Homeಅಂಕಣಗಳುಗೌರಿ ಆಶಯಗಳ ಜೊತೆಗೆ.....

ಗೌರಿ ಆಶಯಗಳ ಜೊತೆಗೆ…..

- Advertisement -
- Advertisement -

ಬಂಧುಗಳೇ,

ಗೌರಿ ಲಂಕೇಶ್‌ರ ಹತ್ಯೆ ಮಾಡುವ ಮೂಲಕ ತಮ್ಮ ವಿರುದ್ಧದ ಗಟ್ಟಿದನಿಯನ್ನು ಇಲ್ಲವಾಗಿಸುವುದು ಆ ಸಂಚುಕೂಟದ ಲೆಕ್ಕಾಚಾರವಾಗಿತ್ತು. ಆದರೆ ಈ ನಾಡಿನ ಜನತೆ ‘ನಾನೂ ಗೌರಿ! ನಾವೆಲ್ಲಾ ಗೌರಿ!!’ ಎಂದು ಒಕ್ಕೊರಲಿನಿಂದ ಕೂಗಿ ಹೇಳಿ ಈ ಸಂಚುಕೂಟಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿದ್ದಾರೆ. ”ವ್ಯಕ್ತಿಗಳಿಗೆ ಗುಂಡಿಕ್ಕಬಹುದೇ ಹೊರತು ವಿಚಾರಗಳಿಗೆ ಗುಂಡಿಕ್ಕಲು ನಿಮ್ಮಿಂದ ಎಂದಿಗೂ ಸಾಧ್ಯವಿಲ್ಲ” ಎಂದು ಸಾರಿ ಹೇಳಿದ್ದಾರೆ. ‘ಒಬ್ಬ ಗೌರಿಯ ವಿಚಾರವನ್ನು ಸಾವಿರಾರು ಗೌರಿಯರಾಗಿ ನಾವು ಮುಂದುವರೆಸುತ್ತೇವೆ’ ಎಂಬ ಪಣ ತೊಟ್ಟಿದ್ದಾರೆ.

ಇಂಥ ಒಂದು ಸಾಮೂಹಿಕ ದೃಢ ಸಂಕಲ್ಪದ ಫಲವಾಗಿ ‘ನಾನು ಗೌರಿ’ ಪತ್ರಿಕೆ ಆರಂಭವಾಗಿದೆ. ಪತ್ರಿಕೆಯ ಆರಂಭದೊಂದಿಗೆ ನಮ್ಮ ಗೌರಿ ಲಂಕೇಶ್ ಮರುಹುಟ್ಟು ಪಡೆದಿದ್ದಾರೆ. ಗೌರಿ ಇಲ್ಲದ ಈ ಸಂಕಟಮಯ ಸನ್ನಿವೇಶದಲ್ಲಿ ಗೌರಿ ಪತ್ರಿಕೆಯನ್ನು ಹೊರತರಲು ಕೈಜೋಡಿಸಿದ ಎಲ್ಲರಿಗೂ ‘ಗೌರಿ ಮೀಡಿಯಾ’ ತಂಡದ ಹೃದಯಪೂರ್ವಕ ಕೃತಜ್ಞತೆಗಳು.

ಲಂಕೇಶ್‌ರು ಹುಟ್ಟುಹಾಕಿದ ಜನಪರ, ನಿರ್ಭೀತ ಪತ್ರಿಕೋದ್ಯಮದ ಮಾದರಿಯನ್ನು ಮುಂದುವರೆಸಿದ ಗೌರಿ ಲಂಕೇಶ್ ಆಕ್ಟಿವಿಸ್ಟ್ ಆಗಿ, ಪತ್ರಕರ್ತೆಯಾಗಿ ಹಾಕಿಕೊಟ್ಟ ಮಾದರಿ ನಮಗೆ ಸದಾ ಸ್ಫೂರ್ತಿ. ಈ ಎರಡೂ ಲೆಗಸಿಗಳನ್ನು ಮುಂದುವರೆಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜೊತೆಗೆ ಈ ಕಾಲಘಟ್ಟದ ಹೊಸ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಬೇಕಿರುವ ಸವಾಲು ನಮ್ಮ ಮುಂದಿದೆಯೆಂಬುದನ್ನೂ ಅರಿತು ಮುಂದಡಿ ಇಡುತ್ತಿದ್ದೇವೆ.

