Homeಅಂಕಣಗಳುಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ.....

ಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ…..

- Advertisement -
- Advertisement -

ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ಹೊಗಳಿದವರೂ ಇದ್ದರು; ಆಡಿಕೊಂಡವರೂ ಇದ್ದರು. ಮೋದಿಯ ಪರ ಅಥವಾ ವಿರುದ್ಧ ನಿಲ್ಲದೇ ಸ್ವಚ್ಛತೆಯ ಪ್ರಶ್ನೆಯನ್ನು ಪಕ್ಷಾತೀತವಾಗಿ ನೋಡೋಣ. ನಗರೀಕರಣ ಹೆಚ್ಚಾದಂತೆಲ್ಲಾ ಕಸದ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಗ್ರಾಮೀಣ ಭಾಗದಲ್ಲೂ ಬಯಲೇ ಶೌಚಾಲಯವಾಗಿರುವ ಕೋಟ್ಯಂತರ ಕುಟುಂಬಗಳು ಇಂದಿಗೂ ಇವೆ. ಹಾಗಾಗಿ ದೇಶಕ್ಕೆ ದೇಶವೇ ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಷಯ ಇದು. ಕಸವೆಂಬುದು ನೈರ್ಮಲ್ಯದ, ಆರೋಗ್ಯದ, ಘನತೆಯ ಜೀವನದ, ನಾಗರಿಕ ಶಿಸ್ತಿನ ಜೊತೆ ತಳುಕು ಹಾಕಿಕೊಂಡಿರುವ ಸಂಗತಿ. ತೀರಾ ಇತ್ತೀಚೆಗೆ ಇದು ಹಣತರುವ ಬಾಬ್ತಾಗಿಯೂ ಕಂಡು, ಅದಕ್ಕಾಗಿ ಏಜೆನ್ಸಿಗಳು ಹುಟ್ಟಿಕೊಂಡಿವೆ. ಕಸ ತೆಗೆಯಲು ಜನರಿಂದ ತೆರಿಗೆಯನ್ನೂ ಸಂಗ್ರಹಿಸಲಾಗುತ್ತಿದೆ. ಇಷ್ಟಾಗಿಯೂ ನಮ್ಮ ಸರ್ಕಾರಗಳು ಇದನ್ನು ಏಕೆ ನಿಭಾಯಿಸಲಾಗುತ್ತಿಲ್ಲ?
‘ದೆಹಲಿಯ ಲೆ.ಗವರ್ನರ್ ಮನೆ ಮುಂದೆ ಕಸ ಸುರಿಯಿರಿ’
ಇದನ್ನು ಹೇಳಿದ್ದು ಸುಪ್ರೀಂ ಕೋರ್ಟು. ಹೌದು ಮೂರು ದಿನದ ಕೆಳಗೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ‘ಕಸವನ್ನು ತೆಗೆದುಕೊಂಡು ಹೋಗಿ ರಾಜ್‍ನಿವಾಸ್ ಮಾರ್ಗ್‍ದಲ್ಲಿ ಸುರಿಯಿರಿ’ ಎಂದು ತೆರೆದ ಕೋರ್ಟಿನಲ್ಲೇ ಹೇಳಿದರು. ಅವರು ಲೆಫ್ಟಿನೆಂಟ್ ಗವರ್ನರ್ ಮನೆಯ ಕುರಿತೇ ಮಾತಾಡುತ್ತಿದ್ದಾರೆಂದು ಗೊತ್ತಾಗಿ ಕೋರ್ಟಿನಲ್ಲಿದ್ದವರು ಅವಾಕ್ಕಾದರು. ಕಾರಣ ಇಷ್ಟೇ. ದಕ್ಷಿಣ ದೆಹಲಿಯ ಮುನಿಸಿಪಾಲಿಟಿ (ಎಸ್‍ಡಿಎಂಸಿ)ಯ ವ್ಯಾಪ್ತಿಯಲ್ಲಿ ಪ್ರತಿದಿನ 3,600 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 1,800 ಟನ್‍ಗಳನ್ನು ಸೋನಿಯಾ ವಿಹಾರ್ ಎಂಬ ಬಡಜನರೇ ಹೆಚ್ಚು ವಾಸಿಸುವ ಕಡೆ ಸುರಿಯಲಾಗುತ್ತಿದೆ. ಅಲ್ಲಿನ ನಿವಾಸಿಗಳು ನಾನಾ ಕೋರ್ಟ್‍ಗಳನ್ನು ಸುತ್ತಾಡಿ, ಅಂತಿಮವಾಗಿ ಸುಪ್ರೀಂಕೋರ್ಟಿನ ಕದ ತಟ್ಟಿದಾಗ, ಮುನಿಸಿಪಾಲಿಟಿಯ ಪರ ವಾದ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ‘ಇದು ಅನಿವಾರ್ಯ, ಅವರು ಪ್ರಶ್ನಿಸಬಾರದು’ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ನ್ಯಾಯಮೂರ್ತಿಗಳ ಪ್ರತಿಕ್ರಿಯೆ ಇದಾಗಿತ್ತು.
ಈ ಮುನಿಸಿಪಾಲಿಟಿಯಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. ತಾವು ಈಗಷ್ಟೇ ಅಧಿಕಾರಕ್ಕೆ ಬಂದೆವು ಎಂದು ಹೇಳುವ ಹಾಗಿಲ್ಲ; ಇದರ ಹಿಂದಿನ ಅವಧಿಯಲ್ಲೂ ಅವರೇ ಇದ್ದರು. ಅದು ದೆಹಲಿ. ನರೇಂದ್ರ ಮೋದಿಯವರು ತಮ್ಮ ಕೈಯ್ಯಾರೆ ಸ್ವಚ್ಛ ಭಾರತ ಆಂದೋಲನವನ್ನು ಉದ್ಘಾಟಿಸಿದ ದೇಶದ ರಾಜಧಾನಿ. ಈಗ ಹೇಳಿ? ಏನು ಮಾಡುವುದು? ಮೋದಿಯವರು ಸ್ವಚ್ಛತೆಗಾಗಿ ಇದ್ದ ಅನುದಾನವನ್ನು ಕಡಿಮೆ ಮಾಡಿ, ಅದರಲ್ಲೂ ಹೆಚ್ಚಿನ ಹಣವನ್ನು ತಮ್ಮ ಜಾಹೀರಾತಿಗಾಗಿ ಬಳಸಿದರು ಎಂಬ ಆರೋಪ ನಿಜವಾಯಿತಲ್ಲವೇ?
ಪ್ರಧಾನಿ ಏನೇ ಗಿಮಿಕ್ ಮಾಡಿದ್ದರೂ, ಅವರ ಚರಿಷ್ಮಾ ಈ ಅಭಿಯಾನದಿಂದ ಹೆಚ್ಚಾದರೂ ಅದನ್ನೆಲ್ಲಾ ದೊಡ್ಡ ವಿಚಾರ ಮಾಡುವುದು ಬೇಡ; ಸ್ವಚ್ಛತೆ ಹೆಚ್ಚಾಗಿದ್ದರೆ ಅಷ್ಟೇ ಸಾಕು. ಆಗಿದೆಯೆ? ಖಂಡಿತ ಇಲ್ಲ.

