ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವುದಾಗಿ ಹೇಳಿಕೆ ನೀಡಿದ್ದ ನೂತನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಝ್ರಾ ವಿರುದ್ಧ ತೃಣಮೂಲ ಕಾಂಗ್ರೆಸ್ ದೂರು ದಾಖಲಿಸಿದೆ.
ದಕ್ಷಿಣ 24 ಪರಗಣಗಳಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಹಜ್ರಾ, ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಅಪ್ಪಿಕೊಳ್ಳುವ ಮೂಲಕ, ಅವರಿಗೆ ಕೊರೊನಾ ಸೋಂಕಿನಿಂದ ಬಳಲುವ ಕುಟುಂಬದವರ ನೋವನ್ನು ಅರ್ಥ ಮಾಡಿಸುತ್ತಿದ್ದೆ ಎಂದಿದ್ದರು. ಹಜ್ರಾ ವಿರುದ್ಧ ಸಿಲಿಗುರಿ ಠಾಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಜಿಎಸ್ಟಿ ಪರಿಹಾರ: ಸಾಲ ಪಡೆಯುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಸಲಹೆ
‘ನಮ್ಮ ಕಾರ್ಯಕರ್ತರು ಕೊರೊನಾಕ್ಕಿಂತ ದೊಡ್ಡ ಶತ್ರು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುತ್ತಿದ್ದಾರೆ. ಅವರು (ಬಿಜೆಪಿ ಕಾರ್ಯಕರ್ತರು) ಮಾಸ್ಕ್ ಧರಿಸದೆ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುವುದಾದರೆ ಮಾಸ್ಕ್ ಧರಿಸದೆಯೇ ಕೋವಿಡ್ 19 ವಿರುದ್ಧವೂ ಹೋರಾಡಬಹುದು ಎಂದು ಅವರು ಭಾವಿಸುತ್ತಾರೆ‘ ಎಂದು ಹಝ್ರಾ ಹೇಳಿದ್ದಾರೆ.
ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾದ ಮಾಜಿ ತೃಣಮೂಲ ಕಾಂಗ್ರೆಸ್ನ ಸಂಸದ ಹಜ್ರಾ ಅವರು ರಾಜ್ಯದಲ್ಲಿ ಕೋವಿಡ್ -19 ರೋಗಿಗಳ ಶವಗಳನ್ನು ಅಂತ್ಯಕ್ರಿಯೆ ನಡೆಸುತ್ತಿರುವ ವಿಧಾನದ ಬಗ್ಗೆ ಮಮತಾ ಬ್ಯಾನರ್ಜಿ ಅವರ ಆಡಳಿತವನ್ನು ಟೀಕಿಸಿದ್ದಾರೆ.
‘ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಸೀಮೆ ಎಣ್ಣೆ ಬಳಸುತ್ತಾರೆ. ಹೆತ್ತವರ ಮುಖವನ್ನು ನೋಡಲು ಮಕ್ಕಳಿಗೆ ಅವಕಾಶವಿರಲಿಲ್ಲ. ನಾವು ಸತ್ತ ನಾಯಿ, ಬೆಕ್ಕುಗಳಿಗೂ ಹೀಗೆ ಮಾಡುವುದಿಲ್ಲ‘ ಎಂದಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದ ನಿರುದ್ಯೋಗ ದರ, ದೇಶದ ಒಟ್ಟು ನಿರುದ್ಯೋಗ ದರಕ್ಕಿಂತ ಉತ್ತಮ: ಮಮತಾ ಬ್ಯಾನರ್ಜಿ
ಹಝ್ರಾ ಅವರ ಹೇಳಿಕೆಯನ್ನು ಖಂಡಿಸಿರುವ ಟಿಎಂಸಿಯ ಹಿರಿಯ ಮುಖಂಡ ಸುಗತೊ ರಾಯ್ ಇದು ಕೇಸರಿ ಪಕ್ಷದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಮಾತುಗಳು ಮತ್ತು ಹೇಳಿಕೆಗಳು ಬಿಜೆಪಿ ಮುಖಂಡರಿಂದ ಮಾತ್ರ ಬರಬಹುದು. ಅಂತಹ ಹುಚ್ಚು ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಸಿಲಿಗುರಿ ಘಟಕವೂ ಬಿಜೆಪಿ ನಾಯಕ ಹಝ್ರಾ ವಿರುದ್ಧ ರ್ಯಾಲಿ ನಡೆಸಿದೆ.
ದೂರು ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹಝ್ರಾ ’ನನ್ನ ಹೇಳಿಕೆ ಕೀಳಾಗಿ ಕಾಣುತ್ತಿದ್ದರೆ, ಮಮತಾ ಬ್ಯಾನರ್ಜಿ ಕೂಡ ಪ್ರಧಾನ ಮಂತ್ರಿಯ ಬಗ್ಗೆ ಇಂತಹ ಟೀಕೆಗಳನ್ನು ಮಾಡಿದ್ದಾರೆ. ಎರಡನೆಯದಾಗಿ, ನನ್ನ ವಿರುದ್ಧ ಒಂದು ಎಫ್ಐಆರ್ ದಾಖಲಾಗಿದ್ದರೆ, ಟಿಎಂಸಿ ನಾಯಕರ ವಿರುದ್ಧ ಕನಿಷ್ಠ 10 ಎಫ್ಐಆರ್ ದಾಖಲಿಸಬೇಕು ’ಎಂದಿದ್ದಾರೆ. ಆದರೆ ಈ ವಿವಾದದಿಂದ ರಾಜ್ಯ ಬಿಜೆಪಿ ಘಟಕ ದೂರ ಉಳಿದಿದೆ.