Homeಮುಖಪುಟಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

ಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

- Advertisement -
- Advertisement -

ಕರ್ನಾಟಕದಲ್ಲಿ ಪಕ್ಷದ ಸಾಮಥ್ರ್ಯಕ್ಕಿಂತಲೂ ವ್ಯಕ್ತಿಗತ ಚರಿಷ್ಮಾ ಮಾತ್ರ ಲೆಕ್ಕ ಹಾಕುವುದಾದರೆ ಕುಮಾರಸ್ವಾಮಿಯೇ ಜನಪ್ರಿಯ ನಾಯಕರಾಗಿದ್ದರು. ರೈತರ ಗಣನೀಯ ವಿಭಾಗ, ಮಾಸಾಶನ ಪಡೆಯುವ ವೃದ್ಧರು-ಮಹಿಳೆಯರು ಮತ್ತು ಯುವಕರ ಒಂದು ವಿಭಾಗದ ನಡುವೆ ಎಚ್‍ಡಿಕೆ ಬಗ್ಗೆ ವಿಶೇಷವಾದ ಅಭಿಮಾನವಿತ್ತು. ಹಾಗಾಗಿಯೇ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಮೂವರ ಜನಪ್ರಿಯತೆಯ ಕುರಿತು ಸಮೀಕ್ಷೆ ನಡೆದಾಗ, ಜೆಡಿಎಸ್ ಪಕ್ಷದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಮಾರಸ್ವಾಮಿಯ ಪರ ಒಲವು ಇರುತ್ತಿತ್ತು. ಮುಖ್ಯಮಂತ್ರಿಯಾದ ನಂತರ ಜೆಡಿಎಸ್ ಪಕ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡುವಾಗ ಅವರೂ ಇದನ್ನೇ ಹೇಳಿದರು. ‘ನಾನು ಹೋದ ಕಡೆಯಲ್ಲೆಲ್ಲಾ ಜನರು ತೋರುವ ಅಭಿಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಮಾತ್ರ ಅವರು ಏಕೆ ಓಟು ಕೊಡುವುದಿಲ್ಲ?’.
ಜೆಡಿಎಸ್ ಪಕ್ಷದ ಸಂಘಟನೆಗೆ ಯಾವ ರೀತಿಯ ಒತ್ತೂ ಕೊಡದೇ, ಪಕ್ಷದಲ್ಲಿ ಸ್ವತಂತ್ರವಾಗಿ ಆಲೋಚಿಸಿ ನಾಯಕರಾಗುವ ತಮ್ಮ ಕುಟುಂಬೇತರ ವ್ಯಕ್ತಿಗಳಿಗೆ ಅವಕಾಶ ಕೊಡದೇ ಪಕ್ಷ ಬೆಳೆಯಬೇಕು ಎಂದರೆ ಹೇಗೆ ಬೆಳೆಯಲು ಸಾಧ್ಯ? ಜೆಡಿಎಸ್‍ನ ಶಕ್ತಿ ಮತ್ತು ಮಿತಿ ಎರಡೂ ಸಹಾ ದೇವೇಗೌಡರ ಕುಟುಂಬವೇ ಆಗಿದೆ. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ‘ಮೂರನೇ’ ಶಕ್ತಿಗಿರುವ ಸಾಧ್ಯತೆಯ ಪ್ರಮಾಣವನ್ನು ಅವರು ಇವತ್ತಿಗೂ ಸರಿಯಾಗಿ ಮನಗಂಡಂತಿಲ್ಲ. ಹಲವು ತಪ್ಪು ಹೆಜ್ಜೆಗಳ ನಂತರವೂ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿಯವರ ಜನಪ್ರಿಯತೆಯ ಕಾರಣಗಳಾದರೂ ಆ ಕುಟುಂಬಕ್ಕೆ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಎಡವಟ್ಟುಗಳನ್ನು ಪದೇ ಪದೇ ಮಾಡಿಕೊಂಡು ‘ಮೂರನೇ ಸ್ಥಾನದಲ್ಲಿರುವ’ ಶಕ್ತಿಯಾಗಿಯೇ ಜೆಡಿಎಸ್ ಉಳಿದುಕೊಂಡಿದೆ.
