ಮೇ ಆರಂಭದಲ್ಲಿ ಚೀನಾ ಪೂರ್ವ ಲಡಾಖ್ನಲ್ಲಿರುವ ಭಾರತೀಯ ಭೂಪ್ರದೇಶಕ್ಕೆ ನುಸುಳಿದೆ ಎಂದು ರಕ್ಷಣಾ ಸಚಿವಾಲಯ ತನ್ನ ವೆಬ್ಸೈಟ್ನ ಸುದ್ದಿ ವಿಭಾಗದಲ್ಲಿ ಒಪ್ಪಿಕೊಂಡಿದ್ದು, ಆದರೆ ಪ್ರಸ್ತುತ ಅದನ್ನು ತೆಗೆದು ಹಾಕಲಾಗಿದೆ.
ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ) ಯಲ್ಲಿ ಚೀನಾದ ಆಕ್ರಮಣಶೀಲತೆ ಹೆಚ್ಚುತ್ತಿದೆ ಮತ್ತು ಪ್ರಸ್ತುತ ನಿಲುವು ಧೀರ್ಘ ಕಾಲದವರೆಗೆ ನಿರೀಕ್ಷಿಲಾಗಿದೆ ಎಂದು ರಕ್ಷಣಾ ಸಚಿವಾಲಯದ ದಾಖಲೆಯಲ್ಲಿ ತಿಳಿಸಲಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಕೊಲ್ಲಲ್ಪಟ್ಟಿದ್ದರು.
ಜೂನ್ನಲ್ಲಿ ರಕ್ಷಣಾ ಇಲಾಖೆಯ ಪ್ರಮುಖ ಚಟುವಟಿಕೆಗಳನ್ನು ಪಟ್ಟಿ ಮಾಡಿರುವ ಅಧಿಕೃತ ದಾಖಲೆಯಲ್ಲಿ, ಸಚಿವಾಲಯವು ಚೀನಾ ಸೇನೆಯು ಮೇ ತಿಂಗಳಿನ 17-18 ರಂದು ಕುಗ್ರಾಂಗ್ ನಲಾ, ಗೊಗ್ರಾ ಮತ್ತು ಪಾಂಗೊಂಗ್ ತ್ಸೊದ ಉತ್ತರ ದಂಡೆಯ ಪ್ರದೇಶಗಳಲ್ಲಿ ಭಾರತದ ಕಡೆಗೆ ಅತಿಕ್ರಮಿಸಿದೆ ಎಂದು ಹೇಳಿದೆ. ಇದನ್ನು ಆಗಸ್ಟ್ 4 ರಂದು ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಇಂದು ಬೆಳಿಗ್ಗೆ ಅದನ್ನು ಡಿಲೀಟ್ ಮಾಡಲಾಗಿದೆ.
“ಚೀನಾ ಆಕ್ರಮಣದ ಪರಿಣಾಮವಾಗಿ, ಪರಿಸ್ಥಿತಿಯನ್ನು ತಗ್ಗಿಸಲು ಎರಡೂ ಕಡೆಯ ಸಶಸ್ತ್ರ ಪಡೆಗಳ ನಡುವೆ ತಳಮಟ್ಟದ ಸಂವಹನ ನಡೆಸಲಾಯಿತು. ಕಾರ್ಪ್ಸ್ ಕಮಾಂಡರ್ ಮಟ್ಟದ ಧ್ವಜ ಸಭೆ ಜೂನ್ 6, 2020 ರಂದು ನಡೆಯಿತು. ಆದಾಗ್ಯೂ, ಜೂನ್ 15 ರಂದು ಎರಡು ಕಡೆಯವರ ನಡುವೆ ಹಿಂಸಾತ್ಮಕ ಘರ್ಷನೆ ನಡೆದಿದ್ದು, ಇದರ ಪರಿಣಾಮವಾಗಿ ಎರಡೂ ಕಡೆಯವರು ಸಾವನ್ನಪ್ಪಿದ್ದಾರೆ” ಎಂದು ದಾಖಲೆ ಹೇಳಿತ್ತು.
ಜೂನ್ ತಿಂಗಳನ್ನು ಮಾತ್ರ ಉಲ್ಲೇಖಿಸುವ ಡಾಕ್ಯುಮೆಂಟ್ ನಂತರದ ಮಿಲಿಟರಿ ಮಾತುಕತೆ ಜೂನ್ 22 ರಂದು ನಡೆಯಿತು ಎಂದು ಹೇಳಿದೆ. “ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಸಮ್ಮತಿ ಮತ್ತು ಸಂವಾದವು ಪರಸ್ಪರ ಸ್ವೀಕಾರಾರ್ಹ ಒಮ್ಮತಕ್ಕೆ ಬರುತ್ತಲೇ ಇದ್ದರೂ, ಪ್ರಸ್ತುತದ ಘರ್ಷನೆ ದೀರ್ಘಕಾಲದವರೆಗೆ ಇರುತ್ತದೆ” ಎಂದು ಅದು ಹೇಳಿದೆ.
ಪೂರ್ವ ಲಡಾಕ್ನಲ್ಲಿ ಚೀನಾದ ಏಕಪಕ್ಷೀಯ ಆಕ್ರಮಣದಿಂದ ಉಂಟಾಗುವ ಪರಿಸ್ಥಿತಿ ಸೂಕ್ಷ್ಮವಾಗಿದೆ ಮತ್ತು ವಿಕಾಸಗೊಳ್ಳುತ್ತಿರುವ ಪರಿಸ್ಥಿತಿಯ ಆಧಾರದ ಮೇಲೆ ನಿಕಟ ಮೇಲ್ವಿಚಾರಣೆ ಮತ್ತು ತ್ವರಿತ ಕ್ರಮ ಅಗತ್ಯ ಎಂದು ಸಚಿವಾಲಯ ಹೇಳಿದೆ.
ಸಚಿವಾಲಯವು ಚೀನಾದ ಆಕ್ರಮಣ ಒಪ್ಪಿಕೊಂಡಿದ್ದ ದಾಖಲೆಯನ್ನು ಅಳಿಸಿರುವುದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚೀನಾ ದಾಳಿ ಮಾಡಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಏಕೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಕಿಡಿಕಾರಿದ್ದಾರೆ.
Why is the PM lying?https://t.co/sEAcOTsZsY
— Rahul Gandhi (@RahulGandhi) August 6, 2020
ಪಂಗೊಂಗ್ ತ್ಸೊ ಬಳಿಯ ಫಿಂಗರ್ ಪ್ರದೇಶದಲ್ಲಿನ ಎರಡು ಸೇನೆಗಳ ನಡುವಿನ ಗಂಭೀರ ಭಿನ್ನಾಭಿಪ್ರಾಯಗಳು ಮತ್ತು ಚೀನಾ ಸೇನೆ ಖಾಲಿ ಮಾಡಲು ಹಿಂದೇಟು ಹಾಕಿದ್ದರಿಂದಾಗಿ ಭಾರತದ ಮತ್ತು ಚೀನಾದ ಉನ್ನತ ಮಿಲಿಟರಿ ಕಮಾಂಡರ್ಗಳು ಭಾನುವಾರ ಪೂರ್ವ ಲಡಾಕ್ನಲ್ಲಿ ಸಭೆ ನಡೆಸಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಮುಂದಿನ ಹಂತದ ನಿಷ್ಕ್ರಿಯತೆಯ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ.
ಓದಿ: ಭಾರತ-ಚೀನಾ ಸಂಘರ್ಷದ ನಂತರ ಚೀನಾದ ಬೆದರಿಕೆ ಎದುರಿಸಲು ಜಪಾನ್ ಕ್ಷಿಪಣಿಗಳನ್ನು ನಿಯೋಜಿಸಿದೆಯೇ?; ಫ್ಯಾಕ್ಟ್ಚೆಕ್