Homeಮುಖಪುಟಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

ಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

- Advertisement -
- Advertisement -

ಕರ್ನಾಟಕದಲ್ಲಿ ಪಕ್ಷದ ಸಾಮಥ್ರ್ಯಕ್ಕಿಂತಲೂ ವ್ಯಕ್ತಿಗತ ಚರಿಷ್ಮಾ ಮಾತ್ರ ಲೆಕ್ಕ ಹಾಕುವುದಾದರೆ ಕುಮಾರಸ್ವಾಮಿಯೇ ಜನಪ್ರಿಯ ನಾಯಕರಾಗಿದ್ದರು. ರೈತರ ಗಣನೀಯ ವಿಭಾಗ, ಮಾಸಾಶನ ಪಡೆಯುವ ವೃದ್ಧರು-ಮಹಿಳೆಯರು ಮತ್ತು ಯುವಕರ ಒಂದು ವಿಭಾಗದ ನಡುವೆ ಎಚ್‍ಡಿಕೆ ಬಗ್ಗೆ ವಿಶೇಷವಾದ ಅಭಿಮಾನವಿತ್ತು. ಹಾಗಾಗಿಯೇ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಮೂವರ ಜನಪ್ರಿಯತೆಯ ಕುರಿತು ಸಮೀಕ್ಷೆ ನಡೆದಾಗ, ಜೆಡಿಎಸ್ ಪಕ್ಷದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಮಾರಸ್ವಾಮಿಯ ಪರ ಒಲವು ಇರುತ್ತಿತ್ತು. ಮುಖ್ಯಮಂತ್ರಿಯಾದ ನಂತರ ಜೆಡಿಎಸ್ ಪಕ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡುವಾಗ ಅವರೂ ಇದನ್ನೇ ಹೇಳಿದರು. ‘ನಾನು ಹೋದ ಕಡೆಯಲ್ಲೆಲ್ಲಾ ಜನರು ತೋರುವ ಅಭಿಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಮಾತ್ರ ಅವರು ಏಕೆ ಓಟು ಕೊಡುವುದಿಲ್ಲ?’.
ಜೆಡಿಎಸ್ ಪಕ್ಷದ ಸಂಘಟನೆಗೆ ಯಾವ ರೀತಿಯ ಒತ್ತೂ ಕೊಡದೇ, ಪಕ್ಷದಲ್ಲಿ ಸ್ವತಂತ್ರವಾಗಿ ಆಲೋಚಿಸಿ ನಾಯಕರಾಗುವ ತಮ್ಮ ಕುಟುಂಬೇತರ ವ್ಯಕ್ತಿಗಳಿಗೆ ಅವಕಾಶ ಕೊಡದೇ ಪಕ್ಷ ಬೆಳೆಯಬೇಕು ಎಂದರೆ ಹೇಗೆ ಬೆಳೆಯಲು ಸಾಧ್ಯ? ಜೆಡಿಎಸ್‍ನ ಶಕ್ತಿ ಮತ್ತು ಮಿತಿ ಎರಡೂ ಸಹಾ ದೇವೇಗೌಡರ ಕುಟುಂಬವೇ ಆಗಿದೆ. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ‘ಮೂರನೇ’ ಶಕ್ತಿಗಿರುವ ಸಾಧ್ಯತೆಯ ಪ್ರಮಾಣವನ್ನು ಅವರು ಇವತ್ತಿಗೂ ಸರಿಯಾಗಿ ಮನಗಂಡಂತಿಲ್ಲ. ಹಲವು ತಪ್ಪು ಹೆಜ್ಜೆಗಳ ನಂತರವೂ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿಯವರ ಜನಪ್ರಿಯತೆಯ ಕಾರಣಗಳಾದರೂ ಆ ಕುಟುಂಬಕ್ಕೆ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಎಡವಟ್ಟುಗಳನ್ನು ಪದೇ ಪದೇ ಮಾಡಿಕೊಂಡು ‘ಮೂರನೇ ಸ್ಥಾನದಲ್ಲಿರುವ’ ಶಕ್ತಿಯಾಗಿಯೇ ಜೆಡಿಎಸ್ ಉಳಿದುಕೊಂಡಿದೆ.
