Homeಅಂಕಣಗಳುಮೋದಿಯವರೆ, ನೀವು ರೈತರ `ಮನ್‍ಕಿ ಬಾತ್’ ಕೇಳುವ ಸಮಯ ಬಂದಿದೆ

ಮೋದಿಯವರೆ, ನೀವು ರೈತರ `ಮನ್‍ಕಿ ಬಾತ್’ ಕೇಳುವ ಸಮಯ ಬಂದಿದೆ

- Advertisement -
- Advertisement -
  • ಯೋಗೇಂದ್ರ ಯಾದವ್ |

ಮೋದಿಯವರ ಇತ್ತೀಚಿನ ಭಾಷಣಗಳ ಕುರಿತು ಯೋಚಿಸುತ್ತಿರುವಾಗ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮನನೋಯಿಸುವ ವೀಡಿಯೋವೊಂದನ್ನು ನೋಡಿದೆ. ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ರೈತ ಪ್ರೇಮ್‍ಸಿಂಗ್ ಲಖಿರಾಮ್ ಚವಾಣ್ ತನ್ನ ಹೊಲದಲ್ಲಿ ತಾನೇ ಬೆಳೆದ ಕ್ಯಾಬೇಜ್ ಬೆಳೆಯನ್ನು ಅತ್ಯಂತ ಸಿಟ್ಟಿನಿಂದ ನಾಶ ಮಾಡುವ ದೃಶ್ಯ ಮನಕಲುಕುವಂತಿತ್ತು.

ಮೊದಲು ಹತ್ತಿ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ಪ್ರೇಮ್‍ಸಿಂಗ್‍ಗೆ ನಿರಾಶೆ ಕಾದಿತ್ತು. ಹತ್ತಿ ಬೆಳೆ ಕೈಕೊಟ್ಟಿದ್ದಲ್ಲದೆ, ಅದಕ್ಕಾಗಿ ಮಾಡಿದ ಭಾರಿ ಸಾಲ ತಲೆ ಮೇಲೆ ಬಂದಿತ್ತು. ಈ ಕಾರಣದಿಂದ ಆತ ತನ್ನ ಹೊಲದಲ್ಲಿ ಟೊಮ್ಯಾಟೋ ಮತ್ತು ಎಲೆಕೋಸನ್ನು ಹಾಕಿದ್ದ. ಬೆಳೆದ ನಾಲ್ಕು ಕ್ವಿಂಟಲ್ ಟೊಮ್ಯಾಟೋಕ್ಕೆ ಕೇವಲ 442 ರೂಪಾಯಿಗಳು ಮಾತ್ರ ಸಿಗುತ್ತದೆ ಎಂದು ಆತನಿಗೆ ಗೊತ್ತಾಯಿತು. ಆ ನಾಲ್ಕು ಕ್ವಿಂಟಲ್ ಟೊಮ್ಯಾಟೋವನ್ನು ನಗರಕ್ಕೆ ಸಾಗಿಸಲು ಆತ 600 ರೂಪಾಯಿಗಳನ್ನು ಮತ್ತು ಅದನ್ನು ಬೆಳೆಯಲು 25,000 ರೂಪಾಯಿಗಳನ್ನು ಖರ್ಚು ಮಾಡಿದ್ದ. ಇನ್ನು ಬೆಳೆದ ಎಲೆಕೋಸಿಗೂ ಇದೇ ತರಹದ ಬೆಲೆ ಸಿಕ್ಕತ್ತು. ಆ ಕಾರಣಕ್ಕಾಗಿ ಪ್ರೇಮ್‍ಸಿಂಗ್ ತನ್ನ ಬೆಳೆಯನ್ನು ಹೊಲದಲ್ಲಿಯೇ ನಾಶ ಮಾಡಲು ನಿರ್ಧರಿಸಿದ್ದ.

