ನಿಮಗಿದು ಗೊತ್ತೇ? ಮೊನ್ನೆಯಷ್ಟೇ ಬಿಜೆಪಿ ಸೇರಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಿಯಲ್ ಎಸ್ಟೇಟ್ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ಹಾಜರಾಗುವಂತೆ ಕಳೆದ ಡಿಸೆಂಬರ್ ನಲ್ಲಿ ಕೋರ್ಟ್ ವಾರೆಂಟ್ ಹೊರಡಿಸಿತ್ತು.
ರುದ್ರಾ ಬಿಲ್ಡ್ವೆಲ್ ಕಂಪನಿಯ ಪ್ರಾಜೆಕ್ಟ್ ಒಂದರಲ್ಲಿ ನಡೆದ ಮೋಸ ಮತ್ತು ಪಿತೂರಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ನಲ್ಲಿ ನಡೆದ ವಿಚಾರಣೆಗೆ ಈ ಕಂಪನಿಯ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸತತ ಗೈರು ಹಾಜರಾಗಿದ್ದರು. ನಂತರ ಜನವರಿ 24, 2019ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ದೆಹಲಿ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿತ್ತು. ಆದರೆ ಗಂಭೀರ್ ತಮ್ಮ ಮೇಲಿನ ಪ್ರಕರಣ ಕೈ ಬಿಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ದೆಹಲಿಯ ಸಾಕೇತ್ ಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು.
ದೆಹಲಿಯ ಗಾಜಿಯಾಬಾದ್ ನ ಇಂದಿರಾಪುರಂನಲ್ಲಿ ಶುರುವಾಗಬೇಕಿದ್ದ ಈ ಅಪಾರ್ಟ್ ಮೆಂಟ್ ನಲ್ಲಿ ಪ್ಲ್ಯಾಟ್ ಖರೀದಿಸಲು ಅನೇಕರು ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಕಟ್ಟಡ ನಿರ್ಮಾಣ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೂಡಿಕೆದಾರರು 2016ರಲ್ಲಿ ದೂರು ಸಲ್ಲಿಸಿದ್ದರು. ಹೂಡಿಕೆದಾರರನ್ನು ವಂಚಿಸುವ ಸಲುವಾಗಿಯೇ ಈ ಪ್ರಾಜೆಕ್ಟನ್ನು ಆರಂಭಿಸಲಾಗಿತ್ತು ಎಂದು ಈ ದೂರಿನಲ್ಲಿ ಹೇಳಲಾಗಿದ್ದು ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ಈ ಎಲ್ಲಾ ಕೇಸುಗಳಿಂದ ಬೇಸತ್ತಿರುವ ಗಂಭೀರ್ ಈ ಕಾರಣಕ್ಕಾಗಿಯೇ ಖುಸೆಗೊಳ್ಳಲು ಬಿಜೆಪಿ ಸೇರಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಹಿಂದೆಯೂ ಹಲವಾರು ಜನ ತಮ್ಮ ಮೇಲಿನ ಕೇಸುಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರಿದ್ದರು ನಂತರ ಅವರ ಕೇಸುಗಳು ಖುಲಾಸೆಗೊಂಡ ಸಾಕಷ್ಟು ಉದಾಹರಣೆಗಳು ಸಹ ಇವೆ.
ಈ ಹಿಂದೆಯೂ ಮುಕುಲ್ ರಾಯ್ ಶ್ರದ್ಧಾ ಚಿಟ್ ಫಂಡ್ ಸ್ಕ್ಯಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಂತರ ಅವರು ಬಿಜೆಪಿ ಸೇರಿದ ಕೂಡಲೇ ಹಗರಣ ಮುಕ್ತರಾದರು. ಹಿಮಾಚಲ ಪ್ರದೇಶದ ಅನಿಲ್ ಶರ್ಮಾ ಟಿಲಿಕಾಂ ಹಗರಣದಲ್ಲಿ ಸಿಲುಕಿಕೊಂಡು ಬಿಜೆಪಿ ಸೇರಿ ಬಗೆಹರಿಸಿಕೊಂಡರು. ಇಂತಹ ಹತ್ತಾರು ಉದಾಹರಣೆಗಳ ಸಾಲಿಗೆ ಹೊಸ ಸೇರ್ಪಡೆ ಗೌತಮ್ ಗಂಭೀರತೆ ಆಗಿದ್ದಾರೆ.
