Homeಅಂಕಣಗಳು`ಗಿರಿ' ನೋಡಲು ಹೋದಾಗ ಕಂಡದ್ದು...

`ಗಿರಿ’ ನೋಡಲು ಹೋದಾಗ ಕಂಡದ್ದು…

- Advertisement -
- Advertisement -

| ಗೌರಿ ಲಂಕೇಶ್ |
03 ಡಿಸೆಂಬರ್ 2003 (ಸಂಪಾದಕೀಯದಿಂದ)

ಚಿಕ್ಕಮಗಳೂರು ಮತ್ತು ಬಾಬಾಬುಡನ್‍ಗಿರಿಯಲ್ಲಿ ಕೋಮುಸೌಹಾರ್ದ ಸಭೆ ನಡೆಸಿ, ಆ ಮೂಲಕ ಕೇಸರಿ ಬಳಗದವರು ಕರ್ನಾಟಕವನ್ನು ಮತ್ತೊಂದು ಗುಜರಾತ್ ಆಗಿ ಪರಿವರ್ತಿಸುವುದನ್ನೂ, ಬಾಬಾ ಬುಡನ್‍ಗಿರಿಯನ್ನು ಅಯೋಧ್ಯೆಯನ್ನಾಗಿಸುವುದನ್ನೂ ತಡೆಯೋಣ ಬನ್ನಿ ಎಂದು ಕರೆ ನೀಡಿದ ಈ ಎರಡು ವಾರಗಳಲ್ಲಿ ಅದೆಂತಹ ಅದ್ಭುತ ಬೆಳವಣಿಗೆಗಳಾಗಿವೆ ಎಂದರೆ…. ಎಲ್ಲಿಂದ ಪ್ರಾರಂಭಿಸಲಿ ಎಂಬುದೇ ಗೊಂದಲವಾಗಿಬಿಟ್ಟಿದೆ.

ಭಾವೈಕ್ಯತೆಯ ಸಂಕೇತವಾಗಿರುವ ಬಾಬಾಬುಡನ್‍ಗಿರಿಯ ಸಾಮರಸ್ಯವನ್ನು ಕಾಪಾಡಲು ಈಗಾಗಲೇ ತಮ್ಮ ಬೆಂಬಲವನ್ನು ಸೂಚಿಸಿರುವ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್‍ರವರು ಬುಧವಾರ ಬೆಳಗ್ಗೆ ನನಗೆ ಫೋನ್ ಮಾಡಿ: “ಡಿಸೆಂಬರ್ 7 ಮತ್ತು 8ರಂದು ಅಲ್ಲಿ ಸೌಹಾರ್ದ ಸಮಾವೇಶ ನಡೆಸುವ ಮುನ್ನ ನಾವು ಹಲವರು ಅಲ್ಲಿಗೆ ಭೇಟಿ ನೀಡಿ, ಅಲ್ಲಿನ ವಾಸ್ತವಸ್ಥಿತಿಯನ್ನು ಪರಿಶೀಲಿಸಿ ಬರೋಣವಾ? ಎಂದು ಕೇಳಿದರು.

“ಬ್ಯೂಟಿಫುಲ್ ಐಡಿಯಾ, ಹೋಗೋಣ” ಅಂದೆ. ಅದರಂತೆ ಗುರುವಾರ ಕಾರ್ನಾಡ್, ಡಾ.ಕೆ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್, ಶೂದ್ರ ಶ್ರೀನಿವಾಸ್, ಪ್ರೊ.ವಿ.ಎಸ್.ಶ್ರೀಧರ್ ಮತ್ತು ನಾನು ಎಲ್ಲರೂ ಟಾಟಾ ಕ್ವಾಲಿಸ್ ಒಂದನ್ನು ಏರಿ ಚಿಕ್ಕಮಗಳೂರಿಗೆ ಹೊರಟೆವು.

ದಾರಿಯಲ್ಲಿ ಬಾಬಾಬುಡನ್‍ಗಿರಿಯ ವೈಶಿಷ್ಟ್ಯತೆ ಮತ್ತು ಈಗ ಕೇಸರಿ ಬಳಗ ಅದರ ಸುತ್ತಲೂ ಹರಡಿರುವ ವಿಷಮಯ ವಾತಾವರಣದ ಬಗ್ಗೆ ಚರ್ಚಿಸಿದೆವು.

ಈ ವರ್ಷ ಭಜರಂಗದಳದ ಮಂಗಗಳು ಬಾಬಾ ಬುಡನ್‍ಗಿರಿಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಲು ಅಣಿಯಾಗಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇದಕ್ಕೆ ಹೋದ ವರ್ಷ ಭಜರಂಗದಳ ನೀಡಿದ್ದ ಕರೆಯೇ ಸಾಕ್ಷಿಯಂತಿದೆ. ಅಂದು ತೆಗೆದಿದ್ದ ಫೋಟೋಗಳನ್ನು ಶ್ರೀಧರ್ ತೋರಿಸಿದರು. ಅವುಗಳಲ್ಲಿ ಒಂದು ಬ್ಯಾನರ್‍ನ ಫೋಟೋ ಇದ್ದು ಅದರಲ್ಲಿ ಹೀಗೆ ಕರೆ ನೀಡಲಾಗಿತ್ತು: “ಸ್ನೇಹಕ್ಕೆ ಬದ್ಧ, ಸಂಹಾರಕ್ಕೆ ಸಿದ್ಧ.”

ಇದನ್ನು ಓದಿ ಕಾರ್ನಾಡ್ ಕುಪಿತರಾದರು. “ಯಾರ ಸಂಹಾರ ಮಾಡುತ್ತಾರಂತೆ ಇವರು? ಇದರಲ್ಲಿ ಬಳಸಿರುವ ಪದಗಳನ್ನು ನೋಡಿ ‘ಮಾಂಸ ಖಂಡ’, ‘ರಕ್ತದ ಕೋಡಿ’, ‘ಶತ್ರುಗಳ ಸಂಹಾರ’. ಇದು ಕನ್ನಡ ಭಾಷೆಯೇ?” ಎಂದು ಗುಡುಗಿದರು.

ಇಂತಹ ಸ್ಥಳದಲ್ಲಿ ಪುರೋಹಿತಶಾಹಿ ಪಕ್ಷವಾದ ಬಿಜೆಪಿ ಮತ್ತದರ ಅಂಗವಾಗಿರುವ ಭಜರಂಗದ ಮಂಗಗಳು ಇಲ್ಲಿ ಅರ್ಚಕ(ಆತ ಬ್ರಾಹ್ಮಣನೇ ಆಗಿರುತ್ತಾನೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ)ನ ನೇಮಕ, ಗೋರಿಗಳ ನಿರ್ಮೂಲನೆ, ‘ಹಿಂದೂ ಪುಣ್ಯಕ್ಷೇತ್ರ’ಗಳನ್ನು ಘೋಷಿಸಲು ಮುಂದಾಗಿರುವುದು ನಿಜವಾಗಲು ಕಿಡಿಗೇಡಿತನ……

ಕಾರ್ನಾಡ್‍ರವರು “ಈ ದತ್ತ ಜಯಂತಿ, ದತ್ತಮಾಲೆ, ಇವ್ಯಾವೂ ನಮ್ಮ ಸಂಸ್ಕೃತಿಯಲ್ಲಿಲ್ಲ, ಇವುಗಳ ಆಚರಣೆಯ ಹಿಂದೆ ಇರುವುದು ಧರ್ಮವಲ್ಲ, ಬದಲಾಗಿ ಧರ್ಮದ ಹೆಸರಿನಲ್ಲಿ ರಾಜಕಾರಣ. ನಾಥ ಪಂಕ್ತಿಗೆ ಸೇರಿದ್ದ ದತ್ತಾತ್ರೇಯ ಜಾತಿ ಪದ್ದತಿಯನ್ನು ತಿರಸ್ಕರಿಸಿದ್ದರೂ, ಆತನನ್ನು ಬ್ರಾಹ್ಮಣೀಕರಿಸುತ್ತಿರುವುದರಲ್ಲ ಹಿಂದಿನ ಸಂಚು ಅರ್ಥೈಸುವುದು ಸುಲಭ” ಎಂದು ಲೇವಡಿ ಮಾಡಿದರು.

ಈ ‘ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ’ಕ್ಕೆ ತನ್ನದೇ ಇತಿಹಾದವಿದೆ. ಅರೆಬಿಯಾದಿಂದ ಚಂದ್ರ ದ್ರೋಣ ಪರ್ವತಕ್ಕೆ ಬಂದ ದಾದಾ ಹೈಯತ್ ಇಲ್ಲಿನ ಪಾಳೆಗಾರರ ದಬ್ಬಾಳಿಕೆಯಡಿ ನರಳುತ್ತಿದ್ದ ಶೂದ್ರರಿಗೂ, ದೀನ ದಲಿತ ವರ್ಗಕ್ಕೂ ಸಹಾಯ ಮಾಡಿ ಅವರ ಮೆಚ್ಚುಗೆಯನ್ನು ಗಳಿಸಿದರು. ದಾದಾ ಹೈಯತ್‍ನ ಪ್ರೀತಿ, ದಯೆ ಮತ್ತು ಸೈರಣೆಯನ್ನು ಕಂಡು ಹಲವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ, ಇನ್ನು ಹಲವರು ತಮ್ಮ ಪುರಾತನ ಧರ್ಮವನ್ನು ತ್ಯಜಿಸದೇ, ದಾದಾ ಹೈರತ್‍ನನ್ನು ದತ್ತಾತ್ರೇಯನ ಅವತಾರವೆಂದೇ ಭಾವಿಸಿ ಆತನ ಭಕ್ತಾಧಿಗಳಾದರು. ಇದಕ್ಕೆ ಕಾರಣವೂ ಇತ್ತು. ಹಿಂದೂ ಪುರಾಣಗಳಲ್ಲಿ ವಿಷ್ಣು ದತ್ತಾತ್ರೇಯನ ಅವತಾರವನ್ನು ತಾಳಿ ಜನರನ್ನು ದಾಸ್ಯದಿಂದ ಪಾರು ಮಾಡುತ್ತಾನೆಂದು ಹೇಳಲಾಗಿದೆ. ಆದ್ದರಿಂದಲೇ ಹಿಂದೂ ಭಕ್ತಾದಿಗಳು ದಾದಾ ಹೈರತ್‍ನಲ್ಲಿ ದತ್ತಾತ್ರೇಯನನ್ನೇ ಕಂಡು ಆತನಿಗೆ ಹಿಂದೂ ಹೆಸರಿಟ್ಟು ಪುನರ್ ನಾಮಕರಣ ಮಾಡಿದರು. ಓರ್ವ ಮುಸ್ಲಿಂ ಸೂಫಿ ಸಂತನಿಗೆ ಆಗೆಲ್ಲ ಹಿಂದೂ ಹೆಸರನ್ನಿಡುವುದು ಸಾಮಾನ್ಯವಾಗಿತ್ತು. ಉದಾಹರಣೆಗೆ: ಬಿಜಾಪುರದ ಸೂಫಿ ಸಂತ ಖ್ವಾಜ ಅಮಿನುದ್ದೀನ್ ಅಲ್ಲಾನನ್ನು ಹಿಂದೂ ಭಕ್ತಾದಿಗಳು ಬ್ರಹ್ಮಾನಂದಯಿಕೆ ಸ್ವಾಮಿ ಎಂದೂ, ತಿಥಿನಿಯ ಮೊಯಿದ್ದೀನ್ ಅವರನ್ನು ಮುನಿಯಪ್ಪರೆಂದೂ ‘ಹಿಂದೂ’ಕರಿಸಲಾಗಿತ್ತು.

ಅಂತೂ ಚಿಕ್ಕಮಗಳೂರನ್ನು ತಲುಪಿದೆವು. ಅಲ್ಲಿ ನಮಗಾಗಿ ಹಲವರು ಕಾದಿದ್ದರು. ಅನೇಕ ಸಂಘಗಳಿಗೆ ಸೇರಿದ್ದ ಅವರೆಲ್ಲಾ ಎಂತಹ ಉತ್ಸಾಹಿ ತರುಣರೆಂದರೆ, ನಾಲ್ಕೈದು ವರ್ಷಗಳ ಕಾಲ ಅವರೆಲ್ಲಾ ಚಿಕ್ಕಮಗಳೂರಿನ ಆಸುಪಾಸಿನಲ್ಲಿ ಸಂಘ ಪರಿವಾರದ ಷಡ್ಯಂತ್ರದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.

