ಕೊರೊನಾದಿಂದಾಗಿ ಸಂಸತ್ ಅಧಿವೇಶನ ನಡೆಸಲು ಸಾಧ್ಯವಾಗದಿದ್ದರೆ ವರ್ಚುವಲ್ ಅಧಿವೇಶನವನ್ನು ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಲಡಾಖ್ನ ಗಾಲ್ವನ್ನಲ್ಲಿ ಉಂಟಾಗಿರುವ ಗಡಿ ವಿವಾದ, ಪೆಟ್ರೋಲ್ ಬೆಲೆ ಏರಿಕೆ, ಕೊರೋನಾ ಬಿಕ್ಕಟ್ಟು ಇತ್ಯಾದಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಬೇಕಿರುವ ಹಿನ್ನೆಲೆಯಲ್ಲಿ ಕೂಡಲೇ ಸಂಸತ್ತಿನ ಅಧಿವೇಶನ ಕರೆಯಬೇಕು ಎಂದು ಅದು ಹೇಳಿದೆ.
ಪ್ರಸ್ತುತ ಚರ್ಚೆ ಮಾಡಬೇಕಾದ ಹಲವು ವಿಷಯಗಳಿದ್ದು, ಭಾರತ-ಚೀನಾ ಗಡಿ ಸಮಸ್ಯೆಯ ಬಗ್ಗೆ ಚರ್ಚಿಸಬೇಕಿದೆ. ಕೊರೋನಾ ರೋಗದ ಬಗ್ಗೆ ಸಮಾಲೋಚನೆ ಆಗಬೇಕಿದೆ. ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗುತ್ತಿರುವ ಬಗ್ಗೆಯೂ ಚರ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನ ಕರೆಯಬೇಕೆಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಒತ್ತಾಯಿಸಿದ್ದಾರೆ.
1962ರ ಯುದ್ಧದ ವೇಳೆ ಅಧಿವೇಶನ ನಡೆಸಲು ಒತ್ತಾಯಿಸಲಾಗಿತ್ತು. ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಕೂಡಾ ಒತ್ತಾಯಿಸಿದ್ದರು. ಈ ಒತ್ತಾಯವನ್ನು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪುರಸ್ಕರಿಸಿ, ಪ್ರತಿಪಕ್ಷಗಳ ಮನವಿಗೆ ಸ್ಪಂದಿಸಿ ಅಧಿವೇಶನ ನಡೆಸಿತ್ತು. ಈಗಲೂ ಅದೇ ರೀತಿ ಪ್ರತಿಪಕ್ಷಗಳ ಮಾತಿಗೆ ಸ್ಪಂದಿಸಿ ಸಂಸತ್ ಅಧಿವೇಶನ ಕರೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸಂಸದೀಯ ಸಮಿತಿಗಳ ಸಭೆಗಳು ಕೂಡ ನಡೆಯುತ್ತಿಲ್ಲ. ಸಂಸದೀಯ ಸಮಿತಿಗಳ ಸಭೆಗಳು ಯಾಕೆ ಸ್ಥಗಿತಗೊಂಡಿವೆ? ಎಂದು ಕೇಂದ್ರ ಸರ್ಕಾರವನ್ನು ಪವನ್ ಖೇರಾ ಪ್ರಶ್ನಿಸಿದ್ದಾರೆ.
“ಸ್ಪೀಕರ್ ಸಂಸತ್ತನ್ನು ಮಟ್ಟಹಾಕಲು ಪ್ರಯತ್ನಿಸಬಾರದು. ಸಂಸತ್ ಅಧಿವೇಶನ ನಡೆಸದಿರುವುದು ದುರದೃಷ್ಟಕವಾಗಿದೆ. ರಷ್ಯಾ, ಭಾರತ, ಚೀನಾ ತ್ರಿಪಕ್ಷೀಯ ಶೃಂಗಸಭೆಯನ್ನು ವರ್ಚುವಲ್ ಆಗಿ ನಡೆಸಬಹುದು. ಆದರೆ ಸಂಸತ್ ಅಧಿವೇಶನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಬಹಳ ವಿಷಾದದಿಂದ ಹೇಳುತ್ತೇವೆ” ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.