Homeಎಲೆಮರೆಅಲೆಮಾರಿ ಮೇಡಂ: ಶಾರದ

ಅಲೆಮಾರಿ ಮೇಡಂ: ಶಾರದ

- Advertisement -
- Advertisement -

ಬೀದರಿನ ವಾರ್ತಾಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜಿಲ್ಲಾಧಿಕಾರಿಗಳ ಕಚೇರಿ ಮುಂತಾದ ಇಲಾಖೆಗಳ ಅಧಿಕಾರಿಗಳ ಬಳಿ ಮತ್ತು ಬೀದರ್ ಜಿಲ್ಲೆಯ ಯಾವುದೇ ಬುಡಕಟ್ಟು ಅಲೆಮಾರಿ ಜನರ ಬಳಿ `ಅಲೆಮಾರಿ ಮೇಡಂ’ ಯಾರು ಎಂದು ಕೇಳಿದರೆ ಅವರುಗಳು ಶಾರದ ಅವರ ಬಗ್ಗೆ ಹೇಳುತ್ತಾರೆ. ಕೆಲವು ಅಧಿಕಾರಿಗಳು ಮುಖ ಗಂಟಿಕ್ಕಿ ಚೂರು ಸಿಡುಕಿನಿಂದಲೆ ಹೇಳಿದರೆ, ಅಲೆಮಾರಿ ಬುಡಕಟ್ಟಿನ ಜನರು ಮುಖ ಅರಳಿಸಿ `ಓಹ್ ನಮ್ ಮೇಡಂ ಸರ್, ಗೊತ್ತವ್ರು, ಅವರ ನಂಬರ್.. ನಮ್ಮ ಆಧಾರ ಕಾರ್ಡ್ ಮೇಲಿದೆ’ ಎಂದು ನಿಮಗೆ ಶಾರದ ಅವರ ಫೋನ್ ನಂಬರ್ ಕೊಡುತ್ತಾರೆ.

ಹೀಗೆ ಬೀದರ್ ಜಿಲ್ಲೆಯಾದ್ಯಂತ ಅಲೆಮಾರಿ ಮೇಡಂ ಎಂದೇ ಗುರುತಿಸಲ್ಪಡುವ ಶಾರದ ಒಬ್ಬ ಸಾಮಾನ್ಯ ಪದವೀಧರ ಗೃಹಿಣಿ. ಅರೆ ಶಾರದ ಅವರನ್ನು ಯಾಕೆ ಅಲೆಮಾರಿ ಮೇಡಂ ಎಂದು ಕರೆಯುತ್ತಾರೆ..? ಏಕೆಂದರೆ 2013 ರಿಂದಲೂ ಬುಡಕಟ್ಟು ಅಲೆಮಾರಿ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸಲು, ಅವರಿಗೊಂದು ಗುರುತು ಕೊಡಿಸಲು, ನೆಲೆ ಒದಗಿಸಲು, ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಯಾವುದೇ ಅಧಿಕಾರವಿಲ್ಲದೆ, ಲಾಭನಷ್ಟದ ಲೆಕ್ಕಾಚಾರಗಳಿಲ್ಲದೆ, ಉತ್ತಮ ಆರ್ಥಿಕ ಸ್ಥಿತಿಯೂ ಇಲ್ಲದೆ, ಮೇಲ್ಜಾತಿಯೂ ಅಲ್ಲದ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ, ಎಂ.ಎಸ್.ಡಬ್ಲು ಬಿಇಡಿ ಮಾಡಿದ ಒಬ್ಬ ಸಾಮಾನ್ಯ ಮಹಿಳೆಗೆ ಬುಡಕಟ್ಟು ಅಲೆಮಾರಿಗಳ ಒಳಿತಿಗಾಗಿ ದುಡಿವ ಮನಸ್ಸು ಹದಗೊಂಡದ್ದು ಹೇಗೆ ಎಂದು ನೋಡಿದರೆ, ಅದೊಂದು ಕುತೂಹಲಕರ ಸಂಗತಿ.

