ಪೂರ್ವ ಲಡಾಕ್ನ ವಾಸ್ತವಿಕ ನಿಯಂತ್ರಣ ಗಡಿ ರೇಖೆಯ (ಎಲ್ಎಸಿ) ಬಳಿಯಿರುವ ಪಾಂಗೊಂಗ್ ತ್ಸೋದಲ್ಲಿ ಇತ್ತೀಚೆಗೆ ಉಂಟಾಗಿರುವ ಉದ್ವಿಗ್ನತೆಗೆ ಭಾರತವೇ ಕಾರಣ ಎಂದು ಆರೋಪಿಸಿರುವ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿ, ಕೂಡಲೇ ಭಾರತ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿ ಎಂದು ಒತ್ತಾಯಿಸಿದೆ.
“ಭಾರತೀಯ ಸೈನಿಕರು ಲಡಾಕ್ನ ವಾಸ್ತವಿಕ ನಿಯಂತ್ರಣ ಗಡಿ ರೇಖೆಯನ್ನು ಉಲ್ಲಂಘಿಸಿದ್ದಾರೆ, ಮತ್ತು ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಮತ್ತು ರೆಕಿನ್ ಪಾಸ್ ಅನ್ನು ದಾಟಿದ್ದಾರೆ” ಎಂದು ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯುಟಿಸಿ) ಆರೋಪಿಸಿದೆ. ಜೊತೆಗೆ ಅಗತ್ಯ ಪ್ರತಿರೋಧ ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ಪಿಎಲ್ಎ ಎಚ್ಚರಿಸಿದೆ.
ಅಧಿಕೃತ ಸುದ್ದಿ ಸಂಸ್ಥೆ, ಕ್ಸಿನ್ಹುವಾ ಡಬ್ಲ್ಯುಟಿಸಿ ವಕ್ತಾರ ಹಿರಿಯ ಕರ್ನಲ್ ಜಾಂಗ್ ಶೂಯಿಲಿಯ ಹೇಳಿಕೆಯನ್ನು ಉಲ್ಲೇಖಿಸಿ “ಆಗಸ್ಟ್ 31 ರಂದು, ಭಾರತೀಯ ಸೈನ್ಯವು ಎರಡೂ ದೇಶಗಳ ನಡುವೆ ಹಿಂದೆ ನಡೆದಿದ್ದ ಬಹು-ಹಂತದ ಮಾತುಕತೆಯಲ್ಲಿ ನಿರ್ಧರಿಸಿದ್ದ ಒಮ್ಮತವನ್ನು ಮುರಿದು ಕಾನೂನುಬಾಹಿರವಾಗಿ ಪಾಂಗೊಂಗ್ನ ದಕ್ಷಿಣ ದಂಡೆಯ ಬಳಿ ಮತ್ತೆ ಗಡಿ ದಾಟಿದೆ. ಇದು ಪ್ರಚೋದನಾಕಾರಿ ಮತ್ತು ಗಡಿಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ” ಎಂದು ಹೇಳಿದೆ.
“ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ತೀವ್ರವಾಗಿ ಉಲ್ಲಂಘಿಸುವ ಭಾರತದ ಈ ನಡೆಯು, ಗಡಿಯಲ್ಲಿನ ಶಾಂತಿಯನ್ನು ಹಾಳುಮಾಡುತ್ತದೆ. ಇದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ” ಎಂದು ಜಾಂಗ್ ಹೇಳಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
“ಭಾರತವು ತನ್ನ ಸೈನಿಕರನ್ನು ನಿಯಂತ್ರಿಸಬೇಕು ಮತ್ತು ಈ ಪ್ರದೇಶದಿಂದ ಹಿಂದೆ ಸರಿಯಬೇಕು. ಜೊತೆಗೆ ತನ್ನ ಬದ್ಧತೆಯನ್ನು ಪಾಲಿಸುವುದರೊಂದಿಗೆ, ಪರಿಸ್ಥಿತಿಯ ಬಿಗಡಾಯಿಸುವಿಕೆಯನ್ನು ತಪ್ಪಿಸಬೇಕು ಎಂದು ನಾವು ವಿನಂತಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: ಚೀನಾ ಭಾರತದ ಭೂಪ್ರದೇಶ ಅತಿಕ್ರಮಿಸಿದೆಯೆಂದು ಒಪ್ಪಿಕೊಂಡ ರಕ್ಷಣಾ ಸಚಿವಾಲಯ: ದಾಖಲೆ ಡಿಲಿಟ್!
