ನಟ ಸುಶಾಂತ್ ಸಿಂಗ್ ರಜಪೂತ್ಗೆ ಸಂಬಂಧಿಸಿದ ನಕಲಿ ಟ್ವೀಟ್ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು ನ್ಯೂಸ್ ಚಾನೆಲ್ ಆಜ್ ತಕ್ ಗೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ. ದಂಡದ ಜೊತೆಗೆ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆಯನ್ನೂ ಪ್ರಸಾರ ಮಾಡಬೇಕೆಂದು ಸೂಚಿಸಿದೆ.
ಸುಶಾಂತ್ ಅವರ ಮೃತದೇಹದ ಚಿತ್ರಗಳನ್ನು ಪ್ರಸಾರ ಮಾಡಿ ನಿಯಮಾವಳಿಗಳನ್ನು ಉಲ್ಲಂಘಿಸಿದ ‘ಇಂಡಿಯಾ ಟಿವಿ’ ನ್ಯೂಸ್ ಕೂಡ ಕ್ಷಮೆಯಾಚಿಸಬೇಕು ಎಂದು NBSA ಹೇಳಿದೆ. ‘ಝೀ ನ್ಯೂಸ್’ ಹಾಗೂ ‘ನ್ಯೂಸ್ 24’ಗೆ ಕೂಡ ಕೆಲವೊಂದು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಲು ಸೂಚಿಸಲಾಗಿದೆ.
ಎಬಿಪಿ ನ್ಯೂಸ್ ವಾಹಿನಿ ನಟನ ದೇಹದ ಕ್ಲೋಸ್ ಅಪ್ ಫೋಟೋಗಳನ್ನು ತೋರಿಸಿಲ್ಲ ಎಂದು ಪ್ರಾಧಿಕಾರ ಗಮನಿಸಿದ್ದರಿಂದ ಎಬಿಪಿಗೆ ಬರೀ ಎಚ್ಚರಿಕೆ ನೀಡಲಾಯಿತು.
ಇದನ್ನೂ ಓದಿ: ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರನ್ನು ಹಣಿಯಲು 80 ಸಾವಿರ ಫೇಕ್ ಅಕೌಂಟ್ಗಳ ಸೃಷ್ಠಿ : BJP ಕೈವಾಡದ ಆರೋಪ
NBSA ತನ್ನ ಆದೇಶದಲ್ಲಿ, ಆಜ್ ತಕ್ ಕಾರ್ಯಕ್ರಮ ಪ್ರಸಾರದ ವೇಳೆ ಟ್ವೀಟ್ಗಳನ್ನು ತೋರಿಸುವ ಮುನ್ನ ವಾಹಿನಿಯು ಸೂಕ್ತ ಪರಾಮರ್ಶೆ ನಡೆಸಿಲ್ಲ ಎಂದು ಹೇಳಿದೆ. ಅದೇ ಕಾರ್ಯಕ್ರಮಗಳ ವಿಡಿಯೋಗಳನ್ನು ವೆಬ್ಸೈಟ್ನಲ್ಲಿ, ಯೂಟ್ಯೂಬ್ ಅಥವಾ ಇತರ ಲಿಂಕ್ಗಳನ್ನು ಅಪ್ಲೋಡ್ ಮಾಡಲಾಗಿದ್ದರೆ ತಕ್ಷಣ ತೆಗೆದುಹಾಕಬೇಕು ಎಂದು ಸೂಚಿಸಿದೆ.
ಕ್ಷಮಾಯಾಚನೆಯ ಪಠ್ಯ ಹೇಗಿರಬೇಕು, ಯಾವ ದಿನ ಯಾವ ಸಮಯದಲ್ಲಿ ಈ ಕ್ಷಮಾಯಾಚನೆಯನ್ನು ಪ್ರಸಾರ ಮಾಡಬೇಕೆಂದು ಪ್ರಾಧಿಕಾರವೇ ನಿರ್ಣಯಿಸಲಿದ್ದು, ಸೂಚನೆಯನ್ನು ಪಾಲಿಸಿರುವ ಕುರಿತಂತೆ ಆಜ್ ತಕ್ ಸಿಡಿಯಲ್ಲಿ ಸೂಕ್ತ ಆಧಾರದೊಂದಿಗೆ ಪ್ರಸಾರವಾದ ಏಳು ದಿನಗಳೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ.
“ಸುದ್ದಿಯನ್ನು ವರದಿ ಮಾಡುವುದು ಸುದ್ದಿ ವಾಹಿನಿಯ ಕರ್ತವ್ಯವಾಗಿದ್ದರೂ, ಅದು ಸಾರ್ವಜನಿಕ ಹಿತಾಸಕ್ತಿಯಾಗಿರಬಹುದು ಮತ್ತು ವರದಿಯಾಗುವ ವ್ಯಕ್ತಿಗಳು ಅಂತಹ ಮಾಧ್ಯಮ ವರದಿಗಳಿಂದ ನ್ಯಾಯ ಪಡೆಯಬಹುದು. ಆದರೆ ಸುದ್ದಿಯನ್ನು ಪ್ರಸ್ತುತಪಡಿಸುವಾಗ ಸತ್ತವರ ಗೌಪ್ಯತೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸತ್ತವರನ್ನು ಅನಗತ್ಯ ಮಾಧ್ಯಮ ಪ್ರಜ್ವಲಿಸುವಿಕೆಗೆ ಒಳಪಡಿಸಬಾರದು ಎಂಬುದು ಮುಖ್ಯ” ಎಂದು ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಹೇಳಿದೆ.
ಆಜ್ ತಕ್ ಎಲ್ಲಾ ನಿಯಮಗಳನ್ನು ಮೀರಿತ್ತು. ಸುಶಾಂತ್ ಸಿಂಗ್ ಮನೆಯಲ್ಲಿ ತೀವ್ರ ದುಃಖದಲ್ಲಿರುವ ಅವರ ತಂದೆಯನ್ನು ಸಂದರ್ಶಿಸಲು ಪ್ರಯತ್ನಿಸಿದ್ದರು ಎಂದು ಪ್ರಾಧಿಕಾರ ತಿಳಿಸಿದೆ.
ಸೆಪ್ಟೆಂಬರ್ 3 ರಂದು, ಬಾಂಬೆ ಹೈಕೋರ್ಟ್ ಸುದ್ದಿ ಚಾನೆಲ್ಗಳಿಗೆ ಪ್ರಕರಣವನ್ನು ವರದಿ ಮಾಡುವಲ್ಲಿ ಸಂಯಮವನ್ನು ತೋರಿಸಬೇಕೆಂದು ಕೇಳಿತ್ತು. ಸೆಪ್ಟೆಂಬರ್ 11 ರಂದು ಈ ವಿಷಯ ಮತ್ತೆ ನ್ಯಾಯಾಲಯದ ಮುಂದೆ ಬಂದಾಗ, ಎಲೆಕ್ಟ್ರಾನಿಕ್ ಮಾಧ್ಯಮದ ಮೇಲೆ ರಾಜ್ಯದ ನಿಯಂತ್ರಣವಿಲ್ಲ ಎಂದು ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿತು.