ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾಗಿದ್ದ ಡಾ.ಅಂಬೇಡ್ಕರ್ ಹಾಸ್ಟೆಲ್ ಅನ್ನು ಅಕ್ರಮ ವಿದೇಶಿಗರನ್ನು ಬಂಧಿಸುವ ಕೇಂದ್ರವಾಗಿಸುವ ಯೋಜನೆ ಕೈಬಿಡಲಾಗಿದೆ. 2010-11 ರಲ್ಲಿ ಮಾಯಾವತಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳಿಗಾಗಿ ಈ ಕಟ್ಟಡ ನಿರ್ಮಿಸಲಾಗಿತ್ತು.
ಹಾಸ್ಟೆಲ್ ದೆಹಲಿ-ಮೀರತ್ ಹೆದ್ದಾರಿಗೆ ಹತ್ತಿರದಲ್ಲಿದ್ದು, ಆರಂಭದಲ್ಲಿ ಪಶ್ಚಿಮ ಯುಪಿ ಮತ್ತು ಪಕ್ಕದ ಪ್ರದೇಶಗಳ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ವಸತಿ ಪಡೆಯುತ್ತಿದ್ದರು. ಕಳೆದ ಐದು ವರ್ಷಗಳಿಂದ ಹಾಸ್ಟೆಲ್ ಖಾಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ
ಹಾಸ್ಟೆಲ್ ಅನ್ನು ವೀಸಾ ನಿಯಮಗಳನ್ನು ಉಲ್ಲಂಘಿಸುವವರಿಗೆ ಮುಕ್ತ ಜೈಲಾಗಿ ಪರಿವರ್ತಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ವಸತಿ ನಿಲಯವನ್ನು ಮಾರ್ಪಾಡು ಮಾಡಲಾಗಿತ್ತು. ಕೊರೊನಾ ಕಾರಣದಿಂದ ಕೆಲ ಕಾಲ ಕೆಲಸ ನಿಲ್ಲಿಸಲಾಗಿದ್ದರೂ ಮತ್ತೆ ಬಂಧನ ಕೇಂದ್ರವನ್ನಾಗಿಸಲಾಗಿತ್ತು. ವಿದ್ಯುತ್ ಸೌಲಭ್ಯ, ನೀರು, ಶಾಚಾಲಯಗಳನ್ನು ನಿರ್ಮಿಸಲಾಗಿತ್ತು.
ಆದರೆ ಹಾಸ್ಟೆಲ್ ನಿರ್ಮಾಣಕ್ಕೆ ಮುನ್ನುಡಿ ಹಾಡಿದ್ದ ಮಾಜಿ ಮುಖ್ಯಮಂತ್ರಿ ಮಾಯಾವತಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸರ್ಕಾರವನ್ನು “ದಲಿತ ವಿರೋಧಿ” ಎಂದು ಕರೆದು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಯೋಜನೆ ಕೈಬಿಟ್ಟಿದೆ.
गाजियाबाद में बीएसपी सरकार द्वारा निर्मित बहुमंजिला डा. अम्बेडकर एससी/एसटी छात्र हास्टल को ’अवैध विदेशियों’ के लिए यूपी के पहले डिटेन्शन सेन्टर के रूप में कनवर्ट करना अति-दुःखद व अति-निन्दनीय। यह सरकार की दलित-विरोधी कार्यशैली का एक और प्रमाण। सरकार इसे वापस ले बीएसपी की यह माँग।
— Mayawati (@Mayawati) September 17, 2020
ಹಾಸ್ಟೆಲ್ ಅನ್ನು ಅಕ್ರಮ ವಿದೇಶಿಯರಿಗಾಗಿ ರಾಜ್ಯದ ಮೊದಲ ಬಂಧನ ಕೇಂದ್ರ ಮಾಡುವ ಯೋಜನೆ ಉತ್ತರಪ್ರದೇಶ ಸರ್ಕಾರ ರೂಪಿಸಿತ್ತು. ಹಾಸ್ಟಲ್ ನವೀಕರಣ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ ತಿಂಗಳ ವೇಳೆಗೆ ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇತ್ತು.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕದಿರಲು ಹೋರಾಟಗಾರ ರಾಮಕೃಷ್ಣಪ್ಪ ನೀಡಿದ ಒಂಬತ್ತು ಕಾರಣಗಳು
ಹಿರಿಯ ಆಡಳಿತ ಅಧಿಕಾರಿಯೊಬ್ಬರ ಪ್ರಕಾರ, ಕಟ್ಟಡವನ್ನು ಹಾಸ್ಟೆಲ್ನ ಮೂಲ ಸ್ಥಿತಿಗೆ ಹಿಂದಿರುಗಿಸಲಾಗಿದೆ. ಆರಂಭದಲ್ಲಿ, ವೀಸಾ ಮಾನದಂಡಗಳನ್ನು ಉಲ್ಲಂಘಿಸುವವರಿಗೆ ಒಂದು ವಿಭಾಗವನ್ನು ಬಂಧನ ಕೇಂದ್ರವಾಗಿ ಪರಿವರ್ತಿಸಲಾಗುತ್ತಿತ್ತು. ಈ ಕೇಂದ್ರವನ್ನು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಬೇಕಿತ್ತು. ಮತ್ತೆ ಜಿಲ್ಲೆಯಲ್ಲಿ ಹೊಸ ಬಂಧನ ಕೇಂದ್ರದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದಿದ್ದಾರೆ.
ಸರ್ಕಾರಗಳು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಇಂತಹ ಸ್ಥಿತಿಯಲ್ಲಿ ಇರುವ ಸವಲತ್ತುಗಳನ್ನು ಕಿತ್ತುಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಕಠಿಣವಾಗುತ್ತದೆ. ಮಾಯಾವತಿಯವರ ಒತ್ತಡಕ್ಕೆ ಮಣಿದ ಉತ್ತರಪ್ರದೇಶ ಸರ್ಕಾರ ಯೋಜನೆಯನ್ನು ಕೈಬಿಟ್ಟಿದೆ.