Homeಕರ್ನಾಟಕಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

ಶರಾವತಿ ನೀರು ಬೆಂಗಳೂರಿಗೆ ತರಲು ಸಾಧ್ಯವಾ?

- Advertisement -
- Advertisement -

| ಶುದ್ದೋದನ |

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ.

ಇದೊಂಥರಾ ತಮಾಷೆ! ಶರಾವತಿ ನದಿ ದಡದಲ್ಲೇ ಕುಡಿವ ನೀರಿಗಾಗಿ ಹಾಹಾಕಾರ ಎದ್ದಿರುವಾಗ ಲಿಂಗನಮಕ್ಕಿ ಜಲಾಶಯದ ನೀರಿನಿಂದ ಬೃಹತ್ ಬೆಂಗಳೂರಿನ ದಾಹ ತೀರಿಸುವ “ವ್ಯರ್ಥ ಯೋಜನೆ”ಗೆ ಅಧಿಕಾರಸ್ಥ ಪ್ರಭೃತಿಗಳು ಸ್ಕೆಚ್ ಹಾಕುತ್ತಿದ್ದಾರೆ! ಬೆಂಗಳೂರು ಅಭಿವೃದ್ಧಿ ಮಂತ್ರಿ ಪರಮ್ ಸಾಹೇಬರ ಮೇಧಾವಿ ಮೆದುಳಿಗೆ ಈ ಯೋಚನೆ ಅದ್ಹೇಗೆ ಹೊಳೆಯಿತೋ ಏನೋ? ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದಿಸಿದ ನಂತರ ಸಮುದ್ರದತ್ತ ಸಾಗಿ ಪೋಲಾಗುವ ನೀರನ್ನು ಹಿಡಿದು ಬೆಂಗಳೂರಿನತ್ತ ಹೊರಳಿಸುವ ಬಗ್ಗೆ ಪರಮ್ ಹೇಳಿಕೆ ಕೊಟ್ಟಿದ್ದೇ ಕೊಟ್ಟಿದ್ದು ಮಲೆನಾಡಲ್ಲಿ ಸಿಡಿಲು ಬಡಿದಂತಾಗಿದೆ.

ಇದೊಂದು ಅಪ್ಪಟ ಅವೈಜ್ಞಾನಿಕ ಯೋಜನೆ; ತಾಂತ್ರಿಕವಾಗೂ ಕಾರ್ಯಸಾಧುವಲ್ಲ. ಆಡಳಿತಗಾರರ ಕಿಸೆ ತುಂಬುವ ಕಿಕ್‍ಬ್ಯಾಕ್ ಕರಾಮತ್ತು. ಈ ಯೋಜನೆಯಿಂದ ಹಲವು ಹೊಡೆತ ತಿಂದಿರುವ ಶರಾವತಿ ಕೊಳ್ಳದ ಪರಿಸರದ ಮೇಲೆ ಮತ್ತೊಂದು ಭೀಕರ ದಾಳಿಯಾಗುತ್ತದೆ. ಲಿಂಗನಮಕ್ಕಿ ವಿದ್ಯುತ್ ಯೋಜನೆಯಿಂದ ಮುಳುಗಡೆಯಾದ ಏರಿಯಾದ ಜನರಿಗೆ ಇವತ್ತಿಗೂ ನ್ಯಾಯ ಒದಗಿಸಲಾಗಿಲ್ಲ. ಪುನರ್ವಸತಿ ಕೇಂದ್ರಗಳಲ್ಲಿ ಬದುಕು ರೂಪಿಸಿಕೊಳ್ಳಲಾಗದೇ ಹಳ್ಳಿ-ಹಳ್ಳಿಗಳು ಬೀದಿ ಪಾಲಾಗಿವೆ. ನಿರಾಶ್ರಿತರ ಏರಿಯಾದಲ್ಲಿ ಕನಿಷ್ಟ ಗುಟುಕು ಕುಡಿವ ನೀರಿನ ವ್ಯವಸ್ಥೆಯೂ ಆಳುವ ಹೇತ್ಲಾಂಡಿಗಳಿಂದ ಮಾಡಲಾಗಿಲ್ಲ. ಈಗ ಮತ್ತೊಂದು ಜೀವಜಗತ್ತನೇ ಜರ್ಜರಿತಗೊಳಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ಹುನ್ನಾರದ ಕತೆ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನಜೀವನ ನರಕವಾಗಿಸುವ ಈ ಪ್ರಳಯಾಂತಕ ಪ್ಲಾನ್ ವಿರುದ್ಧ ಶಿವಮೊಗ್ಗ, ಸಾಗರ, ಹೊನ್ನಾವರ ಸೀಮೆ ಮಂದಿ ಸಂಘಟಿತರಾಗುತ್ತಿದ್ದಾರೆ.

