ಉತ್ತರಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ತೀವ್ರವಾಗಿ ಗಾಯಗೊಂಡು ಗಾಯಗೊಂಡು ಮೃತರಾಗಿ ಸೆಪ್ಟೆಂಬರ್ 29ಕ್ಕೆ ಒಂದು ತಿಂಗಳು ತುಂಬಿದೆ. ಈ ಘಟನೆ ಹಿನ್ನೆಲೆ 29 ರಂದು ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಪ್ರತಿಭಟನಾ ನಿರತ ಮಹಿಳೆಯರು ದೇಶಾದ್ಯಂತದ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು, ಹತ್ರಾಸ್ ದಲಿತ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ದೆಹಲಿಯ ಇನ್ನೊಂದೆಡೆ ದಲಿತ ಸಂಘಟನೆ ಆಯೋಜಿಸಿದ್ದ ಪ್ರತ್ಯೇಕ ಪ್ರತಿಭಟನೆಯಲ್ಲಿಯೂ ಇದೇ ರೀತಿಯ ಬೇಡಿಕೆಗಳನ್ನು ಇಡಲಾಗಿದೆ.
ಹತ್ರಾಸ್ನ 19 ವರ್ಷದ ದಲಿತ ಯುವತಿ ಮೇಲೆ ಸೆ.14 ರಂದು ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆ.29 ರಂದು ಯುವತಿ ಸಾವನ್ನಪ್ಪಿದರು. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ಅಖಿಲ ಭಾರತ ಪ್ರಜಾಸತ್ಮಾತ್ಮಕ ಮಹಿಳಾ ಸಂಘ, ರಾಷ್ಟ್ರೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ, ಪ್ರಗತಿಶೀಲ್ ಮಹಿಳಾ ಸಂಘಟನೆ, ಸತಾರ್ಕ್ ನಾಗರಿಕ್ ಸಂಘಟನ್ ಮತ್ತು ಇತರ ಸಂಘ ಸಂಸ್ಥೆಗಳು ಹಮ್ ಅಗರ್ ಊಟೆ ನಹೀ ತೋ(ನಾವೆದ್ದು ನಿಲ್ಲದಿದ್ದರೆ) ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಹತ್ರಾಸ್ ಕೇಸ್: ಅ.29ಕ್ಕೆ ದೇಶಾದ್ಯಂತ ಪ್ರತಿಭಟನೆಗೆ ಮಹಿಳಾ ಸಂಘಟನೆಗಳ ಕರೆ
“ನಾವೆದ್ದು ನಿಲ್ಲದಿದ್ದರೆ” ಎಂಬ ಆಂದೋಲನವನ್ನು ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯ ಮೂರನೇ ವರ್ಷದ ಹುತಾತ್ಮ ದಿನದಂದು ಪ್ರಾರಂಭಿಸಲಾಗಿದೆ. ಈ ಆಂದೋಲನ ಈಗ ದೇಶಾದ್ಯಂತ 400 ಕ್ಕೂ ಹೆಚ್ಚು ಮಹಿಳಾ ಗುಂಪುಗಳನ್ನು ಹೊಂದಿದೆ. ಇದರಲ್ಲಿ LGBTQI ಸಂಘಟನೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳನ್ನು ಒಳಗೊಂಡಿದೆ.