ಈ ಸಾರಿ ಕುಮಾರಸ್ವಾಮಿಯವರು ಮಾಡುತ್ತಿರುವ ಒಂದು ಮುಖ್ಯ ಎಡವಟ್ಟೆಂದರೆ, ಸಕಾರಾತ್ಮಕ ಅಜೆಂಡಾದೊಂದಿಗೆ ತಮ್ಮ ವೋಟ್ ಬೇಸ್‍ಅನ್ನು ವಿಸ್ತರಿಸಿಕೊಳ್ಳದೇ ಇರುವುದು. ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್‍ಗಿರುವ ಅವಕಾಶವೇ ಹೆಚ್ಚು. ಹಳೆಯ ವೋಟ್‍ಬೇಸ್ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಯಾರು ಯುವಜನರನ್ನು ಹೆಚ್ಚು ತಮ್ಮೆಡೆಗೆ ಸೆಳೆಯುತ್ತಾರೋ ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸುವುದು ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಕುರಿತು ಅಪ್‍ಡೇಟೆಡ್ ಮುನ್ನೋಟದೊಂದಿಗೆ ಮತ್ತು ಆ ಮುನ್ನೋಟದ ಕನಸನ್ನು ಜಾರಿ ಮಾಡಲು ಖಚಿತ ಹೆಜ್ಜೆಗಳನ್ನಿಡುವುದರೊಂದಿಗೆ ಸಾಧಿಸಬೇಕಾದ ಅಂಶ ಅದಾಗಿದೆ.
ಹಾಗೆ ನೋಡಿದರೆ, ಜೆಡಿಎಸ್‍ನ ಚುನಾವಣಾ ಭರವಸೆಗಳು ಯುವಕರ ಪರವಾಗಿಯೇ ಇದ್ದವು. ಮೋದಿ ಕೋಟಿ ಉದ್ಯೋಗದ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದರಿಂದ, ಈ ಸಾರಿ ಬಿಜೆಪಿಯು ಯಾವ ಸಂಖ್ಯೆಯನ್ನೂ ಹೇಳಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೆರಡೂ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಅದನ್ನು ಮತ್ತಷ್ಟು ನಿರ್ದಿಷ್ಟವಾಗಿ ಮುಂದಿಟ್ಟಿದ್ದು ಜೆಡಿಎಸ್. ಪ್ರಣಾಳಿಕೆ, ಪೂರ್ಣಪುಟದ ಜಾಹೀರಾತುಗಳಿಂದ ಹಿಡಿದು, ಈಚೆಗೆ ಮಂಡಿಸಿದ ಬಜೆಟ್‍ನವರೆಗೆ ಕುಮಾರಸ್ವಾಮಿ ಹೊಸ ಅಂಶಗಳಿಗೆ ತೆರೆದುಕೊಂಡಿದ್ದು ಸ್ಪಷ್ಟವಾಗಿತ್ತು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆಂದು ಪ್ರಕಟಿಸಿದ್ದರಿಂದ ಹಿಡಿದು, ‘ಚೀನಾದೊಂದಿಗೆ ಸ್ಪರ್ಧೆ’ ಎಂದು ಹೇಳಿದ್ದರತನಕ ವಿಶೇಷತೆಗಳು ಗಮನ ಸೆಳೆದಿದ್ದೆವು. ನೀವು ಇಲ್ಲಿಯೇ ಬಂದು ತಯಾರು ಮಾಡಿ, ನಿಮ್ಮ ದೇಶಕ್ಕೆ ಲಾಭ ಕೊಂಡೊಯ್ಯಿ ಎಂದು ಹೇಳುವ ಮೋದಿಯವರ ಮೇಕ್‍ಇನ್‍ಇಂಡಿಯಾ ಯೋಜನೆ ಒಂದು ಕಡೆಗೆ ಇದ್ದರೆ, ನಾವು ಇಲ್ಲಿಯೇ ಉತ್ಪಾದಿಸಿ ಚೀನಾದೊಂದಿಗೂ ಸ್ಪರ್ಧಿಸುತ್ತೇವೆ ಎಂದು ಹೇಳುವ ಧೈರ್ಯ ಇನ್ನೊಂದೆಡೆ. ಎಚ್‍ಡಿಕೆ ಸಹಾ ಇಸ್ರೇಲ್ ಕೃಷಿ ಎಂಬ ಈ ನೆಲಕ್ಕೆ ಹೊಂದದ ಕೃಷಿಯನ್ನು ಇಲ್ಲಿ ಅಳವಡಿಸಬೇಕೆಂದು ಹೇಳಿದ್ದರೂ, ಪಾಳೇಕರ್ ಮಾದರಿಯ ಸಹಜ ಕೃಷಿಯ ವಿಚಾರ ಗಮನಕ್ಕೆ ಬಂದಾಗ ಅದರತ್ತಲೂ ಗಮನ ಹರಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ 10-15 ವರ್ಷಗಳಿಗೂ ಹೆಚ್ಚು ಕಾಲ ಅಡಿಗೆ ಮಾಡಿ, ಅಲ್ಲಿನ ಮಕ್ಕಳನ್ನು ಸಲಹಿ ದುಡಿದಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿ ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇರನೇಮಕಾತಿಯು ವಾಸ್ತವದಲ್ಲಿ ಎಚ್.ಆಂಜನೇಯ ಅವರ ಹಗರಣವಾಗಿತ್ತು. ಹಾಗಿದ್ದರೂ, ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಲು ಎಚ್‍ಡಿಕೆ ಸೂಚಿಸಿದ್ದರು. ಕೆಲಸ ಹೋಗಿಯೇಬಿಟ್ಟಿತು ಎಂದಾದರೂ ಬಿಡದೇ ಹೋರಾಡಿದವರಿಗೆ ನಿಜಕ್ಕೂ ಜೀವ ವಾಪಸ್ಸು ಬಂದಂತಾಗಿತ್ತು.
