Homeಮುಖಪುಟಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

ಯುವಜನರಿಂದ ದೂರವಾಗುತ್ತಿರುವ ಕುಮಾರಸ್ವಾಮಿ

- Advertisement -
- Advertisement -

ಕರ್ನಾಟಕದಲ್ಲಿ ಪಕ್ಷದ ಸಾಮಥ್ರ್ಯಕ್ಕಿಂತಲೂ ವ್ಯಕ್ತಿಗತ ಚರಿಷ್ಮಾ ಮಾತ್ರ ಲೆಕ್ಕ ಹಾಕುವುದಾದರೆ ಕುಮಾರಸ್ವಾಮಿಯೇ ಜನಪ್ರಿಯ ನಾಯಕರಾಗಿದ್ದರು. ರೈತರ ಗಣನೀಯ ವಿಭಾಗ, ಮಾಸಾಶನ ಪಡೆಯುವ ವೃದ್ಧರು-ಮಹಿಳೆಯರು ಮತ್ತು ಯುವಕರ ಒಂದು ವಿಭಾಗದ ನಡುವೆ ಎಚ್‍ಡಿಕೆ ಬಗ್ಗೆ ವಿಶೇಷವಾದ ಅಭಿಮಾನವಿತ್ತು. ಹಾಗಾಗಿಯೇ ಮುಖ್ಯಮಂತ್ರಿ ರೇಸ್‍ನಲ್ಲಿದ್ದ ಮೂವರ ಜನಪ್ರಿಯತೆಯ ಕುರಿತು ಸಮೀಕ್ಷೆ ನಡೆದಾಗ, ಜೆಡಿಎಸ್ ಪಕ್ಷದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಮಾರಸ್ವಾಮಿಯ ಪರ ಒಲವು ಇರುತ್ತಿತ್ತು. ಮುಖ್ಯಮಂತ್ರಿಯಾದ ನಂತರ ಜೆಡಿಎಸ್ ಪಕ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡುವಾಗ ಅವರೂ ಇದನ್ನೇ ಹೇಳಿದರು. ‘ನಾನು ಹೋದ ಕಡೆಯಲ್ಲೆಲ್ಲಾ ಜನರು ತೋರುವ ಅಭಿಮಾನ ನೋಡಿದರೆ ಆಶ್ಚರ್ಯವಾಗುತ್ತದೆ. ಆದರೆ, ನಮ್ಮ ಪಕ್ಷಕ್ಕೆ ಮಾತ್ರ ಅವರು ಏಕೆ ಓಟು ಕೊಡುವುದಿಲ್ಲ?’.
ಜೆಡಿಎಸ್ ಪಕ್ಷದ ಸಂಘಟನೆಗೆ ಯಾವ ರೀತಿಯ ಒತ್ತೂ ಕೊಡದೇ, ಪಕ್ಷದಲ್ಲಿ ಸ್ವತಂತ್ರವಾಗಿ ಆಲೋಚಿಸಿ ನಾಯಕರಾಗುವ ತಮ್ಮ ಕುಟುಂಬೇತರ ವ್ಯಕ್ತಿಗಳಿಗೆ ಅವಕಾಶ ಕೊಡದೇ ಪಕ್ಷ ಬೆಳೆಯಬೇಕು ಎಂದರೆ ಹೇಗೆ ಬೆಳೆಯಲು ಸಾಧ್ಯ? ಜೆಡಿಎಸ್‍ನ ಶಕ್ತಿ ಮತ್ತು ಮಿತಿ ಎರಡೂ ಸಹಾ ದೇವೇಗೌಡರ ಕುಟುಂಬವೇ ಆಗಿದೆ. ಬಹಳ ಮುಖ್ಯವಾಗಿ ಕರ್ನಾಟಕದಲ್ಲಿ ‘ಮೂರನೇ’ ಶಕ್ತಿಗಿರುವ ಸಾಧ್ಯತೆಯ ಪ್ರಮಾಣವನ್ನು ಅವರು ಇವತ್ತಿಗೂ ಸರಿಯಾಗಿ ಮನಗಂಡಂತಿಲ್ಲ. ಹಲವು ತಪ್ಪು ಹೆಜ್ಜೆಗಳ ನಂತರವೂ ಜೆಡಿಎಸ್ ಮತ್ತು ಸ್ವತಃ ಕುಮಾರಸ್ವಾಮಿಯವರ ಜನಪ್ರಿಯತೆಯ ಕಾರಣಗಳಾದರೂ ಆ ಕುಟುಂಬಕ್ಕೆ ಗೊತ್ತಿದ್ದಂತಿಲ್ಲ. ಹಾಗಾಗಿಯೇ ಎಡವಟ್ಟುಗಳನ್ನು ಪದೇ ಪದೇ ಮಾಡಿಕೊಂಡು ‘ಮೂರನೇ ಸ್ಥಾನದಲ್ಲಿರುವ’ ಶಕ್ತಿಯಾಗಿಯೇ ಜೆಡಿಎಸ್ ಉಳಿದುಕೊಂಡಿದೆ.
ಈ ಸಾರಿ ಕುಮಾರಸ್ವಾಮಿಯವರು ಮಾಡುತ್ತಿರುವ ಒಂದು ಮುಖ್ಯ ಎಡವಟ್ಟೆಂದರೆ, ಸಕಾರಾತ್ಮಕ ಅಜೆಂಡಾದೊಂದಿಗೆ ತಮ್ಮ ವೋಟ್ ಬೇಸ್‍ಅನ್ನು ವಿಸ್ತರಿಸಿಕೊಳ್ಳದೇ ಇರುವುದು. ಯುವಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‍ಗಿಂತ ಜೆಡಿಎಸ್‍ಗಿರುವ ಅವಕಾಶವೇ ಹೆಚ್ಚು. ಹಳೆಯ ವೋಟ್‍ಬೇಸ್ ಹೆಚ್ಚು ಕಡಿಮೆ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಯಾರು ಯುವಜನರನ್ನು ಹೆಚ್ಚು ತಮ್ಮೆಡೆಗೆ ಸೆಳೆಯುತ್ತಾರೋ ಅವರು ಮಾತ್ರ ಚುನಾವಣಾ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸುವುದು ಸಾಧ್ಯವಿದೆ. ರಾಜ್ಯದ ಅಭಿವೃದ್ಧಿಯ ಕುರಿತು ಅಪ್‍ಡೇಟೆಡ್ ಮುನ್ನೋಟದೊಂದಿಗೆ ಮತ್ತು ಆ ಮುನ್ನೋಟದ ಕನಸನ್ನು ಜಾರಿ ಮಾಡಲು ಖಚಿತ ಹೆಜ್ಜೆಗಳನ್ನಿಡುವುದರೊಂದಿಗೆ ಸಾಧಿಸಬೇಕಾದ ಅಂಶ ಅದಾಗಿದೆ.
ಹಾಗೆ ನೋಡಿದರೆ, ಜೆಡಿಎಸ್‍ನ ಚುನಾವಣಾ ಭರವಸೆಗಳು ಯುವಕರ ಪರವಾಗಿಯೇ ಇದ್ದವು. ಮೋದಿ ಕೋಟಿ ಉದ್ಯೋಗದ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದರಿಂದ, ಈ ಸಾರಿ ಬಿಜೆಪಿಯು ಯಾವ ಸಂಖ್ಯೆಯನ್ನೂ ಹೇಳಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‍ಗಳೆರಡೂ ಒಂದು ಕೋಟಿ ಉದ್ಯೋಗದ ಭರವಸೆ ನೀಡಿದ್ದರೂ, ಅದನ್ನು ಮತ್ತಷ್ಟು ನಿರ್ದಿಷ್ಟವಾಗಿ ಮುಂದಿಟ್ಟಿದ್ದು ಜೆಡಿಎಸ್. ಪ್ರಣಾಳಿಕೆ, ಪೂರ್ಣಪುಟದ ಜಾಹೀರಾತುಗಳಿಂದ ಹಿಡಿದು, ಈಚೆಗೆ ಮಂಡಿಸಿದ ಬಜೆಟ್‍ನವರೆಗೆ ಕುಮಾರಸ್ವಾಮಿ ಹೊಸ ಅಂಶಗಳಿಗೆ ತೆರೆದುಕೊಂಡಿದ್ದು ಸ್ಪಷ್ಟವಾಗಿತ್ತು. ಗುತ್ತಿಗೆ ನೌಕರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆಂದು ಪ್ರಕಟಿಸಿದ್ದರಿಂದ ಹಿಡಿದು, ‘ಚೀನಾದೊಂದಿಗೆ ಸ್ಪರ್ಧೆ’ ಎಂದು ಹೇಳಿದ್ದರತನಕ ವಿಶೇಷತೆಗಳು ಗಮನ ಸೆಳೆದಿದ್ದೆವು. ನೀವು ಇಲ್ಲಿಯೇ ಬಂದು ತಯಾರು ಮಾಡಿ, ನಿಮ್ಮ ದೇಶಕ್ಕೆ ಲಾಭ ಕೊಂಡೊಯ್ಯಿ ಎಂದು ಹೇಳುವ ಮೋದಿಯವರ ಮೇಕ್‍ಇನ್‍ಇಂಡಿಯಾ ಯೋಜನೆ ಒಂದು ಕಡೆಗೆ ಇದ್ದರೆ, ನಾವು ಇಲ್ಲಿಯೇ ಉತ್ಪಾದಿಸಿ ಚೀನಾದೊಂದಿಗೂ ಸ್ಪರ್ಧಿಸುತ್ತೇವೆ ಎಂದು ಹೇಳುವ ಧೈರ್ಯ ಇನ್ನೊಂದೆಡೆ. ಎಚ್‍ಡಿಕೆ ಸಹಾ ಇಸ್ರೇಲ್ ಕೃಷಿ ಎಂಬ ಈ ನೆಲಕ್ಕೆ ಹೊಂದದ ಕೃಷಿಯನ್ನು ಇಲ್ಲಿ ಅಳವಡಿಸಬೇಕೆಂದು ಹೇಳಿದ್ದರೂ, ಪಾಳೇಕರ್ ಮಾದರಿಯ ಸಹಜ ಕೃಷಿಯ ವಿಚಾರ ಗಮನಕ್ಕೆ ಬಂದಾಗ ಅದರತ್ತಲೂ ಗಮನ ಹರಿಸಿದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‍ನಲ್ಲಿ 10-15 ವರ್ಷಗಳಿಗೂ ಹೆಚ್ಚು ಕಾಲ ಅಡಿಗೆ ಮಾಡಿ, ಅಲ್ಲಿನ ಮಕ್ಕಳನ್ನು ಸಲಹಿ ದುಡಿದಿದ್ದ ಗುತ್ತಿಗೆ ನೌಕರರನ್ನು ಕೆಲಸದಿಂದ ಕಿತ್ತುಹಾಕಿ ನೇರನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ನೇರನೇಮಕಾತಿಯು ವಾಸ್ತವದಲ್ಲಿ ಎಚ್.ಆಂಜನೇಯ ಅವರ ಹಗರಣವಾಗಿತ್ತು. ಹಾಗಿದ್ದರೂ, ಅವರ ನಿರಂತರ ಪ್ರತಿಭಟನೆಗೆ ಸ್ಪಂದಿಸಿ, ಎಲ್ಲರಿಗೂ ಅವಕಾಶ ಮಾಡಿಕೊಡಲು ಎಚ್‍ಡಿಕೆ ಸೂಚಿಸಿದ್ದರು. ಕೆಲಸ ಹೋಗಿಯೇಬಿಟ್ಟಿತು ಎಂದಾದರೂ ಬಿಡದೇ ಹೋರಾಡಿದವರಿಗೆ ನಿಜಕ್ಕೂ ಜೀವ ವಾಪಸ್ಸು ಬಂದಂತಾಗಿತ್ತು.