ಕಲ್ಬುರ್ಗಿ ಹತ್ಯೆ ಖಂಡಿಸಿ ಗೌರಿ ಹಾಗೂ ಇನ್ನಿತರೆ ಪ್ರಗತಿಪರರ ಪ್ರತಿಭಟನೆ

ಇಂದು ನಮ್ಮ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ. ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಬುನಾದಿಯನ್ನೇ ಅಲುಗಾಡಿಸುವ ಮಟ್ಟಕ್ಕೆ ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆದು ನಿಂತಿವೆ. ಸ್ವತಂತ್ರ, ನಿರ್ಭೀತ ಪತ್ರಿಕೆಗಳ ಹಾಗೂ ಪತ್ರಕರ್ತರ ದನಿ ಅಡಗಿಸಲು ಈ ಹಿಟ್ಲರ್‌ಶಾಹಿಗಳು ದೇಶಾದ್ಯಂತ ಸೃಷ್ಟಿಸುತ್ತಿರುವ ಭೀಭತ್ಸಕ್ಕೆ ಗೌರಿಯವರ ಹತ್ಯೆಯೇ ಸಾಕ್ಷಿ. ದೀನ ದಲಿತರ, ದುರ್ಬಲರ ದನಿಯಾಗಬೇಕಿದ್ದ ಮಾಧ್ಯಮ ಕ್ಷೇತ್ರವನ್ನು ಇಡಿಯಾಗಿ ಕಾರ್ಪೊರೇಟ್ ಶಕ್ತಿಗಳು ಆವರಿಸಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮದಲ್ಲೂ ಫ್ಯಾಸಿಸ್ಟ್‌ಗಳದೇ ಕಾರುಬಾರು.

ಹಿಟ್ಲರ್‌ಶಾಹಿಗಳು ಸೃಷ್ಟಿಸಿರುವ ಇಂಥ ವಿಷಮ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸದೆ ಹೋದರೆ ಈ ದೇಶದ ಪ್ರಜಾತಂತ್ರದ ಅಸ್ತಿತ್ವಕ್ಕೇ ಸಂಚಕಾರ ಒದಗುವ ಅಪಾಯವಿದೆ. ಈ ಕಾಲದ ಕರೆಗೆ ಓಗೊಡಬೇಕಾದ್ದು ಜನಪರ ಪತ್ರಿಕೆಯೊಂದರ ಆದ್ಯ ಕರ್ತವ್ಯ. ‘ನಾನು ಗೌರಿ’ ಪತ್ರಿಕೆ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧವಾಗಿದೆ. ಹಾಗೆಯೇ ಗದ್ದುಗೆಯಲ್ಲಿರುವವರ ಜನವಿರೋಧಿತನವನ್ನು ಎದುರಿಸಿ ನಿರಂತರ ವಿರೋಧ ಪಕ್ಷವಾಗಿ ನಿಲ್ಲುವ ಆಶಯ ನಮ್ಮದು. ಯಾವುದೇ ರಾಜಕೀಯ ಪಕ್ಷದ, ರಾಜಕಾರಣಿಗಳ ಮರ್ಜಿಗೆ ಒಳಗಾಗದೆ ಅಥವ ಜಾಹಿರಾತುಗಳ ಹಂಗಿಗೆ ಸಿಲುಕದೆ ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ‘ನಾನು ಗೌರಿ’ ಬದ್ಧವಾಗಿರುತ್ತದೆ.