ಸಿದ್ದರಾಮಯ್ಯನವರಿಂದ ಪೌರಕಾರ್ಮಿಕರಿಗೆ ಒಳಿತಾಯಿತೇ?
ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ, ಗುತ್ತಿಗೆ ಪದ್ಧತಿಯ ವಿರುದ್ಧ ಸಂಪುಟದಲ್ಲಿ ಚರ್ಚೆಗಳಾದವು. ಆದರೆ, ಅದನ್ನು ತೆಗೆದುಹಾಕುವುದು ಸುಲಭವಾಗಿರಲಿಲ್ಲ. ಶೋಷಿತ ಸಮುದಾಯದ ಬಗ್ಗೆ ಕಾಳಜಿಯಿದ್ದ ಅವರು ಗುತ್ತಿಗೆ ಪೌರಕಾರ್ಮಿಕರನ್ನಾದರೂ ಖಾಯಂ ಮಾಡಿಕೊಳ್ಳೋಣವೆಂದು ತೀರ್ಮಾನಿಸಿದರು. ಅದೂ ಸಾಧ್ಯವಿಲ್ಲ ಎಂದು ಗೊತ್ತಾಯಿತು. ಇರುವವರನ್ನೇ ಖಾಯಂ ಮಾಡಿಕೊಳ್ಳುವುದು ಅಸಾಧ್ಯ ಎಂದಾದರೆ, ಹೊಸದಾಗಿ ನೇಮಕಾತಿ ಆರಂಭಿಸಿ ಇರುವವರಿಗೇ ಆ ಉದ್ಯೋಗ ಸಿಗುವ ಹಾಗೆ ನೇಮಕಾತಿ ನಿಯಮ ರೂಪಿಸಲಾಯಿತು. ಇದೊಂದು ಸಕಾರಾತ್ಮಕ ನಡೆಯಾಗಿತ್ತು. ಆದರೆ, ಇವತ್ತಿನವರೆಗೂ ಆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಗ ಗುತ್ತಿಗೆ ಪೌರಕಾರ್ಮಿಕರ ಪರವಾಗಿ ಎರಡು ಮಹತ್ವದ ತೀರ್ಮಾನಗಳನ್ನು ಸಿದ್ದರಾಮಯ್ಯನವರು ತೆಗೆದುಕೊಂಡರು. ಒಂದು, ಅವರ ವೇತನವನ್ನು ಎರಡು ಪಟ್ಟು ಹೆಚ್ಚಿಸಿದರು; ಗುತ್ತಿಗೆದಾರರ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಗುತ್ತಿಗೆ ಪೌರಕಾರ್ಮಿಕರ ಅಕೌಂಟಿಗೇ ವೇತನ ಹೋಗಲಿ ಎಂದು ಆದೇಶಿಸಿದರು.
ಅದಾಗಿ, ಹಲವು ತಿಂಗಳಾದ ನಂತರ ಹೊಸ ಸರ್ಕಾರ ಬಂತು. ಸುಬ್ರಮಣಿ ಎಂಬ ಗುತ್ತಿಗೆ ಪೌರಕಾರ್ಮಿಕ ಬೆಂಗಳೂರಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಕಾರಣ ಏನು ಎಂದು ನೋಡಿದರೆ, 5 ತಿಂಗಳಿಂದ ಆತನ ಅಕೌಂಟಿಗೆ ವೇತನ ಬಂದಿರಲಿಲ್ಲ. ಅಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ, ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಿಂದಲೂ ವೇತನ ಪಾವತಿಯಾಗಿರಲಿಲ್ಲ. ಈ ಸುಬ್ರಮಣಿಯ ಆತ್ಮಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ, ದಲಿತ ಸಮುದಾಯಕ್ಕೆ ಸೇರಿದ ಮೇಯರ್ ಎಚ್ಚೆತ್ತುಕೊಂಡರು.
ಸಿದ್ದರಾಮಯ್ಯನವರಿಗೆ ಕಾಳಜಿ ಇರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ, ಹೇಗಾದರೂ ಪೌರಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಇದ್ದುದರಿಂದಲೇ ಒಂದಾದ ಮೇಲೆ ಒಂದರಂತೆ ಕ್ರಮಗಳನ್ನು ತೆಗೆದುಕೊಂಡರು. ಆದರೆ ಆ ಭಾವನೆ ಮತ್ತು ಕ್ರಮಗಳು ಅಂತಿಮವಾಗಿ ಕಟ್ಟಕಡೆಯ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಒಬ್ಬ ವ್ಯಕ್ತಿ ‘ಹುತಾತ್ಮ’ನಾಗಬೇಕಾಯಿತು. ಈ ಸದ್ಯ ಮೇಯರ್ ತೋರಿರುವ ಕಾಳಜಿಯೂ ಎಷ್ಟು ತಿಂಗಳ ಕಾಲ ವೇತನ ಪಾವತಿಯ ನಿರಂತರತೆಯಾಗಿ ಉಳಿದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಇದೂ ಸ್ವಚ್ಛ ಭಾರತಕ್ಕೆ ಸಂಬಂಧಿಸಿದ ವಿಷಯವೇ ಆಗಿದೆ.

