ದೆಹಲಿಯ ಸಚಿವರಿಗೆ ಖಾತೆ ಹಂಚಿಕೆ ನಡೆದಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಯಾವುದೇ ಇಲಾಖೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿಲ್ಲ.
ಖಾತೆ ಹಂಚಿಕೆಯಲ್ಲಿ ಸತ್ಯೇಂದ್ರ ಕುಮಾರ್ ಜೈನ್ ಗೆ ದೆಹಲಿ ಜಲ ಮಂಡಳಿ (ಡಿಜೆಬಿ) ನೀಡಲಾಯಿತು. ಇವರು ಹಿಂದಿನ ಸರ್ಕಾರದಲ್ಲಿ ಆರೋಗ್ಯ, ಕೈಗಾರಿಕೆಗಳು, ವಿದ್ಯುತ್, ಲೋಕೋಪಯೋಗಿ ಇಲಾಖೆ, ಗೃಹ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ಹೊಂದಿದ್ದರು.
ಹಿಂದಿನ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಗೋಪಾಲ್ ರಾಯ್ ಗೆ ಪರಿಸರ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ. ರಾಜೇಂದ್ರ ಪಾಲ್ ಗೌತಮ್ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಸ್ತುವಾರಿ ನೀಡಲಾಗಿದೆ. ಈ ಹಿಂದೆ ಅವರು ಸಮಾಜ ಕಲ್ಯಾಣ ಮತ್ತು ಎಸ್ಸಿ / ಎಸ್ಟಿ ಉಸ್ತುವಾರಿ ವಹಿಸಿದ್ದರು.
ಪರಿಸರ ಮತ್ತು ಅರಣ್ಯ ಹಾಗೂ ಆಹಾರ ಮತ್ತು ಪೂರೈಕೆ ಇಲಾಖೆಗಳಿಗೆ ಇಮ್ರಾನ್ ಹುಸೇನ್ ಅವರಿಗೆ ನೀಡಲಾಗಿದೆ. ಕೈಲಾಶ್ ಗಹ್ಲೋಟ್ ಅವರಿಗೆ ಸಾರಿಗೆ, ಆದಾಯ, ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳು, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಆಡಳಿತ ಸುಧಾರಣೆಗಳ ಇಲಾಖೆಗಳನ್ನು ನೀಡಲಾಗಿದೆ.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮುಂದಿನ ಅವಧಿಗೂ ಅದೇ ಹುದ್ದೆಯಲ್ಲಿ ಉಳಿಯಲಿದ್ದಾರೆ. ಅದರ ಜೊತೆಗೆ ಅವರಿಗೆ ಶಿಕ್ಷಣ, ಹಣಕಾಸು, ಯೋಜನೆ, ಭೂಮಿ ಮತ್ತು ಕಟ್ಟಡ, ವಿಜಿಲೆನ್ಸ್, ಪ್ರವಾಸೋದ್ಯಮ, ಸೇವೆಗಳು, ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆಗಳ ಖಾತೆಯನ್ನು ನೀಡಲಾಗಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 70 ರಲ್ಲಿ 62 ಸ್ಥಾನಗಳನ್ನು ಗೆದ್ದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಟು ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ ಸತತ ಎರಡನೇ ಬಾರಿಗೆ ಶೂನ್ಯ ಸಾಧನೆಯನ್ನು ಮಾಡಿದೆ.