2006ರಲ್ಲಿ ಸಿಕ್ಕ ಅವಕಾಶದಲ್ಲೂ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ ಎಚ್‍ಡಿಕೆ ಈ ಸಾರಿಯೂ ಅದೇ ರೀತಿ ಮಾಡಬಹುದು ಎಂಬ ಸೂಚನೆಗಳು ಕಾಣುತ್ತಿದ್ದ ಹೊತ್ತಿನಲ್ಲೇ ಎಡವಟ್ಟುಗಳೂ ಆರಂಭವಾಗಿವೆ. ಅದರ ಉದ್ಘಾಟನೆ ಆಗಿದ್ದು, ಶಾಲಾಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸಿದ್ದು. ಶೋಷಿತ ಸಮುದಾಯಗಳ ಪರವಾಗಿ ಪಕ್ಷಪಾತ ಎಣಿಸುತ್ತಾರೆ ಎಂದು ಟೀಕೆಗೊಳಗಾಗಿದ್ದ ಸಿದ್ದರಾಮಯ್ಯನವರೇ ತಮ್ಮ ಕಡೆಯ ಬಜೆಟ್‍ನಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಎಂದು ಪ್ರಕಟಿಸಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಶೈಕ್ಷಣಿಕ ವರ್ಷದ ಕೊನೆ ಬಂದಿದ್ದರಿಂದ ಅದು ಜಾರಿಯಾಗುವ ಸಂದರ್ಭವಿರಲಿಲ್ಲ. ‘ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳೂ ಮುಂದುವರೆಯುತ್ತವೆ’ ಎಂದು ಪ್ರಕಟಿಸಿದ್ದರೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಮಾತ್ರ ಆಗಲಿಲ್ಲ.
ರಾಜ್ಯದ 19.6 ಲಕ್ಷ ಮಕ್ಕಳಿಗೆ ಹಿಂದಿನಿಂದಲೂ 650 ಕೋಟಿ ರೂ.ಗಳ ಸರ್ಕಾರೀ ಅನುದಾನದಿಂದ ರಿಯಾಯಿತಿ ದರದ ಬಸ್‍ಪಾಸ್ ನೀಡಲಾಗುತ್ತಿತ್ತು ಮತ್ತು ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲಾಗುತ್ತಿತ್ತು. ಅದಕ್ಕೆ ಇನ್ನೂ 836 ಕೋಟಿ ರೂ.ಗಳನ್ನು ಸೇರಿಸಿದ್ದರೆ, ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಿದಂತಾಗುತ್ತಿತ್ತು. ಅದನ್ನೇ ಸಿದ್ದರಾಮಯ್ಯವರು ಪ್ರಕಟಿಸಿದ್ದದ್ದು. ಆದರೆ, ಸಾರಿಗೆ ನಿಗಮಗಳಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿಯೇ ಇದಕ್ಕೆ 1900 ಕೋಟಿ ರೂಗಳು ಬೇಕು ಇತ್ಯಾದಿ ಅಸಂಬದ್ಧ ಹೇಳಿಕೆಗಳು ಬಂದವು. ಕುಮಾರಸ್ವಾಮಿಯವರು ಒಂದಷ್ಟು ಕಾಲ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಎಳೆದರು. ನಂತರ, ಕೊಡುವುದೇ ಇಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕಿಳಿದವು. ಅವೆಲ್ಲಾ ಆದ ಮೇಲೆ ಸರ್ಕಾರೀ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್‍ಪಾಸ್ ನೀಡಲಾಗುವುದು ಎಂದು ಸ್ವತಃ ಸಿಎಂ ರಾಮನಗರದ ಸಭೆಯೊಂದರಲ್ಲಿ ಪ್ರಕಟಿಸಿದರು. ರಾಜ್ಯದ ಎಷ್ಟೋ ಕಡೆ ಸರ್ಕಾರೀ ವ್ಯವಸ್ಥೆಯಲ್ಲಿ ಓದಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದ್ದು, ಅನುದಾನಿತವೋ ಖಾಸಗಿ ಸಂಸ್ಥೆಯನ್ನೋ ಪೋಷಕರು ನೋಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅಂತಿಮವಾಗಿ ಕುಮಾರಸ್ವಾಮಿಯವರ ನಿರ್ಧಾರವು ಭಾಗಶಃ ಕ್ರೆಡಿಟ್‍ಅನ್ನು ಸಹಾ ನೀಡದೇ, ಜಾರಿಯಾಗುವ ಹಂತದಲ್ಲಿದೆ.
ಇಂಥದ್ದೇ ಇನ್ನೊಂದು ಸಮಸ್ಯೆ ಗುತ್ತಿಗೆ ನೌಕರರ ವಿಚಾರದಲ್ಲಿ ಆಗುತ್ತಿದೆ. ಎಲ್ಲಾ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರವು ರಚನೆಯಾಗಿದೆ; ಇರುವ ಭದ್ರತೆಯನ್ನೂ ಕಿತ್ತುಹಾಕುವ ಕೆಲಸ ಹಲವು ಇಲಾಖೆಗಳಲ್ಲಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಯವರ ಕೈಯ್ಯಲ್ಲೇ ಇರುವ ಇಂಧನ ಇಲಾಖೆಗೆ ಸೇರಿದ ಕೆಪಿಟಿಸಿಎಲ್‍ನಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕಲಾಗುತ್ತಿದೆ. ಅದರಲ್ಲೂ ಜೆಸ್ಕಾಂನ ವ್ಯಾಪ್ತಿಯಲ್ಲಿ ಒಬ್ಬ ಗುತ್ತಿಗೆ ನೌಕರರೂ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಖಜಾನೆ-2 ಎಂಬ ತಂತ್ರಾಂಶ ವಿಧಾನದ ಕಾರಣದಿಂದ ಡಾಟಾ ಎಂಟ್ರಿ ಆಪರೇಟರ್‍ಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಶುಪಾಲನಾ ಇಲಾಖೆಯ ಗ್ರೂಪ್ ಡಿ ನೌಕರರಲ್ಲಿ 650 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟವು ಹೋರಾಟ ಮಾಡಿ, ಸ್ವತಃ ಮುಖ್ಯಮಂತ್ರಿಯವರನ್ನೇ ಭೇಟಿಯಾದರೂ, ಸ್ಪಷ್ಟ ಕ್ರಮ ತೆಗೆದುಕೊಳ್ಳದೇ ಎಚ್‍ಡಿಕೆ ನುಣುಚಿಕೊಂಡಿದ್ದಾರೆ. ಒಕ್ಕೂಟದ ಪದಾಧಿಕಾರಿಗಳ ಪ್ರಕಾರ ಸುಮಾರು 30,000 ಗುತ್ತಿಗೆ ನೌಕರರಿಗೆ 4-6 ತಿಂಗಳಿಂದ ಸಂಬಳವೇ ಇಲ್ಲ. ಇದರ ಕುರಿತೂ ಯಾವ ನಿರ್ದಿಷ್ಟ ಕ್ರಮವನ್ನು ಪ್ರಕಟಿಸಿಲ್ಲ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಭರವಸೆಯದ್ದೂ ಇದೇ ಪಾಡು. ಚೀನಾದೊಂದಿಗೆ ಸ್ಪರ್ಧೆಯೂ ಸೇರಿ ಅವರ ಯೋಜನೆಗಳಿಂದ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಬಜೆಟ್‍ನಲ್ಲಿ ಘೋಷಿಸಿದರು. ಆದರೆ, ಇದುವರೆಗಿನ ಇತಿಹಾಸ ನೋಡಿದರೆ, 2 ಲಕ್ಷ ಉದ್ಯೋಗಗಳಿಗಿಂತ ಹೆಚ್ಚಿನ ಸಾಧ್ಯತೆ ಇಲ್ಲ. ಅದಕ್ಕಿಂತ ತುಂಬಾ ಮೇಲು ಪದರದ ಒಂದು ಕ್ರಮವನ್ನೂ ಎಚ್‍ಡಿಕೆ ಪ್ರಕಟಿಸಿದರು. ಅದೆಂದರೆ, ತಮ್ಮ ಗೃಹ ಕಚೇರಿಯಲ್ಲೇ ಉದ್ಯೋಗ ಕೊಡಿಸುವುದು. ಅದೇ ಒಂದು ಉದ್ಯೋಗ ಮೇಳದ ಥರಾ ಆಗುತ್ತದೆ ಎಂತಲೂ ಪ್ರಕಟಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂಬ ಕಾರಣಕ್ಕೆ ಕೆಲವು ಕಂಪೆನಿಗಳು ಆಗಾಗ್ಗೆ ಕೆಲವು ಉದ್ಯೋಗಗಳನ್ನು ನೀಡಬಹುದಾದರೂ, ರಾಜ್ಯದ ಪ್ರತಿ ಮೂಲೆಯಲ್ಲೂ ಉದ್ಯೋಗ ಸ್ಥಳೀಯವಾಗಿಯೇ, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸೃಷ್ಟಿಯಾಗಬೇಕು ಎಂಬುದು ತಿಳಿಯದಷ್ಟು ಮುಖ್ಯಮಂತ್ರಿ ಅಮಾಯಕರೇ ಎಂಬ ಪ್ರಶ್ನೆ ಏಳುತ್ತದೆ.
ಉದ್ಯೋಗ ಸೃಷ್ಟಿಗೆ ಬೇಕಿರುವುದು ಹಣ ಎಂದು ತಿಳಿದಿರುವುದರಲ್ಲೇ ಒಂದು ದಡ್ಡತನ ಅಡಗಿದೆ. ಹಾಗಾಗಿಯೇ ಹೆಚ್ಚೆಚ್ಚು ಹೂಡಿಕೆ ಆಗಬೇಕು ಎಂದು ಸರ್ಕಾರಗಳು ಅನಗತ್ಯವಾಗಿ ಬೃಹತ್ ಕಂಪೆನಿಗಳಿಗೆ ರಿಯಾಯಿತಿ ನೀಡುತ್ತಿರುತ್ತವೆ. ಹಣದ ಅಗತ್ಯವಿರುವುದು ನಿಜವಾದರೂ, ಅದಕ್ಕಿಂತ ಮುಖ್ಯವಾದುದೆಂದರೆ ಉದ್ಯೋಗ ಸೃಷ್ಟಿಯ ನೀತಿ ಮತ್ತು ಅದನ್ನು ಆಗಮಾಡಿಸುವ ಯಂತ್ರಾಂಗ. ಅದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನೇನೂ ಕೈಗೊಳ್ಳದಿದ್ದರೆ, ಕುಮಾರಸ್ವಾಮಿಯವರಿಗೆ ಸಿಗಬಹುದಾದಷ್ಟು ಸಮಯದಲ್ಲಿ ಪರಿಣಾಮಕಾರಿಯಾದ ಏನನ್ನೂ ಮಾಡಿದಂತಾಗುವುದಿಲ್ಲ. ರೈತರ ಸಾಲಮನ್ನಾದ ವಿಚಾರಕ್ಕಿಂತಲೂ ಮಹತ್ವದ ಸಂಗತಿಗಳು ಇವಾಗಿವೆ. ಆ ಕಡೆಗೆ ಗಮನ ಹರಿಸದೇ, ಹೊಸ ತಲೆಮಾರಿನ ಯುವಜನರು ಮತ್ತಷ್ಟು ಸಿನಿಕತನಕ್ಕೆ, ಹತಾಶೆಗೆ ಒಳಗಾದರೆ ಅದರಿಂದ ಜೆಡಿಎಸ್‍ಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಅಷ್ಟು ಮುಖ್ಯವಲ್ಲ; ರಾಜ್ಯಕ್ಕಂತೂ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...