Homeಕರ್ನಾಟಕಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

ಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

- Advertisement -
- Advertisement -

| ಶುದ್ದೋದನ |

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ.

ಇದೊಂಥರಾ ತಮಾಷೆ! ಶರಾವತಿ ನದಿ ದಡದಲ್ಲೇ ಕುಡಿವ ನೀರಿಗಾಗಿ ಹಾಹಾಕಾರ ಎದ್ದಿರುವಾಗ ಲಿಂಗನಮಕ್ಕಿ ಜಲಾಶಯದ ನೀರಿನಿಂದ ಬೃಹತ್ ಬೆಂಗಳೂರಿನ ದಾಹ ತೀರಿಸುವ “ವ್ಯರ್ಥ ಯೋಜನೆ”ಗೆ ಅಧಿಕಾರಸ್ಥ ಪ್ರಭೃತಿಗಳು ಸ್ಕೆಚ್ ಹಾಕುತ್ತಿದ್ದಾರೆ! ಬೆಂಗಳೂರು ಅಭಿವೃದ್ಧಿ ಮಂತ್ರಿ ಪರಮ್ ಸಾಹೇಬರ ಮೇಧಾವಿ ಮೆದುಳಿಗೆ ಈ ಯೋಚನೆ ಅದ್ಹೇಗೆ ಹೊಳೆಯಿತೋ ಏನೋ? ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದಿಸಿದ ನಂತರ ಸಮುದ್ರದತ್ತ ಸಾಗಿ ಪೋಲಾಗುವ ನೀರನ್ನು ಹಿಡಿದು ಬೆಂಗಳೂರಿನತ್ತ ಹೊರಳಿಸುವ ಬಗ್ಗೆ ಪರಮ್ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು ಮಲೆನಾಡಲ್ಲಿ ಸಿಡಿಲು ಬಡಿದಂತಾಗಿದೆ.

ಇದೊಂದು ಅಪ್ಪಟ ಅವೈಜ್ಞಾನಿಕ ಯೋಜನೆ; ತಾಂತ್ರಿಕವಾಗೂ ಕಾರ್ಯಸಾಧುವಲ್ಲ. ಆಡಳಿತಗಾರರ ಕಿಸೆ ತುಂಬುವ ಕಿಕ್‍ಬ್ಯಾಕ್ ಕರಾಮತ್ತು. ಈ ಯೋಜನೆಯಿಂದ ಹಲವು ಹೊಡೆತ ತಿಂದಿರುವ ಶರಾವತಿ ಕೊಳ್ಳದ ಪರಿಸರದ ಮೇಲೆ ಮತ್ತೊಂದು ಭೀಕರ ದಾಳಿಯಾಗುತ್ತದೆ. ಲಿಂಗನಮಕ್ಕಿ ವಿದ್ಯುತ್ ಯೋಜನೆಯಿಂದ ಮುಳುಗಡೆಯಾದ ಏರಿಯಾದ ಜನರಿಗೆ ಇವತ್ತಿಗೂ ನ್ಯಾಯ ಒದಗಿಸಲಾಗಿಲ್ಲ. ಪುನರ್ವಸತಿ ಕೇಂದ್ರಗಳಲ್ಲಿ ಬದುಕು ರೂಪಿಸಿಕೊಳ್ಳಲಾಗದೇ ಹಳ್ಳಿ-ಹಳ್ಳಿಗಳು ಬೀದಿ ಪಾಲಾಗಿವೆ. ನಿರಾಶ್ರಿತರ ಏರಿಯಾದಲ್ಲಿ ಕನಿಷ್ಟ ಗುಟುಕು ಕುಡಿವ ನೀರಿನ ವ್ಯವಸ್ಥೆಯೂ ಆಳುವ ಹೇತ್ಲಾಂಡಿಗಳಿಂದ ಮಾಡಲಾಗಿಲ್ಲ. ಈಗ ಮತ್ತೊಂದು ಜೀವಜಗತ್ತನೇ ಜರ್ಜರಿತಗೊಳಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಹುನ್ನಾರದ ಕತೆ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನಜೀವನ ನರಕವಾಗಿಸುವ ಈ ಪ್ರಳಯಾಂತಕ ಪ್ಲಾನ್ ವಿರುದ್ಧ ಶಿವಮೊಗ್ಗ, ಸಾಗರ, ಹೊನ್ನಾವರ ಸೀಮೆ ಮಂದಿ ಸಂಘಟಿತರಾಗುತ್ತಿದ್ದಾರೆ.