“ಚೀನಾದ ಗಡಿ ಪಡೆಗಳು ಯಾವಾಗಲೂ ಎಲ್ಎಸಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುತ್ತವೆ. ನಮ್ಮ ಪಡೆ ಎಂದಿಗೂ ಗಡಿ ದಾಟುವುದಿಲ್ಲ. ವಾಸ್ತವ ಸಮಸ್ಯೆಗಳ ಬಗ್ಗೆ ಎರಡು ಕಡೆ ಗಡಿ ಪಡೆಗಳು ನಿಕಟ ಸಂವಹನ ನಡೆಸುತ್ತಿವೆ ”ಎಂದು ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತ-ಚೀನಾ ಮಿಲಿಟರಿ ಮತ್ತು ವಿದೇಶಾಂಗ ಅಧಿಕಾರಿ ಮಟ್ಟದಲ್ಲಿ ನಡುವೆ ನಡೆದ ಮಾತುಕತೆಯ ನಿರ್ಧಾರವನ್ನು ಧಿಕ್ಕರಿಸಿ ಚೀನಾ ಸೈನ್ಯ ಮತ್ತೆ ಪೂರ್ವ ಲಡಾಕ್ನಲ್ಲಿ ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಭಾರತ ಸರ್ಕಾರ ನಿನ್ನೆ ಹೇಳಿದೆ.
ಆಗಸ್ಟ್ 29 ಮತ್ತು 30 ರ ರಾತ್ರಿ ಚೀನಾ ಸೈನ್ಯವು ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳಲ್ಲಿ ತೊಡಗಿದೆ ಎಂದು ವರದಿಯಾಗಿದೆ.
ಪ್ಯಾಗೋಂಗ್-ತ್ಶೋ ಸರೋವರದ ಉತ್ತರ ತೀರದಲ್ಲಿ ಚೀನಾ ಸೈನ್ಯ ನಡೆಸಿದ ಪ್ರಯತ್ನವನ್ನು ಭಾರತೀಯ ಸೈನ್ಯವು ವಿಫಲಗೊಳಿಸಿದೆ ಮತ್ತು ಚೀನಾ ಸೈನ್ಯದ ಪ್ರಯತ್ನವನ್ನು ತಡೆಯಲು ಭಾರತವು ತಮ್ಮ ಸ್ಥಾನವನ್ನು ಬಲಪಡಿಸಿದೆ ಎಂದು ಭಾರತ ಸರ್ಕಾರ ಹೇಳಿದೆ.
ಮಾತುಕತೆಗಳ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿರುವ ಅದೇ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ತನ್ನ ಭೂಪ್ರದೇಶವನ್ನು ರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಸ್ತುತ ಸಮಸ್ಯೆಯನ್ನು ಬಗೆರಿಸಲು ಗಡಿಯಲ್ಲಿರುವ ಸುಶುಲ್ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಗಡಿ ಪಡೆಗಳು ಘರ್ಷಣೆ ನಡೆಸಿದ ನಂತರ ಎರಡೂ ದೇಶಗಳ ನಡುವೆ ಹಲವಾರು ಸಭೆಗಳು ನಡೆದಿವೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ: ಮತ್ತೆ ಲಡಾಖ್ ಗಡಿ ಅತಿಕ್ರಮಿಸಿದ ಚೀನಾ ಪಡೆಗಳು