ಕೇರಳದ 9 ಆರ್ಎಸ್ಎಸ್ ಕಾರ್ಯಕರ್ತರಿಗೆ ಕೊಲ್ಲಂ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಎಂಟು ವರ್ಷಗಳ ಹಿಂದೆ ನಡೆದ ಕಡವೂರ್ ಜಯನ್ ಎಂಬ ಮತ್ತೊಬ್ಬ ಆರ್ಎಸ್ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಕುಮಾರ್ ಸಿ, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತೀರ್ಪು ಪ್ರಕಟಿಸಿದ್ದಾರೆ.
ಈ ಎಲ್ಲಾ ಒಂಬತ್ತು ಅಪರಾಧಿಗಳಿಗೆ ತಲಾ 71,500 ರೂ.ಗಳ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಅವರಿಗೆ ಇನ್ನೂ ನಾಲ್ಕು ವರ್ಷಗಳ ಹೆಚ್ಚಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ದಂಡದ ಹಣದಲ್ಲಿ ಹತ್ಯೆಗೀಡಾದ ಜಯನ್ ಅವರ ತಾಯಿಗೆ 2 ಲಕ್ಷ ರೂ ಮತ್ತು ಹಲ್ಲೆಗೊಳಗಾಗಿದ್ದ ರಘುನಾಥ ಪಿಳ್ಳೈಗೆ 25 ಸಾವಿರ ರೂ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
ವಿನೋದ್, ಗೋಪಾಕುಮಾರ್, ಸುಬ್ರಹ್ಮಣ್ಯನ್, ಪ್ರಿಯರಾಜ್, ಪ್ರಣವ್, ಅರುಣ್, ರಜನೀಶ್, ದಿನರಾಜ್ ಮತ್ತು ಶಿಜು ಎಂಬುವವರೆ ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. ಅವರಲ್ಲಿ ಎಂಟು ಜನರು ಕಡವೂರ್ನವರಾಗಿದ್ದಾರೆ.
ಜನವರಿ 7, 2012 ರಂದು ಕೊಲ್ಲಂನ ಕಡವೂರ್ ಜಂಕ್ಷನ್ನಲ್ಲಿರುವ ಜಯನ್ ಅವರನ್ನು ಅವರ ಮನೆಯ ಬಳಿ ಇರಿದು ಕೊಲ್ಲಲಾಗಿತ್ತು. ಜಯನ್ ಅವರ ದೇಹದಲ್ಲಿ 50ಕ್ಕೂ ಹೆಚ್ಚು ಗಾಯಗಳಾಗಿದ್ದವು ಎಂದು ಹೇಳಲಾಗಿತ್ತು. ಈ ದಾಳಿಯಲ್ಲಿ ಜಯನ್ ಅವರ ಸೋದರ ಮಾವ ರಘುನಾಥ ಪಿಳ್ಳೈ ಕೂಡ ಗಾಯಗೊಂಡಿದ್ದರು.
ಕೊಲ್ಲಂ ಹೆಚ್ಚುವರಿ ಸೆಷನ್ ನ್ಯಾಯಾಲಯವು ಈ ಹಿಂದೆ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಆರೋಪಿಗಳು ಅಂತಿಮ ವಾದ ಮಂಡಿಸಲು ಅವಕಾಶ ಸಿಕ್ಕಿಲ್ಲ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನಂತರ ಅಂತಿಮ ವಾದವನ್ನು ಆಲಿಸಲು ಪ್ರಕರಣವನ್ನು ಕೊಲ್ಲಂ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಅವರ ವಾದವನ್ನು ಆಲಿಸಿದ ನಂತರವೇ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಸಾಬೀತುಪಡಿಸಿ ಶಿಕ್ಷೆ ಘೋಷಿಸಿದೆ.
ಇದನ್ನೂ ಓದಿ: ದೆಹಲಿ ಗಲಭೆ: ಕೊಲೆ ಆರೋಪದಲ್ಲಿ ಆರ್ಎಸ್ಎಸ್ ಸದಸ್ಯರ ಬಂಧನ