Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಡಸ್ಟ್ ಆನ್ ದಿ ರೋಡ್: ಸಮಾಜದ ಹತಭಾಗ್ಯರ ಕಥನ

ಡಸ್ಟ್ ಆನ್ ದಿ ರೋಡ್: ಸಮಾಜದ ಹತಭಾಗ್ಯರ ಕಥನ

- Advertisement -
- Advertisement -

ಮಹಾಶ್ವೇತಾ ದೇವಿ
ಸಂಪಾದನೆ : ಮೈತ್ರೇಯಿ ಘಟಕ್
ಸೀಗಲ್ ಬುಕ್ಸ್ ಪ್ರೈ ಲಿ, ಕೊಲ್ಕತ್ತಾ

ಕನ್ನಡದ ಸಂದರ್ಭದಲ್ಲಿ ಮಹಾಶ್ವೇತಾದೇವಿಯವರು ತಮ್ಮ ಕಥೆ ಕಾದಂಬರಿಗಳ ಮೂಲಕ ಒಬ್ಬ ಸೃಜನಶೀಲ ಲೇಖಕಿಯಾಗಿ ಹೆಚ್ಚು ಪರಿಚಿತರು. ಅವರ ಅನೇಕ ಕಥೆ ಮತ್ತು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡಿವೆ.

ಮಹಾಶ್ವೇತಾದೇವಿಯವರ ‘ಡಸ್ಟ್ ಆನ್ ದಿ ರೋಡ್’ ಪುಸ್ತಕ ಅನೇಕ ಕಾರಣಗಳಿಗಾಗಿ ಮಹತ್ವದ ಕೃತಿ. ಮಹಾಶ್ವೇತಾದೇವಿಯವರು ಸೃಜನಶೀಲ ಲೇಖಕಿ ಮಾತ್ರವಲ್ಲ, ಅವರು ದಣಿವರಿಯದ ಆಕ್ಟಿವಿಸ್ಟ್ ಸಹ ಹೌದು. ತಮ್ಮ ನಿರಂತರ ಕ್ರಿಯಾಶೀಲ ಆಕ್ಟಿವಿಸಮ್‍ನ ಭಾಗವಾಗಿ ಬರೆದ ಲೇಖನಗಳ ಸಂಕಲನ ‘ಡಸ್ಟ್ ಆನ್ ದಿ ರೋಡ್’. ಮೈತ್ರೇಯಿ ಘಟಕ್ ಸುದೀರ್ಘ ಪ್ರಸ್ತಾವನೆಯನ್ನು ಬರೆದು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. 214 ಪುಟಗಳ ಪುಸ್ತಕದಲ್ಲಿ ಒಟ್ಟು 26 ಲೇಖನಗಳಿವೆ. ಜೀತಗಾರರ ಮೇಲಿನ ಕ್ರೌರ್ಯ, ಗುತ್ತಿಗೆ ಕಾರ್ಮಿಕರ ಮೇಲೆ ನಡೆಯುವ ಶೋಷಣೆ, ಅರಣ್ಯದ ನಾಶ, ಭೂರಹಿತ ಕೂಲಿಗಳ ಸ್ಥಿತಿಗತಿ, ದುಡಿವ ಜನರ ಮೇಲೆ ನಡೆಯುತ್ತಿರುವ ರಾಜಕೀಯಾರ್ಥಿಕ ದಬ್ಬಾಳಿಕೆ, ಗ್ರಾಮೀಣ ಭಾಗದ ಸಮುದಾಯಗಳ ದುರ್ಬಲ ಸಂಘಟನೆಗಳ ಸ್ಥಿತಿಗತಿ, ಜಾತೀಯತೆ, ಮೂಢನಂಬಿಕೆ ಮತ್ತು ಕೋಮುವಾದಗಳ ಕುರಿತ ಬರಹಗಳು ಈ ಪುಸ್ತಕದಲ್ಲಿವೆ. ತಾವೇ ಸಂಪಾದಿಸಿ ಪ್ರಕಟಿಸುತ್ತಿದ್ದ ಬಂಗಾಳಿ ತ್ರೈಮಾಸಿಕ ‘ಬೋರ್ತಿಕಾ’, ಫ್ರಂಟ್‍ಲೈನ್, ಭೂದಾನ್, ‘ಪೊಲಿಟಿಕಲ್ ಅಂಡ್ ಎಕನಾಮಿಕ್ ವೀಕ್ಲಿ’ ಮತ್ತು ‘ಫ್ರಾಂಟಿಯರ್ ಆಫ್ ಕೊಲ್ಕತ್ತ’ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಮಹಾಶ್ವೇತಾದೇವಿ 1980 ರಿಂದ 1991ರ ವರೆಗೆ ತಾವೇ ಸಂಪಾದಿಸಿ ಪ್ರಕಟಿಸುತ್ತಿದ್ದ ಬಂಗಾಳಿ ತ್ರೈಮಾಸಿಕ ‘ಬೋರ್ತಿಕಾ’ಗೆ ಬರೆದ ಕೆಲವು ಸಂಪಾದಕೀಯ ಬರಹಗಳೂ ಈ ಪುಸ್ತಕದಲ್ಲಿವೆ.

ತಮ್ಮ ಬರವಣಿಗೆ ಮತ್ತು ಆಕ್ಟಿವಿಸಮ್‍ಗಾಗಿ ಜ್ಞಾನಪೀಠ ಮತ್ತು ರೋಮಾನ್ ಮ್ಯಾಗ್ಸಸೇ ಪ್ರಶಸ್ತಿಗಳನ್ನು ಪಡೆದ ಮಹಾಶ್ವೇತಾ ಐದು ದಶಕಗಳ ಕಾಲ ಆದಿವಾಸಿಗಳ ಹಕ್ಕುಗಳಿಗಾಗಿ ದುಡಿದರು. ಆದಿವಾಸಿಗಳ ಜೊತೆ ಬದುಕುತ್ತಾ ಅವರ ನಿತ್ಯದ ಕಷ್ಟಸುಖಗಳಲ್ಲಿ ಪಾಲ್ಗೊಂಡು, ಅವರ ಅನೇಕ ಹೋರಾಟಗಳ ಮುಂಚೂಣಿಯಲ್ಲಿದ್ದು ಸರಕಾರಗಳನ್ನು ಎಚ್ಚರಿಸಿದವರು. ಅಲ್ಲದೆ ಆದಿವಾಸಿಗಳ ಸಮಸ್ಯೆ ಮತ್ತು ಅವುಗಳ ಪರಿಹಾರಗಳ ಕುರಿತು ಸುದೀರ್ಘವಾಗಿ ಚಿಂತಿಸಿದವರು. ಈ ಕಾರಣಕ್ಕಾಗಿಯೇ ಮಹಾಶ್ವೇತಾದೇವಿ ಸ್ವಾತಂತ್ರ್ಯ ನಂತರ ಭಾರತ ಸರಕಾರ ರೂಪಿಸಿಕೊಂಡು ಬಂದ ಅಭಿವೃದ್ಧಿ ಮತ್ತು ಆರ್ಥಿಕ ನೀತಿಗಳನ್ನು ಈ ಬರಹಗಳಲ್ಲಿ ಉಗ್ರವಾಗಿ ವಿರೋದಿsಸುತ್ತಾರೆ. ಬಂಡವಾಳದಿಂದ ಬಂಡವಾಳವನ್ನು ಮರುಉತ್ಪಾದಿಸುವ ಮತ್ತು ಬಂಡವಾಳವನ್ನು ದ್ವಿಗುಣಿಸುವ ಏಕೈಕ ಲೆಕ್ಕಾಚಾರದ ಆರ್ಥಿಕ ನೀತಿಯನ್ನು ಖಂಡಿಸುತ್ತಾರೆ. ಹೀಗಾದಾಗ ನಗರಗಳು ಮಾತ್ರ ಅಬಿsವೃದ್ಧಿಯಾಗಿ, ಹಳ್ಳಿಗಳಿಂದ ನಗರಕ್ಕೆ ವಲಸೆಹೋಗುವ ಬಡಜನರು ನಗರಗಳಲ್ಲಿ ಭೀಕರ ಬದುಕನ್ನು ಸ್ಲಂಗಳಲ್ಲಿ ಕಳೆಯಲಾರಂಬಿsಸುತ್ತಾರೆ. ಹೀಗಾಗಿ ಹಳ್ಳಿಗಳು ಸಾಯುತ್ತಿವೆ. ಸತ್ತು ಹೋಗುತ್ತಿರುವ ಹಳ್ಳಿಗಳ, ಅಂಚಿನ ಸಮುದಾಯಗಳ, ಆದಿವಾಸಿಗಳ ದುಸ್ಥಿತಿಗೆ ಈ ದೇಶ ಅಳವಡಿಸಿಕೊಂಡಿರುವ ಅಬಿವೃದ್ಧಿ ನೀತಿಯೇ ಕಾರಣ ಎನ್ನುತ್ತಾರೆ ಮಹಾಶ್ವೇತಾದೇವಿ.

