ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳೆಯ ಸಂದೀಪ್ ಸಿಂಗ್, ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಮಾನನಷ್ಟ ಆರೋಪದ ಮೇಲೆ ಲೀಗಲ್ ನೋಟಿಸ್ ಕಳುಹಿಸಿದ್ದು, 200 ಕೋಟಿ ರೂ. ಪರಿಹಾರ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಪ್ರಕಟಿಸಿದ ಸಂದೀಪ್ ಸಿಂಗ್, “ಸುದ್ದಿ ಚಾನೆಲ್, ಕ್ರಿಮಿನಲ್ ಉದ್ದೇಶ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಹಲವಾರು ಸಂದೇಶಗಳನ್ನು ತನಗೆ ಕಳುಹಿಸಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೋಮು ದ್ವೇಷ ಹರಡುವ ಸುದ್ದಿ ಪ್ರಸಾರ: ಅರ್ನಾಬ್ ಗೋಸ್ವಾಮಿಗೆ ಶೋಕಾಸ್ ನೋಟಿಸ್!
“ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕರನ್ನು ಪ್ರಮುಖ ಸಂಚುಕೋರ ಮತ್ತು ಕೊಲೆಗಾರ” ಎಂದು ಸಂದೀಪ್ ಸಿಂಗ್ ನೀಡಿರುವ ಕಾನೂನು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
“ನ್ಯೂಸ್ ಚಾನೆಲ್ನ ಅಧಿಕಾರಿಯೊಬ್ಬರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಚಾನೆಲ್ಗೆ ಆರ್ಥಿಕವಾಗಿ ಲಾಭವಾಗಲು ಅವರು ಒಪ್ಪದಿದ್ದರೆ, ನಮ್ಮ ವಿರುದ್ಧ ಸುದ್ದಿ ಪ್ರಸಾರವಾಗಲಿದೆ ಎಂದು ಬೆದರಿಕೆ ಹಾಕಿದ್ದರು. ಈ ಆರೋಪವು ನಿಜ ಎಂಬುದು ಎಂದು ಸಾಬೀತಾಗಿದೆ. ಏಕೆಂದರೆ ನನ್ನ ವಿರುದ್ಧ ಈ ಚಾನೆಲ್ ಅಪಪ್ರಚಾರದ ವರದಿಗಳನ್ನು ಪ್ರಸಾರ ಮಾಡುತ್ತಲೇ ಇದೆ” ಎಂದು ಸಂದೀಪ್ ಸಿಂಗ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಅರ್ನಾಬ್ ರಿಪಬ್ಲಿಕ್ ಚಾನೆಲ್ ವಿರುದ್ಧ PIL: ವಿಚಾರಣೆಗೆ ಒಪ್ಪಿದ ದೆಹಲಿ ಹೈಕೋರ್ಟ್
ನೋಟಿಸ್ನಲ್ಲಿ ಮತ್ತೊಂದು ಪ್ರಮುಖ ವಿಷಯವನ್ನು ಉಲ್ಲೇಖಿಸಿ, “ಸುಶಾಂತ್ ಮೃತ ದೇಹವನ್ನು ಹೊತ್ತ ಆಂಬುಲೆನ್ಸ್ ಕೂಪರ್ ಆಸ್ಪತ್ರೆಗೆ ಹೋಗಲಿ ಎಂದು ಅವರ ಗೆಳೆಯ ಸಂದೀಪ್ ಸಿಂಗ್ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಮಾಧ್ಯಮದಲ್ಲಿ ಹರಡಲು ಸಂದೀಪ್ ಸಿಂಗ್ ಅವರ ಪಿಆರ್ ಇದರ ಚಿತ್ರವನ್ನು ಕ್ಲಿಕ್ಕಿಸಿದ್ದರು ಎಂಬುದಾಗಿ ಚಾನೆಲ್ನ ಪ್ಯಾನಲಿಸ್ಟ್ ಹೇಳಿದ್ದಾರೆ” ಎಂದು ಆರೋಪಿಸಲಾಗಿದೆ.
“ಈ ಮಾಧ್ಯಮ ತಮ್ಮ ವರದಿಯಲ್ಲಿ, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಯಬಾರದು ಎಂದು ಸಂದೀಪ್ ಸಿಂಗ್ ಹೇಳಿರುವುದಾಗಿ, ಅವರ ವಿರುದ್ಧ #ArrestSandeepSsingh ಅಭಿಯಾನ ಆರಂಭಿಸಿ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ಈ ತನಿಖೆಯಿಂದ ತಪ್ಪಿಸಿಕೊಳ್ಳಲು ಇಂಗ್ಲೆಂಡ್ಗೆ ಓಡಿ ಹೋಗುವುದಾಗಿ ಸುಳ್ಳು ಹೇಳಿದ್ದಾರೆ” ಎಂದು ನೋಟಿಸ್ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: “ದಿ ಕಪಿಲ್ ಶರ್ಮಾ ಶೋ” ಬಾಯ್ಕಾಟ್: ಸಿಡಿದೆದ್ದ ಅರ್ನಾಬ್ ಅಭಿಮಾನಿಗಳು?“
ಸಂದೀಪ್ ಸಿಂಗ್ ಅವರ ವಕೀಲ ರಾಜೇಶ್ ಕುಮಾರ್ ಮೂಲಕ ಕಳುಹಿಸಲಾದ ನೋಟಿಸ್ನಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ರ ಅಡಿಯಲ್ಲಿ ಚಾನೆಲ್ನ ಕ್ರಮವು ಮಾನಹಾನಿಗೆ ಸಂಬಂಧಿಸಿದ್ದಾಗಿದ್ದು, ಇದು ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸಂದೀಪ್ ಸಿಂಗ್ ಬಗ್ಗೆ ಎಲ್ಲಾ ದುರುದ್ದೇಶಪೂರಿತ ವೀಡಿಯೋಗಳನ್ನು, ಲೇಖನಗಳನ್ನು ಮತ್ತು ವರದಿಗಳನ್ನು ತೆಗೆದುಹಾಕಲು ಹಾಗೂ ಕ್ಷಮೆಯಾಚಿಸುವಂತೆ ಚಾನೆಲ್ಗೆ ನೋಟಿಸ್ ನೀಡಲಾಗಿದೆ. ಮತ್ತು ರಿಪಬ್ಲಿಕ್ ಟಿವಿಯಿಂದ ಪರಿಹಾರವಾಗಿ 200 ಕೋಟಿ ರೂ. ನೀಡಬೇಕು. 15 ದಿನಗಳಲ್ಲಿ ಪ್ರತಿಕ್ರಿಯಿಸದಿದ್ದಲ್ಲಿ, ಮಾನಹಾನಿಗೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಸಂದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್: ಅರ್ನಾಬ್ ಗೋಸ್ವಾಮಿ ವಿರುದ್ಧ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಆಕ್ರೋಶ