| ನಾನುಗೌರಿ ಡೆಸ್ಕ್ |
9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ದಲಿತ ಯುವಕನಿಗೆ ಸಾಮೂಹಿಕ ಥಳಿತ, ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರ.. ಇವಿಷ್ಟು ಘಟನೆಗಳು ನಾಲ್ಕು ವರ್ಷಗಳ ಅವಧಿಯಲ್ಲಿ ಒಂದೇ ಪ್ರದೇಶದಲ್ಲಿ ನಡೆದಿರುವುದು ಆಡಳಿತ ಯಂತ್ರಾಂಗ ಸಂಪೂರ್ಣ ಕುಸಿದಿರುವುದರ ಜೊತೆಗೆ ಮೇಲ್ಜಾತಿ ಫ್ಯೂಡಲ್ ಗಳ ಅಟ್ಟಹಾಸ ಮುಂದುವರೆದಿರುವುದರ ಸ್ಪಷ್ಟ ನಿದರ್ಶನವಾಗಿದೆ. ಎಲ್ಲಿದೆ ಜಾತಿ ಎಂಬುವವರು ಇದಕ್ಕೇನು ಹೇಳುತ್ತಾರೆ?
9 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮೇ 30ರ ಗುರುವಾರ ಉತ್ತರಖಂಡದ ತೆಹ್ರಿಯಲ್ಲಿ ನಡೆದಿದೆ. ಆರೋಪಿ ನಿತಿನ್ ಸಿಂಗ್ ಪವಾರ್ (28) ಮೇಲ್ಜಾತಿಗೆ ಸೇರಿದವನಾಗಿದ್ದು, ಪೊಲೀಸರು ಇವನನ್ನು ಈಗಾಗಲೇ ಬಂಧಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಾಲ್ಕು ವರ್ಷಗಳ ಹಿಂದೆ ಇದೇ ಬಾಲಕಿಯ ಸಂಬಂಧಿಯೊಬ್ಬಳನ್ನು ಮೇಲ್ಜಾತಿಯ ಯುವಕರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಘಟನೆಯೂ ಇದೇ ಊರಲ್ಲಿ ನಡೆದಿತ್ತು ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ದಲಿತ ಯುವಕನೊಬ್ಬ ಮದುವೆ ಸಮಾರಂಭವೊಂದರಲ್ಲಿ ಮೇಲ್ಜಾತಿ ಸಮುದಾಯದವರೊಂದಿಗೆ ಊಟ ಮಾಡಿದ ಎಂಬ ಆಕ್ರೋಶದಿಂದ ಯುವಕನನ್ನು ಸಾಯುವ ಹಾಗೆ ಹೊಡೆದಿದ್ದ ಘಟನೆಯೂ ಇತ್ತೀಚೆಗೆ ಇದೇ ಪ್ರದೇಶದ ನೈನಿಭಾಗ್ ನಲ್ಲಿ ನಡೆದಿತ್ತು.
ಪ್ರಸ್ತುತ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಕೆಂಪ್ತಿ ಪೊಲೀಸ್ ಠಾಣೆ ಅಧಿಕಾರಿ ಎಂ.ಎಲ್. ಜಖ್ಮೋಲ್ “ ಈ ಘಟನೆ ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ನಡೆದಿದ್ದು, ಬಾಲಕಿಯ ಪೋಷಕರು ಕೂಲಿ ಕೆಲಸಕ್ಕೆ ಹೋಗಿದ್ದರು. ಬಾಲಕಿಯು ನೀರು ತರಲು ಹೋದ ಸಮಯದಲ್ಲಿ ಘಟನೆ ನಡೆದಿದೆ. ಆರೋಪಿಯು ಬಾಲಕಿಯ ಮನೆ ಹತ್ತಿರವೇ ಅಂಗಡಿಯೊಂದನ್ನು ನಡೆಸುತ್ತಿದ್ದು, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ’ ಎಂದಿದ್ದಾರೆ.
‘ತುಂಬಾ ಸಮಯದ ಬಳಿಕೆ ಬಾಲಕಿಯು ಅಳುತ್ತಾ ಮನೆಗೆ ಬಂದದ್ದನ್ನು ನೋಡಿ ಪೋಷಕರು ಕಾರಣ ಕೇಳಿದಾಗ ನಡೆದ ಘಟನೆಯನ್ನು ಬಾಲಕಿ ವಿವರಿಸಿದ್ದಾರೆ. ಗುರುವಾರ ಸಂಜೆಯೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ’ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸದ್ಯಕ್ಕೆ ಭಾರತೀಯ ನೀತಿ ಸಂಹಿತೆ ಪ್ರಕಾರ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಹಾಗೂ ಎಸ್ ಸಿ/ಎಸ್ ಟಿ ಅಟ್ರಾಸಿಟಿ ಕಾಯ್ದೆ ಅಡಿ ದೂರು ದಾಖಲಾಗಿದೆ. ಆದರೆ ಪದೇ ಪದೇ ಈ ರೀತಿಯ ಅತ್ಯಾಚಾರ, ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿದ್ದರೂ ಇಲ್ಲಿನ ಪೊಲೀಸ್ ಮತ್ತು ನಾಗರೀಕ ಸಮಾಜ ಕಣ್ಣು ಮಚ್ಚಿ ಕುಳಿತಿರುವುದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಜಾತಿ ಪದ್ದತಿ ಮತ್ತು ಜಾತಿ ದೌರ್ಜನ್ಯ ಇಂದಿಗೂ ಜಾರಿಯಲ್ಲಿರುವುದರ ಸ್ಪಷ್ಟ ಉದಾಹರಣೆ ಇದಾಗಿದ್ದು ಇದನ್ನು ತಡೆಯಲು ಪ್ರಭುತ್ವ ಮತ್ತು ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸಿಲ್ಲ ಎಂಬುದು ಈ ಪ್ರಕರಣಗಳಿಂದ ಕಂಡುಬಂದಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಸಂತ್ರಸ್ಥರು ದಲಿತರಾಗಿದ್ದು ಆರೋಪಿಗಳು ಸವರ್ಣಿಯ ಜಾತಿಯವರಾಗಿದ್ದಾರೆ. ತಮ್ಮ ಜಾತಿ ಬಲ, ಅಧಿಕಾರ ಬಲ ಬಳಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಸಹ ಪದೇ ಪದೇ ಇಂತಹ ಘೋರ ಘಟನೆಗಳು ಜರುಗಲು ಕಾರಣವಾಗಿದೆ.
ಈ ರೀತಿಯ ಘಟನೆಗಳು ನವಭಾರತದಲ್ಲಿ ಮುಂದುವರೆಯುತ್ತಿರುವುದು ಮಾನವಕುಲಕ್ಕೆ ನಾಚಿಕೆಗೇಡಿನ ಸಂಗತಿಯಾಗಿದ್ದು ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿಯೆತ್ತದೆ ಇದಕ್ಕೆ ಪರಿಹಾರವಿಲ್ಲ. ಅಂತಹ ದಿಟ್ಟ ಹೋರಾಟ ಆದಷ್ಟು ಬೇಗ ಮೂಡಬೇಕಿದೆ.