“ತನಗೆ ಕೊರೊನಾ ಸೋಂಕು ದೃಢಪಟ್ಟರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳುವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾಗೆ ಈಗ ಕೊರೊನಾ ದೃಢಪಟ್ಟಿದೆ.
ಈ ಕುರಿತು ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಅನುಪಮ್ ಹಝ್ರಾ ಟ್ವೀಟ್ ಮಾಡಿದ್ದಾರೆ. ಸಧ್ಯ, ಅವರನ್ನು ಕಲ್ಕತ್ತಾದ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ವಿರುದ್ಧ ವಿವಾದಿತ ಹೇಳಿಕೆ; ಬಿಜೆಪಿ ನಾಯಕನ ವಿರುದ್ಧ FIR
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ತಬ್ಬಿಕೊಳ್ಳುವುದಾಗಿ ಹೇಳಿಕೆ ನೀಡಿದ್ದ ಅನುಪಮ್ ಹಝ್ರಾ ವಿರುದ್ಧ ತೃಣಮೂಲ ಕಾಂಗ್ರೆಸ್ ಈ ಹಿಂದೆ ದೂರು ದಾಖಲಿಸಿತ್ತು.
ದಕ್ಷಿಣ 24 ಪರಗಣಗಳಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹಝ್ರಾ “ನಾನು ಕೊರೊನಾ ಸೋಂಕಿಗೆ ಒಳಗಾದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವ ಮೂಲಕ, ಅವರಿಗೆ ಕೊರೊನಾ ಸೋಂಕಿನಿಂದ ಬಳಲುವ ಕುಟುಂಬದವರ ನೋವನ್ನು ಅರ್ಥ ಮಾಡಿಸುತ್ತಿದ್ದೆ” ಎಂದಿದ್ದರು.
ಇದನ್ನೂ ಓದಿ: ’ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ’: ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ವಿರೋಧ
ಹಝ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿಯ ಹಿರಿಯ ಮುಖಂಡ ಸುಗತೊ ರಾಯ್ “ಇದು ಕೇಸರಿ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಮಾತುಗಳು ಮತ್ತು ಹೇಳಿಕೆಗಳು ಬಿಜೆಪಿ ಮುಖಂಡರಿಂದ ಮಾತ್ರ ಬರಲು ಸಾಧ್ಯ. ಅಂತಹ ಹುಚ್ಚು ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ” ಎಂದಿದ್ದರು. ತೃಣಮೂಲ ಕಾಂಗ್ರೆಸ್ನ ಸಿಲಿಗುರಿ ಘಟಕವೂ ಬಿಜೆಪಿ ನಾಯಕ ಹಝ್ರಾ ವಿರುದ್ಧ ರ್ಯಾಲಿ ನಡೆಸಿತ್ತು.
ದೂರು ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹಝ್ರಾ ’ನನ್ನ ಹೇಳಿಕೆ ಕೀಳಾಗಿ ಕಾಣುತ್ತಿದ್ದರೆ, ಮಮತಾ ಬ್ಯಾನರ್ಜಿ ಕೂಡ ಪ್ರಧಾನ ಮಂತ್ರಿಯ ಬಗ್ಗೆ ಇಂತಹ ಟೀಕೆಗಳನ್ನು ಮಾಡಿದ್ದಾರೆ. ಎರಡನೆಯದಾಗಿ, ನನ್ನ ವಿರುದ್ಧ ಒಂದು ಎಫ್ಐಆರ್ ದಾಖಲಾಗಿದ್ದರೆ, ಟಿಎಂಸಿ ನಾಯಕರ ವಿರುದ್ಧ ಕನಿಷ್ಠ 10 ಎಫ್ಐಆರ್ ದಾಖಲಿಸಬೇಕು ’ಎಂದಿದ್ದರು. ಆದರೆ ಈ ವಿವಾದದಿಂದ ರಾಜ್ಯ ಬಿಜೆಪಿ ಘಟಕ ದೂರ ಉಳಿದಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ನಿರುದ್ಯೋಗ ದರ, ದೇಶದ ಒಟ್ಟು ನಿರುದ್ಯೋಗ ದರಕ್ಕಿಂತ ಉತ್ತಮ: ಮಮತಾ ಬ್ಯಾನರ್ಜಿ