ಮಹಾಶ್ವೇತಾ ದೇವಿ

ಛೋಟಾನಾಗಪುರ ಪ್ರಸ್ಥಭೂಮಿಯ ಆದಿವಾಸಿಗಳು ಬದುಕುತ್ತಿರುವ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕೆಲಸ ನಿರ್ವಹಿಸಿದ ಇವರು, ಅಲ್ಲಿನ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಬಳಿಸಲು ಸ್ಥಳೀಯ ಊಳಿಗಮಾನ್ಯ ದೊರೆಗಳು ಮತ್ತು ಬಂಡವಾಳಶಾಹಿಗಳು ನಡೆಸಿದ ಹುನ್ನಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಪುಸ್ತಕದಲ್ಲಿ Witch Sabbath at Singbhum ಎಂಬ ಲೇಖನ ನನಗೆ ವಿಶೇಷವೆನ್ನಿಸಿತು. ಜಾತೀಯತೆ ಮತ್ತು ಕೋಮುಸಂಘರ್ಷಗಳಿಗೆ ಅವಕಾಶಗಳಿಲ್ಲದ ಕಡೆ ಹೇಗೆ ಕೋಮು ವಿಷವನ್ನು ಸಂಚಯಿಸಲಾಗುತ್ತದೆ? ಜಾತಿಯ ಆಧಾರದಲ್ಲಿ ದುಡಿವ ಸಮುದಾಯಗಳನ್ನು ಹೇಗೆ ಪರಸ್ಪರ ಹಗೆಗಳನ್ನಾಗಿಸಲಾಗುತ್ತದೆ? ಎಂಬ ವಿಚ್ಛಿದ್ರಕಾರಿ ರಾಜಕಾರಣವನ್ನು ಈ ಲೇಖನದಲ್ಲಿ ಮಹಾಶ್ವೇತಾ ವಿಶ್ಲೇಷಿಸಿದ್ದಾರೆ. ಅರಣ್ಯಕ್ಕೆ ಯಾವ ಕೇಡೂ ಮಾಡದ ಆದಿವಾಸಿಗಳಿಗಿಂತ ಬಂಡವಾಳ ಹೂಡಿ ಅರಣ್ಯವನ್ನು ಸರ್ವನಾಶ ಮಾಡುವ, ತನ್ನ ಪಾಪಗಳನ್ನು ಮುಚ್ಚಿಕೊಳ್ಳಲು ಭಗವದ್ಗೀತೆಯನ್ನು ಲಕ್ಷಾಂತರ ಪ್ರಿಂಟು ಮಾಡಿ ಹಂಚುವ ಬಿರ್ಲಾನಂತಹ ಬಂಡವಾಳಶಾಹಿಯೇ ಸರಕಾರಕ್ಕೆ ಹೆಚ್ಚು ಪ್ರಿಯನಾಗುತ್ತಾನೆ ಎನ್ನುತ್ತಾರೆ ಮಹಾಶ್ವೇತಾದೇವಿ. ಸಿಂಘಭೂಮ್, ಪಲಮು, ಜಾರ್ಖಂಡ್, ಬಿಹಾರ್, ಪಶ್ಚಿಮ ಬಂಗಾಳದ ಹಲವು ಕಡೆ ತಮ್ಮ ಜಮೀನುಗಳನ್ನು ಕಳೆದುಕೊಂಡ ಆದಿವಾಸಿಗಳು ಕೃಷಿಕೂಲಿಗಳಾಗಿ, ಗೇಣಿದಾರರಾಗಿ, ದುರಂತವೆಂದರೆ ಜೀತದಾಳುಗಳಾಗಿ ಭೂಮಾಲಿಕರ ಹೊಲಗಳಲ್ಲಿ ದುಡಿಯುತ್ತಿದ್ದಾರೆ. ಇಂತಹ ಮುಗ್ಧ ಆದಿವಾಸಿಗಳಿಗೆ ತುಂಡು ಭೂಮಿ ಕೊಡದ ಸರಕಾರ, ಬಿರ್ಲಾನಂತಹ ಬಂಡವಾಳಶಾಹಿಗೆ, ಇಡೀ ಕಾಡನ್ನು ನಾಶ ಮಾಡಿಬಿಡುವ ಸಿಮೆಂಟ್ ಕಾರ್ಖಾನೆ ಹಾಕಲು ಸಾವಿರಾರು ಎಕರೆ ಅರಣ್ಯವನ್ನು ಧಾರೆ ಎರೆದು ಕೊಡುತ್ತದೆ. ಸಿಂಘಭೂಮ್ ಎಂಬ ಜಿಲ್ಲೆ, ಗ್ರಾಸಿಂ ಕಾರ್ಖಾನೆಗೆ, ಕಬ್ಬಿಣದ ಅದಿರಿನ ಗಣಿಗಾರಿಕೆಗೆ ಮತ್ತು ಬಿರ್ಲಾನ ಸಿಮೆಂಟ್ ಕಾರ್ಖಾನೆಗೆ ತನ್ನ ಬೆಲೆಬಾಳುವ, ಸಂಪದ್ಭರಿತ ಅರಣ್ಯವನ್ನು ಮತ್ತು ಕೃಷಿಭೂಮಿಯನ್ನು ಬಲಿಕೊಟ್ಟಿದೆ. ಸಾಲದ್ದಕ್ಕೆ ಬಂಡವಾಳಶಾಹಿಗಳು ಹುಟ್ಟುಹಾಕಿರುವ ಕೋಮು ಗಲಭೆಗಳಿಗೆ ಬಲಿಯಾಗುತ್ತಿರುವುದು ಅಲ್ಲಿನ ಆದಿವಾಸಿಗಳೇ ಆಗಿದ್ದಾರೆ.

