ಈ ತಿಂಗಳ ಅಕ್ಟೋಬರ್ 12ರಂದು ಬಿಜೆಪಿಗೆ ಸೇರ್ಪಡೆಯಾದ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರನ್ನು ಇಂದು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆ ಬಳಿ ಪೊಲೀಸರು ಬಂಧಿಸಿದ್ದಾರೆ. ಮನುಸ್ಮೃತಿ ಬಗ್ಗೆ ರಾಜಕಾರಣಿಯೊಬ್ಬರು ನೀಡಿದ್ದ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಖುಷ್ಬೂ ತೆರಳುತ್ತಿದ್ದರು. ಮಾರ್ಗ ಮಧ್ಯೆಯೇ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಮನುಸ್ಮೃತಿಯು ಮಹಿಳೆಯರನ್ನು ಕೀಳಾಗಿ ಕಾಣುತ್ತದೆ ಮತ್ತು ಮನುಧರ್ಮ ಮಹಿಳೆಯರನ್ನು ಲೈಂಗಿಕ ಕಾರ್ಯಕರ್ತೆಯರಂತೆ ಪರಿಗಣಿಸುತ್ತದೆ ಎಂದು ವಿಡುಥಾಳೈ ಚಿರುಥೈಗಲ್ ಕಚ್ಚಿ (ವಿಸಿಕೆ) ಪಕ್ಷದ ಮುಖ್ಯಸ್ಥ ತೋಳ್ ತಿರುಮಾವಾಲವನ್ ಅವರು ಇತ್ತೀಚೆಗೆ ಒಂದು ಭಾಷಣದಲ್ಲಿ ಹೇಳಿದ್ದರು. ಜೊತೆಗೆ ಮನುಸ್ಮೃತಿಯನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.
ತಿರುಮಾವಾಲವನ್ ಹೇಳಿಕೆ ಖಂಡಿಸಿ ನಟಿ ಖುಷ್ಬೂ ನೇತೃತ್ವದಲ್ಲಿ ಬಿಜೆಪಿಯ ಮಹಿಳಾ ವಿಭಾಗದ ಪ್ರತಿಭಟನೆ ನಡೆಸಲು ಕಡಲೂರು ಜಿಲ್ಲೆಗೆ ತೆರಳುತ್ತಿದ್ದರು. ಕಡಲೂರಿನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು.
ತಿರುಮಾವಾಲವನ್ ಅವರ ಹೇಳಿಕೆಯನ್ನ ವಿರೋಧ ಪಕ್ಷ ಡಿಎಂಕೆ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಖಂಡಿಸಿವೆ. ಬಿಜೆಪಿ ಪಕ್ಷವು ತಿರುಮಾವಾಲವನ್ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಬಿಜೆಪಿ ಮಹಿಳಾ ವಿಭಾಗವು ತಮಿಳುನಾಡಿನಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ವಿಸಿಕೆ ಮುಖ್ಯಸ್ಥರ ಈ ಹೇಳಿಕೆಗಳು ಕೋಮು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಬಿಜೆಪಿ ಹೇಳಿದೆ. ತಿರುಮಾವಾಲವನ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಷ್ಟ್ರ ಮುಂದುವರಿಯಲು ಪ್ರಧಾನಿ ಮೋದಿಯಂತಹ ವ್ಯಕ್ತಿ ಬೇಕು: ಬಿಜೆಪಿ ಸೇರ್ಪಡೆ ಬಳಿಕ ನಟಿ ಖುಷ್ಬೂ
ಟೀಕೆಗೆ ಪ್ರತಿಕ್ರಿಯಿಸಿರುವ ತಿರುಮಾವಾಲವನ್, “ನಾನು ಮನುಸ್ಮೃತಿ ಬಗ್ಗೆ ಮಾತ್ರ ಉಲ್ಲೇಖಿಸಿದ್ದೇನೆ. ಮನುಸ್ಮೃತಿ ಕೃತಿಯನ್ನು ನಿಷೇಧಿಸಬೇಕಾಗಿದೆ. ಘರ್ಷಣೆಯನ್ನು ಪ್ರಚೋದಿಸಲು ಬಿಜೆಪಿ ನಕಲಿ ಸುದ್ದಿಗಳನ್ನು ಹರಡುತ್ತಿದೆ” ಎಂದು ಹೇಳಿದ್ದಾರೆ.
ಸೋಮವಾರ(ಅ.26) ತಿರುಮಾವಾಲವನ್ ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾಗಲು ಈರೋಡ್ಗೆ ಭೇಟಿ ನೀಡಿದಾಗ ಬಿಜೆಪಿ ಮತ್ತು ವಿಸಿಕೆ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಬಿಜೆಪಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ತಿರುಮಾವಾಲವನ್ ಜೊತೆಗಿದ್ದ ವಿಸಿಕೆ ಕಾರ್ಯಕರ್ತರು ಕೂಡ ಪ್ರತಿಯಾಗಿ ಘೋಷಣೆಗಳನ್ನ ಕೂಗಿದರು.
ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಸ್ಥಳದಿಂದ ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಆಗಲೂ ವಿಸಿಕೆಯ ಕೆಲ ಕಾರ್ಯಕರ್ತರು ಪೊಲೀಸ್ ವ್ಯಾನ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಯಾರು ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಖುಷ್ಬೂ ಸುಂದರ್ ತಮಿಳುನಾಡು ಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ನಟಿ ’ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸುವ ನನ್ನಂತಹ ಜನರನ್ನು ತುಳಿಯಲಾಗುತ್ತಿದೆ ಎಂದಿದ್ದರು. ಜೊತೆಗೆ ’ಪಕ್ಷದಲ್ಲಿ ವಾಸ್ತವ ಪರಿಸ್ಥಿತಿಯ ಅರಿವಿಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು.
ವಾಸ್ತವ