ಈ ಸಾರಿ ಕುಮಾರಸ್ವಾಮಿಯವರು ಮಾಡುತ್ತಿರುವ ಒಂದು ಮುಖ್ಯ ಎಡವಟ್ಟೆಂದರೆ, ಸಕಾರಾತ್ಮಕ ಅಜೆಂಡಾದೊಂದಿಗೆ ತಮ್ಮ ವೋಟ್ ಬೇಸ್‍ಅನ್ನು ವಿಸ್ತರಿಸಿಕೊಳ್ಳದೇ ಇರುವುದು. ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್‍ಗಿರುವ ಅವಕಾಶವೇ ಹೆಚ್ಚು. ಹಳೆಯ ವೋಟ್‍ಬೇಸ್ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಯಾರು ಯುವಜನರನ್ನು ಹೆಚ್ಚು ತಮ್ಮೆಡೆಗೆ ಸೆಳೆಯುತ್ತಾರೋ ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸುವುದು ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಕುರಿತು ಅಪ್‍ಡೇಟೆಡ್ ಮುನ್ನೋಟದೊಂದಿಗೆ ಮತ್ತು ಆ ಮುನ್ನೋಟದ ಕನಸನ್ನು ಜಾರಿ ಮಾಡಲು ಖಚಿತ ಹೆಜ್ಜೆಗಳನ್ನಿಡುವುದರೊಂದಿಗೆ ಸಾಧಿಸಬೇಕಾದ ಅಂಶ ಅದಾಗಿದೆ.
ಹಾಗೆ ನೋಡಿದರೆ, ಜೆಡಿಎಸ್‍ನ ಚುನಾವಣಾ ಭರವಸೆಗಳು ಯುವಕರ ಪರವಾಗಿಯೇ ಇದ್ದವು. ಮೋದಿ ಕೋಟಿ ಉದ್ಯೋಗದ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದರಿಂದ, ಈ ಸಾರಿ ಬಿಜೆಪಿಯು ಯಾವ ಸಂಖ್ಯೆಯನ್ನೂ ಹೇಳಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೆರಡೂ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಅದನ್ನು ಮತ್ತಷ್ಟು ನಿರ್ದಿಷ್ಟವಾಗಿ ಮುಂದಿಟ್ಟಿದ್ದು ಜೆಡಿಎಸ್. ಪ್ರಣಾಳಿಕೆ, ಪೂರ್ಣಪುಟದ ಜಾಹೀರಾತುಗಳಿಂದ ಹಿಡಿದು, ಈಚೆಗೆ ಮಂಡಿಸಿದ ಬಜೆಟ್‍ನವರೆಗೆ ಕುಮಾರಸ್ವಾಮಿ ಹೊಸ ಅಂಶಗಳಿಗೆ ತೆರೆದುಕೊಂಡಿದ್ದು ಸ್ಪಷ್ಟವಾಗಿತ್ತು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆಂದು ಪ್ರಕಟಿಸಿದ್ದರಿಂದ ಹಿಡಿದು, ‘ಚೀನಾದೊಂದಿಗೆ ಸ್ಪರ್ಧೆ’ ಎಂದು ಹೇಳಿದ್ದರತನಕ ವಿಶೇಷತೆಗಳು ಗಮನ ಸೆಳೆದಿದ್ದೆವು. ನೀವು ಇಲ್ಲಿಯೇ ಬಂದು ತಯಾರು ಮಾಡಿ, ನಿಮ್ಮ ದೇಶಕ್ಕೆ ಲಾಭ ಕೊಂಡೊಯ್ಯಿ ಎಂದು ಹೇಳುವ ಮೋದಿಯವರ ಮೇಕ್‍ಇನ್‍ಇಂಡಿಯಾ ಯೋಜನೆ ಒಂದು ಕಡೆಗೆ ಇದ್ದರೆ, ನಾವು ಇಲ್ಲಿಯೇ ಉತ್ಪಾದಿಸಿ ಚೀನಾದೊಂದಿಗೂ ಸ್ಪರ್ಧಿಸುತ್ತೇವೆ ಎಂದು ಹೇಳುವ ಧೈರ್ಯ ಇನ್ನೊಂದೆಡೆ. ಎಚ್‍ಡಿಕೆ ಸಹಾ ಇಸ್ರೇಲ್ ಕೃಷಿ ಎಂಬ ಈ ನೆಲಕ್ಕೆ ಹೊಂದದ ಕೃಷಿಯನ್ನು ಇಲ್ಲಿ ಅಳವಡಿಸಬೇಕೆಂದು ಹೇಳಿದ್ದರೂ, ಪಾಳೇಕರ್ ಮಾದರಿಯ ಸಹಜ ಕೃಷಿಯ ವಿಚಾರ ಗಮನಕ್ಕೆ ಬಂದಾಗ ಅದರತ್ತಲೂ ಗಮನ ಹರಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ 10-15 ವರ್ಷಗಳಿಗೂ ಹೆಚ್ಚು ಕಾಲ ಅಡಿಗೆ ಮಾಡಿ, ಅಲ್ಲಿನ ಮಕ್ಕಳನ್ನು ಸಲಹಿ ದುಡಿದಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿ ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇರನೇಮಕಾತಿಯು ವಾಸ್ತವದಲ್ಲಿ ಎಚ್.ಆಂಜನೇಯ ಅವರ ಹಗರಣವಾಗಿತ್ತು. ಹಾಗಿದ್ದರೂ, ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಲು ಎಚ್‍ಡಿಕೆ ಸೂಚಿಸಿದ್ದರು. ಕೆಲಸ ಹೋಗಿಯೇಬಿಟ್ಟಿತು ಎಂದಾದರೂ ಬಿಡದೇ ಹೋರಾಡಿದವರಿಗೆ ನಿಜಕ್ಕೂ ಜೀವ ವಾಪಸ್ಸು ಬಂದಂತಾಗಿತ್ತು.