2006ರಲ್ಲಿ ಸಿಕ್ಕ ಅವಕಾಶದಲ್ಲೂ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ ಎಚ್‍ಡಿಕೆ ಈ ಸಾರಿಯೂ ಅದೇ ರೀತಿ ಮಾಡಬಹುದು ಎಂಬ ಸೂಚನೆಗಳು ಕಾಣುತ್ತಿದ್ದ ಹೊತ್ತಿನಲ್ಲೇ ಎಡವಟ್ಟುಗಳೂ ಆರಂಭವಾಗಿವೆ. ಅದರ ಉದ್ಘಾಟನೆ ಆಗಿದ್ದು, ಶಾಲಾಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸಿದ್ದು. ಶೋಷಿತ ಸಮುದಾಯಗಳ ಪರವಾಗಿ ಪಕ್ಷಪಾತ ಎಣಿಸುತ್ತಾರೆ ಎಂದು ಟೀಕೆಗೊಳಗಾಗಿದ್ದ ಸಿದ್ದರಾಮಯ್ಯನವರೇ ತಮ್ಮ ಕಡೆಯ ಬಜೆಟ್‍ನಲ್ಲಿ ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಎಂದು ಪ್ರಕಟಿಸಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಶೈಕ್ಷಣಿಕ ವರ್ಷದ ಕೊನೆ ಬಂದಿದ್ದರಿಂದ ಅದು ಜಾರಿಯಾಗುವ ಸಂದರ್ಭವಿರಲಿಲ್ಲ. ‘ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳೂ ಮುಂದುವರೆಯುತ್ತವೆ’ ಎಂದು ಪ್ರಕಟಿಸಿದ್ದರೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ಮಾತ್ರ ಆಗಲಿಲ್ಲ.
ರಾಜ್ಯದ 19.6 ಲಕ್ಷ ಮಕ್ಕಳಿಗೆ ಹಿಂದಿನಿಂದಲೂ 650 ಕೋಟಿ ರೂ.ಗಳ ಸರ್ಕಾರೀ ಅನುದಾನದಿಂದ ರಿಯಾಯಿತಿ ದರದ ಬಸ್‍ಪಾಸ್ ನೀಡಲಾಗುತ್ತಿತ್ತು ಮತ್ತು ಎಸ್‍ಸಿ, ಎಸ್‍ಟಿ ಮಕ್ಕಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲಾಗುತ್ತಿತ್ತು. ಅದಕ್ಕೆ ಇನ್ನೂ 836 ಕೋಟಿ ರೂ.