ನಟಿ ಕಂಗನಾ ರಾಣಾವತ್ ಟ್ವಿಟ್ಟರ್ ಪೋಸ್ಟ್ಗಳು, ವಿವಾದಿತ ಹೇಳಿಕೆಗಳು ಶಿವಸೇನೆ ಮತ್ತು ಬಿಜೆಪಿಗೆ ಕೆಸರೆರಚಾಟಕ್ಕೆ ಹೊಸ ಕಾರಣ ನೀಡಿದೆ. ಮುಂಬೈ ಪೊಲೀಸರ ಬಗ್ಗೆ ನಟಿ ಕಂಗನಾ ಇತ್ತಿಚಿನ ಹೇಳಿಕೆಗಳು, ಮುಂಬೈಯನ್ನು ಪಾಕ್ ಆಕ್ರಮಿತ ಪ್ರದೇಶಕ್ಕೆ ಹೋಲಿಸಿದ್ದು, ಬಿಜೆಪಿ ಮತ್ತು ಸೇನಾ-ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟವು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳಲು ಕಾರಣವಾಗಿವೆ.
ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ನಟಿ ಕಂಗನಾ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದರೇ, ಅದೇ ಬಿಜೆಪಿ ಆಕೆಯ ಸುರಕ್ಷತೆ ಬಗ್ಗೆ ಯೋಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಟಿ ಕಂಗನಾ ಪಿಒಕೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಜನರು ತಮಗೆ ಜೀವನಾಧಾರವಾದ ನಗರದ ಬಗ್ಗೆ ಕೃತಜ್ಞತೆ ಹೊಂದಿರುವುದಿಲ್ಲ ಎಂದಿದ್ದಾರೆ.
ಕಂಗನಾ ರನೌತ್ ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ-ಕಾಶ್ಮೀರಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ತಾನು ‘ಮೂವಿ ಮಾಫಿಯಾ’ಗಿಂತ ಹೆಚ್ಚು ಮುಂಬೈ ಪೊಲೀಸರಿಗೆ ಹೆದರುತ್ತಿದ್ದೆ ಮತ್ತು “ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ” ಬಗ್ಗೆ ಮಾತಾಡಿದ್ದರಿಂದ ನಾನು ಕೇಂದ್ರ ಅಥವಾ ಹಿಮಾಚಲ ಪ್ರದೇಶದಿಂದ ರಕ್ಷಣೆ ಪಡೆಯುವುದಾಗಿ ರಾಣಾವತ್ ಹೇಳಿದ್ದಾರೆ.
ವಿಶೇಷವೆಂದರೆ, ಕೇಂದ್ರವು ಸೋಮವಾರ ಕಂಗನಾಕ್ಕೆ ವೈ-ಪ್ಲಸ್ ಭದ್ರತೆಯನ್ನು ನೀಡಿತು. ಜೊತೆಗೆ ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ‘ಕಂಗನಾಕ್ಕೆ ಖಂಡಿತವಾಗಿಯೂ ರಕ್ಷಣೆ ಬೇಕು’ ಎಂದಿದ್ದಾರೆ.
ಇದನ್ನೂ ಓದಿ: ಮುಂಬೈಯನ್ನು ಪಿಒಕೆಗೆ ಹೋಲಿಕೆ ವಿಚಾರ: ಟ್ವಿಟ್ಟರ್ನಲ್ಲಿ ಕಂಗನಾ ವಿರುದ್ಧ ಆಕ್ರೋಶ
ನಟಿಯ ಹೇಳಿಕೆ ವಿಚಾರದ ಕುರಿತು “ಕಂಗನಾ ಹೇಳಿದ್ದನ್ನು ಯಾರೂ ಬೆಂಬಲಿಸುವುದಿಲ್ಲ. ನಾವು ಅದನ್ನು ಖಂಡಿಸಿದ್ದೇವೆ. ಆದರೆ ಇದರರ್ಥ ನಾವು ಪರಾವಲಂಬಿ ರಾಷ್ಟ್ರದಲ್ಲಿ ವಾಸಿಸುತ್ತಿದ್ದೇವೆ ಎಂದಲ್ಲ. ಆಕೆಯ ಹೇಳಿಕೆ ಒಪ್ಪದಿದ್ದೂ, ಪ್ರತಿಯೊಬ್ಬ ನಾಗರಿಕನನ್ನು ರಕ್ಷಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಎಂದು ಫಡ್ನವಿಸ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ‘ಮಹಾರಾಷ್ಟ್ರವನ್ನು ಅಪಖ್ಯಾತಿಗೆ ಗುರಿ ಮಾಡಿದ ವ್ಯಕ್ತಿಗೆ ವೈ-ಪ್ಲಸ್ ಭದ್ರತಾ ರಕ್ಷಣೆ ಒದಗಿಸಿರುವುದು ನೋವಿನ ಮತ್ತು ಆಶ್ಚರ್ಯಕರ ವಿಷಯ’ ಎಂದಿದ್ದಾರೆ.