ಈ ಬಾರಿ ಮಲೆನಾಡಿನ ಜನರು ಕುಡಿಯುವ ನೀರಿಗಾಗಿ ಗೋಳಾಡಿದ್ದು ಹೇಳತೀರದು. ಜೂನ್ ಅರ್ಧ ಕಳೆದರೂ ಮಳೆಯೇ ಬರದೆ ತುಂಗಾ, ಭದ್ರಾ ಮತ್ತು ಶರಾವತಿ ನದಿ ಇಕ್ಕೆಲದ ಹಳ್ಳಿಗರು ನೀರಿಗಾಗಿ ಕಣ್ಣೀರು ಸುರಿಸಿದ್ದರು. ಅದೇ ಹೊತ್ತಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಪರಮ್ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ದೊಡ್ಡ, ದೊಡ್ಡ ಪೈಪ್‍ಗಳ ಮೂಲಕ ನೀರು ಸಾಗಿಸುವ ಯೋಜನೆಯ ವಿಸ್ತøತ ವರದಿ (ಡಿಪಿಆರ್) ತಯಾರಿಸಲು ಅಧಿಕಾರಿಗಳಿಗೆ ಅಪ್ಪಣೆ ಮಾಡಿದ್ದರು. ಕ್ಯಾಬಿನೆಟ್ ತೀರ್ಮಾನವಿಲ್ಲದೆ ಏಕಪಕ್ಷೀಯವಾಗಿ ಪರಮ್ ಹಾರಾಡುತ್ತಿರುವುದು ಕಿಕ್‍ಬ್ಯಾಕ್‍ನ ದೂ(ದು)ರಾಲೋಚನೆಯ ಅನೇಕ-ಅನುಮಾನ ಶರಾವತಿ ಕಣಿವೆಯ ಜನ ಮನದಲ್ಲಿ ಮೂಡಿಸಿದೆ! ದುಬಾರಿಯಾದ ಮತ್ತು ಫಲಪ್ರದವಾಗುವ ಗ್ಯಾರಂಟಿಯಿಲ್ಲದ ಈ ಪ್ರಾಜೆಕ್ಟ್ ಬಗ್ಗೆ ಪರಮ್ ತುಂಬ ಮುತುವರ್ಜಿ ವಹಿಸಿದ್ದು ಯಾಕಿರಬಹುದು?

ವಿದ್ಯುತ್ ಉತ್ಪಾದನೆ ಬಳಿಕ ಲಿಂಗನಮಕ್ಕಿ ಜಲಾಶಯದಿಂದ ಹೊರಹೋಗುವ ನೀರು ವ್ಯರ್ಥವಾಗುತ್ತದೆ ಎಂಬ ವಾದ ಆಡಳಿತಗಾರ ಪಂಡಿತರದು. ಸರಿ, ನೀರು ಪೋಲಾಗುತ್ತದೆಂದು ಬರೋಬ್ಬರಿ 400 ಕಿ.ಮೀ ದೂರ ಕೊಳವೆಗಳ ಮೂಲಕ ನೀರನ್ನು ತಳ್ಳುವ ಸಾವಿರಾರು ಕೋಟಿ ರೂಪಾಯಿ ಯೋಜನೆ ಬೇಕಾ? ಶರಾವತಿ ತೀರದ ಹಲವು ಹಳ್ಳಿಗಳು ಬೊಗಸೆ ನೀರಿಗಾಗಿ ಪರಿತಪಿಸುತ್ತಿವೆ. ನಾಡಿಗೆ ಬೆಳಕು ನೀಡಲು ಸರ್ವಸ್ವ ತ್ಯಾಗ ಮಾಡಿದ ಶರಾವತಿ ನಿರಾಶ್ರಿತರ ಕೇರಿಗಳಿಗೇ ನೀರಿನ ಬರ ಬಡಿದಿದೆ. ಲಿಂಗನಮಕ್ಕಿ ಡ್ಯಾಮ್‍ನ ಆಚೀಚೆಯ ಈ ಜಲ ಬರದ ಪ್ರದೇಶಕ್ಕೆ ಪೋಲಾಗುವ ನೀರನ್ನು ಹರಿಸಿದ್ದರೆ ಪರಮ್‍ಗೆ ಪುಣ್ಯ ಬರುತ್ತಿತ್ತು. ದುಂದುವೆಚ್ಚವೂ ತಪ್ಪುತ್ತಿತ್ತು. ಬೆಂಗಳೂರಿಗೆ ಮಳೆಕೊಯ್ಲಿನ ಮೂಲಕ ಕುಡಿವ ನೀರಿನ ಯೋಜನೆ ರೂಪಿಸಲಾಗದೇ?