ಒಂದು ರಾಜಕೀಯ ಪಕ್ಷಕ್ಕೆ ಆರೋಗ್ಯಕರವೆನಿಸದ `ಕಾಂಗ್ರೆಸ್ ಮುಕ್ತ ಭಾರತ ಮಾಡುವೆ’ ಎಂದು ಹೊರಟ ಬಿಜೆಪಿ ಅದಕ್ಕೋಸ್ಕರ ಆಯ್ದುಕೊಂಡಿದ್ದು ಜನರಿಗೆ ಹತ್ತಿರವಾಗುವ ಜನಪರ ಹಾದಿಯನ್ನಲ್ಲ, ಬದಲಿಗೆ ಕಾಂಗ್ರೆಸಿನ ಹಗರಣವೀರರನ್ನು ತನ್ನತ್ತ ಸೆಳೆದುಕೊಂಡು ಕಾಂಗ್ರೆಸ್ ಅನ್ನು ಶುದ್ಧಗೊಳಿಸಿದ್ದು! ಈ ವಿಚಾರದಲ್ಲಿ ಬಿಜೆಪಿ ಎರಡು ರೀತಿಯಲ್ಲಿ ವ್ಯವಹರಿಸುತ್ತಾ ಬಂದಿದೆ. ಒಂದು, ಹಗರಣದಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಪಕ್ಷಕ್ಕೆ ಆಹ್ವಾನಿಸಿ ಅವರಿಗೆ ತಮ್ಮ ಪ್ರಭಾವ ಮತ್ತು ಅಧಿಕಾರ ದುರಪಯೋಗ ಬಳಸಿ ಕ್ಲಿನ್ ಚಿಟ್ ನೀಡಲಾಗುತ್ತದೆ. ಒಂದುವೇಳೆ ಅವರು ಪಕ್ಷಕ್ಕೆ ಬರದಿದ್ದರೆ ಅಂಥವರ ಮೇಲೆ ಐ.ಟಿ ದಾಳಿ, ಇ.ಡಿ ದಾಳಿ ರೀತಿಯಲ್ಲಿ ಬೆದರಿಕೆ ಒಡ್ಡಿ, ಸಿಬಿಐ ತನಿಖೆಯ ಗುಮ್ಮನನ್ನು ತೋರಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಅಪ್ರಜಾತಾಂತ್ರಿಕ ನಡೆ ಎರಡನೆಯದ್ದು.
