ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಕೃಷಿ ಮಸೂದೆಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಮಸೂದೆಗೆ ಬೆಂಬಲಿಸದ ವಿರೋಧ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ, ರೈತರ ಸುಧಾರಣೆಯನ್ನು ಬಯಸುತ್ತಿಲ್ಲ ಎಂದಿದ್ದಾರೆ.
ಈ ಮಸೂದೆಗಳಿಂದ ಮಧ್ಯವರ್ತಿಗಳ ಬಗ್ಗೆ ಚಿಂತಿಸದೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ. ಇದರಿಂದಾಗಿ ರೈತರಿಗೆ ಲಾಭ ಹೆಚ್ಚಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಕೋಸಿ ರೈಲು ಮೆಗಾ ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮದ ನಂತರ ಮೋದಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!
’ಈ ಮಸೂದೆಗಳು ಕೃಷಿಯಲ್ಲಿ ರೈತರಿಗೆ ಹೊಸ ಸ್ವಾತಂತ್ರ್ಯ ನೀಡುತ್ತವೆ. ಅವರು ಈಗ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆ ಮತ್ತು ಅವಕಾಶಗಳನ್ನು ಹೊಂದಿರುತ್ತಾರೆ. ಮಧ್ಯವರ್ತಿಗಳಿಂದ ರೈತರನ್ನು ರಕ್ಷಿಸಲು ಇವುಗಳನ್ನು ತರುವುದು ಅಗತ್ಯವಾಗಿತ್ತು ಮಸೂದೆಗಳ ಅಂಗೀಕಾರಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ’ ಎಂದಿದ್ದಾರೆ ಪ್ರಧಾನಿ.
ಮಸೂದೆಗಳ ವಿರುದ್ಧ ಪ್ರತಿಭಟಿಸುವವರ ಬಗ್ಗೆ ಮಾತನಾಡಿ. ಇವರು ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರೈತರ ಲಾಭವನ್ನು ಅನ್ಯಾಯವಾಗಿ ಲೂಟಿ ಮಾಡುವ ಮಧ್ಯವರ್ತಿಗಳ ಪರವಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಪ್ರಧಾನಿಗೆ ವ್ಯಂಗ್ಯವಾಗಿ ಶುಭಾಶಯ ತಿಳಿಸಿದ ಎಚ್ಡಿಕೆ, ಸಿದ್ದರಾಮಯ್ಯ!
ವಿರೋಧ ಪಕ್ಷಗಳು ಈ ಮಸೂದೆಗೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಂಜಾಬ್ನ ಕಾಂಗ್ರೆಸ್ ಸಂಸದರು ಗುರುವಾರ ಸಂಸತ್ತಿನಲ್ಲಿ ಮಸೂದೆಗಳ ಪ್ರತಿಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪಂಜಾಬ್ ರಾಜ್ಯದ ರೈತರು ಸೆಪ್ಟೆಂಬರ್ 24 ರಿಂದ ಸೆಪ್ಟೆಂಬರ್ 26 ರವರೆಗೆ ರಾಜ್ಯಾದ್ಯಂತ ‘ರೈಲ್ ರೋಕೊ’ ಆಂದೋಲನವನ್ನು ನಡೆಸಲಿದ್ದಾರೆ.
ಈ ಮಧ್ಯೆ ನಿನ್ನೆ ಕೇಂದ್ರ ಸಚಿವೆ ಹಾಗೂ ಶಿರೋಮಣಿ ಅಕಾಲಿ ದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಂದಿರುವ ಹೊಸ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆ ಬಗ್ಗೆ ನಿರ್ದೇಶಕ ಪವನ್ ಕುಮಾರ್ ’ಯೂ ಟರ್ನ್’!
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020 ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಅನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಸೆಪ್ಟೆಂಬರ್ 13 ರಂದು ಅಂಗೀಕರಿಸಲಾಗಿದೆ.