ಅಷ್ಟು ಸುಲಭ- ಸರಳವಾಗಿ ನೀರನ್ನು ಕಾರ್ಗಲ್‍ನಿಂದ ಬೆಂಗಳೂರಿಗೆ ಒಯ್ಯಲಾಗದು. ಶರಾವತಿಯಿಂದ ಹೆಚ್ಚು ಕಡಿಮೆ 1500 ಅಡಿ ಎತ್ತರಕ್ಕೆ ನೀರನ್ನು ಎತ್ತಬೇಕಾಗುತ್ತದೆ. ಅಷ್ಟೇ ಅಲ್ಲ 400 ಕಿ.ಮೀ ದೂರಕ್ಕೆ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಸಮುದ್ರ ಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಡ್ಯಾಮ್‍ನಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಟ 1650 ಅಡಿ ಮಟ್ಟದಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 300 ಅಡಿ. ಬೆಂಗಳೂರಿನ ತೀರ ಎತ್ತರದ ದೊಡ್ಡ ಬೆಟ್ಟಹಳ್ಳಿ ಇರುವುದು 3150 ಅಡಿ ಎತ್ತರದಲ್ಲಿ. ಈ ಲೆಕ್ಕಾಚಾರದಂತೆ ಕಾರ್ಗಲ್‍ನಿಂದ ಬೆಂಗಳೂರಿಗೆ ನೀರು ತರಲು 1500 ಅಡಿ ಎತ್ತರಕ್ಕೆ ನೀರು ಲಿಫ್ಟ್ ಮಾಡಬೇಕು.

ಎಷ್ಟೇ ಉತ್ತಮ ಗುಣಮಟ್ಟದ ಪಂಪ್ ಆದರೂ ನೂರಕ್ಕೆ ನೂರು ಕಾರ್ಯಕ್ಷಮತೆ ಹೊಂದಿರಲು ಸಾಧ್ಯವಿಲ್ಲ. ಹಾಗಾಗಿ ವಿದ್ಯುತ್ ವ್ಯರ್ಥ ಆಗೇ ಆಗುತ್ತದೆ. ಶರಾವತಿ ಟರ್ಬೈನ್‍ಗಳ ಎತ್ತರ ಅಂತರ (ಗ್ರಾಸ್ ಹೆಡ್) ಸುಮಾರು 1525 ಅಡಿ. ಈ ಹೆಡ್ ಬಳಸಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಹೆಚ್ಚು ಕಡಿಮೆ 10 ಕ್ಯೂಸೆಕ್ಸ್ ನೀರು ಬೇಕಾಗುತ್ತದೆ. ಬೆಂಗಳೂರಿಗೆ ಒಯ್ಯುವ ನೀರನ್ನು ಲಿಂಗನಮಕ್ಕಿಯಿಂದ ಬೆಂಗಳೂರಿನ ಎತ್ತರ ಏರಿಸಲು ಶರಾವತಿ ವಿದ್ಯುತ್‍ಗಾರದಲ್ಲಿ ತಯಾರಾಗುವ ಎಲ್ಲ ವಿದ್ಯುತ್ ಅವಶ್ಯ! ಇನ್ನು 400 ಕಿ.ಮೀ ದೂರಕ್ಕೆ ನೀರು ತಳ್ಳಲು ಬೇರೆಡೆಯಿಂದ ವಿದ್ಯುತ್ ಶಕ್ತಿ ತರಬೇಕೆಂದಾಯ್ತು. ಅಂದರೆ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರು ತರಲು ಅದೇ ನೀರಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಕರೆಂಟ್‍ನಿಂದ ಒಂದೂವರೆ ಪಟ್ಟು ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ನೀರು ಮತ್ತು ವಿದ್ಯುತ್ ಸೋರಿಕೆ ಪ್ರಮಾಣ ಸೇರಿಸಿದರೇ ಹಾನಿ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಇದೊಂದು ಎಡವಟ್ಟು ಪ್ರಾಜೆಕ್ಟ್!

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ. ಅಪರೂಪದ ಜೀವಸಂಕುಲದ ಅಳಿದುಳಿದ ಶರಾವತಿ ಕಣಿವೆಗೆ ದೊಡ್ಡ ಆಘಾತವಾಗಲಿದೆ. ಪೈಪ್‍ಲೈನ್ ಹಾದುಹೋಗುವ ಊರುಗಳ ಜನರು ಬೀದಿಗೆ ಬೀಳುತ್ತಾರೆ.

