ಡಿಸೆಂಬರ್ 18 ರಂದು ರಾಜ್ಯ ಮಟ್ಟದ ಯುವ ಸಮಾವೇಶ ನಡೆಯಲಿದ್ದು, ಮಾಧ್ಯಮ ಕಟ್ಟಿದ ಕಥನಗಳು ಮತ್ತು ದ್ವೇಷ ಭಾಷಣದ ಕುರಿತು ಚರ್ಚಾ ಕಾರ್ಯಕ್ರಮ ಹಾಗೂ ಯುವ ಸಾಧಕರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್’ ನೀಡಲಾಗುವುದು ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಅಧ್ಯಕ್ಷರಾದ ಲಬೀದ್ ಶಾಫಿ ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭರವಸೆ – ಮರುನಿರ್ಮಾಣ – ಘನತೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಸಮಾವೇಶ ನಡೆಯಲಿದೆ. ಸಮಾಜದ ನಿರ್ಮಾಣಾತ್ಮಕ ಕೆಲಸಗಳಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಬಹು ಮುಖ್ಯ ಗುರಿಯಾಗಿದೆ ಎಂದರು.
ಸಮಾಜದಲ್ಲಿ ಶಾಂತಿ, ಪ್ರಗತಿ ಹಾಗೂ ಅಭ್ಯುದಯವನ್ನು ಸಾಧಿಸಲು ಯುವಕರನ್ನು ರಚನಾತ್ಮಕವಾಗಿ ಸಿದ್ಧಗೊಳಿಸುವುದು ಕಾಲದ ಬೇಡಿಕೆಯಾಗಿದೆ. ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ. ಯುವಜನರನ್ನು ನೈತಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಬಲೀಕರಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದರು.
‘ಮಾಧ್ಯಮ ಕಟ್ಟಿದ ಕಥನಗಳು ಮತ್ತು ದ್ವೇಷ ಭಾಷಣ: ಒಂದು ಅವಲೋಕನ’ ಎಂಬ ವಿಷಯದಲ್ಲಿ ಚಾವಡಿ ಚರ್ಚೆ ನಡೆಯಲಿರುವುದು. ಈ ಚರ್ಚೆಯಲ್ಲಿ ದಿ ಕ್ವಿಂಟ್ ಪತ್ರಕರ್ತರಾದ ಆದಿತ್ಯ ಮೆನನ್, ಹಿರಿಯ ಪತ್ರಕರ್ತರಾದ ಪ್ರಶಾಂತ್ ಟಂಡನ್ ಮತ್ತು ಕರ್ನಾಟಕದ ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಾ. ಅಶ್ವಿನಿ ಕೆ.ಪಿ, ಜಿ.ಮಹಾಂತೇಶ್ ಭದ್ರಾವತಿ, ತಬಸ್ಸುಮ್ ಮಂಗಳೂರು, ತನ್ವೀರ್ ಅಹ್ಮದ್ ಸೇರಿದಂತೆ 10 ಜನರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್ – 2022’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಈ ಸಮಾವೇಶದ ಪ್ರಮುಖ ಭಾಷಣಕಾರರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿ, ವಿದ್ವಾಂಸರಾದ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ಯುವ ನಾಯಕರಾದ ನಹಾಸ್ ಮಾಲ, ಪ್ರಖ್ಯಾತ ವಾಗ್ಮಿಗಳಾದ ಡಾ. ತಾಹಾ ಮತೀನ್, ಮುಹಮ್ಮದ್ ಕುಂಞ, ಮಾನವ ಹಕ್ಕು ಹೋರಾಟಗಾರರಾದ ಕೆ.ಕೆ.ಸುಹೈಲ್, ಲದೀದಾ ಪರ್ಝಾನಾ, ಶಬರಿಮಾಲ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ರಿಹಾನ್, ಮುಹಮ್ಮದ್ ಅಖೀಲ್, ಮಾಝ್ ಸಲ್ಮಾನ್ ಮನಿಯಾರ್ ಮತ್ತು
ಮುಹಮ್ಮದ್ ನವಾಝ್ ಹಾಜರಿದ್ದರು.
ಇದನ್ನೂ ಓದಿ: 100ನೇ ದಿನಕ್ಕೆ ಕಾಲಿಟ್ಟ ಭಾರತ ಐಕ್ಯತಾ ಯಾತ್ರೆ: ಪಾದಯಾತ್ರೆಯ 10 ಮುಖ್ಯ ಸಂಗತಿಗಳು