ಮ್ಯಾನ್‍ಹೋಲ್ ಸಾವು ಮತ್ತು ಕುಮಾರಸ್ವಾಮಿ
ಈ ವಾರದಲ್ಲೇ ಶಿವಮೊಗ್ಗ ನಗರದ ಚರಂಡಿಯ ಮ್ಯಾನ್‍ಹೋಲ್‍ನಲ್ಲಿ ಇಳಿದ ಇಬ್ಬರು ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ಎಷ್ಟೋ ಕಾಲದಿಂದ ಆಗುತ್ತಿರುವ ಈ ಸಾವುಗಳಿಗೆ ಈಗಷ್ಟೇ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಹೇಗೆ ಹೊಣೆಗಾರರಾಗುತ್ತಾರೆ ಎಂದು ಕೇಳಬಹುದು. ಅವರೊಬ್ಬರೇ ಹೊಣೆಗಾರರಲ್ಲ. ಆದರೆ, ಪ್ರಾಣವನ್ನು ಪಣಕ್ಕೊಡ್ಡಿ ಸರ್ಕಾರೀ ಕೆಲಸಗಳನ್ನು ಸುಸೂತ್ರವಾಗಿ ಸಾಗಿಸುತ್ತಿರುವ ಸಾವಿರಾರು ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತೇಮರಳ್ಳಿಯಲ್ಲಿ ಚೆಸ್ಕಾಂ ನೌಕರನೊಬ್ಬ ಕೆಲಸದಲ್ಲಿದ್ದಾಗ ವಿದ್ಯುತ್ ತಗುಲಿ ತೀವ್ರ ಆಘಾತಕ್ಕೊಳಪಟ್ಟ ಮತ್ತು ಶರೀರ ಸುಟ್ಟಿತು. ಇವತ್ತಿನವರೆಗೂ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಇದೇ ವಾರದಲ್ಲಿ ಕುಮಾರಸ್ವಾಮಿಯವರ ಬೀಗರಾದ ಡಿ.ಸಿ.ತಮ್ಮಣ್ಣನವರ ಕ್ಷೇತ್ರದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕೆಲಸದ ಅವಧಿಯಲ್ಲೇ ಗುತ್ತಿಗೆ ನರ್ಸ್ ಒಬ್ಬರು ಅಸುನೀಗಿದರು. ಪರಿಹಾರವೆಲ್ಲಾ ದೂರದ ಮಾತು.
ಇಂತಹವರೆಲ್ಲರಿಗೂ ಸೇವಾಭದ್ರತೆ ಮತ್ತು ಸಮಾನವೇತನ ಕಲ್ಪಿಸುತ್ತೇನೆಂದು ಚುನಾವಣೆಗೆ ಮುಂಚೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ‘ಇದೆಲ್ಲಾ ಅಷ್ಟು ಸುಲಭವಲ್ಲ; ಹಿಂದಿನ ಸರ್ಕಾರಗಳ ಅವಧಿಯಲ್ಲಿ ಏನೇನೋ ಆಗಿರುತ್ತದೆ, ಎಲ್ಲದಕ್ಕೂ ನಾನೇ ತಲೆಕೊಡಬೇಕಾ?’ ಎನ್ನುತ್ತಿದ್ದಾರೆ. ಹೀಗಿರುವಾಗ ಗುತ್ತಿಗೆ ಪೌರಕಾರ್ಮಿಕರಿಗೆ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಇವರಿಂದ ನ್ಯಾಯ ಸಿಗಬಹುದಾ?