ಪ್ರೇಮ್‍ಸಿಂಗ್‍ನ ವೀಡಿಯೋ ನೋಡುತ್ತಿದ್ದಂತೆ ಭಾರತದ ರೈತ ತನ್ನ ಬದುಕಿನುದ್ದಕ್ಕೂ ಪ್ರಕೃತಿ ಮತ್ತು ಮಾರುಕಟ್ಟೆ ಆರ್ಥಿಕತೆಯಿಂದ ಎದುರಿಸುವ ಗಂಡಾಂತರ ಮತ್ತು ಆತಂಕಗಳು ಕಣ್ಣ ಮುಂದೆ ಸುಳಿದವು. ಅನೇಕ ಸಲ ರೈತರ ಬೆಳೆಗಳು ರೋಗಕ್ಕೆ ತುತ್ತಾಗಿ ಹಾಳಾಗುತ್ತವೆ, ಇಲ್ಲವೆ ಬರ, ಅತಿವೃಷ್ಟಿಯಿಂದ ಬೆಳೆ ಕೈಗೆ ಸಿಗುವುದಿಲ್ಲ. ಅಕಾಸ್ಮಾತ್, ಬರ, ಬೆಳೆ ರೋಗ ಮತ್ತು ಪ್ರಕೃತಿ ವಿಕೋಪಗಳಿಂದ ಪಾರಾಗಿ ಉತ್ತಮ ಬೆಳೆ ಬೆಳೆದರೆ ಮಾರುಕಟ್ಟೆಯಲ್ಲಿ ರೈತನ ಫಸಲಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಹಣಕಾಸಿನ ದುಸ್ಥಿತಿ, ಪರಿಸರ ವಿಕೋಪ ಮತ್ತು ಅಸ್ತಿತ್ವದಲ್ಲಿರುವ ಅನೇಕ ಸಮಸ್ಯೆಗಳು ಒಂದಕ್ಕೊಂದು ಹೆಣೆದುಕೊಂಡು ಭಾರತದ ರೈತರು ಅನೇಕ ಬಿಕ್ಕುಟ್ಟುಗಳನ್ನು ಎದುರಿಸುವಂತಾಗಿದೆ.

ಗುಜರಾತಿನ ಚುನಾವಣಾ ಫಲಿತಾಂಶ, ಮಹಾರಾಷ್ಟ್ರದ ರೈತರು ನಡೆಸಿದ `ಲಾಂಗ್‍ಮಾರ್ಚ’ ಮತ್ತು ದೇಶದಾದ್ಯಂತ ನಡೆದ ರೈತರ ಪ್ರಭಟನೆಗಳಿಂದಾಗಿ ಭಾರತದ ವ್ಯವಸಾಯಿ ಸಮುದಾಯದ ಸಮಸ್ಯೆಗಳು ಮುನ್ನೆಲೆಗೆ ಬಂದಿವೆ. ತಡವಾಗಿಯಾದರೂ ರೈತರ ಈ ಸಮಸ್ಯೆಗಳ ಕುರಿತು ಗಮನ ಹರಿಸುವ ಒತ್ತಡ ಸರ್ಕಾರದ ಮೇಲೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಧಾನ ಮಂತ್ರಿ ಸುಮ್ಮನಿರುವುದಿಲ್ಲ. ತಮ್ಮ ಸರ್ಕಾರ ರೈತರಿಗಾಗಿ ಏನೇನು ಮಾಡಿದೆ ಎಂದು ಪಟಪಟನೆ ಹರಳು ಹುರಿದಂತೆ ಮಾತಾಡಿ ದೊಡ್ಡ ಪಟ್ಟಿಯನ್ನೇ ನೀಡುತ್ತಾರೆ. ಮಣ್ಣಿನ ಆರೋಗ್ಯದ ಕಾರ್ಡ, ಬೇವು ಮಿಶ್ರಿತ ಯೂರಿಯಾ, ಒಂದು