ಗಳನ್ನು ಸೇರಿಸಿದ್ದರೆ, ಎಲ್ಲರಿಗೂ ಉಚಿತ ಬಸ್‍ಪಾಸ್ ನೀಡಿದಂತಾಗುತ್ತಿತ್ತು. ಅದನ್ನೇ ಸಿದ್ದರಾಮಯ್ಯವರು ಪ್ರಕಟಿಸಿದ್ದದ್ದು. ಆದರೆ, ಸಾರಿಗೆ ನಿಗಮಗಳಿಗೂ ಇದು ಇಷ್ಟವಿರಲಿಲ್ಲ. ಹಾಗಾಗಿಯೇ ಇದಕ್ಕೆ 1900 ಕೋಟಿ ರೂಗಳು ಬೇಕು ಇತ್ಯಾದಿ ಅಸಂಬದ್ಧ ಹೇಳಿಕೆಗಳು ಬಂದವು. ಕುಮಾರಸ್ವಾಮಿಯವರು ಒಂದಷ್ಟು ಕಾಲ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದೇ ಎಳೆದರು. ನಂತರ, ಕೊಡುವುದೇ ಇಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕಿಳಿದವು. ಅವೆಲ್ಲಾ ಆದ ಮೇಲೆ ಸರ್ಕಾರೀ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮಾತ್ರ ಬಸ್‍ಪಾಸ್ ನೀಡಲಾಗುವುದು ಎಂದು ಸ್ವತಃ ಸಿಎಂ ರಾಮನಗರದ ಸಭೆಯೊಂದರಲ್ಲಿ ಪ್ರಕಟಿಸಿದರು. ರಾಜ್ಯದ ಎಷ್ಟೋ ಕಡೆ ಸರ್ಕಾರೀ ವ್ಯವಸ್ಥೆಯಲ್ಲಿ ಓದಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಇದ್ದು, ಅನುದಾನಿತವೋ ಖಾಸಗಿ ಸಂಸ್ಥೆಯನ್ನೋ ಪೋಷಕರು ನೋಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಅಂತಿಮವಾಗಿ ಕುಮಾರಸ್ವಾಮಿಯವರ ನಿರ್ಧಾರವು ಭಾಗಶಃ ಕ್ರೆಡಿಟ್‍ಅನ್ನು ಸಹಾ ನೀಡದೇ, ಜಾರಿಯಾಗುವ ಹಂತದಲ್ಲಿದೆ.
ಇಂಥದ್ದೇ ಇನ್ನೊಂದು ಸಮಸ್ಯೆ ಗುತ್ತಿಗೆ ನೌಕರರ ವಿಚಾರದಲ್ಲಿ ಆಗುತ್ತಿದೆ. ಎಲ್ಲಾ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಕಲ್ಪಿಸಲಾಗುವುದು ಎಂದು ಹೇಳಿದ್ದ ಜೆಡಿಎಸ್ ನೇತೃತ್ವದಲ್ಲೇ ಸರ್ಕಾರವು ರಚನೆಯಾಗಿದೆ; ಇರುವ ಭದ್ರತೆಯನ್ನೂ ಕಿತ್ತುಹಾಕುವ ಕೆಲಸ ಹಲವು ಇಲಾಖೆಗಳಲ್ಲಿ ನಡೆಯುತ್ತಿದೆ. ಸ್ವತಃ ಮುಖ್ಯಮಂತ್ರಿಯವರ ಕೈಯ್ಯಲ್ಲೇ ಇರುವ ಇಂಧನ ಇಲಾಖೆಗೆ ಸೇರಿದ ಕೆಪಿಟಿಸಿಎಲ್‍ನಲ್ಲಿ ಗುತ್ತಿಗೆ ನೌಕರರನ್ನು ಕಿತ್ತು ಹಾಕಲಾಗುತ್ತಿದೆ. ಅದರಲ್ಲೂ ಜೆಸ್ಕಾಂನ ವ್ಯಾಪ್ತಿಯಲ್ಲಿ ಒಬ್ಬ ಗುತ್ತಿಗೆ ನೌಕರರೂ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಖಜಾನೆ-2 ಎಂಬ ತಂತ್ರಾಂಶ ವಿಧಾನದ ಕಾರಣದಿಂದ ಡಾಟಾ ಎಂಟ್ರಿ ಆಪರೇಟರ್‍ಗಳು ಸಮಸ್ಯೆಗೆ ಸಿಲುಕಿದ್ದಾರೆ. ಪಶುಪಾಲನಾ ಇಲಾಖೆಯ ಗ್ರೂಪ್ ಡಿ ನೌಕರರಲ್ಲಿ 650 ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸರ್ಕಾರೀ ಗುತ್ತಿಗೆ ನೌಕರರ ಒಕ್ಕೂಟವು ಹೋರಾಟ ಮಾಡಿ, ಸ್ವತಃ ಮುಖ್ಯಮಂತ್ರಿಯವರನ್ನೇ ಭೇಟಿಯಾದರೂ, ಸ್ಪಷ್ಟ ಕ್ರಮ ತೆಗೆದುಕೊಳ್ಳದೇ ಎಚ್‍ಡಿಕೆ ನುಣುಚಿಕೊಂಡಿದ್ದಾರೆ. ಒಕ್ಕೂಟದ ಪದಾಧಿಕಾರಿಗಳ ಪ್ರಕಾರ ಸುಮಾರು 30,000 ಗುತ್ತಿಗೆ ನೌಕರರಿಗೆ 4-6 ತಿಂಗಳಿಂದ ಸಂಬಳವೇ ಇಲ್ಲ. ಇದರ ಕುರಿತೂ ಯಾವ ನಿರ್ದಿಷ್ಟ ಕ್ರಮವನ್ನು ಪ್ರಕಟಿಸಿಲ್ಲ.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಭರವಸೆಯದ್ದೂ ಇದೇ ಪಾಡು. ಚೀನಾದೊಂದಿಗೆ ಸ್ಪರ್ಧೆಯೂ ಸೇರಿ ಅವರ ಯೋಜನೆಗಳಿಂದ 8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಬಜೆಟ್‍ನಲ್ಲಿ ಘೋಷಿಸಿದರು. ಆದರೆ, ಇದುವರೆಗಿನ ಇತಿಹಾಸ ನೋಡಿದರೆ, 2 ಲಕ್ಷ ಉದ್ಯೋಗಗಳಿಗಿಂತ ಹೆಚ್ಚಿನ ಸಾಧ್ಯತೆ ಇಲ್ಲ. ಅದಕ್ಕಿಂತ ತುಂಬಾ ಮೇಲು ಪದರದ ಒಂದು ಕ್ರಮವನ್ನೂ ಎಚ್‍ಡಿಕೆ ಪ್ರಕಟಿಸಿದರು. ಅದೆಂದರೆ, ತಮ್ಮ ಗೃಹ ಕಚೇರಿಯಲ್ಲೇ ಉದ್ಯೋಗ ಕೊಡಿಸುವುದು. ಅದೇ ಒಂದು ಉದ್ಯೋಗ ಮೇಳದ ಥರಾ ಆಗುತ್ತದೆ ಎಂತಲೂ ಪ್ರಕಟಿಸಿದರು. ಮುಖ್ಯಮಂತ್ರಿ ಹೇಳುತ್ತಾರೆಂಬ ಕಾರಣಕ್ಕೆ ಕೆಲವು ಕಂಪೆನಿಗಳು ಆಗಾಗ್ಗೆ ಕೆಲವು ಉದ್ಯೋಗಗಳನ್ನು ನೀಡಬಹುದಾದರೂ, ರಾಜ್ಯದ ಪ್ರತಿ ಮೂಲೆಯಲ್ಲೂ ಉದ್ಯೋಗ ಸ್ಥಳೀಯವಾಗಿಯೇ, ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸೃಷ್ಟಿಯಾಗಬೇಕು ಎಂಬುದು ತಿಳಿಯದಷ್ಟು ಮುಖ್ಯಮಂತ್ರಿ ಅಮಾಯಕರೇ ಎಂಬ ಪ್ರಶ್ನೆ ಏಳುತ್ತದೆ.
ಉದ್ಯೋಗ ಸೃಷ್ಟಿಗೆ ಬೇಕಿರುವುದು ಹಣ ಎಂದು ತಿಳಿದಿರುವುದರಲ್ಲೇ ಒಂದು ದಡ್ಡತನ ಅಡಗಿದೆ. ಹಾಗಾಗಿಯೇ ಹೆಚ್ಚೆಚ್ಚು ಹೂಡಿಕೆ ಆಗಬೇಕು ಎಂದು ಸರ್ಕಾರಗಳು ಅನಗತ್ಯವಾಗಿ ಬೃಹತ್ ಕಂಪೆನಿಗಳಿಗೆ ರಿಯಾಯಿತಿ ನೀಡುತ್ತಿರುತ್ತವೆ. ಹಣದ ಅಗತ್ಯವಿರುವುದು ನಿಜವಾದರೂ, ಅದಕ್ಕಿಂತ ಮುಖ್ಯವಾದುದೆಂದರೆ ಉದ್ಯೋಗ ಸೃಷ್ಟಿಯ ನೀತಿ ಮತ್ತು ಅದನ್ನು ಆಗಮಾಡಿಸುವ ಯಂತ್ರಾಂಗ. ಅದಕ್ಕಾಗಿ ನಿರ್ದಿಷ್ಟ ಕ್ರಮಗಳನ್ನೇನೂ ಕೈಗೊಳ್ಳದಿದ್ದರೆ, ಕುಮಾರಸ್ವಾಮಿಯವರಿಗೆ ಸಿಗಬಹುದಾದಷ್ಟು ಸಮಯದಲ್ಲಿ ಪರಿಣಾಮಕಾರಿಯಾದ ಏನನ್ನೂ ಮಾಡಿದಂತಾಗುವುದಿಲ್ಲ. ರೈತರ ಸಾಲಮನ್ನಾದ ವಿಚಾರಕ್ಕಿಂತಲೂ ಮಹತ್ವದ ಸಂಗತಿಗಳು ಇವಾಗಿವೆ. ಆ ಕಡೆಗೆ ಗಮನ ಹರಿಸದೇ, ಹೊಸ ತಲೆಮಾರಿನ ಯುವಜನರು ಮತ್ತಷ್ಟು ಸಿನಿಕತನಕ್ಕೆ, ಹತಾಶೆಗೆ ಒಳಗಾದರೆ ಅದರಿಂದ ಜೆಡಿಎಸ್‍ಗೆ ಎಷ್ಟು ನಷ್ಟವಾಗುತ್ತದೆ ಎಂಬುದು ಅಷ್ಟು ಮುಖ್ಯವಲ್ಲ; ರಾಜ್ಯಕ್ಕಂತೂ ಭಾರೀ ನಷ್ಟ ಕಟ್ಟಿಟ್ಟ ಬುತ್ತಿ.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆಲಸದ ಅವಧಿ ಬಳಿಕ ಯಾವುದೇ ಕರೆಗಳು, ಇಮೇಲ್‌ಗಳಿಗೆ ಉತ್ತರಿಸಬೇಕಿಲ್ಲ : ಸಂಪರ್ಕ ಕಡಿತ ಹಕ್ಕು ಮಸೂದೆ ಹೇಳುವುದೇನು?

ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಉದ್ಯೋಗಿಗಳ ಮೇಲೆ ಅತೀವ ಕೆಲಸದ ಹೊರೆಯನ್ನು ಹೇರಿ ಅವರ ಖಾಸಗಿ ಜೀವನವನ್ನು ಕಿತ್ತುಕೊಳ್ಳುವ ಮೂಲಕ ಮಾನಸಿಕ ಒತ್ತಡಕ್ಕೆ ತಳ್ಳುತ್ತಿರುವ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ. ಅದಾಗ್ಯೂ ಕೆಲ ಕಾರ್ಪೋರೇಟ್‌...

ಯುದ್ಧ ವಿರೋಧಿ ವಾಟ್ಸಾಪ್ ಸ್ಟೇಟಸ್ : ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದ ದಲಿತ ಪ್ರಾಧ್ಯಾಪಕಿ ವಜಾ

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೇಳೆ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲೋರಾ ಶಾಂತಕುಮಾರ್ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಎಸ್‌ಆರ್‌ಎಂನ ಆಂತರಿಕ ಸಮಿತಿಯ ವರದಿಯು ಲೋರಾ...

ಗಾಝಾದಲ್ಲಿ ಕದನ ವಿರಾಮ : ಎರಡು ವರ್ಷಗಳ ಬಳಿಕ ಬೆಥ್ಲೆಹೆಮ್‌ನಲ್ಲಿ ಮರುಕಳಿಸಿದ ಕ್ರಿಸ್‌ಮಸ್ ಸಂಭ್ರಮ

ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿರುವ ಹಿನ್ನೆಲೆ, ಎರಡು ವರ್ಷಗಳ ನಂತರ ಈ ಬಾರಿ ಯೇಸು ಕ್ರಿಸ್ತನ ಜನ್ಮಸ್ಥಳ ಜೆರುಸಲೇಂನ ಬೆಥ್ಲೆಹೆಮ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಮರುಕಳಿಸಿದೆ. ಶನಿವಾರ (ಡಿಸೆಂಬರ್ 6) ಬೆಥ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿರುವ ಚರ್ಚ್...

ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟು : ಜೆಪಿಸಿ ವಿಚಾರಣೆ ಕೋರಿ ಪ್ರಧಾನಿಗೆ ಪತ್ರ ಬರೆದ ಸಂಸದ ಜಾನ್ ಬ್ರಿಟ್ಟಾಸ್

ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದಿಂದ ಉಂಟಾದ ರಾಷ್ಟ್ರವ್ಯಾಪಿ ವಿಮಾನಯಾನ ಬಿಕ್ಕಟ್ಟಿನ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆ ಅಥವಾ ನ್ಯಾಯಾಂಗ ತನಿಖೆ ಮಾಡಿಸುವಂತೆ ಕೋರಿ ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಪ್ರಧಾನಿ...

ಒಳಮೀಸಲಾತಿ : ಶೇ.17ರ ಪ್ರಮಾಣದಲ್ಲೇ ಮುಂದುವರಿಯಲು ಸರ್ಕಾರ ತೀರ್ಮಾನ?

ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಗೋವಾ ನೈಟ್ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು

ಉತ್ತರ ಗೋವಾದ ನೈಟ್‌ ಕ್ಲಬ್‌ವೊಂದರಲ್ಲಿ ಶನಿವಾರ (ಡಿಸೆಂಬರ್ 6) ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು,...

ಮೈಸೂರು| ಒಳಮೀಸಲಾತಿ ಹೋರಾಟ ಹತ್ತಿಕ್ಕಲು ನಿಷೇಧಾಜ್ಞೆ ಹೇರಿದ ಕಾಂಗ್ರೆಸ್ ಸರ್ಕಾರ

ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ' ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು...

‘ನಕಲಿ ಬ್ಯಾಂಕ್ ಗ್ಯಾರಂಟಿ’ ಪ್ರಕರಣ : ರಿಲಯನ್ಸ್ ಪವರ್, ಇತರ ಸಂಸ್ಥೆಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ...

ಉತ್ತರ ಪ್ರದೇಶ| ಬಾಬರಿ ಮಸೀದಿ ಮೇಲಿನ ದಾಳಿಗೆ 33 ವರ್ಷ; ಅಯೋಧ್ಯೆ-ವಾರಣಾಸಿಯಲ್ಲಿ ಬಿಗಿ ಭದ್ರತೆ

ಬಾಬರಿ ಮಸೀದಿ ಧ್ವಂಸವಾಗಿ 33ನೇ ವರ್ಷ ತುಂಬುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಮತ್ತು ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಜಾಗರೂಕರಾಗಿದ್ದು, ಎಲ್ಲಾ ಮಾರ್ಗಗಳಲ್ಲಿ ವಾಹನಗಳ ಸಂಪೂರ್ಣ ತಪಾಸಣೆ ನಡೆಸುತ್ತಿವೆ. ಈ ಕುರಿತು...

ನ್ಯಾಷನಲ್ ಹೆರಾಲ್ಡ್‌ಗೆ ದೇಣಿಗೆ: ‘ಡಿಕೆ’ ಸಹೋದರರಿಗೆ ಇಡಿ-ದೆಹಲಿ ಪೊಲೀಸರಿಂದ ಸಮನ್ಸ್

ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳಿಗೆ ನೀಡಿದ ದೇಣಿಗೆಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೈಗೊಂಡಿರುವ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯವು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು...