Homeಅಂಕಣಗಳುಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ.....

ಸ್ವಚ್ಛ ಭಾರತ: ಎಲ್ಲರೂ ಉತ್ತರದಾಯಿಗಳೇ…..

- Advertisement -
- Advertisement -

ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ ಹೊಗಳಿದವರೂ ಇದ್ದರು; ಆಡಿಕೊಂಡವರೂ ಇದ್ದರು. ಮೋದಿಯ ಪರ ಅಥವಾ ವಿರುದ್ಧ ನಿಲ್ಲದೇ ಸ್ವಚ್ಛತೆಯ ಪ್ರಶ್ನೆಯನ್ನು ಪಕ್ಷಾತೀತವಾಗಿ ನೋಡೋಣ. ನಗರೀಕರಣ ಹೆಚ್ಚಾದಂತೆಲ್ಲಾ ಕಸದ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಗ್ರಾಮೀಣ ಭಾಗದಲ್ಲೂ ಬಯಲೇ ಶೌಚಾಲಯವಾಗಿರುವ ಕೋಟ್ಯಂತರ ಕುಟುಂಬಗಳು ಇಂದಿಗೂ ಇವೆ. ಹಾಗಾಗಿ ದೇಶಕ್ಕೆ ದೇಶವೇ ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಷಯ ಇದು. ಕಸವೆಂಬುದು ನೈರ್ಮಲ್ಯದ, ಆರೋಗ್ಯದ, ಘನತೆಯ ಜೀವನದ, ನಾಗರಿಕ ಶಿಸ್ತಿನ ಜೊತೆ ತಳುಕು ಹಾಕಿಕೊಂಡಿರುವ ಸಂಗತಿ. ತೀರಾ ಇತ್ತೀಚೆಗೆ ಇದು ಹಣತರುವ ಬಾಬ್ತಾಗಿಯೂ ಕಂಡು, ಅದಕ್ಕಾಗಿ ಏಜೆನ್ಸಿಗಳು ಹುಟ್ಟಿಕೊಂಡಿವೆ. ಕಸ ತೆಗೆಯಲು ಜನರಿಂದ ತೆರಿಗೆಯನ್ನೂ ಸಂಗ್ರಹಿಸಲಾಗುತ್ತಿದೆ. ಇಷ್ಟಾಗಿಯೂ ನಮ್ಮ ಸರ್ಕಾರಗಳು ಇದನ್ನು ಏಕೆ ನಿಭಾಯಿಸಲಾಗುತ್ತಿಲ್ಲ?
‘ದೆಹಲಿಯ ಲೆ.ಗವರ್ನರ್ ಮನೆ ಮುಂದೆ ಕಸ ಸುರಿಯಿರಿ’
ಇದನ್ನು ಹೇಳಿದ್ದು ಸುಪ್ರೀಂ ಕೋರ್ಟು. ಹೌದು ಮೂರು ದಿನದ ಕೆಳಗೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಮೂರ್ತಿಗಳು ‘ಕಸವನ್ನು ತೆಗೆದುಕೊಂಡು ಹೋಗಿ ರಾಜ್‍ನಿವಾಸ್ ಮಾರ್ಗ್‍ದಲ್ಲಿ ಸುರಿಯಿರಿ’ ಎಂದು ತೆರೆದ ಕೋರ್ಟಿನಲ್ಲೇ ಹೇಳಿದರು. ಅವರು ಲೆಫ್ಟಿನೆಂಟ್ ಗವರ್ನರ್ ಮನೆಯ ಕುರಿತೇ ಮಾತಾಡುತ್ತಿದ್ದಾರೆಂದು ಗೊತ್ತಾಗಿ ಕೋರ್ಟಿನಲ್ಲಿದ್ದವರು ಅವಾಕ್ಕಾದರು. ಕಾರಣ ಇಷ್ಟೇ. ದಕ್ಷಿಣ ದೆಹಲಿಯ ಮುನಿಸಿಪಾಲಿಟಿ (ಎಸ್‍ಡಿಎಂಸಿ)ಯ ವ್ಯಾಪ್ತಿಯಲ್ಲಿ ಪ್ರತಿದಿನ 3,600 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 1,800 ಟನ್‍ಗಳನ್ನು ಸೋನಿಯಾ ವಿಹಾರ್ ಎಂಬ ಬಡಜನರೇ ಹೆಚ್ಚು ವಾಸಿಸುವ ಕಡೆ ಸುರಿಯಲಾಗುತ್ತಿದೆ. ಅಲ್ಲಿನ ನಿವಾಸಿಗಳು ನಾನಾ ಕೋರ್ಟ್‍ಗಳನ್ನು ಸುತ್ತಾಡಿ, ಅಂತಿಮವಾಗಿ ಸುಪ್ರೀಂಕೋರ್ಟಿನ ಕದ ತಟ್ಟಿದಾಗ, ಮುನಿಸಿಪಾಲಿಟಿಯ ಪರ ವಾದ ಮಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ‘ಇದು ಅನಿವಾರ್ಯ, ಅವರು ಪ್ರಶ್ನಿಸಬಾರದು’ ಎಂದಿದ್ದಾರೆ. ಆಗ ಸಿಟ್ಟಿಗೆದ್ದ ನ್ಯಾಯಮೂರ್ತಿಗಳ ಪ್ರತಿಕ್ರಿಯೆ ಇದಾಗಿತ್ತು.
ಈ ಮುನಿಸಿಪಾಲಿಟಿಯಲ್ಲಿ ಬಿಜೆಪಿ ಪಕ್ಷವು ಅಧಿಕಾರದಲ್ಲಿದೆ. ತಾವು ಈಗಷ್ಟೇ ಅಧಿಕಾರಕ್ಕೆ ಬಂದೆವು ಎಂದು ಹೇಳುವ ಹಾಗಿಲ್ಲ; ಇದರ ಹಿಂದಿನ ಅವಧಿಯಲ್ಲೂ ಅವರೇ ಇದ್ದರು. ಅದು ದೆಹಲಿ. ನರೇಂದ್ರ ಮೋದಿಯವರು ತಮ್ಮ ಕೈಯ್ಯಾರೆ ಸ್ವಚ್ಛ ಭಾರತ ಆಂದೋಲನವನ್ನು ಉದ್ಘಾಟಿಸಿದ ದೇಶದ ರಾಜಧಾನಿ. ಈಗ ಹೇಳಿ? ಏನು ಮಾಡುವುದು? ಮೋದಿಯವರು ಸ್ವಚ್ಛತೆಗಾಗಿ ಇದ್ದ ಅನುದಾನವನ್ನು ಕಡಿಮೆ ಮಾಡಿ, ಅದರಲ್ಲೂ ಹೆಚ್ಚಿನ ಹಣವನ್ನು ತಮ್ಮ ಜಾಹೀರಾತಿಗಾಗಿ ಬಳಸಿದರು ಎಂಬ ಆರೋಪ ನಿಜವಾಯಿತಲ್ಲವೇ?
ಪ್ರಧಾನಿ ಏನೇ ಗಿಮಿಕ್ ಮಾಡಿದ್ದರೂ, ಅವರ ಚರಿಷ್ಮಾ ಈ ಅಭಿಯಾನದಿಂದ ಹೆಚ್ಚಾದರೂ ಅದನ್ನೆಲ್ಲಾ ದೊಡ್ಡ ವಿಚಾರ ಮಾಡುವುದು ಬೇಡ; ಸ್ವಚ್ಛತೆ ಹೆಚ್ಚಾಗಿದ್ದರೆ ಅಷ್ಟೇ ಸಾಕು. ಆಗಿದೆಯೆ? ಖಂಡಿತ ಇಲ್ಲ.

ಸಿದ್ದರಾಮಯ್ಯನವರಿಂದ ಪೌರಕಾರ್ಮಿಕರಿಗೆ ಒಳಿತಾಯಿತೇ?
ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ಆರಂಭದಲ್ಲೇ, ಗುತ್ತಿಗೆ ಪದ್ಧತಿಯ ವಿರುದ್ಧ ಸಂಪುಟದಲ್ಲಿ ಚರ್ಚೆಗಳಾದವು. ಆದರೆ, ಅದನ್ನು ತೆಗೆದುಹಾಕುವುದು ಸುಲಭವಾಗಿರಲಿಲ್ಲ. ಶೋಷಿತ ಸಮುದಾಯದ ಬಗ್ಗೆ ಕಾಳಜಿಯಿದ್ದ ಅವರು ಗುತ್ತಿಗೆ ಪೌರಕಾರ್ಮಿಕರನ್ನಾದರೂ ಖಾಯಂ ಮಾಡಿಕೊಳ್ಳೋಣವೆಂದು ತೀರ್ಮಾನಿಸಿದರು. ಅದೂ ಸಾಧ್ಯವಿಲ್ಲ ಎಂದು ಗೊತ್ತಾಯಿತು. ಇರುವವರನ್ನೇ ಖಾಯಂ ಮಾಡಿಕೊಳ್ಳುವುದು ಅಸಾಧ್ಯ ಎಂದಾದರೆ, ಹೊಸದಾಗಿ ನೇಮಕಾತಿ ಆರಂಭಿಸಿ ಇರುವವರಿಗೇ ಆ ಉದ್ಯೋಗ ಸಿಗುವ ಹಾಗೆ ನೇಮಕಾತಿ ನಿಯಮ ರೂಪಿಸಲಾಯಿತು. ಇದೊಂದು ಸಕಾರಾತ್ಮಕ ನಡೆಯಾಗಿತ್ತು. ಆದರೆ, ಇವತ್ತಿನವರೆಗೂ ಆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆಗ ಗುತ್ತಿಗೆ ಪೌರಕಾರ್ಮಿಕರ ಪರವಾಗಿ ಎರಡು ಮಹತ್ವದ ತೀರ್ಮಾನಗಳನ್ನು ಸಿದ್ದರಾಮಯ್ಯನವರು ತೆಗೆದುಕೊಂಡರು. ಒಂದು, ಅವರ ವೇತನವನ್ನು ಎರಡು ಪಟ್ಟು ಹೆಚ್ಚಿಸಿದರು; ಗುತ್ತಿಗೆದಾರರ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಗುತ್ತಿಗೆ ಪೌರಕಾರ್ಮಿಕರ ಅಕೌಂಟಿಗೇ ವೇತನ ಹೋಗಲಿ ಎಂದು ಆದೇಶಿಸಿದರು.
ಅದಾಗಿ, ಹಲವು ತಿಂಗಳಾದ ನಂತರ ಹೊಸ ಸರ್ಕಾರ ಬಂತು. ಸುಬ್ರಮಣಿ ಎಂಬ ಗುತ್ತಿಗೆ ಪೌರಕಾರ್ಮಿಕ ಬೆಂಗಳೂರಿನಲ್ಲೇ ಆತ್ಮಹತ್ಯೆ ಮಾಡಿಕೊಂಡರು. ಕಾರಣ ಏನು ಎಂದು ನೋಡಿದರೆ, 5 ತಿಂಗಳಿಂದ ಆತನ ಅಕೌಂಟಿಗೆ ವೇತನ ಬಂದಿರಲಿಲ್ಲ. ಅಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ, ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಿಂದಲೂ ವೇತನ ಪಾವತಿಯಾಗಿರಲಿಲ್ಲ. ಈ ಸುಬ್ರಮಣಿಯ ಆತ್ಮಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ, ದಲಿತ ಸಮುದಾಯಕ್ಕೆ ಸೇರಿದ ಮೇಯರ್ ಎಚ್ಚೆತ್ತುಕೊಂಡರು.