ಬಾಬಾಬುಡನ್‍ಗಿರಿಯಲ್ಲಿರುವ ಪೀಠಕ್ಕೆ ಭೇಟಿನೀಡಿ, ಅಲ್ಲಿನ ಶಾಖಾದ್ರಿಯವರನ್ನು ಮಾತನಾಡಿಸಿ, ಇತ್ತೀಚೆಗೆ ಗಿರಿಗೆ ಹೋಗಿದ್ದ ಮಂಗ ಪರಿವಾರದವರು ಅಲ್ಲಿ ನಾಶ ಮಾಡಿದ್ದ ಮುಸ್ಲಿಮರ ಹೋಟೆಲುಗಳನ್ನು, ಮುಸ್ಲಿಂ ಗುರುಗಳೊಬ್ಬರ ಗೋರಿಯ ಮೇಲಿರುವ ಹರಕೆಯ ಮರದ ಕೊಂಬೆಯನ್ನು ಕಡಿದು ಹಾಕಿರುವುದನ್ನೂ ಪರಿಶೀಲಿಸಿದೆವು.

ಚಿಕ್ಕಮಗಳೂರಿಗೆ ಹಿಂದಿರುಗಿದ ನಂತರ ಒಂದು ಪತ್ರಿಕಾಗೋಷ್ಠಿ. “ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡುವುದು ಎಂದರೇನು? ಗುಜರಾತ್, ಅಯೋಧ್ಯೆ ನಮಗೆ ಯಾಕೆ, ಯಾವಾಗ ಮಾದರಿಯಾದವು? ನಮಗೆ ನಮ್ಮದೇ ಮಾದರಿ, ಪರಂಪರೆಗಳಿಲ್ಲವೆ?” ಕಾರ್ನಾಡ್‍ರವರಿಂದ ಪ್ರಶ್ನೆ. “ನಮ್ಮ ಮಾರ್ಗದರ್ಶಕರು ಬಸವಣ್ಣ, ಕುವೆಂಪು ಅಂಥವರೇ ವಿನಃ ತೊಗಾಡಿಯಾ, ಮೋದಿ ಅಂಥವರಲ್ಲ,” ಮರುಳು ಸಿದ್ದಪ್ಪನವರಿಂದ ಸ್ಪಷ್ಟನೆ. “ನ್ಯಾಯಾಲಯದ ತೀರ್ಪಿನ ಪ್ರಕಾರ 1975ರ ಹಿಂದಿನ ಸ್ಥಿತಿಯನ್ನೇ ಗಿರಿಯ ಮೇಲೆ ಸ್ಥಾಪಿಸಬೇಕು” ಎಂಬುದು ನಮ್ಮೆಲ್ಲರ ಒತ್ತಾಯ.

ಪತ್ರಿಕಾಗೋಷ್ಠಿಯ ನಂತರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್‍ರವರೊಂದಿಗೆ ಭೇಟಿ. “ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಗಿರಿಯ ಮೇಲ ಹೋಮ ನಡೆಸಲು ಯಾಕೆ ಅನುಮತಿ ನೀಡಿದಿರಿ?” ಎಂದು ಕಾರ್ನಾಡ್ ಕೇಳಿದರೆ ಆ ಅಧಿಕಾರಿಯಿಂದ ಬಂದ ಉತ್ತರ “75ರ ಹಿಂದೆಯೂ ಅಲ್ಲಿ ಹೋಮ ಮಾಡಲಾಗುತ್ತಿತ್ತು” ಇದಕ್ಕೆ ಯಾವ ದಾಖಲೆ ಇದೆ ತೋರಿಸಿ,” ಎಂದು ಮರುಪ್ರಶ್ನಿಸಿದರೆ ಆತನಲ್ಲಿ ಯಾವ ಉತ್ತರವೂ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...