ಈ ಬಾರಿ ಮಲೆನಾಡಿನ ಜನರು ಕುಡಿಯುವ ನೀರಿಗಾಗಿ ಗೋಳಾಡಿದ್ದು ಹೇಳತೀರದು. ಜೂನ್ ಅರ್ಧ ಕಳೆದರೂ ಮಳೆಯೇ ಬರದೆ ತುಂಗಾ, ಭದ್ರಾ ಮತ್ತು ಶರಾವತಿ ನದಿ ಇಕ್ಕೆಲದ ಹಳ್ಳಿಗರು ನೀರಿಗಾಗಿ ಕಣ್ಣೀರು ಸುರಿಸಿದ್ದರು. ಅದೇ ಹೊತ್ತಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಪರಮ್ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ದೊಡ್ಡ, ದೊಡ್ಡ ಪೈಪ್‍ಗಳ ಮೂಲಕ ನೀರು ಸಾಗಿಸುವ ಯೋಜನೆಯ ವಿಸ್ತøತ ವರದಿ (ಡಿಪಿಆರ್) ತಯಾರಿಸಲು ಅಧಿಕಾರಿಗಳಿಗೆ ಅಪ್ಪಣೆ ಮಾಡಿದ್ದರು. ಕ್ಯಾಬಿನೆಟ್ ತೀರ್ಮಾನವಿಲ್ಲದೆ ಏಕಪಕ್ಷೀಯವಾಗಿ ಪರಮ್ ಹಾರಾಡುತ್ತಿರುವುದು ಕಿಕ್‍ಬ್ಯಾಕ್‍ನ ದೂ(ದು)ರಾಲೋಚನೆಯ ಅನೇಕ-ಅನುಮಾನ ಶರಾವತಿ ಕಣಿವೆಯ ಜನ ಮನದಲ್ಲಿ ಮೂಡಿಸಿದೆ! ದುಬಾರಿಯಾದ ಮತ್ತು ಫಲಪ್ರದವಾಗುವ ಗ್ಯಾರಂಟಿಯಿಲ್ಲದ ಈ ಪ್ರಾಜೆಕ್ಟ್ ಬಗ್ಗೆ ಪರಮ್ ತುಂಬ ಮುತುವರ್ಜಿ ವಹಿಸಿದ್ದು ಯಾಕಿರಬಹುದು?

ವಿದ್ಯುತ್ ಉತ್ಪಾದನೆ ಬಳಿಕ ಲಿಂಗನಮಕ್ಕಿ ಜಲಾಶಯದಿಂದ ಹೊರಹೋಗುವ ನೀರು ವ್ಯರ್ಥವಾಗುತ್ತದೆ ಎಂಬ ವಾದ ಆಡಳಿತಗಾರ ಪಂಡಿತರದು. ಸರಿ, ನೀರು ಪೋಲಾಗುತ್ತದೆಂದು ಬರೋಬ್ಬರಿ 400 ಕಿ.ಮೀ ದೂರ ಕೊಳವೆಗಳ ಮೂಲಕ ನೀರನ್ನು ತಳ್ಳುವ ಸಾವಿರಾರು ಕೋಟಿ ರೂಪಾಯಿ ಯೋಜನೆ ಬೇಕಾ? ಶರಾವತಿ ತೀರದ ಹಲವು ಹಳ್ಳಿಗಳು ಬೊಗಸೆ ನೀರಿಗಾಗಿ ಪರಿತಪಿಸುತ್ತಿವೆ. ನಾಡಿಗೆ ಬೆಳಕು ನೀಡಲು ಸರ್ವಸ್ವ ತ್ಯಾಗ ಮಾಡಿದ ಶರಾವತಿ ನಿರಾಶ್ರಿತರ ಕೇರಿಗಳಿಗೇ ನೀರಿನ ಬರ ಬಡಿದಿದೆ. ಲಿಂಗನಮಕ್ಕಿ ಡ್ಯಾಮ್‍ನ ಆಚೀಚೆಯ ಈ ಜಲ ಬರದ ಪ್ರದೇಶಕ್ಕೆ ಪೋಲಾಗುವ ನೀರನ್ನು ಹರಿಸಿದ್ದರೆ ಪರಮ್‍ಗೆ ಪುಣ್ಯ ಬರುತ್ತಿತ್ತು. ದುಂದುವೆಚ್ಚವೂ ತಪ್ಪುತ್ತಿತ್ತು. ಬೆಂಗಳೂರಿಗೆ ಮಳೆಕೊಯ್ಲಿನ ಮೂಲಕ ಕುಡಿವ ನೀರಿನ ಯೋಜನೆ ರೂಪಿಸಲಾಗದೇ?

ಅಷ್ಟು ಸುಲಭ- ಸರಳವಾಗಿ ನೀರನ್ನು ಕಾರ್ಗಲ್‍ನಿಂದ ಬೆಂಗಳೂರಿಗೆ ಒಯ್ಯಲಾಗದು. ಶರಾವತಿಯಿಂದ ಹೆಚ್ಚು ಕಡಿಮೆ 1500 ಅಡಿ ಎತ್ತರಕ್ಕೆ ನೀರನ್ನು ಎತ್ತಬೇಕಾಗುತ್ತದೆ. ಅಷ್ಟೇ ಅಲ್ಲ 400 ಕಿ.ಮೀ ದೂರಕ್ಕೆ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಸಮುದ್ರ ಮಟ್ಟದಿಂದ ಲಿಂಗನಮಕ್ಕಿ ಎತ್ತರ ಪೂರ್ಣ ತುಂಬಿದಾಗ 1819 ಅಡಿ. ಹಾಗಾಗಿ ಲಿಂಗನಮಕ್ಕಿ ಡ್ಯಾಮ್‍ನಿಂದ ಬೆಂಗಳೂರಿಗೆ ನೀರನ್ನು ಒಯ್ಯುವುದಾದರೆ ಕನಿಷ್ಟ 1650 ಅಡಿ ಮಟ್ಟದಿಂದ ಪೈಪ್ ಲೈನ್ ಅಳವಡಿಸಬೇಕು. ಸಮುದ್ರಮಟ್ಟದಿಂದ ಬೆಂಗಳೂರಿನ ಸರಾಸರಿ ಎತ್ತರ 300 ಅಡಿ. ಬೆಂಗಳೂರಿನ ತೀರ ಎತ್ತರದ ದೊಡ್ಡ ಬೆಟ್ಟಹಳ್ಳಿ ಇರುವುದು 3150 ಅಡಿ ಎತ್ತರದಲ್ಲಿ. ಈ ಲೆಕ್ಕಾಚಾರದಂತೆ ಕಾರ್ಗಲ್‍ನಿಂದ ಬೆಂಗಳೂರಿಗೆ ನೀರು ತರಲು 1500 ಅಡಿ ಎತ್ತರಕ್ಕೆ ನೀರು ಲಿಫ್ಟ್ ಮಾಡಬೇಕು.

ಎಷ್ಟೇ ಉತ್ತಮ ಗುಣಮಟ್ಟದ ಪಂಪ್ ಆದರೂ ನೂರಕ್ಕೆ ನೂರು ಕಾರ್ಯಕ್ಷಮತೆ ಹೊಂದಿರಲು ಸಾಧ್ಯವಿಲ್ಲ. ಹಾಗಾಗಿ ವಿದ್ಯುತ್ ವ್ಯರ್ಥ ಆಗೇ ಆಗುತ್ತದೆ. ಶರಾವತಿ ಟರ್ಬೈನ್‍ಗಳ ಎತ್ತರ ಅಂತರ (ಗ್ರಾಸ್ ಹೆಡ್) ಸುಮಾರು 1525 ಅಡಿ. ಈ ಹೆಡ್ ಬಳಸಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಹೆಚ್ಚು ಕಡಿಮೆ 10 ಕ್ಯೂಸೆಕ್ಸ್ ನೀರು ಬೇಕಾಗುತ್ತದೆ. ಬೆಂಗಳೂರಿಗೆ ಒಯ್ಯುವ ನೀರನ್ನು ಲಿಂಗನಮಕ್ಕಿಯಿಂದ ಬೆಂಗಳೂರಿನ ಎತ್ತರ ಏರಿಸಲು ಶರಾವತಿ ವಿದ್ಯುತ್‍ಗಾರದಲ್ಲಿ ತಯಾರಾಗುವ ಎಲ್ಲ ವಿದ್ಯುತ್ ಅವಶ್ಯ! ಇನ್ನು 400 ಕಿ.ಮೀ ದೂರಕ್ಕೆ ನೀರು ತಳ್ಳಲು ಬೇರೆಡೆಯಿಂದ ವಿದ್ಯುತ್ ಶಕ್ತಿ ತರಬೇಕೆಂದಾಯ್ತು. ಅಂದರೆ ಬೆಂಗಳೂರಿಗೆ ಪ್ರತಿ ಕ್ಯೂಸೆಕ್ಸ್ ನೀರು ತರಲು ಅದೇ ನೀರಿಂದ ಶರಾವತಿಯಲ್ಲಿ ಉತ್ಪಾದನೆಯಾಗುವ ಕರೆಂಟ್‍ನಿಂದ ಒಂದೂವರೆ ಪಟ್ಟು ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ನೀರು ಮತ್ತು ವಿದ್ಯುತ್ ಸೋರಿಕೆ ಪ್ರಮಾಣ ಸೇರಿಸಿದರೇ ಹಾನಿ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಇದೊಂದು ಎಡವಟ್ಟು ಪ್ರಾಜೆಕ್ಟ್!

