ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಕ್ರಾಂತಿಕಾರಿ ಕವಿ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರನ್ನು ಬಿಡುಗಡೆಗೊಳಿಸುವಂತೆ ಕನ್ನಡದ ಪ್ರಸಿದ್ದ ಸಾಹಿತಿಗಳು ಹಾಗೂ ಚಿಂತಕರು ಆಗ್ರಹಿಸಿದ್ದಾರೆ.
ಧೀರ್ಘ ಕಾಲದ ಬಂಧನದಲ್ಲಿರುವ ಅವರ ವಿರುದ್ಧ ಪೊಲೀಸರು ಇದುವರೆಗೂ ಚಾರ್ಜ್ ಶೀಟ್ ಹಾಕಿಲ್ಲ. ನ್ಯಾಯಾಂಗ ವಿಚಾರಣೆಯನ್ನೂ ಶುರುಮಾಡಿಲ್ಲ. ಜನಪರ ಹೋರಾಟಗಾರ, ಮಾನವ ಹಕ್ಕುಗಳ ಪ್ರತಿಪಾದಕರನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಹೀಗೆ ಬಂಧಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ಅವರು ಹೇಳಿದ್ದಾರೆ.
ಜಿ. ರಾಮಕೃಷ್ಣ, ಜಿ.ಕೆ. ಗೋವಿಂದರಾವ್, ದೇವನೂರು ಮಹಾದೇವ, ಕೆ. ಮರುಳಸಿದ್ದಪ್ಪ, ಬಾನು ಮುಷ್ತಾಕ್, ಡಿ.ಎಸ್. ನಾಗಭೂಷಣ, ರಹಮತ್ ತರೀಕೆರೆ, ಕೋಡಿಹಳ್ಳಿ ಚಂದ್ರಶೇಖರ, ಬಂಜಗೆರೆ ಜಯಪ್ರಕಾಶ್, ಎನ್. ವೆಂಕಟೇಶ, ಲಕ್ಷ್ಮೀನಾರಾಯಣ ನಾಗವಾರ, ಮಾವಳ್ಳಿ ಶಂಕರ, ಕೆ. ಶರೀಫಾ, ರೂಪ ಹಾಸನ, ಆರ್.ಜಿ. ಹಳ್ಳಿ ನಾಗರಾಜ, ರವಿಕುಮಾರ್ ಬಾಗಿ ಮುಂತಾದದವರು ಈ ಹೇಳಿಕೆಗೆ ಸಹಮತ ಸೂಚಿಸಿದ್ದು, ಕವಿ ವರವರ ರಾವ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕುತ್ತಿಲ್ಲ ಎಂದು ತಿಳಿದು ಆಘಾತ ಆಗಿದೆ. ಅವರ ಅತ್ಯುತ್ತಮ ಚಿಕಿತ್ಸೆಗೆ ಮಹಾರಾಷ್ಟ್ರ ಸರ್ಕಾರ ತತ್ ಕ್ಷಣ ವ್ಯವಸ್ಥೆ ಮಾಡಬೇಕು. ಅವರ ಆರೋಗ್ಯವನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಬೇಕಾದ್ದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ ಲೋಪವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಚಾರಣಾಧೀನ ಖೈದಿಯೂ ಸೇರಿದಂತೆ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯ. ಆರೋಗ್ಯ ಸುಧಾರಣೆ ಆಗುತ್ತಿದ್ದಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ನಂತರ ಅವರ ವಿಚಾರಣೆಯನ್ನು ಮುಂದುವರಿಸಬಹುದಾಗಿದೆ. ಅವರ ವಯಸ್ಸು, ಆರೋಗ್ಯ ಇವುಗಳ ಹಿನ್ನೆಲೆಯಲ್ಲಿ ತುರ್ತಾಗಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಕವಿ ವರವರ ರಾವ್ರನ್ನು ಕೊಲ್ಲಬೇಡಿ! ಕುಟುಂಬ ಸದಸ್ಯರ ಮನವಿ