ತಾವು ಹೋರಾಟ ಮಾಡಿದೆಡೆಯಲ್ಲೆಲ್ಲ ವಸಾಹತು ಆಡಳಿತದ ಗುಂಡಿಗೆಯನ್ನು ನಡುಗಿಸಿದ ಆದಿವಾಸಿಗಳು, ಸ್ವಾತಂತ್ರ್ಯ ನಂತರ ಗುಲಾಮಗಿರಿಯ ಹಂತಕ್ಕೆ ಇಳಿದುಹೋದರು ಎನ್ನುತ್ತಾರೆ ಮಹಾಶ್ವೇತಾ. ಆದಿವಾಸಿಗಳನ್ನು ಅಧ್ಯಯನ ಮಾಡುವ ಸಂಶೋಧಕರ ಕುರಿತು ಮಹಾಶ್ವೇತಾಗೆ ತಕರಾರುಗಳಿವೆ. ‘ಬಹಳಷ್ಟು ವಿದೇಶಿಯರು ಮತ್ತು ಸ್ಥಳೀಯರು ವಿದೇಶಿ ಏಜನ್ಸಿಗಳ ಹಣಕಾಸಿನ ನೆರವಿನಿಂದ ಆದಿವಾಸಿಗಳನ್ನು ಅಧ್ಯಯನ ಮಾಡಲು ಬರುತ್ತಾರೆ. ಮತ್ತೆ ಅಂತಹುದ್ದೇ ಹಣಕಾಸಿನ ನೆರವಿನಿಂದ ಅನೇಕ ಸ್ವಯಂಸೇವಾ ಸಂಸ್ಥೆಗಳು ಆದಿವಾಸಿಗಳನ್ನು ಉದ್ಧಾರ ಮಾಡುವ ನೆಪದಲ್ಲಿ ಕಾರ್ಯನಿರತವಾಗಿವೆ.

ವಿದೇಶಿ ಫಂಡು ಪಡೆದುಕೊಂಡು ಇಲ್ಲಿಗೆ ಬರುವ ಪಂಡಿತರು ಇಲ್ಲಿನ ಆದಿವಾಸಿಗಳ ಕಲೆ, ಸಾಹಿತ್ಯ, ನೃತ್ಯಾದಿ ಕಲೆಗಳನ್ನು ವಿಪರೀತ ರೋಮಾಂಚನದಿಂದ ವರ್ಣಿಸುತ್ತಾರೆ. ಇನ್ನೊಂದು ದೊಡ್ಡ ಅಪಾಯವೆಂದರೆ, ಆದಿವಾಸಿಗಳ ಬಡತನವನ್ನೂ ಸಹ ಈ ಮಾನವಶಾಸ್ತ್ರಜ್ಞರು ವಿಜೃಂಭಿಸಿ ಬರೆಯುತ್ತಾರೆ. ಇದರಿಂದ ಆದಿವಾಸಿಗಳಿಗೆ ಯಾವ ಲಾಭವಿಲ್ಲ. ಮನುಷ್ಯನ ಹಸಿವನ್ನು ರೋಮಾಂಚನದಿಂದ ವರ್ಣಿಸುವವರನ್ನು ಏನೆಂದು ಕರೆಯಬೇಕು? ಈ ಮಾನವಶಾಸ್ತ್ರಜ್ಞರು ಹೀಗೆ ಆದಿವಾಸಿಗಳ ಸಂಸ್ಕೃತಿಯನ್ನು ಹೊಗಳುವ ಬದಲು ಸುಮ್ಮನಿದ್ದರೆ ಒಳಿತು. ಹಾಗೆಯೇ ಸ್ವಯಂಸೇವಾ ಸಂಸ್ಥೆಗಳೂ ಸಹ ಆದಿವಾಸಿಗಳನ್ನು ದಿಕ್ಕುತಪ್ಪಿಸದೆ ಅವರ ಬದುಕಿನ ಆಮೂಲಾಗ್ರ ಬದಲಾವಣೆಗೆ ಪ್ರಯತ್ನಿಸಬೇಕು’ ಎನ್ನುತ್ತಾರೆ.

