖೆಗೆ ಸಲ್ಲಿಸಬೇಕಾಗಿರುವ 1.47 ಲಕ್ಷ ಕೋಟಿ ಎಜಿಆರ್ ಹಣವನ್ನೂ ಕೂಡಲೇ ಪಾವತಿಸಬೇಕು ಎಂದು ತಾಕೀತು ಮಾಡಿದೆ. ಆದರೆ, ನಷ್ಟದ ಸುಳಿಯಲ್ಲಿರುವ ಈ ಕಂಪೆನಿಗಳು ಈ ಮೊತ್ತದ ಹಣವನ್ನು ಪಾವತಿ ಮಾಡುವುದು ಅಸಾಧ್ಯವಾದ ಮಾತು ಎನ್ನುತ್ತಿದೆ ಭಾರತದ ಟೆಲಿಕಾಂ ವಲಯ.

ಹಾಗಾದರೆ ಏನಿದು ತಕರಾರು? ಎಜಿಎಸ್ ಹಣ ಎಂದರೇನು? ಈ ಹಣವನ್ನು ಟೆಲಿಕಾಂ ಕಂಪೆನಿಗಳು ಬಾಕಿ ಉಳಿಸಿಕೊಳ್ಳಲು ಕಾರಣವೇನು? ಭಾರತದ ಟೆಲಿಕಾಂ ಕ್ಷೇತ್ರ ನಷ್ಟದಲ್ಲಿರಲು ಕಾರಣವೇನು? ಈ ನಷ್ಟಕ್ಕೂ ರಿಲಾಯನ್ಸ್ ಜಿಯೋಗೂ ಇರುವ ಸಂಬಂಧ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು ಎಜಿಎಸ್ ಹಣ ಬಾಕಿ ತಕರಾರು?

1994 ರಾಷ್ಟ್ರೀಯ ಟೆಲಿಕಾಂ ನೀತಿಯ ಅಡಿಯಲ್ಲಿ ದೂರ ಸಂಪರ್ಕ ವಲಯವನ್ನು ಉದಾರೀಕರಣಗೊಳಿಸಲಾಯಿತು. ಈ ಬೆಳವಣಿಗೆಯ ನಂತರ ಟೆಲಿಕಾಂ ಕಂಪೆನಿಗಳಿಗೆ ತರಂಗಾಂತರಗಳನ್ನು ಸ್ಥಿರ ಪರವಾನಗಿ ವಾರ್ಷಿಕ ಶುಲ್ಕಕ್ಕೆ ಮಾರಾಟ ಮಾಡುವ ಪರಿಪಾಠ ಆರಂಭವಾಯಿತು.

ಸ್ಥಿರ ಪರವಾನಗಿ ಶುಲ್ಕದಿಂದ ಬಿಡುಗಡೆ ಹೊಂದಲು ಕೇಂದ್ರ ಸರ್ಕಾರ 1999ರಲ್ಲಿ ಆದಾಯ ಹಂಚಿಕೆ ಶುಲ್ಕ ವಿಧಾನಕ್ಕೆ ಪರವಾನಗಿಯನ್ನು ವರ್ಗಾಯಿಸಿಕೊಳ್ಳುವ ಅವಕಾಶವನ್ನು ಆಯಾ ಕಂಪೆನಿಗಳಿಗೆ ನೀಡಿತು.

ಈ ಕಾಲಘಟ್ಟದಲ್ಲಿ ಬದಲಾದ ಟೆಲಿಕಾಂ ನೀತಿಯ ಅನ್ವಯ ದೂರ ಸಂಪರ್ಕ ಆದಾಯದ ಜೊತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ವಾರ್ಷಿಕ ಪರವಾನಗಿ ಶುಲ್ಕ (ಎಜಿಎಸ್) ಎಂದು ಕರೆಯಲಾಯಿತು. ತರಂಗಾತರ ಹಂಚಿಕೆ ಶುಲ್ಕದ ಜೊತೆಗೆ ಈ ಶುಲ್ಕವನ್ನು ವರ್ಷಕ್ಕೊಮ್ಮೆ ಕೇಂದ್ರ ದೂರ ಸಂಪರ್ಕ ಇಲಾಖೆಗೆ ಟೆಲಿಕಾಂ ಕಂಪೆನಿಗಳು ಪಾವತಿ ಮಾಡಬೇಕು ಎಂಬುದು ನಿಯಮ.