ಇನ್ನೊಬ್ಬ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ವಿಜಯ್ ವಾಡೆಟ್ಟಿವಾರ್, ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರವು ಅವರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಮತ್ತು ಕಂಗನಾ ರಾಣಾವತ್ ವಿವಾದಗಳು ಬಿಹಾರ ಚುನಾವಣೆ ನಡೆಯುವವರೆಗೂ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ
ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಮಾತನಾಡಿ, “ಮೋದಿ ಸರ್ಕಾರವು ತನ್ನ ಬೆಂಬಲಿಗರನ್ನು ಮತ್ತು ಜನರನ್ನು ತಮ್ಮ ಅಜೆಂಡಾ ಮುಂದುವರಿಸುವುದಕ್ಕಾಗಿ ಚೆನ್ನಾಗಿ ನೋಡಿಕೊಳ್ಳುತ್ತದೆ” ಎಂದು ಹೇಳಿದರು. ಜೊತೆಗೆ “ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ” ಇರುವ ಬಗ್ಗೆ ಕಂಗನಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಗೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸಾವಂತ್ ಒತ್ತಾಯಿಸಿದ್ದಾರೆ.
ಒಟ್ಟಾರೆ ಬಿಜೆಪಿ ಸರ್ಕಾರ ರಾಣಾವತ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಲೇ ಆಕೆಗೆ ಭದ್ರತೆ ಒದಗಿಸಿದೆ. ಆಕೆಗೆ ಬೆಂಬಲವಾಗಿ ನಿಂತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಶಿವಸೇನೆ, ಕಾಂಗ್ರೆಸ್ ಮಾತ್ರ ಆಕೆಯ ಹೇಳಿಕೆ ವಿರುದ್ಧ ಕೆಂಡಾಮಂಡಲವಾಗಿದ್ದು, ಒಬ್ಬರಲ್ಲ ಒಬ್ಬರೂ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಮಹಾರಾಷ್ಟರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ವತಃ ಹೇಳಿಕೆ ನೀಡಿ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ಸಿಬಿಐ
ಇನ್ನೊಂದೆಡೆ ಬಿಹಾರದ ಚುನಾವಣೆಗೆ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಜೆಪಿಯು ತನ್ನ ಕರಪತ್ರಗಳಲ್ಲಿ ಸುಶಾಂತ್ ಫೋಟೊ ಜೊತೆಗೆ “#JusticeForSushanth” ಎಂದು ಬರೆದಿರುವ ಪೋಸ್ಟರ್, ಸ್ಟಿಕ್ಕರ್ಗಳನ್ನು ಬಿಡುಗಡೆ ಮಾಡಿದೆ.
ನಟನ ಸಾವನ್ನು ಮತಗಳಿಗಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯ ನಿಲುವನ್ನು ಖಂಡಿಸಿ ಆಲ್ ಇಂಡಿಯಾ ಪ್ರೊಫೆಷನಲ್ ಕಾಂಗ್ರೆಸ್ ಸೌತ್ ಮುಂಬೈ ನಿನ್ನೆ ಟ್ವೀಟ್ ಮಾಡಿದೆ. ಜೊತೆಗೆ ಸಾರ್ವಜನಿಕರು ಸಹ ಛೀಮಾರಿ ಹಾಕಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೇ, ಏನೇ ಇದ್ದರೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಮತ್ತು ಕಂಗನಾ ರಾಣಾವತ್ ವಿವಾದಗಳು ಬಿಹಾರ ಚುನಾವಣೆ ನಡೆಯುವವರೆಗೂ ಮುಂದುವರಿಯಲಿದೆ ಎಂಬ ಸಚಿವ ವಿಜಯ್ ವಾಡೆಟ್ಟಿವಾರ್ ಮಾತು ನಿಜವಾಗುವುದರಲ್ಲಿ ಆಶ್ಚರ್ಯವಿಲ್ಲ.