‘ಸರಕಾರದ ಯೋಜನೆಗಳ ಭೀಕರ ಗುಣವೆಂದರೆ, ಇವು ಅತ್ಯಂತ ಕುರುಡಾಗಿ ರೂಪಿಸಲ್ಪಡುತ್ತವೆ. ಹಾಗೆಯೆ ಗುರಿ ಇಲ್ಲದಂತೆ ಕಾರ್ಯಗತವಾಗುತ್ತವೆ. ಯಾರನ್ನು ತಲುಪಬೇಕೋ ಅವರ ಅಗತ್ಯಗಳ ಕುರಿತು ಈ ಯೋಜನೆಗಳು ಚಿಂತಿಸುವುದೇ ಇಲ್ಲ ಮತ್ತು ಕೆಲವು ಯೋಜನೆಗಳು ಆದಿವಾಸಿಗಳನ್ನು ತಲುಪುವುದೇ ಇಲ್ಲ. ಅಕಸ್ಮಾತ್ ಯಾರಾದರು ಯೋಜನೆಗಳ ಫಲಗಳನ್ನು ದಕ್ಕಿಸಿಕೊಳ್ಳಬೇಕೆಂದರೆ ಭಿಕ್ಷೆಯ ರೂಪದಲ್ಲಿ ಪಡೆದುಕೊಳ್ಳಬೇಕು. ಸರಕಾರಿ ಅದಿsಕಾರಿಗಳ ಮುಂದೆ ತಮ್ಮಿಡೀ ಆತ್ಮಪ್ರತ್ಯಯವನ್ನು ಕೊಂದುಕೊಂಡು ಬಿsಕ್ಷುಕರಂತೆ ಆದಿವಾಸಿಗಳು ಬೇಡಬೇಕು’ ಎನ್ನುವ ಮಹಾಶ್ವೇತಾ ಸರಕಾರದ ಯೋಜನೆಗಳಿಗಿರುವ ‘ನಾಗರಿಕ ಅಹಂಕಾರ’ವನ್ನು ಬಿಚ್ಚಿಡುತ್ತಾರೆ.

ಅವರು ಒಬ್ಬ ಸೃಜನಶೀಲ ಲೇಖಕಿಯಾಗಿ ಶುದ್ಧ ಸಾಹಿತ್ಯಕ ಕಾಳಜಿಯಿಂದ ಇಲ್ಲವೆ ವರದಿಗಾರಿಕೆಯ ಶುಷ್ಕ ಕುತೂಹಲದಿಂದ ತನ್ನ ಸುತ್ತಲ ವಿದ್ಯಮಾನಗಳನ್ನು ನೋಡುವುದಿಲ್ಲ. ಆದಿವಾಸಿಗಳು, ಅಲೆಮಾರಿಗಳು, ಅಂಚಿನ ಸಮುದಾಯಗಳ, ಅಸ್ಪೃಶ್ಯರ, ಜೀತದಾಳುಗಳ ನಿತ್ಯದ ಬದುಕಿನ ದುರಂತ ಮತ್ತು ಕಷ್ಟಗಳ ಭಾಗವಾಗಿ ಮಹಾಶ್ವೇತಾ ಬೆರೆತುಹೋಗಿದ್ದಾರೆ. ಹೀಗಾಗಿ ಅವರ ಬರವಣಿಗೆಗೆ ತಣ್ಣನೆಯ ಆಕ್ರೋಶ ಮತ್ತು ಕಟು ವ್ಯಂಗ್ಯಗಳು ಸಹಜವಾಗಿ ಪ್ರಾಪ್ತವಾಗಿವೆ. ಸರಳ, ನೇರ ಕಥನಗಾರಿಕೆ ಇವರ ಬರವಣಿಗೆಯ ಇನ್ನೊಂದು ಲಕ್ಷಣ. ಪ್ರಸ್ತುತ ಕೃತಿಯಲ್ಲಿರುವ ಲೇಖನಗಳನ್ನು ಮಹಾಶ್ವೇತಾ ಪ್ರಾಸಂಗಿಕವಾಗಿ ಬರೆದಿದ್ದರೂ ಸಹ, ಇಂಡಿಯಾದ ವರ್ತಮಾನದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಈ ಬರಹಗಳು ಕೈದೀವಿಗೆಯಾಗುತ್ತವೆ.


ಎ.ಎಸ್. ಪ್ರಭಾಕರ
ಪ್ರಾಧ್ಯಾಪಕರು
ಕನ್ನಡ ವಿಶ್ವವಿದ್ಯಾಲಯ, ಹಂಪಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....