ಕಚೇರಿ ಹಾಗೂ ಶಾಲಾ ಸಮಯದಂತಹ ಸಂಚಾರ ದಟ್ಟಣೆ ಅವಧಿಯಲ್ಲಿ ಬಸ್ಸು ಸಂಚಾರ ಅಂತರಕ್ಕೆ ಸಮಯ ನಿಗದಿಪಡಿಸಬೇಕು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಧುಗಿರಿ ರಸ್ತೆಯಲ್ಲಿ ವಾಹನಗಳ ಸಂಚಾರ ಸಮಯದಲ್ಲಿ ಅಂತರವಿರಬೇಕು. ಬಸ್ಸುಗಳು ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳ ಜನರು ಮತ್ತು ಶಾಲಾ ಮಕ್ಕಳನ್ನು ಕಡ್ಡಾಯವಾಗಿ ಹತ್ತಿಸಿಕೊಳ್ಳಬೇಕು. ಇದಕ್ಕೆ ಒಪ್ಪದಿದ್ದರೆ ಕೆಎಸ್ಸಾರ್ಟಿಸಿ ಬಸ್ ಬಿಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುಬ್ಬಿ, ಹುಳಿಯಾರು, ಮಧುಗಿರಿ ಹಾಗೂ ಪಾವಗಡ ಸೇರಿ ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಿ ಜಾತ್ರೆ, ಮಕ್ಕಳು ಶಾಲೆಗೆ ಹೋಗುವ ಸಮಯ, ಗಾರ್ಮೆಂಟ್ಸ್ಗಳಿಗೆ ಕಾರ್ಮಿಕರು, ತೆರಳುವ ಸಮಯ, ರಜಾ ಮುಗಿದ ನಂತರದ ದಿನಗಳಲ್ಲಿ ಹೆಚ್ಚಿನ ಬಸ್ ಓಡಿಸಬೇಕು. ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡ ಬಸ್ ಗಳಲ್ಲಿ ಓಡಾಡುವಂತೆ ಬಸ್ ಪಾಸ್ಗಳನ್ನು ವಿತರಿಸಿ ಅವರು ಕೆಲಸಕ್ಕೆ ತೆರಳುವ ಸಮಯಗಳಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.