ಇಷ್ಟೆಲ್ಲ ಅವಾಂತರ, ಅನಾಹುತದ ನಂತರವಾದರೂ ಯೋಜನೆಯ ಮೂಲ ಉದ್ದೇಶ ಈಡೇರಬಹುದಾ? ಶರಾವತಿ ನೀರು ಬೆಂಗಳೂರು ತಲುಪುವುದು ಅನುಮಾನ! ಯೋಜನೆ ಸರ್ಕಾರಿ ಫೈಲುಗಳಲ್ಲಿ ಕಾರ್ಯಗತವಾಗಿ ರಾಜಕಾರಣಿ-ಅಧಿಕಾರಿ-ಕಂಟ್ರಾಕ್ಟರ್ ಲಾಬಿಯ ದೆಸೆ ಬದಲಿಸಬಹುದಷ್ಟೇ! ಇಂಥ ಹುಚ್ಚು ಯೋಜನೆಗಳನ್ನು ಮಾಡುವುದು ಬಿಟ್ಟು ಬೆಂಗಳೂರಿನ ಅನಿಯಂತ್ರಿತ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಿದರೆ ನೀರಡಿಕೆ ಸಮಸ್ಯೆಯೊಂದೇ ಅಲ್ಲ ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ಪರಿಸರ ಮಾಲಿನ್ಯದಂಥ ಗಂಡಾಂತರದಿಂದಲೂ ಬಚಾವಾಗಬಹುದು. ಎಲ್ಲಾ ಮೂಲ ಸೌಕರ್ಯಗಳನ್ನು ತಾನೊಂದೇ ನುಂಗುವ ಬೆಂಗಳೂರಿನ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೆ ಒಳಪಡಿಸಿದರೆ ಕನಿಷ್ಟವೆಂದರೂ ಸಾಗರ, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರ ವ್ಯವಸ್ಥಿತವಾಗಿ ಉದ್ಧಾರವೂ ಆಗುತ್ತದೆ.

ತಮಿಳು-ತೆಲುಗರಿಗೆ ಹತ್ತಿರವಾದ ಬೆಂಗಳೂರನ್ನು ಕುರುಡಾಗಿ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಇರುವ ಸಾಗರ, ಶಿರಸಿ, ಶಿವಮೊಗ್ಗವನ್ನೇಕೆ ಅಭಿವೃದ್ಧಿಪಡಿಸಬಾರದೆಂಬ ಕೂಗು ಈಗ ಮಲೆನಾಡಲ್ಲಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶಿವಮೊಗ್ಗ, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ ಬೆಂಗಳೂರಿನ ಐಟಿ-ಬಿಟಿ ಇಂಡಸ್ಟ್ರಿಗಳನ್ನು ಸಾಗರ-ಶಿರಸಿಯತ್ತ ಏಕೆ ತರಬಾರದೆಂಬ ವಾದ ಬಲಗೊಳ್ಳುತ್ತಿದೆ. ಇದರಿಂದ ಒಂದೇ ಕಾಲದಲ್ಲಿ ಬೆಂಗಳೂರು ಮತ್ತು ಹಿಂದುಳಿದ ಮಲೆನಾಡಿನ ಹಲವು ಸಮಸ್ಯೆ-ಸಂಕಷ್ಟ ಪರಿಹಾರವಾಗುತ್ತದೆ. ಬರಡಾದ ಹಳ್ಳಿಗಳಲ್ಲಿ ಶಕ್ತಿ, ಮಾನವ ಸಂಪನ್ಮೂಲ ಉಳಿಯುತ್ತದೆ; ಪರಿಸರ ಪಸಂದಾಗಿರುತ್ತದೆ. ಬೆಂಗಳೂರಲ್ಲಿ ನೌಕರಿ ಮಾಡುತ್ತಿರುವ ಮಕ್ಕಳ ನೆನಪಲ್ಲಿ ಚಡಪಡಿಸುತ್ತಿರುವ ಅಮಾಯಕ ತಾಯ್ತಂದೆಯರ ಬದುಕು ಬಚಾವಾಗುತ್ತದೆ.

ಇಂಥ ಸುಸ್ಥಿರ ಅಭಿವೃದ್ಧಿ ಬೇಕಾ? ಬರಡು ಯೋಜನೆ ಕಡತದಲ್ಲಿ ಶುರುವಾಗೋದು ಬೇಕಾ? ಪರಮ್ ಸಾಹೇಬರಿಗೆ ಅರ್ಥ ಮಾಡಿಸೋರ್ಯಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...