ಲಿಂಗನಮಕ್ಕಿ, ಕಾರ್ಗಲ್, ಚಕ್ರಾ, ವಾರಾಹಿ, ಸಾವೆಂಹಕ್ಕಲು, ಗಾಜನೂರು, ಗೇರುಸೊಪ್ಪ, ಭದ್ರಾ, ಮಾಣಿ, ನಾಗಝರಿ ಯೋಜನೆಗಳಿಂದ ಕಷ್ಟ-ನಷ್ಟ ಅನುಭವಿಸಿದ ಜನರ ಕಲ್ಯಾಣಕ್ಕಾಗಿ ಒಂದೇ ಒಂದು ಯೋಜನೆ ರೂಪಿಸದ ಸರ್ಕಾರಿ ಮಂದಿ ಬೆಂಗಳೂರಿನ ಉದ್ಧಾರಕ್ಕಾಗಿ ಮತ್ತದೇ ಜನ ಸಮೂಹವನ್ನು ಬಲಿಗೊಡಲು ರೆಡಿಯಾಗಿದ್ದಾರೆಂಬುದೇ ವಿಪರ್ಯಾಸ! ಈ ನೀರು ಯೋಜನೆಯಿಂದ ಮರ-ಗಿಡ ನಾಶವಾಗುತ್ತದೆ. ಅಪರೂಪದ ಜೀವಸಂಕುಲದ ಅಳಿದುಳಿದ ಶರಾವತಿ ಕಣಿವೆಗೆ ದೊಡ್ಡ ಆಘಾತವಾಗಲಿದೆ. ಪೈಪ್‍ಲೈನ್ ಹಾದುಹೋಗುವ ಊರುಗಳ ಜನರು ಬೀದಿಗೆ ಬೀಳುತ್ತಾರೆ.

ಇಷ್ಟೆಲ್ಲ ಅವಾಂತರ, ಅನಾಹುತದ ನಂತರವಾದರೂ ಯೋಜನೆಯ ಮೂಲ ಉದ್ದೇಶ ಈಡೇರಬಹುದಾ? ಶರಾವತಿ ನೀರು ಬೆಂಗಳೂರು ತಲುಪುವುದು ಅನುಮಾನ! ಯೋಜನೆ ಸರ್ಕಾರಿ ಫೈಲುಗಳಲ್ಲಿ ಕಾರ್ಯಗತವಾಗಿ ರಾಜಕಾರಣಿ-ಅಧಿಕಾರಿ-ಕಂಟ್ರಾಕ್ಟರ್ ಲಾಬಿಯ ದೆಸೆ ಬದಲಿಸಬಹುದಷ್ಟೇ! ಇಂಥ ಹುಚ್ಚು ಯೋಜನೆಗಳನ್ನು ಮಾಡುವುದು ಬಿಟ್ಟು ಬೆಂಗಳೂರಿನ ಅನಿಯಂತ್ರಿತ ಯದ್ವಾತದ್ವಾ ಬೆಳವಣಿಗೆಗೆ ಕಡಿವಾಣ ಹಾಕಿದರೆ ನೀರಡಿಕೆ ಸಮಸ್ಯೆಯೊಂದೇ ಅಲ್ಲ ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ಪರಿಸರ ಮಾಲಿನ್ಯದಂಥ ಗಂಡಾಂತರದಿಂದಲೂ ಬಚಾವಾಗಬಹುದು. ಎಲ್ಲಾ ಮೂಲ ಸೌಕರ್ಯಗಳನ್ನು ತಾನೊಂದೇ ನುಂಗುವ ಬೆಂಗಳೂರಿನ ಕೈಗಾರಿಕೆಗಳನ್ನು ವಿಕೇಂದ್ರೀಕರಣಕ್ಕೆ ಒಳಪಡಿಸಿದರೆ ಕನಿಷ್ಟವೆಂದರೂ ಸಾಗರ, ಶಿರಸಿ, ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರ ವ್ಯವಸ್ಥಿತವಾಗಿ ಉದ್ಧಾರವೂ ಆಗುತ್ತದೆ.