ಕರ್ನಾಟಕದ ಎಸ್.ಎಂ ಕೃಷ್ಣರವರು ಸಹ ತೆರಿಗೆ ವಂಚನೆಯ ಬಲೆಯಲ್ಲಿ ಬಂಧಿಯಾಗಿದ್ದ ತಮ್ಮ ಅಳಿಯ ಸಿದ್ಧಾರ್ಥ ಹೆಗ್ಡೆಯನ್ನು ಬಚಾವು ಮಾಡಿಕೊಳ್ಳುವುದಕ್ಕಾಗಿ ಇಳಿ ವಯಸ್ಸಿನಲ್ಲಿ ಬಿಜೆಪಿ ಸೇರಿ ಮೂಲೆಗುಂಪಾದರು ಎಂಬ ಮಾತುಗಳಿವೆ. ಕೊಡಗು ಚಿಕ್ಕಮಗಳೂರು ಬೇನಾಮಿ ಕಾಫಿ ಎಸ್ಟೇಟ್ ಕುರಿತು ಸಿದ್ದಾರ್ಥ ವಿರುದ್ಧ ದೂರುಗಳಿದ್ದವು. ತನಿಖೆ ಭಯಕ್ಕಾಗಿಯೇ ಬಿಜೆಪಿ ಸೇರಿದ್ದರು ಎಂಬ ಮಾತುಗಳು ಚಾಲ್ತಿಯಲ್ಲಿವೆ. ಇನ್ನು ದೇಶ ಬಿಟ್ಟು ಓಡಿಹೋದ ಕಳ್ಳ ಉದ್ಯಮಿಗಳಿಗೆಲ್ಲಾ ನೇರ ಬಿಜೆಪಿಯೇ ಸಹಕರಿಸಿದ್ದಲ್ಲದೇ ಅವರಿಂದ ಹೇರಳವಾಗಿ ಪಾರ್ಟಿ ಫಂಡ್ ಪಡೆಯಿತ್ತಿರುವುದರ ಬಗ್ಗೆ ಬಿಜೆಪಿಯ ಮಿತ್ರ ಶಿವಸೇನೆಯೇ ಆರೋಪ ಮಾಡಿದೆ.
ಅವಕಾಶ ಸಿಕ್ಕಾಗಲೆಲ್ಲಾ ದೆಹಲಿಯಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿರುವ ಆಪ್ ಸರ್ಕಾರವನ್ನು ಗಂಭೀರ್ ಟೀಕಿಸಿದ್ದರು. ಕಳೆದ ವರ್ಷ ಗಂಭೀರ್ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬಂದ ಸಂದರ್ಭದಲ್ಲಿ ಅದನ್ನು ಸ್ವತಃ ತಳ್ಳಿಹಾಕಿದ್ದರು. ಆದರೆ ಈಗ ಯಾವುದೇ ಮಾತುಕತೆಗಳಿಲ್ಲದೆ ಇದ್ದಕ್ಕಿದ್ದಂತೆ ಬಿಜೆಪಿ ಸೇರಿ ಕೂತುಹಲಕ್ಕೆ ತೆರೆ ಎಳೆದಿದ್ದಾರೆ.
ಇನ್ನೂ ಅನುಮಾನಗಳಿಗೆ ಎಡೆಮಾಡಿಕೊಡುವ ಕಾರಣವೆಂದರೆ ಗಂಭೀರ್ ಅವರು ತರಾತುರಿಯಲ್ಲಿ ಬಿಜೆಪಿ ಸೇರಿದ್ದರು ಕೂಡ ಈ ಲೋಕಸಭೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ಸ್ಪಷ್ಟನೆಯನ್ನು ನೀಡುತ್ತಿಲ್ಲ. ಈ ಕುರಿತು ಪಕ್ಷ ತೀರ್ಮಾನಿಸುತ್ತದೆ ಎಂದು ಬಿಜೆಪಿ ಮುಖಂಡರು ಅಧಿಕಾರಯುತ ಧ್ವನಿಯಲ್ಲಿ ಹೇಳುತ್ತಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಗಂಭೀರ್ ಭವಿಷ್ಯ ಏನಾಗಲಿದೆ ಎನ್ನುವುದಕ್ಕಿಂತ ಇಂಥಾ ಅಪ್ರಜಾತಾಂತ್ರಿಕ ನಡೆಗಳಿಂದ ಸ್ವತಃ ಬಿಜೆಪಿಯೇ ತನ್ನ ಭವಿಷ್ಯ ಹಾಳುಮಾಡಿಕೊಂಡಿರುವುದರಿಂದ ಜನ ಗೌತಮ್ ಗಂಭೀರ್ ಬಗ್ಗೆ ಅಷ್ಟು ಗಮನವನ್ನು ಕೊಡುತ್ತಿಲ್ಲ.