ಹನಿ-ಹೆಚ್ಚು ಬೆಳೆ, ಪ್ರಧಾನ ಮಂತ್ರಿ ಫಸಲ್ ಭೀಮ್ ಯೋಜನಾ ಹೀಗೆ ಪಟ್ಟಿ ಮುಂದಿಡುತ್ತಾರೆ. ಕಳೆದ ಮೂರು ವರ್ಷದಿಂದ ನಾನು ನಿರಂತವಾಗಿ ಹಳ್ಳಿಗಳನ್ನು ಸುತ್ತಿದ್ದೇನೆ. ಪ್ರಧಾನ ಮಂತ್ರಿಗಳು ರೈತರಿಗಾಗಿ ರೂಪಿಸಿರುವ ಯಾವ ಯೋಜನೆಗಳ ಕುರಿತು ಹಳ್ಳಿಯ ರೈತರು ಮಾತನಾಡಿದ್ದನ್ನು ನಾನು ಕೇಳಿಲ್ಲ. ಪ್ರಧಾನ ಮಂತ್ರಿ ಫಸಲ್ ಬೀಮ್ ಯೋಜನೆ ಇದಕ್ಕೆ ಹೊರತಾಗಿದೆ. ಪ್ರಧಾನ ಮಂತ್ರಿಯವರ ಅತ್ಯಂತ ಪ್ರೀತಿಯ ಯೋಜನೆಗಳು ರೈತರಿಗೆ ಶಾಪವಾಗಿ ಪರಿಣಮಿಸಿವೆ. ಪ್ರಧಾನ ಮಂತ್ರಿ ಬರೀ ಮಾತಾಡುತ್ತಲೇ ಎಲ್ಲರನ್ನೂ ಒಪ್ಪಿಸುವ ಕೆಲಸ ಮಾಡದೆ, ರೈತರ ಸಮಸ್ಯೆಗಳನ್ನು ಪರಿಹರಿಸಲು ಬದ್ಧತೆಯ ಪ್ರಯತ್ನಗಳನ್ನು ಮಾಡಬೇಕಿದೆ. ರೈತರು ಜನಪ್ರಿಯ ಯೋಜನೆಗಳ ಕುರಿತು ಬರೀ ಮಾತುಗಳನ್ನು ಕೇಳಲು ಇಷ್ಟಪಡುವುದಿಲ್ಲ. ಅವರ ಆದಾಯ ಹೆಚ್ಚಾಗುವ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ಪಾಸಿಟಿವ್ ಅಂಶಗಳ ಕುರಿತು ಕೇಳಲು ಬಯಸುತ್ತಾರೆ. ದಿನದ ಕೊನೆಗಾದರೂ ಸರ್ಕಾರ ತಡಮಾಡದೆ, ಪ್ರತಿ ವರ್ಷ ಕೇಂದ್ರ ಸರ್ಕಾರ 24 ಬೆಳೆಗಳಿಗೆ ಪ್ರತಿ ವರ್ಷ ಘೋಷಿಸುವ ಕನಿಷ್ಟ ಬೆಂಬಲ ಬೆಲೆಯ ಕುರಿತು ಗಮನ ಹರಿಸಬೇಕಿದೆ. ರೈತರ ಬೆಳೆಗಳಿಗೆ ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆಯನ್ನು ನಮ್ಮ ಪ್ರಧಾನಿಗಳು ಹೆಚ್ಚಿಸಿ, ಇದು ನಮ್ಮ ಸರ್ರ್ಕಾರದ `ಐತಿಹಾಸಿಕ’ ಸಾಧನೆ ಎಂದು ಘೋಷಿಸಬಹುದು. ರೈತರು ಈ ಘೋಷಣೆಯಿಂದ ಹೆಚ್ಚು ಆದಾಯ ಗಳಿಸುತ್ತಾರೆ ಎಂದು ಭರವಸೆ ಹುಟ್ಟಿಸಿದರೆ ಸಾಕು.

ಕಳೆದ ಹತ್ತು ದಿನಗಳಿಂದ ನಾನು ಸ್ವರಾಜ್ ಅಭಿಯಾನದ ಜೈಕಿಸಾನ್ ಆಂದೋಲನದ ಸಂದರ್ಭದಲ್ಲಿ ವಿವಿಧ ರೈತ ಸಂಘಟನೆಗಳ ಜೊತೆಗೂಡಿ ಕನಿಷ್ಟ ಬೆಂಬಲ ಬೆಲೆಯ ಮೂಲಕ ಅನುಕೂಲ ಪಡೆದ, ದೇಶದ ವಿವಿಧ ಮಂಡಿಗಳಲ್ಲಿನ ರೈತರ ಕ್ಲೇಮುಗಳನ್ನು ಹುಡುಕುತ್ತಿದ್ದೆ. ದೇಶದ ಬೇರೆ ಬೇರೆ ಭಾಗದ ಎಪಿಎಂಸಿಗಳಲ್ಲಿ ಚಾಲ್ತಿಯಲ್ಲಿರುವ ದರಗಳ ಮೂಲಕವೇ ರೈತರ ಬೆಳೆಗಳನ್ನು ಖರೀದಿಸಿರುವುದನ್ನು ಕಂಡುಕೊಳ್ಳಬೇಕಿತ್ತು. ಎಪಿಎಂಸಿಗಳ ಅಧಿಕಾರಿಗಳ ಜೊತೆ, ಮಧ್ಯವರ್ತಿಗಳ ಜೊತೆ, ರೈತರ ಜೊತೆ ಮತ್ತು ವ್ಯಾಪಾರಿಗಳ ಜೊತೆ ಸರ್ಕಾರದ ಕನಿಷ್ಟ ಬೆಂಬಲ ಬೆಲೆಯ ಆಗುಹೋಗುಗಳ ಕುರಿತು ಚರ್ಚಿಸಲಾಯಿತು. ಈ ತಿರುಗಾಟದಲ್ಲಿ ನಾವು ಕಂಡುಕೊಂಡಿದ್ದು; ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆಗೆ ಯಾವೊಬ್ಬ ರೈತನೂ ತಮ್ಮ ಬೆಳೆಯನ್ನು ಯಾವ ಮಂಡಿಯಲ್ಲೂ ಮಾರಾಟ ಮಾಡಿರುವುದು ಕಂಡುಬರಲಿಲ್ಲ. ಕೇದ್ರ ಸರ್ಕಾರ ಒಂದು ಕ್ವಿಂಟಾಲ್ ತೊಗರಿಗೆ 5,450/- ರೂಪಾಯಿಗಳ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದ್ದರೆ, ಕರ್ನಾಟಕ ಸರ್ಕಾರ ಅದನ್ನು 6,000/- ರೂಪಾಯಿಗಳಿಗೆ ಏರಿಸಿದೆ. ಆದರೆ ಅರ್ಧಕ್ಕಿಂತ ಕಡಿಮೆ ರೈತರು ಮಾತ್ರ ಈ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರಬಹುದು. ಉಳಿದ ಅರ್ಧಕ್ಕಿಂತ ಹೆಚ್ಚು ರೈತರು ಮುಕ್ತ ಮಾರುಕಟ್ಟೆಯಲ್ಲಿ ಅದೇ ಬೆಳೆಯನ್ನು ಕ್ವಿಂಟಾಲ್‍ಗೆ ಕೇವಲ 4000/- ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ದಕ್ಷಿಣದ ಮೂರು ರಾಜ್ಯಗಳ ಶೇಂಗಾ ಬೆಳೆಗಾರ ರೈತರು ತಮ್ಮ ಬೆಳೆಯನ್ನು ಸರ್ಕಾರದ ಕನಿಷ್ಟ ಬೆಂಬಲ ಬೆಲೆಗೆ ಮಾರಾಟ ಮಾಡುವುದು ಸಾಧ್ಯವಾಗುವುದೇ ಇಲ್ಲ. ಕಾರಣ ಖರೀದಿಸುವ ಅವಧಿ ಚಿಕ್ಕದಾಗಿದ್ದು, ಆ ಅವಧಿಯಲ್ಲಿ ರೈತರು ಸರ್ಕಾರದ ಕನಿಷ್ಟ ಬೆಂಬಲ ಬೆಲೆ 4,450/- ರೂಪಾಯಿಗಳಿಗೆ ತಮ್ಮ ಶೇಂಗಾ ಬೆಳೆಯನ್ನು ಅಲ್ಲಿ ಮಾರದೆ, ಮುಕ್ತ ಮಾರುಕಟ್ಟೆಯಲ್ಲಿ 3,600/- ರೂಪಾಯಿಗಳಿಂದ 3,700/- ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಒಳ್ಳೆಯ ಹತ್ತಿ ಉತ್ತಮ ಬೆಲೆಗೆ ಮಾರಾಟವಾದರೆ, ಮಳೆಗೆ, ರೋಗರುಜಿನೆಗಳಿಗೆ ಸಿಕ್ಕು ಹಾಳಾದ ಹತ್ತಿ ಕನಿಷ್ಟ ದರಕ್ಕೆ ಮಾರಾಟವಾಗುತ್ತದೆ. ಇದರಿಂದಾಗಿ ಒಂದು ವರ್ಷದಲ್ಲಿ ರೈತರು 14,474/- ಕೋಟಿಗಳಷ್ಟು ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಕೇವಲ ಲಾಸ್ ಅಲ್ಲ, ಅವರ ಆದಾಯವನ್ನು ಲೂಟಿ ಮಾಡಲಾಗುತ್ತದೆ.

ನಮ್ಮ ಈ ತಿರುಗಾಟದಲ್ಲಿ ನಾವು ಸರ್ಕಾರದ ಖರೀದಿ ಕೇಂದ್ರಗಳ ವ್ಯವಹಾರಗಳನ್ನೂ ಗಮನಿಸಿದೆವು. ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಬೆಳೆಗಳನ್ನು ಮಾರಾಟ ಮಾಡುವುದೆಂದರೆ ಅನೇಕ ಅಡೆತಡೆಗಳನ್ನು ಜೋಡಿಸಿರುವ ದಾರಿಯಲ್ಲಿ ರೈತರು ಓಡಿದಂತೆ. ರೈತರು ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಕನಿಷ್ಟ ಬೆಂಬಲ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಇರುವಂತಹ ಎಲ್ಲ ಅಡತಡೆಗಳನ್ನು ಸೃಷ್ಟಿ ಮಾಡಿಟ್ಟಿದೆ. ಹಲವು ರೈತರು ಮಧ್ಯವರ್ತಿಗಳ ಹಾವಳಿಯ ಕುರಿತು ನಮಗೆ ಹೇಳಿದರು. ಮಧ್ಯವರ್ತಿಗಳು ಮೊದಲು ಅತ್ಯಂತ ಕಡಿಮೆ ಬೆಲೆಗೆ, ಅದರಲ್ಲೂ ಸರ್ಕಾರದ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಬೆಳೆಗಳನ್ನು ಖರೀದಿಸಿ, ನಂತರ ಸರ್ಕಾರದ ಕನಿಷ್ಟ ಬೆಂಬಲ ಬೆಲೆಗೆ ತಾವು ಖರೀದಿಸಿದ ಬೆಳೆಗಳನ್ನು ಮಾರಾಟ ಮಾಡುತ್ತಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಒಬ್ಬ ರೈತನ ಮಾರಾಟಕ್ಕೆ ಇಂತಿಷ್ಟು ಗರಿಷ್ಟ ಹಣದ ಮಿತಿಯನ್ನು ವಿಧಿಸಿದೆ.

ಸರ್ಕಾರದ ಖರೀದಿ ಕೇಂದ್ರಗಳಲ್ಲಿ ಅಧಿಕಾರಿಗಳು ಕೇಳುವ ದಾಖಲೆಗಳ ಕುರಿತು ರೈತರು ತಮ್ಮ ಗೋಳು ಹೇಳಿಕೊಂಡರು. ಖರೀದಿ ಕೇಂದ್ರದಲ್ಲಿ, ಅಧಿಕಾರಿಗಳು ರೈತರಿಗೆ ತಮ್ಮ ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಭೂಮಿ ಒಡೆತನದ ಪತ್ರ ಮತ್ತು ಕೃಷಿ ಅಧಿಕಾರಿಗಳ ದೃಢೀಕರಣ ಪತ್ರಗಳನ್ನು ಸಲ್ಲಿಸಲು ಹೇಳುತ್ತಾರೆ. ಈ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂಬ ಕ್ರಮದ ಹಿಂದೆ ಸಣ್ಣ ರೈತರನ್ನು ಹೊರಗಿಡುವ ಹುನ್ನಾರು ಇದೆ. ಈ ದಾಖಲೆಗಳನ್ನು ಹೊಂದಿಸಿಕೊಂಡು ಬಂದ ರೈತ ಖರೀದಿ ಕೇಂದ್ರದಲ್ಲಿ ತನ್ನ ಬೆಳೆಗಳನ್ನು ಮಾರಾಟ ಮಾಡಿದನೆಂದರೆ, ಅವನಿಗೆ ಹಣ ಬರುವುದು ಮೂರೋ ನಾಲ್ಕೋ ತಿಂಗಳಾಗುತ್ತದೆ. ಮತ್ತು ಆ ಹಣ ನೇರ ರೈತನ ಬ್ಯಾಂಕ್ ಅಕೌಂಟ್‍ಗೆ ಹೋದಾಗ ಬ್ಯಾಂಕ್‍ನವರು ಆ ಹಣವನ್ನು ರೈತನ ಸಾಲಗಳಿಗೆ ಮುರಿದುಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ರೈತರು ತಮ್ಮ ಬೆಳೆಗಳನ್ನು ಖಾಸಗಿ ವ್ಯಾಪಾರಿಗಳಿಗೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ರೈತರನ್ನು ಕುರಿತ ಪ್ರಧಾನಿಯವರ `ಮನ್ ಕಿ ಬಾತ್‍ನ್ನು’ ನಾನು ಕೇಳಿದ್ದೇನೆ. ಪ್ರಧಾನಿಗಳಿಗೆ ನಾನು ಒಂದು ಸವಾಲು ಒಡ್ಡುತ್ತಿದ್ದೇನೆ. ಪ್ರಧಾನ ಮಂತ್ರಿಗಳೆ, ದೇಶದ ಯಾವುದಾದರೊಂದು ಖರೀದಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಿ, ನೀವು ಇಷ್ಟಪಡುವ ಯಾವುದಾದರೊಂದು ಹಿಂಗಾರಿನ ಬೆಳೆಯನ್ನು ಆಯ್ದುಕೊಳ್ಳಿ. ಯಾರಾದರು ಒಬ್ಬ ರೈತ ಆ ಖರೀದಿ ಕೇಂದ್ರಕ್ಕೆ ಬಂದು ಸರ್ಕಾರ ಘೋಷಿಸಿದ ಕನಿಷ್ಟ ಬೆಂಬಲ ಬೆಲೆಗೆ ತನ್ನ ಬೆಳೆಗಳನ್ನು ಮಾರಾಟ ಮಾಡಿದನೇ ಎಂದು ನನಗೆ ತೋರಿಸಿ. ನೀವು ಹಾಗೆ ಮಾಡಿದರೆ ನಾನು ನಿಮಗೆ ಸೆಲ್ಯೂಟ್ ಮಾಡುವೆ. ಜೊತೆಗೆ ರೈತರಿಗೆಲ್ಲ ಹೇಳಿ ಮತ ಹಾಕಿಸಿ ಮತ್ತೆ ನೀವು ಅಧಿಕಾರಕ್ಕೆ ಬರುವಂತೆ ಮಾಡಲು ಪ್ರಯತ್ನಿಸುವೆ. ನೀವು ನನ್ನ ಈ ಸವಾಲನ್ನು ಸ್ವೀಕರಿಸದೇ ಇದ್ದರೆ, ಈಗ ಸಮಯ ಬಂದಿದೆ, ದಯವಿಟ್ಟು ರೈತರ `ಮನ್ ಕಿ ಬಾತ್’ ನ್ನು ನೀವೂ ಕೇಳಲೇಬೇಕು.

ಅನುವಾದ: ಎ.ಎಸ್.ಪ್ರಭಾಕರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...