ತೀರ ಸೇರದ ಬದುಕು
——————————
ಗೋಜಲಾದ ಬದುಕಿನ
ಅಸ್ಪಷ್ಟ ಗೆರೆಯೊಳಗೆ
ಊರದಾರಿಗೆ ಸರಳರೇಖೆಯ
ಅರಸಲೆಂತು?
ದಾರಿದೀಪ ಬೆಳಗುತ್ತಿಲ್ಲ, ಸುಡುವ ತಾಪಕೂ
ಮರುಕ ಹುಟ್ಟುತ್ತಿಲ್ಲ
ನಿನ್ನೆ ಮೊನ್ನೆಯವರೆಗೆ ಹನಿಯುತ್ತಿದ್ದ ಬೆವರು
ಬಣ್ಣ ಬದಲಿಸಿಕೊಂಡಿದೆ!
ಕಣ್ಣಿಗೆಟುಕದ ಊರು, ಕೈಗೆಟುಕದ ಕೂಳು
ಕಳಚಿಕೊಳ್ಳಬಯಸದ ಬಾಳು
ದಾಸರ ಪದವೇಕೋ ಈಗೀಗ
ಹಿತವೆನಿಸುವುದಿಲ್ಲ.
ಜಗದ ಧ್ಯಾನಸ್ಥ ಮೌನಕ್ಕೆ
ಭಂಗವೊಡ್ಡಿದ್ದು
ಬರಿಗಾಲ ಸಪ್ಪಳ, ಕಿಟಾರನೆ
ಕಿರುಚಿದ ಬಾಣಂತಿಯ ಹೆರಿಗೆ ಬೇನೆ
ಅಶುಭ ಘಳಿಗೆಯ ಜನನ- ಮರಣ
ಹೊಟ್ಟೆ ಸೀಳಿ ಬಂದ ಹಸಿವು..
ಹಗಲ ಅವಿಶ್ರಾಂತ ನಡಿಗೆಗೆ
ಇರುಳು ತಲೆಯಾನಿಸಿದ್ದೇ ಹಾಸಿಗೆ
ಬೆಳಗು ಚದುರುವುದರೊಳಗೆ
ವಿಶ್ರಾಂತ ನಿದ್ರೆ!
ಹಳಿಯ ಹಳಿಯುವಂತಿಲ್ಲ
ನಿಟ್ಟುಸಿರ ಹಂಬಲಿಸುವ ಏದುಸಿರಿನೊಡನೆ
ಯಮರಾಯನಿಗೇಕೋ ತೀರದ ಹಗೆ
ಗೂಡ್ಸ್ ರೈಲು, ಟ್ರಕ್ಕು, …
ಅವತರಿಸಿದ್ದು ಅವನದೇ ರೂಪ ತಾಳಿ
ಕನಸು ಊರ ಸೇರಿದ್ದು ಹೆಣವಾಗಿ
ಹುಟ್ಟು, ಸಾವು ನಡುವೆ ಈ ಹೊಟ್ಟೆ
ಮಿಂಚಿ ಹೋದ ದುರಂತಗಳ ಬೆನ್ನಿಗಂಟಿರುವ
ಒಣರೊಟ್ಟಿ, ಸುಟ್ಟ ಪಾದ, ಕನಸ ಹೊದ್ದ ಹೆಣ..
ನಿಗೂಢವಾದದ್ದೇನನ್ನೂ ಉಳಿಸಿಲ್ಲ.