ನಮಸ್ಕಾರ ಜನರಲ್
ಹೇಗಿದ್ದೀರಿ?
ಎದೆ ಭುಜದ ಮೇಲಿನ
ಮೆಡಲ್ಗಳು
ಕ್ಷೇಮವೇ.
ಅದಕ್ಕೆ ಇನ್ನೊಂದಷ್ಟು
ಬಂದು
ನೇತುಬಿದ್ದವೇ.
ಹೇಗಿದ್ದಾವೆ ನಿಮ್ಮ ಅಸ್ತ್ರ ಶಸ್ತ್ರ ಶಸ್ತ್ರಾಸ್ತ್ರಗಳು
ಸಾಮೂಹಿಕ ಹತ್ಯೆಯ ಹತ್ಯಾರಗಳು?
ಹೊತ್ತುಹೊತ್ತಿಗೆ ಕವಾಯತು ಮಾಡುತ್ತಿರುವಿರಾ?
ಧರ್ಮ ರಕ್ಷಣೆಗೆ ಸಾಥ್ ಕೊಡುತ್ತಿರುವಿರಾ?
ಇಲ್ಲಿ ಅಕ್ಕಿ ಬೇಳೆ ಹಿಟ್ಟು ರೊಟ್ಟಿ
ಎಲ್ಲವೂ ತುಟ್ಟಿ.
ಮಕ್ಕಳು ಮಲಗಿದ್ದಾವೆ
ಹಸಿದು
ಕಿಸಿದು ಹೇಳುತ್ತಿವೆ ಜಾಹೀರಾತು ‘ನಾಳಿನ ಸ್ವರ್ಗಕ್ಕಾಗಿ ಸಹಿಸಿಕೊಳ್ಳಿ’
ಮನೆಮನೆಗಳಲ್ಲಿ
ಸಾವು
ಬೀದಿಬೀದಿಗಳಲ್ಲಿ
ಚಿತೆ
ಉರಿದು ಬೆಳಕಾಗಿದೆ.
ಏನು ಜನರಲ್,
ನಿಮ್ಮ ಟ್ಯಾಂಕರ್ ಗಳ
ಮಹಾನ್ ಶಕ್ತಿ
ಹೆಕ್ಟೇರುಗಟ್ಟಲೆ ಕಾಡನ್ನ
ಕ್ಷಣಾರ್ಧದಲ್ಲಿ ಸುಡಬಲ್ಲದು, ನೂರಾರು ಜನರ ಉಸಿರ
ತೆಗೆಯಬಲ್ಲದು.
ಆದರೂ ಒಂದು ದೋಷವಿದೆ
ಅದಕ್ಕೊಬ್ಬ
ಡ್ರೈವರ್ ಬೇಕು!
ಮಾನ್ಯ ಜನರಲ್,
ನಿಮ್ಮ ಬಾಂಬರ್ಗಳಿಗೇನು ಕಮ್ಮಿ ಶಕ್ತಿಯಾ?!
ಹಾರುವುದು ಗಾಳಿಗಿಂತಲೂ ವೇಗ
ಆನೆಗಿಂತಲೂ
ಹೆಚ್ಚು ತೂಕ
ಹೊರ ಬಲ್ಲದು.
ಆದರೂ ಇದಕ್ಕೂ ಒಂದು ದೋಷವಿದೆ
ಒಬ್ಬ
ಮೆಕ್ಯಾನಿಕ್ ಇಲ್ಲದೆ ಹಾರುವುದು ಹೇಗೆ?
ಸ್ವಾಮಿ ಜನರಲ್,
ಮನುಷ್ಯ ಬಹುಪಯೋಗಿ.
ಹಾರಬಲ್ಲ ಮತ್ತು ಕೊಲ್ಲಲೂ ಬಲ್ಲ.
ಆದರೆ
ಒಂದು ದೋಷವಿದೆ:
ಅವನು
ಯೋಚಿಸಬಲ್ಲ.
(ಬಟ್ರೋಲ್ಟ್ ಬ್ರೆಕ್ಟನ ಪದ್ಯ ಓದಿ ಅದರ ಸಾರಾಂಶ)
– ನಟರಾಜ್ ಹೊನ್ನವಳ್ಳಿ
(ತುಮಕೂರು ಜಿಲ್ಲೆಯ ತಿಪಟೂರಿನವರದಾದ ನಟರಾಜ್ ಹೊನ್ನವಳ್ಳಿ ಖ್ಯಾತ ನಾಟಕಕಾರ ಮತ್ತು ರಂಗ ನಿರ್ದೇಶಕರು. ಬ್ರೆಕ್ಟ್, ಚಾಕೋ ಸೇರಿದಂತೆ ವಿಶ್ವವಿಖ್ಯಾತ ರಂಗಕರ್ಮಿಗಳ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)
ಇದನ್ನೂ ಓದಿ: ‘ಬಾ ಇಲ್ಲಿ ಸಂಭವಿಸು’ವ ಹೊಸ ಅವತಾರದಲ್ಲೇ : ನಟರಾಜ್ ಹೊನ್ನವಳ್ಳಿಯವರ ಪದ್ಯ