2006ರಲ್ಲಿ ಸಿಕ್ಕ ಅವಕಾಶದಲ್ಲೂ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ ಎಚ್‍ಡಿಕೆ ಈ ಸಾರಿಯೂ ಅದೇ ರೀತಿ ಮಾಡಬಹುದು ಎಂಬ ಸೂಚನೆಗಳು ಕಾಣುತ್ತಿದ್ದ ಹೊತ್ತಿನಲ್ಲೇ ಎಡವಟ್ಟುಗಳೂ ಆರಂಭವಾಗಿವೆ. ಅದರ ಉದ್ಘಾಟನೆ ಆಗಿದ್ದು, ಶಾಲಾಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸಿದ್ದು. ಶೋಷಿತ ಸಮುದಾಯಗಳ ಪರವಾಗಿ ಪಕ್ಷಪಾತ ಎಣಿಸುತ್ತಾರೆ ಎಂದು ಟೀಕೆಗೊಳಗಾಗಿದ್ದ ಸಿದ್ದರಾಮಯ್ಯನವರೇ ತಮ್ಮ ಕಡೆಯ ಬಜೆಟ್‍ನಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಎಂದು ಪ್ರಕಟಿಸಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಶೈಕ್ಷಣಿಕ ವರ್ಷದ ಕೊನೆ ಬಂದಿದ್ದರಿಂದ ಅದು ಜಾರಿಯಾಗುವ ಸಂದರ್ಭವಿರಲಿಲ್ಲ. ‘ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳೂ ಮುಂದುವರೆಯುತ್ತವೆ’ ಎಂದು ಪ್ರಕಟಿಸಿದ್ದರೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಮಾತ್ರ ಆಗಲಿಲ್ಲ.
ರಾಜ್ಯದ 19.6 ಲಕ್ಷ ಮಕ್ಕಳಿಗೆ ಹಿಂದಿನಿಂದಲೂ 650 ಕೋಟಿ ರೂ.ಗಳ ಸರ್ಕಾರೀ ಅನುದಾನದಿಂದ ರಿಯಾಯಿತಿ ದರದ ಬಸ್‍ಪಾಸ್ ನೀಡಲಾಗುತ್ತಿತ್ತು ಮತ್ತು ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲಾಗುತ್ತಿತ್ತು. ಅದಕ್ಕೆ ಇನ್ನೂ 836 ಕೋಟಿ ರೂ.ಗಳನ್ನು ಸೇರಿಸಿದ್ದರೆ, ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಿದಂತಾಗುತ್ತಿತ್ತು. ಅದನ್ನೇ ಸಿದ್ದರಾಮಯ್ಯವರು ಪ್ರಕಟಿಸಿದ್ದದ್ದು. ಆದರೆ, ಸಾರಿಗೆ ನಿಗಮಗಳಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿಯೇ ಇದಕ್ಕೆ 1900 ಕೋಟಿ ರೂಗಳು ಬೇಕು ಇತ್ಯಾದಿ ಅಸಂಬದ್ಧ ಹೇಳಿಕೆಗಳು ಬಂದವು. ಕುಮಾರಸ್ವಾಮಿಯವರು ಒಂದಷ್ಟು ಕಾಲ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಎಳೆದರು. ನಂತರ, ಕೊಡುವುದೇ ಇಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕಿಳಿದವು. ಅವೆಲ್ಲಾ ಆದ ಮೇಲೆ ಸರ್ಕಾರೀ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್‍ಪಾಸ್ ನೀಡಲಾಗುವುದು ಎಂದು ಸ್ವತಃ ಸಿಎಂ ರಾಮನಗರದ ಸಭೆಯೊಂದರಲ್ಲಿ ಪ್ರಕಟಿಸಿದರು. ರಾಜ್ಯದ ಎಷ್ಟೋ ಕಡೆ ಸರ್ಕಾರೀ ವ್ಯವಸ್ಥೆಯಲ್ಲಿ ಓದಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದ್ದು, ಅನುದಾನಿತವೋ ಖಾಸಗಿ ಸಂಸ್ಥೆಯನ್ನೋ ಪೋಷಕರು ನೋಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅಂತಿಮವಾಗಿ ಕುಮಾರಸ್ವಾಮಿಯವರ ನಿರ್ಧಾರವು ಭಾಗಶಃ ಕ್ರೆಡಿಟ್‍ಅನ್ನು ಸಹಾ ನೀಡದೇ, ಜಾರಿಯಾಗುವ ಹಂತದಲ್ಲಿದೆ.
ಇಂಥದ್ದೇ ಇನ್ನೊಂದು ಸಮಸ್ಯೆ ಗುತ್ತಿಗೆ ನೌಕರರ ವಿಚಾರದಲ್ಲಿ ಆಗುತ್ತಿದೆ. ಎಲ್ಲಾ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರವು ರಚನೆಯಾಗಿದೆ; ಇರುವ ಭದ್ರತೆಯನ್ನೂ ಕಿತ್ತುಹಾಕುವ ಕೆಲಸ ಹಲವು ಇಲಾಖೆಗಳಲ್ಲಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಯವರ ಕೈಯ್ಯಲ್ಲೇ ಇರುವ ಇಂಧನ ಇಲಾಖೆಗೆ ಸೇರಿದ ಕೆಪಿಟಿಸಿಎಲ್‍ನಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕಲಾಗುತ್ತಿದೆ. ಅದರಲ್ಲೂ ಜೆಸ್ಕಾಂನ ವ್ಯಾಪ್ತಿಯಲ್ಲಿ ಒಬ್ಬ ಗುತ್ತಿಗೆ ನೌಕರರೂ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಖಜಾನೆ-2 ಎಂಬ ತಂತ್ರಾಂಶ ವಿಧಾನದ ಕಾರಣದಿಂದ ಡಾಟಾ ಎಂಟ್ರಿ ಆಪರೇಟರ್‍ಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಶುಪಾಲನಾ ಇಲಾಖೆಯ ಗ್ರೂಪ್ ಡಿ ನೌಕರರಲ್ಲಿ 650 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟವು ಹೋರಾಟ ಮಾಡಿ, ಸ್ವತಃ ಮುಖ್ಯಮಂತ್ರಿಯವರನ್ನೇ ಭೇಟಿಯಾದರೂ, ಸ್ಪಷ್ಟ ಕ್ರಮ ತೆಗೆದುಕೊಳ್ಳದೇ ಎಚ್‍ಡಿಕೆ ನುಣುಚಿಕೊಂಡಿದ್ದಾರೆ. ಒಕ್ಕೂಟದ ಪದಾಧಿಕಾರಿಗಳ ಪ್ರಕಾರ ಸುಮಾರು 30,000 ಗುತ್ತಿಗೆ ನೌಕರರಿಗೆ 4-6 ತಿಂಗಳಿಂದ ಸಂಬಳವೇ ಇಲ್ಲ. ಇದರ ಕುರಿತೂ ಯಾವ ನಿರ್ದಿಷ್ಟ ಕ್ರಮವನ್ನು ಪ್ರಕಟಿಸಿಲ್ಲ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಭರವಸೆಯದ್ದೂ ಇದೇ ಪಾಡು. ಚೀನಾದೊಂದಿಗೆ ಸ್ಪರ್ಧೆಯೂ ಸೇರಿ ಅವರ ಯೋಜನೆಗಳಿಂದ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಬಜೆಟ್‍ನಲ್ಲಿ ಘೋಷಿಸಿದರು. ಆದರೆ, ಇದುವರೆಗಿನ ಇತಿಹಾಸ ನೋಡಿದರೆ, 2 ಲಕ್ಷ ಉದ್ಯೋಗಗಳಿಗಿಂತ ಹೆಚ್ಚಿನ ಸಾಧ್ಯತೆ ಇಲ್ಲ. ಅದಕ್ಕಿಂತ ತುಂಬಾ ಮೇಲು ಪದರದ ಒಂದು ಕ್ರಮವನ್ನೂ ಎಚ್‍ಡಿಕೆ ಪ್ರಕಟಿಸಿದರು. ಅದೆಂದರೆ, ತಮ್ಮ ಗೃಹ ಕಚೇರಿಯಲ್ಲೇ ಉದ್ಯೋಗ ಕೊಡಿಸುವುದು. ಅದೇ ಒಂದು ಉದ್ಯೋಗ ಮೇಳದ ಥರಾ ಆಗುತ್ತದೆ ಎಂತಲೂ ಪ್ರಕಟಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂಬ ಕಾರಣಕ್ಕೆ ಕೆಲವು ಕಂಪೆನಿಗಳು ಆಗಾಗ್ಗೆ ಕೆಲವು ಉದ್ಯೋಗಗಳನ್ನು ನೀಡಬಹುದಾದರೂ, ರಾಜ್ಯದ ಪ್ರತಿ ಮೂಲೆಯಲ್ಲೂ ಉದ್ಯೋಗ ಸ್ಥಳೀಯವಾಗಿಯೇ, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸೃಷ್ಟಿಯಾಗಬೇಕು ಎಂಬುದು ತಿಳಿಯದಷ್ಟು ಮುಖ್ಯಮಂತ್ರಿ ಅಮಾಯಕರೇ ಎಂಬ ಪ್ರಶ್ನೆ ಏಳುತ್ತದೆ.
ಉದ್ಯೋಗ ಸೃಷ್ಟಿಗೆ ಬೇಕಿರುವುದು ಹಣ ಎಂದು ತಿಳಿದಿರುವುದರಲ್ಲೇ ಒಂದು ದಡ್ಡತನ ಅಡಗಿದೆ. ಹಾಗಾಗಿಯೇ ಹೆಚ್ಚೆಚ್ಚು ಹೂಡಿಕೆ ಆಗಬೇಕು ಎಂದು ಸರ್ಕಾರಗಳು ಅನಗತ್ಯವಾಗಿ ಬೃಹತ್ ಕಂಪೆನಿಗಳಿಗೆ ರಿಯಾಯಿತಿ ನೀಡುತ್ತಿರುತ್ತವೆ. ಹಣದ ಅಗತ್ಯವಿರುವುದು ನಿಜವಾದರೂ, ಅದಕ್ಕಿಂತ ಮುಖ್ಯವಾದುದೆಂದರೆ ಉದ್ಯೋಗ ಸೃಷ್ಟಿಯ ನೀತಿ ಮತ್ತು ಅದನ್ನು ಆಗಮಾಡಿಸುವ ಯಂತ್ರಾಂಗ. ಅದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನೇನೂ ಕೈಗೊಳ್ಳದಿದ್ದರೆ, ಕುಮಾರಸ್ವಾಮಿಯವರಿಗೆ ಸಿಗಬಹುದಾದಷ್ಟು ಸಮಯದಲ್ಲಿ ಪರಿಣಾಮಕಾರಿಯಾದ ಏನನ್ನೂ ಮಾಡಿದಂತಾಗುವುದಿಲ್ಲ. ರೈತರ ಸಾಲಮನ್ನಾದ ವಿಚಾರಕ್ಕಿಂತಲೂ ಮಹತ್ವದ ಸಂಗತಿಗಳು ಇವಾಗಿವೆ. ಆ ಕಡೆಗೆ ಗಮನ ಹರಿಸದೇ, ಹೊಸ ತಲೆಮಾರಿನ ಯುವಜನರು ಮತ್ತಷ್ಟು ಸಿನಿಕತನಕ್ಕೆ, ಹತಾಶೆಗೆ ಒಳಗಾದರೆ ಅದರಿಂದ ಜೆಡಿಎಸ್‍ಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಅಷ್ಟು ಮುಖ್ಯವಲ್ಲ; ರಾಜ್ಯಕ್ಕಂತೂ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...