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಬಾಗಲವಾಡ ಹಳ್ಳಿಯ ಶಾರದ ಮನೆಯ ಬಡತನದ ಕಾರಣ ಹೈಸ್ಕೂಲಿನಿಂದಲೂ ಮಾನವಿ, ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲುಗಳಲ್ಲಿ ಓದುತ್ತಾರೆ. ಹೀಗೆ ಓದುವಾಗ ತಮ್ಮ ಹಾಸ್ಟೆಲುಗಳ ಹೊರವಲಯದಲ್ಲಿ ಆಗಾಗ ಅಲೆಮಾರಿಗಳು ಬಟ್ಟೆಯ ಟೆಂಟ್ ಹಾಕಿ ವಾಸಿಸುತ್ತಿದ್ದರು. ಹಿರಿಯರು ಚಿಕ್ಕಪುಟ್ಟ ವ್ಯಾಪಾರ, ಬೇಟೆ, ಭಿಕ್ಷೆ ಅಂತೆಲ್ಲಾ ನಗರ ಮತ್ತು ಕಾಡು ಪ್ರವೇಶಿಸಿದರೆ, ಇವರ ಮಕ್ಕಳು ಬಟ್ಟೆಯಿಲ್ಲದೆ ಸ್ನಾನವಿಲ್ಲದೆ ಕೆದರಿದ ಕೂದಲಿನಲ್ಲಿ ಟೆಂಟಿನ ಮುಂದೆ ಮಣ್ಣಲ್ಲಿ ಆಟವಾಡುತ್ತಿದ್ದರು. ಶಾರದ ಹಾಸ್ಟೆಲ್ ಕಿಟಕಿಗಳಿಂದ ಈ ಮಕ್ಕಳನ್ನು ನೋಡುತ್ತಿದ್ದಾಗ ಅರೆ ಇವರ್ಯಾಕೆ ಹೀಗೆ ? ಇವರಿಗೆ ನಮ್ಮಂತೆ ಮನೆಗಳೇಕಿಲ್ಲ? ಎನ್ನುವ ಪ್ರಶ್ನೆಯೊಂದು ಮಿಂಚಿ ಮರೆಯಾಗುತ್ತಿತ್ತು. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಆ ಸ್ಥಳದಿಂದ ಮಾಯವಾಗಿ ಎಷ್ಟೋ ದಿನಗಳ ಕಾಲ ಅವರು ಇತ್ತ ತಲೆ ಹಾಕುತ್ತಲೂ ಇರಲಿಲ್ಲ. ಒಮ್ಮೊಮ್ಮೆ ದಿಢೀರ್ ಟೆಂಟ್‍ಗಳು ಪ್ರತ್ಯಕ್ಷವಾಗುತ್ತಿದ್ದವು. ಈ ಕಣ್ಣೋಟದ ಅಲೆಮಾರಿಗಳ ಚಿತ್ರ ಶಾರದ ಅವರಲ್ಲಿ ಸುಪ್ತವಾಗಿತ್ತು.

ಬಿ.ಎ. ಎರಡನೆ ವರ್ಷ ಕಲಿಯುವಾಗಲೆ ಶಾರದ 2011 ರಲ್ಲಿ ಮದುವೆಯಾಗಿ ಬೀದರಿಗೆ ಬರುತ್ತಾರೆ. ಗಂಡ ಮತ್ತು ಮನೆಯವರ ಬೆಂಬಲದಿಂದ ಅರ್ಧಕ್ಕೆ ನಿಂತ ಓದನ್ನು ಮುಂದುವರಿಸುತ್ತಾರೆ. ಬಿ.ಎ., ಎಮ್.ಎಸ್.ಡಬ್ಲು, ಬಿಎಡ್ ಮಾಡುತ್ತಾರೆ. ಎಮ್.ಎಸ್.ಡಬ್ಲು ಮಾಡುವಾಗ ಸಮಾಜಸೇವೆಯ ಬಗ್ಗೆ ಗಮನ ಹರಿಯುತ್ತದೆ. ಹೈಸ್ಕೂಲಲ್ಲಿ ಕಂಡ ಅಲೆಮಾರಿಗಳ ಚಿತ್ರಗಳು ತರಗತಿಗಳಲ್ಲಿ ಮರುಕಳಿಸತೊಡಗುತ್ತವೆ. ಹೀಗೆ ಬಿಎಡ್ ಮುಗಿಸಿ ಬೀದರಿನ ಸೆಂಟ್ ಜೋಸೆಫ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರುತ್ತಾರೆ. ಶಾಲೆಗೆ ಹೋಗಿ ಬಂದು ಮಾಡುವ ಮಾರ್ಗಮಧ್ಯದಲ್ಲಿ ಒಮ್ಮೆ ಅರ್ಧಮುಚ್ಚಿದ ಬಾವಿಯೊಂದರಲ್ಲಿ ಅಲೆಮಾರಿ ಮಗು ಆಯತಪ್ಪಿ ಬಿದ್ದು ಅಳುತ್ತಿರುತ್ತದೆ. ಇದನ್ನು ನೋಡಿ ಶಾರದ ಆ ಮಗುವನ್ನು ಮೇಲಕ್ಕೆತ್ತಿ ಅವರ ತಂದೆತಾಯಿಗೆ ತಲುಪಿಸುತ್ತಾರೆ. ಆಗ ಅಲೆಮಾರಿಗಳ ಪರಿಚಯವಾಗುತ್ತದೆ.