ಬನ್ನಿ, ಕಸ ಬಾಚೋಣ
ಎಲ್ಲೆಂದರಲ್ಲಿ ಕಸ ಚೆಲ್ಲಾಡುವ ಪ್ರವೃತ್ತಿ ನಾಗರಿಕರಲ್ಲೂ ಸಾಕಷ್ಟಿದೆ. ಯಾವುದೇ ಪ್ರವಾಸಿ ತಾಣದಲ್ಲೂ ಗಲೀಜು ರಾಚುತ್ತದೆ. ಜಾತ್ರೆ, ಹಬ್ಬ, ರಾಜಕಾರಣಿಗಳ ಕಾರ್ಯಕ್ರಮಗಳು, ಸಂಘಟನೆಗಳು ನಡೆಸುವ ಪ್ರತಿಭಟನೆಗಳು, ಮದುವೆ ಇತ್ಯಾದಿ ಖಾಸಗಿ ಕಾರ್ಯಕ್ರಮಗಳು ಮುಗಿದ ನಂತರ ಕಸದ ರಾಶಿ ಇಟ್ಟಾಡುತ್ತದೆ. ಹಸಿ ಕಸ, ಒಣ ಕಸ ವಿಂಗಡಿಸಲು ಸೋಮಾರಿತನ ತೋರುವ ‘ನಾಗರಿಕರು’, ಮನೆಯಲ್ಲಿ ಶೌಚಾಲಯ ಕಟ್ಟಿಸಲು ಹಿಂಜರಿಯುವ ಹಳ್ಳಿಗರು ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದೇವೆ.
ತೋರಿಕೆಗೆ ಕಸ ಗುಡಿಸುವ ನಾಟಕವಾಡಿ, ಅದರ ಜಾಹೀರಾತಿಗೇ ಹೆಚ್ಚು ಹಣ ಖರ್ಚು ಮಾಡಿಸುವ ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಕಸಕ್ಕೆ ಜವಾಬ್ದಾರರು. ಆದರೆ, ಕಸ ಬಳಿಯುವ ಜನರ ಬದುಕನ್ನು ಇನ್ನಷ್ಟು ಘನತೆಯುಳ್ಳದ್ದನ್ನಾಗಿ ಮಾಡುವ ಪರಿಣಾಮಕಾರಿ ಪ್ರಯತ್ನವಾದರೂ ಈ ಸಮಾಜದಲ್ಲಿ ಜಾರಿಯಾಗುತ್ತಿಲ್ಲ.
ಇನ್ನಾದರೂ ಕಸ ಬಳಿಯೋಣ; ಸ್ವಚ್ಛ ಭಾರತ ಕಟ್ಟೋಣ.

.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...