ಈ ವರೆಗೆ ರಿಲಾಯನ್ಸ್ ಜಿಯೋ ಮಾತ್ರ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಗೆ 60 ಸಾವಿರ ಕೋಟಿ ರೂಪಾಯಿ ಬಾಕಿ ಶುಲ್ಕವನ್ನು ಪಾವತಿ ಮಾಡಿದೆ. ಆದರೆ, ಭಾರತಿ ಆರ್ಟೆಲ್ 35,586 ಕೋಟಿ, ಐಡಿಯಾ-ವೊಡಾಫೋನ್ 50,000 ಕೋಟಿ ಹಾಗೂ ಟಾಟಾ ಟೆಲಿಸರ್ವೀಸ್ 14,000 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿವೆ. ಇದು ಬಡ್ಡಿ ಮತ್ತು ದಂಡ ಸಹಿತ ಇದೀಗ ಒಟ್ಟು 1,47 ಲಕ್ಷ ಕೋಟಿಗೂ ಮೀರಿದೆ.

ಮುಚ್ಚುವ ಹಂತದಲ್ಲಿ ಬಿಎಸ್ಎನ್ಎಲ್..

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಒಂದು ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದಿಗ್ಗಜನಂತೆ ಹೆಸರು ಮಾಡಿತ್ತು. ಹಳ್ಳಿ ಹಳ್ಳಿಗೂ ಮೊಬೈಲ್ ಜಾಲ ಸಂಪರ್ಕಿಸುವ ಗುರಿಯನ್ನು ಸೇವೆ ಎಂದೇ ಪರಿಗಣಿಸಿದ್ದ ಬಿಎಸ್ಎನ್ಎಲ್ ಅಂದಿನ ದಿನಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸಾಧಿಸಿತ್ತು. ಅಲ್ಲದೆ, ದೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿತ್ತು.

ಆದರೆ, ಒಂದು ಕಾಲದಲ್ಲಿ ಭಾರಿ ಪ್ರಮಾಣದ ವ್ಯವಹಾರ ಹೊಂದಿದ್ದ ಭಾರತದ ಹೆಮ್ಮೆ ಬಿಎಸ್ಎನ್ಎಲ್ ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದು, ಮುಚ್ಚವ ಹಂತಕ್ಕೆ ಬಂದು ನಿಂತಿದೆ. 2015-16ರಲ್ಲಿ ಬಿಎಸ್ಎನ್ಎಲ್ ನಿಗಮ 4,859 ಕೋಟಿ, 2016-17ರಲ್ಲಿ 4,793 ಕೋಟಿ, 2017-18ರಲ್ಲಿ 1,993 ಕೋಟಿ, 2018-19ರಲ್ಲಿ 14,202 ಕೋಟಿ ನಷ್ಟ ಹೊಂದಿದೆ ಎಂದು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯೇ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿದೆ.

ಈ ಸಂಸ್ಥೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಎಂಟಿಎನ್ಎಲ್ ಅನ್ನು ಬಿಎಸ್ಎನ್ಎಲ್ ಜೊತೆಗೆ ವಿಲೀನ ಮಾಡಿ 69,000 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರೂ ಬಿಎಸ್ಎನ್ಎಲ್ ಮಾತ್ರ ಉಸಿರಾಡುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಈ ಸಂಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತವಾಗಿವೆ. ಭವಿಷ್ಯದಲ್ಲಿ ನಷ್ಟ ಬರಿಸಲಾಗದೆ ಈ ಸಂಸ್ಥೆಯನ್ನು ಮುಚ್ಚಿದರೂ ಅಚ್ಚರಿ ಇಲ್ಲ.

ಏರ್ಟೆಲ್-ವೊಡಾಪೋನ್ ಕಥೆಯೂ ಇದಕ್ಕಿಂತ ಭಿನ್ನ ಏನಲ್ಲ..!

ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್‌ ಕಥೆ ಒಂದೆಡೆಯಾದರೆ, ಏರ್ಟೆಲ್, ವೊಡಾಪೋನ್-ಐಡಿಯಾ ನಷ್ಟದ ಕಥೆ ಇದಕ್ಕಿಂತ ಶೋಚನೀಯ. ಒಂದು ಕಾಲದಲ್ಲಿ ಭಾರತದ ಟೆಲಿಕಾಂ ಕ್ಷೇತ್ರವನ್ನು ಆಳಿದ್ದ ಈ ಕಂಪೆನಿಗಳು ಕಳೆದ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 74,000 ಕೋಟಿ ನಷ್ಟ ಅನುಭವಿಸಿವೆ.

ವೊಡಾಪೋನ್-ಐಡಿಯಾ ಸಂಸ್ಥೆಗಳಿಗೆ 50,921 ಕೋಟಿ ನಷ್ಟ ಉಂಟಾಗಿದ್ದರೆ, ಏರ್ಟೆಲ್ ಕಂಪೆನಿ ಒಟ್ಟಾರೆಯಾಗಿ 23,045 ಕೋಟಿ ನಷ್ಟ ಅನುಭವಿಸಿದೆ. ಕೇಂದ್ರ ಸರ್ಕಾರವೇ ನೀಡುವ ಅಂಕಿಅಂಶಗಳ ಪ್ರಕಾರ ಒಂದು ತ್ರೈಮಾಸಿಕ ಅವಧಿಯಲ್ಲಿ ಭಾರತದ ಕಾರ್ಪೋರೇಟ್ ಸಂಸ್ಥೆಗಳು ಅನುಭವಿಸಿದ ಅತಿದೊಡ್ಡ ನಷ್ಟ ಇದಾಗಿದೆ. 2018ರ ಡಿಸೆಂಬರ್ನಲ್ಲಿ ಟಾಟಾ ಮೋಟಾರ್ 26,961 ಕೋಟಿ ನಷ್ಟ ಅನುಭವಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಕುಮಾರಮಂಗಲಂ ಬಿರ್ಲಾ ಅವರ ಐಡಿಯಾ ಕಂಪೆನಿ ತನ್ನ ನಷ್ಟವನ್ನು ಬರಿಸಲಾಗದೆ ಕಳೆದ 2019 ಜೂನ್‌ನಲ್ಲಿ ವೊಡಾಪೋನ್ ಜೊತೆಗೆ ವಿಲೀನವಾಗಿತ್ತು. ಈ ವಿಲೀನದ ಬಳಿಕ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಆದಾಗ್ಯೂ ವಿಲೀನ ಮಾಡಿದ ದಿನದಿಂದಲೂ ಈ ಎರಡೂ ಕಂಪೆನಿಗಳು ನಷ್ಟದಲ್ಲೇ ಇವೆ.

ಈ ನಷ್ಟಕ್ಕೆಲ್ಲಾ ಕಾರಣ ಜಿಯೋ..

ಅಸಲಿಗೆ ಬಿಎಸ್ಎನ್ಎಲ್ ಸೇರಿದಂತೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಅಪಾರ ಪ್ರಮಾಣದ ನಷ್ಟ ಅನುಭವಿಸಲು ಜಿಯೋ ಮತ್ತು ಈ ಜಿಯೋ ಕಂಪೆನಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದ ನಿಯಮಗಳನ್ನು ಬದಲಿಸುತ್ತಿರುವುದೇ ಕಾರಣ ಎನ್ನಲಾಗುತ್ತಿದೆ.

ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಭಾರತದ ಟೆಲಿಕಾಂ ಮಾರುಕಟ್ಟೆಗೆ ಲಗ್ಗೆ ಇಟ್ಟು ಕೇವಲ 3 ವರ್ಷಗಳಾಗಿವೆ. ಆದರೆ ಈ 3 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಕರೆ ಮತ್ತು ಡೇಟಾ ಸೌಲಭ್ಯಗಳನ್ನು ನೀಡುವ ಮೂಲಕ ಜಿಯೋ ಸಂಪಾದಿಸಿರುವ ಗ್ರಾಹಕರ ಸಂಖ್ಯೆ ಬರೋಬ್ಬರಿ 30 ಕೋಟಿ.

ದಶಕಗಳ ಕಾಲ ಮಾರುಕಟ್ಟೆಯಲ್ಲಿರುವ ಬೃಹತ್ ಕಂಪೆನಿಗಳನ್ನು ಬದಿಗಿಟ್ಟು ಜಿಯೋ ಕೇವಲ 3 ವರ್ಷದಲ್ಲಿ 30 ಕೋಟಿ ಗ್ರಾಹಕರನ್ನು ಸಂಪಾದಿಸುವುದು ಎಂದರೆ ಸುಮ್ಮನೆ ಮಾತಲ್ಲ. ಇದಕ್ಕೆ ಜಿಯೋ ಬಳಸಿದ ಅಸ್ತ್ರ ಉಚಿತ.

ಆರಂಭದಲ್ಲಿ ಜಿಯೋ ಕರೆ ಹಾಗೂ ಡೇಟಾ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಉಚಿತವಾಗಿ ನೀಡಿತ್ತು. 4ಜಿ ವೇಗದಲ್ಲಿ ಡಾಟಾ ಉಚಿತವಾಗಿ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಗ್ರಾಹಕರು ಜಿಯೋ ಕಡೆಗೆ ವಾಲಿದ್ದರು. ಪರಿಣಾಮ ಜಿಯೋ ಹೊರತಾಗಿ ಉಳಿದ ಎಲ್ಲಾ ಕಂಪೆನಿಗಳು ಅಪಾರ ನಷ್ಟಕ್ಕೆ ಒಳಗಾದವು. ಇದರ ಜೊತೆಗೆ ದೂರ ಸಂಪರ್ಕ ಇಲಾಖೆ ಬದಲಿಸಿದ ಕೆಲವು ನಿಯಮಗಳೂ ಸಹ ಜಿಯೋ ಪಾಲಿಗೆ ವರದಾನವಾಯಿತು.

ಜಿಯೋ ಗ್ರಾಹಕರು ಬೇರೆ ಯಾವುದೇ ಕಂಪೆನಿ ನಂಬರ್‌ಗೆ ಕರೆ ಮಾಡಿದರೆ ನಿಮಿಷಕ್ಕೆ 13 ಪೈಸೆಯನ್ನು ಜಿಯೋ ಸಂಸ್ಥೆ ಇತರೆ ಕಂಪೆನಿಯ ನೆಟ್ವರ್ಕ್ ಬಳಿಸಿದ್ದಕ್ಕಾಗಿ ನೀಡಬೇಕು. ಎಲ್ಲಾ ಕಂಪೆನಿಗಳಿಗೂ ಈ ಕಾನೂನು ಅನ್ವಯ. ಹೀಗೆ ಮೊದಲ ವರ್ಷ ಜಿಯೋ ಇತರೆ ಕಂಪೆನಿಗಳಿಗೆ ಪಾವತಿ ಮಾಡಿದ ಹಣ ಮಾತ್ರ ಬರೋಬ್ಬರಿ 53 ಸಾವಿರ ಕೋಟಿ. ಆದರೆ, ದೂರ ಸಂಪರ್ಕ ಇಲಾಖೆಯ ಟ್ರಾಯ್ ಈ ಮೊತ್ತವನ್ನು ನಿಮಿಷಕ್ಕೆ 13 ಪೈಸೆಯಿಂದ ಇದೀಗ 7 ಪೈಸೆಗೆ ಇಳಿಸಿದ್ದು ಜಿಯೋ ಬೆಳೆಯಲು ಇದು ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ಜಿಯೋ ಉದ್ಘಾಟನೆಯ ದಿನ ಖುದ್ದು ಈ ದೇಶದ ಪ್ರಧಾನಿಯೇ ಅದರ ಜಾಹೀರಾತಿಗೆ ಬೆಂಬಲವಾಗಿ ನಿಂತಿದ್ದರು. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನಿ ಮೋದಿಯವರ ಫೋಟೊ ರಾರಾಜಿಸುತ್ತಿತ್ತು. ತದನಂತರ ಸಹ ತರಂಗಾಂತರಗಳ ಹಂಚಿಕೆಯಲ್ಲಿಯೇ ಅಂಬಾನಿಗೆ ಬಹುಬೆಂಬಲ ಕೇಂದ್ರದಿಂದ ಸಿಕ್ಕಿತ್ತು.

ಆರಂಭದಲ್ಲಿ ಉಚಿತ ನೀಡಿದ್ದರ ಪರಿಣಾಮವಾಗಿ ಒಂದಷ್ಟು ಹಣವನ್ನು ನಷ್ಟ ಮಾಡಿಕೊಂಡ ಜಿಯೋ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ಮತ್ತು ಬೇರೆ ಕಂಪನಿಗಳು ಕುಸಿದಂತೆ ತನ್ನ ಕರೆ ಮತ್ತು ಡೇಟಾ ದರವನ್ನು ಹೆಚ್ಚಿಸಿತು. ಮುಂಚೆಯೇ ಸಾಲದಲ್ಲಿದ್ದು ಬೇರೆ ಕಂಪನಿಗಳು ಸಹ ದರ ಹೆಚ್ಚಿಸಿದರು. ಹಾಗಾಗಿ ಜನ ಅನಿವಾರ್ಯವಾಗಿ ಜಿಯೋದಲ್ಲಿಯೇ ಉಳಿದುಕೊಂಡರು. ಒಂದು ರೀತಿಯಲ್ಲಿ ಏಕಸ್ವಾಮ್ಯವನ್ನು ಸಾಧಿಸಿದ ಜಿಯೋ ಈಗ ಲಾಭದ ಹಾದಿಗೆ ಮರಳಿದೆ. ಆದರೆ ಉಳಿದ ಕಂಪನಿಗಳು ಕೊನೆಯುಸಿರು ಎಳೆಯುತ್ತಿವೆ.

ಒಂದೆಡೆ ಜಿಯೋದಿಂದಾಗಿ ಭಾರತದ ಎಲ್ಲಾ ಟೆಲಿಕಾಂ ಕಂಪೆನೆಗಳು ನಷ್ಟ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಎಜಿಎಸ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದು ನಷ್ಟದಲ್ಲಿರುವ ಕಂಪೆನಿಗಳನ್ನು ಮತ್ತಷ್ಟು ಉಸಿರುಗಟ್ಟಿಸುವ ಹಂತಕ್ಕೆ ತಂದು ನಿಲ್ಲಿಸಿದೆ.

ಈಗಾಗಲೇ ಭಾರತದಲ್ಲಿ ಜನ ಊಟ ಇಲ್ಲದೆಯೂ ಇರುವರೇನೋ ಆದರೆ, ಡೇಟಾ ಇಲ್ಲದೆ ಬದುಕಲಾರರು ಎಂಬಂತಹ ಸ್ಥಿತಿಗೆ ಇಡೀ ದೇಶವನ್ನು ತಂದು ನಿಲ್ಲಿಸಿದ ಕೀರ್ತಿ ಜಿಯೋ ಮತ್ತು ಅದಕ್ಕೆ ಅನುಕೂಲವಾಗುವಂತೆ ಕಾನೂನು ರೂಪಿಸಿದ ಸರ್ಕಾರಕ್ಕೆ ಸಲ್ಲುತ್ತದೆ.

ಪರಿಸ್ಥಿತಿ ಹೀಗೆ ಮುಂದುವರೆದರೆ ಟೆಲಿಕಾಂ ಕ್ಷೇತ್ರದ ಎಲ್ಲಾ ಕಂಪೆನಿಗಳು ಬಾಗಿಲು ಎಳೆದುಕೊಂಡು ಜಿಯೋ ಮಾತ್ರ ಇಡೀ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿದರೂ ಅಚ್ಚರಿ ಇಲ್ಲ. ಆ ಸಂದರ್ಭದಲ್ಲಿ ಜಿಯೋ ಕಂಪೆನಿ ಒಂದು ಜಿಬಿ ಡೇಟಾಗೆ ಚಿನ್ನದ ಬೆಲೆ ನಿಗದಿ ಮಾಡಿದರೂ ಅದನ್ನು ಖರೀದಿಸದೆ ಬೇರೆ ವಿಧಿಯಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...