ಸೋಷಿಯಲ್ ವರ್ಕ್ ಎನ್ನುವ ಕೆಲಸದಲ್ಲಿ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಕೆಲದಿನ ಕೆಲಸ ಮಾಡುತ್ತಾರೆ. ಆಗ ಮಗುವಿಗೆ ಹೆರಿಗೆಯಾದ ಕಾರಣ ಡಾನ್‍ಬಾಸ್ಕೋ ಸಂಸ್ಥೆಯ ಕೆಲಸವನ್ನು ಬಿಡುತ್ತಾರೆ. ತಾಯಿ, ಮಗುವಿನ ಜತೆ ಕಾಲ ಕಳೆಯುವಾಗ ತನ್ನ ಮನೆಗೆ ಹತ್ತಿರದಲ್ಲಿರುವ ಅಲೆಮಾರಿಗಳ ಜತೆ ಸಂಪರ್ಕ ಬೆಳೆಯುತ್ತದೆ. ಓದುಬರಹವಿಲ್ಲದ ಅವರ ಮಕ್ಕಳನ್ನು ನೋಡಿ, ನಿಮ್ಮ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದಾಗ ಅಲೆಮಾರಿಗಳು ಒಪ್ಪುವುದಿಲ್ಲ. ದಿನಾಲು ಅಲೆಮಾರಿಗಳ ಗುಡಿಸಲುಗಳ ಎದುರು ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೂ ಅಲೆಮಾರಿಗಳು ಇವರನ್ನು ನಂಬುವುದಿಲ್ಲ. ನಾನಾಗೆ ಇವರ ಮಕ್ಕಳಿಗೆ ಅಕ್ಷರ ಕಲಿಸುವೆ ಎಂದರೂ ಇವರು ನನ್ನನ್ನು ನಂಬುತ್ತಿಲ್ಲವಲ್ಲ ಎಂದು ಎಷ್ಟೋ ಬಾರಿ ಶಾರದ ಅಳುತ್ತಾ ಮನೆಗೆ ಮರಳಿದ್ದರು. ಇಷ್ಟಾಗಿಯೂ ಅಲೆಮಾರಿಗಳನ್ನು ಬಗೆಬಗೆಯ ರೀತಿಯಲ್ಲಿ ಆಪ್ತವಾಗಿ ಒಪ್ಪಿಸಲು ಪ್ರಯತ್ನಿಸಿದರು. ಒಂದೆರಡು ವರ್ಷದ ನಂತರ ನಿಧಾನಕ್ಕೆ ಅಲೆಮಾರಿಗಳಿಗೆ ಶಾರದ ಅವರಲ್ಲಿ ವಿಶ್ವಾಸ ಮೂಡುತ್ತದೆ.

`ನಮಗೆ ಮನಿಯಿಲ್ಲ ಮಠವಿಲ್ಲ ನೀವು ಬಂದ್ ಶಾಲಿ ಕಲಿಸ್ತೀನಿ ಅಂತೀರಿ, ನಾವು ಇವತ್ ಇಲ್ಲಿದ್ರೆ ನಾಳೆ ಅಲ್ಲಿರ್ತೀವಿ, ನಮ್ಮನ್ನ ಸರಕಾರದವರು ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಓಡಿಸ್ತಾನ ಇರ್ತಾರೆ. ನಮಗೆ ಉಳಿಯೋಕೆ ಒಂದು ನೆಲೆ ಅಂತ ಇಲ್ದಿರೋವಾಗ ನಮ್ಮ ಮಕ್ಕಳು ಶಾಲಿ ಕಲಿತು ಏನ್ ಮಾಡ್ತಾವೆ’ ಎನ್ನುತ್ತಾರೆ. ಆಗ ಶಾರದಾಗೆ ಹೊಳೆದ ಸಂಗತಿಯೆಂದರೆ, ಇವರಿಗೆ ಸರಕಾರದಿಂದ ಒಂದು ಮನೆ ಕಟ್ಟಿಸಿಕೊಟ್ಟರೆ ಒಂದೆಡೆ ಉಳಿಯುತ್ತಾರೆ ಎಂದು ಅನ್ನಿಸುತ್ತದೆ. ಅದಕ್ಕಾಗಿ `ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ, ನಾನು ಹೇಗಾದರೂ ಮಾಡಿ ನಿಮಗೆ ಮನೆಗಳನ್ನು ಕೊಡಿಸ್ತೀನಿ’ ಎನ್ನುವ ಸುಳ್ಳು ಭರವಸೆ ಕೊಡುತ್ತಾರೆ. ಈ ಒಂದು ಭರವಸೆಯಿಂದ ಅಲೆಮಾರಿಗಳು ತಮ್ಮ ಮಕ್ಕಳನ್ನು ಶಾರದ ಬಳಿ ಅಕ್ಷರ ಕಲಿಯಲು ಕಳಿಸುತ್ತಾರೆ. ಆಗ ಶಾರದ ಅವರು ಅಲೆಮಾರಿಗಳ ಜಾಗವನ್ನೆ ಶಾಲೆಯ ಆವರಣವನ್ನಾಗಿಸಿಕೊಂಡು ಅವರಿಗೆ ಅಕ್ಷರ ಕಲಿಸತೊಡಗುತ್ತಾರೆ.

ಇದೇ ಹೊತ್ತಿಗೆ ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯು ಬೀದರಿನಲ್ಲಿ ಅಲೆಮಾರಿಗಳಿಲ್ಲ ಎಂದು ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸ್ವತಃ ಅಲೆಮಾರಿಗಳ ಜತೆ ಬದುಕುತ್ತಿದ್ದ ಶಾರದ ಅವರಿಗೆ ಈ ವರದಿ ಅಚ್ಚರಿ ಹುಟ್ಟಿಸಿ ಇಲಾಖೆಯ ಗಮನಕ್ಕೆ ತರುತ್ತಾರೆ. ಆಗ ಇಲಾಖೆಯು ಅಲೆಮಾರಿಗಳು ಇದ್ದರೆ ಅವರನ್ನು ಗುರುತಿಸಲು ಶಾರದಾ ಅವರಿಗೆ ಸಹಕಾರ ನೀಡುತ್ತದೆ. ಈ ನಡುವೆ ತಾನು ಅಕ್ಷರ ಕಲಿಸುವ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆದರೆ ಆ ಮಕ್ಕಳಿಗೆ ಯಾವುದೇ ಗುರುತಿಲ್ಲ. ಮೊದಲನೆಯದಾಗಿ ಆಧಾರ ಕಾರ್ಡ್ ಮಾಡಿಸಬೇಕಾದ ಅನಿವಾರ್ಯ ಬರುತ್ತದೆ. ಮಕ್ಕಳಿಗೆ ಆಧಾರ್ ಮಾಡಿಸಲು ತಂದೆತಾಯಿಯರ ಆಧಾರ್ ಬೇಕು.