ಸಿದ್ದರಾಮಯ್ಯನವರಿಗೆ ಕಾಳಜಿ ಇರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ, ಹೇಗಾದರೂ ಪೌರಕಾರ್ಮಿಕರಿಗೆ ಒಳ್ಳೆಯದಾಗಲಿ ಎಂಬ ಭಾವನೆ ಇದ್ದುದರಿಂದಲೇ ಒಂದಾದ ಮೇಲೆ ಒಂದರಂತೆ ಕ್ರಮಗಳನ್ನು ತೆಗೆದುಕೊಂಡರು. ಆದರೆ ಆ ಭಾವನೆ ಮತ್ತು ಕ್ರಮಗಳು ಅಂತಿಮವಾಗಿ ಕಟ್ಟಕಡೆಯ ಸಮುದಾಯಕ್ಕೆ ಅನುಕೂಲ ಮಾಡಿಕೊಡಲು ಒಬ್ಬ ವ್ಯಕ್ತಿ ‘ಹುತಾತ್ಮ’ನಾಗಬೇಕಾಯಿತು. ಈ ಸದ್ಯ ಮೇಯರ್ ತೋರಿರುವ ಕಾಳಜಿಯೂ ಎಷ್ಟು ತಿಂಗಳ ಕಾಲ ವೇತನ ಪಾವತಿಯ ನಿರಂತರತೆಯಾಗಿ ಉಳಿದುಕೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಇದೂ ಸ್ವಚ್ಛ ಭಾರತಕ್ಕೆ ಸಂಬಂಧಿಸಿದ ವಿಷಯವೇ ಆಗಿದೆ.

ಮ್ಯಾನ್‍ಹೋಲ್ ಸಾವು ಮತ್ತು ಕುಮಾರಸ್ವಾಮಿ
ಈ ವಾರದಲ್ಲೇ ಶಿವಮೊಗ್ಗ ನಗರದ ಚರಂಡಿಯ ಮ್ಯಾನ್‍ಹೋಲ್‍ನಲ್ಲಿ ಇಳಿದ ಇಬ್ಬರು ಗುತ್ತಿಗೆ ನೌಕರರು ಸಾವನ್ನಪ್ಪಿದ್ದಾರೆ. ಎಷ್ಟೋ ಕಾಲದಿಂದ ಆಗುತ್ತಿರುವ ಈ ಸಾವುಗಳಿಗೆ ಈಗಷ್ಟೇ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ಹೇಗೆ ಹೊಣೆಗಾರರಾಗುತ್ತಾರೆ ಎಂದು ಕೇಳಬಹುದು. ಅವರೊಬ್ಬರೇ ಹೊಣೆಗಾರರಲ್ಲ. ಆದರೆ, ಪ್ರಾಣವನ್ನು ಪಣಕ್ಕೊಡ್ಡಿ ಸರ್ಕಾರೀ ಕೆಲಸಗಳನ್ನು ಸುಸೂತ್ರವಾಗಿ ಸಾಗಿಸುತ್ತಿರುವ ಸಾವಿರಾರು ನೌಕರರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂತೇಮರಳ್ಳಿಯಲ್ಲಿ ಚೆಸ್ಕಾಂ ನೌಕರನೊಬ್ಬ ಕೆಲಸದಲ್ಲಿದ್ದಾಗ ವಿದ್ಯುತ್ ತಗುಲಿ ತೀವ್ರ ಆಘಾತಕ್ಕೊಳಪಟ್ಟ ಮತ್ತು ಶರೀರ ಸುಟ್ಟಿತು. ಇವತ್ತಿನವರೆಗೂ ಒಂದು ರೂಪಾಯಿ ಪರಿಹಾರವೂ ಸಿಕ್ಕಿಲ್ಲ. ಇದೇ ವಾರದಲ್ಲಿ ಕುಮಾರಸ್ವಾಮಿಯವರ ಬೀಗರಾದ ಡಿ.ಸಿ.ತಮ್ಮಣ್ಣನವರ ಕ್ಷೇತ್ರದ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಕೆಲಸದ ಅವಧಿಯಲ್ಲೇ ಗುತ್ತಿಗೆ ನರ್ಸ್ ಒಬ್ಬರು ಅಸುನೀಗಿದರು. ಪರಿಹಾರವೆಲ್ಲಾ ದೂರದ ಮಾತು.