ಪತ್ರಿಕೆಯ ಸ್ವಭಾವ ಮತ್ತು ಗುಣಮಟ್ಟಗಳನ್ನು ಉತ್ತಮಪಡಿಸುವ ನಿರಂತರ ಪ್ರಕ್ರಿಯೆಯ ಭಾಗವಾಗಿ ಹೊಸದಾರಿಯಲ್ಲಿ ಸಾಗುತ್ತೇವೆ. ಇದರ ಭಾಗವಾಗಿ ಹೊಸ ತಲೆಮಾರಿನ ಬರಹಗಾರರನ್ನು ಒಳಗೊಳ್ಳುವುದು ಮಾತ್ರವಲ್ಲದೆ, ವಿವಿಧ ಜನಪರ ಚಳವಳಿಗಳ ನಮ್ಮ ನಡುವಿನ ಭಿನ್ನ ವಿಚಾರ ಧಾರೆಗಳ ನಡುವೆ ರಚನಾತ್ಮಕ ಸಂವಾದಕ್ಕೆ ‘ಪತ್ರಿಕೆ’ ವೇದಿಕೆಯಾಗಲಿದೆ. ವರ್ತಮಾನಕ್ಕೆ ಸಂವಾದಿಯಾಗಿ ಬರಹದಲ್ಲಿ ತೊಡಗಿಸಿಕೊಂಡಿರುವ ಹಲವು ಗಣ್ಯರ ಅಂಕಣಗಳೂ ಇರುತ್ತವೆ. ದಿಕ್ಕೆಟ್ಟ ರಾಜಕಾರಣ, ಆರ್ಥಿಕ ಕ್ಷೇತ್ರದ ಕಾರ್ಪೊರೇಟ್ ಹಿಡಿತ, ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು, ಸಾಹಿತ್ಯ, ಸಿನಿಮಾ, ವಿಮರ್ಶೆ ಇತ್ಯಾದಿ ಹತ್ತು ಹಲವು ಬಗೆಯ ಬರಹಗಳನ್ನು ಪತ್ರಿಕೆ ಒಳಗೊಳ್ಳಲಿದೆ. ಕನ್ನಡದ ಜಾಣ, ಜಾಣೆಯರು ಇಷ್ಟಪಡುವ ರಂಜನೆ, ಬೋಧನೆ, ಪ್ರಚೋದನೆಗೆ ಪೂರಕವಾದ ಬರಹಗಳೂ ಇರುತ್ತವೆ.

ಗೌರಿ ಹತ್ಯೆಯನ್ನು ಖಂಡಿಸಿ, ಈ ಹಿಂದೆ ಗೌರಿ ಪ್ರತಿಭಟಿಸಿದ್ದ ಜಾಗದಲ್ಲೇ ಪ್ರಗತಿಪರರ ಪ್ರತಿಭಟನೆ!

ಗೌರಿ ಲಂಕೇಶ್‌ರ ಸಹೋದ್ಯೋಗಿಗಳಾಗಿದ್ದ ಬಹುತೇಕ ಲೇಖಕ, ಲೇಖಕಿಯರು ಹಾಗೂ ಇಡೀ ಕಚೇರಿ ಸಿಬ್ಬಂದಿ ಈ ಹೊಸ ಪ್ರಯತ್ನದಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿರುವುದು ನಮ್ಮ ಶಕ್ತಿಯನ್ನು ಇಮ್ಮಡಿಸಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ‘ನಾನು ಗೌರಿ’ ಪತ್ರಿಕೆ ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಗೌರಿಯವರ ಆಶಯದೊಂದಿಗೆ ಏಕೀಭವಿಸುವ ಲಕ್ಷಾಂತರ ಜನರು ಪತ್ರಿಕೆ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹಾಗೆ ಹೇಳಬೇಕೆಂದರೆ ಈ ಪತ್ರಿಕೆ ಗೌರಿ ಆಶಯವನ್ನು ಪ್ರತಿನಿಧಿಸುವ ಎಲ್ಲರಿಗೂ ಸೇರಿದ್ದು.

ಈ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಅದೆಷ್ಟೋ ಹಿರಿಯರು, ಹಿತೈಷಿಗಳು ಕಿವಿ ಮಾತು ಹೇಳಿದ್ದಾರೆ. ಇದು ಸುಗಮವಾದ ಹಾದಿಯಲ್ಲ ಎಂಬುದು ನಿಜ. ಆದರೆ ನಾಡಿನಾದ್ಯಂತ ‘ಪತ್ರಿಕೆ’ಗಾಗಿ ಆಗ್ರಹಿಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ ಎಂಬುದೂ ನಿಜ. ಆದರೆ ಗೌರಿ ಪತ್ರಿಕೆಯನ್ನು ಮುಂದುವರೆಸುವುದು ಭಾವನಾತ್ಮಕ ವಿಷಯ ಎಂಬುದಕ್ಕಿಂತಲೂ ಹೆಚ್ಚಾಗಿ ನಮ್ಮ ಬದ್ಧತೆಗೆ ಸಂಬಂಧಿಸಿದ್ದು. ನಿಮ್ಮಲ್ಲರ ಬೆಂಬಲ, ಪ್ರೋತ್ಸಾಹಗಳ ಬಲದಿಂದ ಪತ್ರಿಕೆ ನಡೆಸುವ ಸಂಕಷ್ಟವನ್ನು ದಾಟಬಹುದೆಂಬ ವಿಶ್ವಾಸ ನಮ್ಮದು.

ಪ್ರತಿರೋಧ ಸಮಾವೇಶದಲ್ಲಿ ಗೌರಿ ಹತ್ಯಗೆ ಮಿಡಿದ ಜನಸಾಗರ

ನಮ್ಮೆಲ್ಲರ ಹೃದಯದಾಳದಲ್ಲಿ ಮಡುಗಟ್ಟಿದ ನೋವು, ಆಕ್ರೋಶಗಳು ನಮ್ಮ ಈ ಬದ್ಧತೆಯನ್ನು ಗಟ್ಟಿಗೊಳಿಸಿ, ಪತ್ರಿಕೆಯ ಮರುಹುಟ್ಟಿಗೆ ಭದ್ರ ಬುನಾದಿ ಹಾಕಿಕೊಟ್ಟಿವೆ. ಈ ಸವಾಲಿನ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಿಂದ ನಮ್ಮ ತಂಡ ಕಾರ್ಯೋನ್ಮುಖವಾಗಿದೆ. ಹಾಗೆಂದು ಸಮಸ್ಯೆಗಳೇ ಇರುವುದಿಲ್ಲ, ತಪ್ಪುಗಳೇ ಆಗುವುದಿಲ್ಲ ಎಂದರ್ಥವಲ್ಲ. ನಾವು ಎಡವಿದಾಗ ನೀವು ನಮ್ಮ ಕೈಹಿಡಿಯುತ್ತೀರಿ, ತಪ್ಪು ಮಾಡಿದಾಗ ಕಿವಿ ಹಿಂಡುತ್ತೀರಿ, ಪತ್ರಿಕೆಯ ನೋವು-ನಲಿವುಗಳಲ್ಲಿ ನಮ್ಮೊಂದಿಗಿರುತ್ತೀರಿ ಎಂಬ ತುಂಬು ವಿಶ್ವಾಸ ನಮ್ಮದು.

ಕೊನೆಯದಾಗಿ, ಈಜಿಪ್ಟ್ ಬಂಡಾಯದ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಮಾತು ನೆನಪಿಸುತ್ತೇನೆ. “The power of the people is stronger than the people in power”. ಅಂದರೆ ಅಧಿಕಾರದಲ್ಲಿರುವವರ ಬಲಕ್ಕಿಂತ ಜನಶಕ್ತಿಯ ಬಲ ಹೆಚ್ಚು ಬಲಿಷ್ಠವಾದುದು. ಅಂಥಾ ಜನಶಕ್ತಿಯ ಬಲವನ್ನು ನಿರೂಪಿಸಲು ನಾವೆಲ್ಲರೂ ಒಗ್ಗೂಡೋಣ. ಗೆಲುವಿನ ಹಾದಿ ನಮ್ಮದು.
ನಾನು ಗೌರಿ! ನಾವೆಲ್ಲಾ ಗೌರಿ!!

ಗೌರಿ ಮೀಡಿಯಾ ಟ್ರಸ್ಟ್ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...