ಆದರೆ ಈ ಯಾವ ಕುಟುಂಬಗಳಿಗೂ ಆಧಾರ ಕಾರ್ಡ್ ಕೊಟ್ಟಿರಲಿಲ್ಲ. ಈಗ ಮತ್ತೊಂದು ಸಮಸ್ಯೆ ಶುರುವಾಯಿತು. ಮಕ್ಕಳ ತಂದೆತಾಯಿಯರಿಗೆ ಆಧಾರ್ ಕಾರ್ಡ್ ಮಾಡಿಸುವುದು. ಯಾವುದೇ ದಾಖಲೆಗಳಿಲ್ಲದ ಈ ಅಲೆಮಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆದು, ಅಲೆದಲೆದು ಶಾರದ ಅವರೆ ಸ್ವತಃ ಎಲ್ಲರಿಗೂ ಸಾಕ್ಷಿಯಾಗಿದ್ದು ಆಧಾರ್ ಕಾರ್ಡ ಮಾಡಿಸುತ್ತಾರೆ. ಹೀಗೆ ನಿರಂತರವಾಗಿ ನಾಲ್ಕೈದು ವರ್ಷದಲ್ಲಿ ಅಲೆಮಾರಿ ಸಮುದಾಯದ 500ಕ್ಕೂ ಹೆಚ್ಚು ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಓಟರ್ ಐಡಿ ಮಾಡಿಸಿದ್ದಾರೆ. ಇದೀಗ 63 ಅಲೆಮಾರಿ ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಅಲೆಮಾರಿಗಳ ಮನೆ ಕಟ್ಟಿಸಲಿಕ್ಕಾಗಿ ನಾಲ್ಕು ಎಕರೆ ಜಮೀನು ಮಂಜೂರಾಗಿದೆ. ಇದೀಗ ಅಲೆಮಾರಿಗಳ ಸ್ವಂತ ಉದ್ಯೋಗಕ್ಕಾಗಿ ಸಣ್ಣಮಟ್ಟದಲ್ಲಿ ಸಾಲಸೌಲಭ್ಯಗಳು ಸಿಗತೊಡಗಿವೆ. ಇದೆಲ್ಲವೂ ಸುಲಭವಾಗಿ ದಕ್ಕಿರುವುದಲ್ಲ ಶಾರದ ಅವರು ನಾಲ್ಕೈದು ವರ್ಷಗಳ ಕಾಲ ಸರಕಾರಿ ಇಲಾಖೆಗಳ ಜತೆ, ಅಧಿಕಾರಿಗಳ ಜತೆ ನಿರಂತರ ಜಗಳ, ಹಕ್ಕೊತ್ತಾಯ, ಚರ್ಚೆ ಸಂವಾದಗಳ ಮೂಲಕ ಇದನ್ನೆಲ್ಲಾ ಆಗುಮಾಡಿದ್ದಾರೆ.

ಈ ಎಲ್ಲಾ ಹೋರಾಟ ಹಕ್ಕೊತ್ತಾಯಗಳ ಜೊತೆಜೊತೆಗೆ ಇದೀಗ ಗುತ್ತಿಗೆ ಆಧಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಯೋಜನೆಯ ಜಿಲ್ಲಾ ಮಹಿಳಾ ಕಲ್ಯಾಣಾಧಿಕಾರಿಯಾಗಿ ಇದೇ ಜನವರಿ 13, 2020 ರಿಂದ ಕೆಲಸಕ್ಕೆ ಸೇರಿದ್ದಾರೆ. `ನಮ್ ಮನೆಯವ್ರ ಬೆಂಬಲ ಇರದಿದ್ರ ಇದನ್ನೆಲ್ಲ ಮಾಡೋಕೆ ಆಗ್ತಿರಲಿಲ್ಲ ಸರ್, ಈಗ ಸಿ.ಎ.ಎ ಎನ್.ಆರ್.ಸಿ ಬಂದದಲ್ಲ ಮತ್ತೆ ನನಗೆ ಭಯ ಶುರು ಆಗ್ಯಾತಿ. ಇವರಿಗೆ ಈಗಿರೋದನ್ನು ಬಿಟ್ಟರೆ ಇವರ ಹಿರೇರು ಎಲ್ಲಿದ್ರು ಅನ್ನೋಕೆ ಏನೂ ದಾಖಲೆ ಇಲ್ಲ. ಅದೇನು ಆಗ್ತಾತೋ ಅಂತ ಭಯ ಆಗೇತಿ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಯಾವುದೇ ಆಕಾಡೆಮಿಕ್ ಸಂಶೋಧಕರಿಗಿಂತಲೂ ಸೂಕ್ಷ್ಮವಾಗಿ ಅಲೆಮಾರಿ ಬುಡಕಟ್ಟು ಸಮುದಾಯದ ನಾಡಿಮಿಡಿತ ಗುರುತಿಸುವ ಶಾರದ ಅವರು ನಿಜಕ್ಕೂ ಈ ಕಾಲಕ್ಕೆ ಮಾದರಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶಾರದಾ ಅವರ ಸಮಾಜಸೇವೆ ಜೋತೆ… ವಿದ್ಯೆ ದಾನವನ್ನು ಮಾಡಿದ್ದಾರೆ. ಅವರಿಗಿ ಅಭಿನಂದನೆಗಳು

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...