ದೆಹಲಿಯ ಮಂಗೋಲ್ಪುರಿ, ದಕ್ಷಿಣ ದೆಹಲಿಯ ಜಗದಾಂಬಾ ಕ್ಯಾಂಪ್, ಈಶಾನ್ಯ ದೆಹಲಿಯ ಗುರ್ಮಂಡಿ, ನಿಜಾಮುದ್ದೀನ್ ಮತ್ತು ಕೈಗಾರಿಕಾ ಪಟ್ಟಣಗಳಾದ ನರೇಲಾ ಮತ್ತು ಬವಾನಾದಲ್ಲಿ ಸೇರಿದಂತೆ ದಿನವಿಡೀ ಪ್ರತಿಭಟನೆಗಳು ನಡೆದವು. ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಬಹುತೇಕ ಮಂದಿ ಆರ್ಥಿಕವಾಗಿ ದುರ್ಬಲರಾಗಿದ್ದು, ಕಟ್ಟಡ ನಿರ್ಮಾಣ ಮತ್ತು ಗೃಹೋಪಯೋಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
“ಹತ್ರಾಸ್ನಲ್ಲಿ ಆ ಹುಡುಗಿಗೆ ಏನಾಯಿತೋ ಅದು ಯಾವುದೇ ದಿನವಾದರೂ ನಮಗೆ ಸಂಭವಿಸಬಹುದು. ಇಲ್ಲಿ ನಾನಿರುವ ಪ್ರದೇಶದಲ್ಲಿ ಬೀದಿ ದೀಪಗಳಿಲ್ಲ, ಗಂಡಸರು ಕುಡಿದು, ಅಸಭ್ಯವಾಗಿ ವರ್ತಿಸುತ್ತಾ, ನಮ್ಮೆಡೆ ನೋಡುತ್ತಾರೆ. ಇದು ನಾವು ದಿನನಿತ್ಯ ಅನುಭವಿಸುವ ಯಾತನೆಯಾಗಿದೆ” ಎಂದು ಪ್ರತಿಭಟನಾ ನಿರತ ಮಹಿಳೆ ಗೋಳು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಮೇಲ್ವಿಚಾರಣೆ ಮಾಡಲಿ: ಹತ್ರಾಸ್ CBI ತನಿಖೆ ಮೇಲ್ವಿಚಾರಣೆಗೆ ಸುಪ್ರೀಂ ನಕಾರ
2019 ರ ಸಮೀಕ್ಷೆಯ ಪ್ರಕಾರ, 40% ಕ್ಕೂ ಹೆಚ್ಚು ಮಹಿಳೆಯರು ಮನೆಯ ಹೊರಗಡೆ ಸುರಕ್ಷಿತರಾಗಿಲ್ಲ ಎಂದು ವರದಿ ಮಾಡಿದೆ. ಜೊತೆಗೆ ಸಮೀಕ್ಷೆಯಲ್ಲಿ ಸುಮಾರು 80% ಜನರು ದೇಶದ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಅಧಿಕಾರಿಗಳು ಹೆಚ್ಚಿನದನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಯ ಇತ್ತೀಚಿನ ಕ್ರೈಮ್ ಇನ್ ಇಂಡಿಯಾ ವರದಿಯು 2019 ರಲ್ಲಿ ಪ್ರತಿದಿನ 88 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ವರದಿ ಮಾಡಿದೆ.
ಆದ್ದರಿಂದ, “ಬದ್ಲಾವ್ ಚೈಹಿಯೆ, ಬದ್ಲಾ ನಹಿನ್” (ಬದಲಾವಣೆ ಬೇಕು, ಸೇಡು ತೀರಿಸಿಕೊಳ್ಳುವುದಲ್ಲ) ಎಂದು ಪ್ರತಿಭಟನೆಯ ಸಮಯದಲ್ಲಿ ಮಹಿಳೆಯರು ಘೋಷಣೆಗಳನ್ನು ಕೂಗಿದ್ದಾರೆ.
ಎಸ್ಎನ್ಎಸ್ನ ಸ್ಥಾಪಕರಾದ ಅಂಜಲಿ ಭಾರದ್ವಾಜ್ ಅವರು ದೇಶದಲ್ಲಿ ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ರಾಜ್ಯದ ವಿವಿಧ ಆಯೋಗಗಳ ಮಹತ್ವವನ್ನು ತಿಳಿಸಿದ್ದಾರೆ. “ಎಸ್ಸಿ, ಎಸ್ಟಿಗಳು ಮತ್ತು ಮಹಿಳೆಯರ ಆಯೋಗಗಳ ಜೊತೆಗೆ ನ್ಯಾಯಾಂಗ, ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅವುಗಳು ವಿಫಲವಾದಾಗ ಜನರು ಕಾನೂನು ಮತ್ತು ಸುವ್ಯವಸ್ಥೆ ಪ್ರಕ್ರಿಯೆ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ” ಎಂದಿದ್ದಾರೆ.