ಇಂತಹವರೆಲ್ಲರಿಗೂ ಸೇವಾಭದ್ರತೆ ಮತ್ತು ಸಮಾನವೇತನ ಕಲ್ಪಿಸುತ್ತೇನೆಂದು ಚುನಾವಣೆಗೆ ಮುಂಚೆ ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ‘ಇದೆಲ್ಲಾ ಅಷ್ಟು ಸುಲಭವಲ್ಲ; ಹಿಂದಿನ ಸರ್ಕಾರಗಳ ಅವಧಿಯಲ್ಲಿ ಏನೇನೋ ಆಗಿರುತ್ತದೆ, ಎಲ್ಲದಕ್ಕೂ ನಾನೇ ತಲೆಕೊಡಬೇಕಾ?’ ಎನ್ನುತ್ತಿದ್ದಾರೆ. ಹೀಗಿರುವಾಗ ಗುತ್ತಿಗೆ ಪೌರಕಾರ್ಮಿಕರಿಗೆ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಇವರಿಂದ ನ್ಯಾಯ ಸಿಗಬಹುದಾ?

ಬನ್ನಿ, ಕಸ ಬಾಚೋಣ
ಎಲ್ಲೆಂದರಲ್ಲಿ ಕಸ ಚೆಲ್ಲಾಡುವ ಪ್ರವೃತ್ತಿ ನಾಗರಿಕರಲ್ಲೂ ಸಾಕಷ್ಟಿದೆ. ಯಾವುದೇ ಪ್ರವಾಸಿ ತಾಣದಲ್ಲೂ ಗಲೀಜು ರಾಚುತ್ತದೆ. ಜಾತ್ರೆ, ಹಬ್ಬ, ರಾಜಕಾರಣಿಗಳ ಕಾರ್ಯಕ್ರಮಗಳು, ಸಂಘಟನೆಗಳು ನಡೆಸುವ ಪ್ರತಿಭಟನೆಗಳು, ಮದುವೆ ಇತ್ಯಾದಿ ಖಾಸಗಿ ಕಾರ್ಯಕ್ರಮಗಳು ಮುಗಿದ ನಂತರ ಕಸದ ರಾಶಿ ಇಟ್ಟಾಡುತ್ತದೆ. ಹಸಿ ಕಸ, ಒಣ ಕಸ ವಿಂಗಡಿಸಲು ಸೋಮಾರಿತನ ತೋರುವ ‘ನಾಗರಿಕರು’, ಮನೆಯಲ್ಲಿ ಶೌಚಾಲಯ ಕಟ್ಟಿಸಲು ಹಿಂಜರಿಯುವ ಹಳ್ಳಿಗರು ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದೇವೆ.
ತೋರಿಕೆಗೆ ಕಸ ಗುಡಿಸುವ ನಾಟಕವಾಡಿ, ಅದರ ಜಾಹೀರಾತಿಗೇ ಹೆಚ್ಚು ಹಣ ಖರ್ಚು ಮಾಡಿಸುವ ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರೂ ಕಸಕ್ಕೆ ಜವಾಬ್ದಾರರು. ಆದರೆ, ಕಸ ಬಳಿಯುವ ಜನರ ಬದುಕನ್ನು ಇನ್ನಷ್ಟು ಘನತೆಯುಳ್ಳದ್ದನ್ನಾಗಿ ಮಾಡುವ ಪರಿಣಾಮಕಾರಿ ಪ್ರಯತ್ನವಾದರೂ ಈ ಸಮಾಜದಲ್ಲಿ ಜಾರಿಯಾಗುತ್ತಿಲ್ಲ.
ಇನ್ನಾದರೂ ಕಸ ಬಳಿಯೋಣ; ಸ್ವಚ್ಛ ಭಾರತ ಕಟ್ಟೋಣ.

.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...