ತಮಿಳು-ತೆಲುಗರಿಗೆ ಹತ್ತಿರವಾದ ಬೆಂಗಳೂರನ್ನು ಕುರುಡಾಗಿ ಬೆಳೆಸುವ ಬದಲು ಕನ್ನಡ ನಾಡಿನ ಒಡಲೊಳಗೆ ಇರುವ ಸಾಗರ, ಶಿರಸಿ, ಶಿವಮೊಗ್ಗವನ್ನೇಕೆ ಅಭಿವೃದ್ಧಿಪಡಿಸಬಾರದೆಂಬ ಕೂಗು ಈಗ ಮಲೆನಾಡಲ್ಲಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಶಿವಮೊಗ್ಗ, ಕಾರವಾರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ ಬೆಂಗಳೂರಿನ ಐಟಿ-ಬಿಟಿ ಇಂಡಸ್ಟ್ರಿಗಳನ್ನು ಸಾಗರ-ಶಿರಸಿಯತ್ತ ಏಕೆ ತರಬಾರದೆಂಬ ವಾದ ಬಲಗೊಳ್ಳುತ್ತಿದೆ. ಇದರಿಂದ ಒಂದೇ ಕಾಲದಲ್ಲಿ ಬೆಂಗಳೂರು ಮತ್ತು ಹಿಂದುಳಿದ ಮಲೆನಾಡಿನ ಹಲವು ಸಮಸ್ಯೆ-ಸಂಕಷ್ಟ ಪರಿಹಾರವಾಗುತ್ತದೆ. ಬರಡಾದ ಹಳ್ಳಿಗಳಲ್ಲಿ ಶಕ್ತಿ, ಮಾನವ ಸಂಪನ್ಮೂಲ ಉಳಿಯುತ್ತದೆ; ಪರಿಸರ ಪಸಂದಾಗಿರುತ್ತದೆ. ಬೆಂಗಳೂರಲ್ಲಿ ನೌಕರಿ ಮಾಡುತ್ತಿರುವ ಮಕ್ಕಳ ನೆನಪಲ್ಲಿ ಚಡಪಡಿಸುತ್ತಿರುವ ಅಮಾಯಕ ತಾಯ್ತಂದೆಯರ ಬದುಕು ಬಚಾವಾಗುತ್ತದೆ.

ಇಂಥ ಸುಸ್ಥಿರ ಅಭಿವೃದ್ಧಿ ಬೇಕಾ? ಬರಡು ಯೋಜನೆ ಕಡತದಲ್ಲಿ ಶುರುವಾಗೋದು ಬೇಕಾ? ಪರಮ್ ಸಾಹೇಬರಿಗೆ ಅರ್ಥ ಮಾಡಿಸೋರ್ಯಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...

ಸೂರತ್ ಧ್ವಂಸ ಕಾರ್ಯಾಚರಣೆ ಸಂಪೂರ್ಣ ‘ಕಾನೂನುಬಾಹಿರ’: 100 ನಿರಾಶ್ರಿತ ಕುಟುಂಬಗಳ ಪುನರ್ವಸತಿಗೆ ಗುಜರಾತ್ ಹೈಕೋರ್ಟ್ ಆದೇಶ

ಅಹಮದಾಬಾದ್: ಗುಜರಾತ್‌ನ ಸೂರತ್‌ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಕರೆದಿದೆ. ಮೇ 30 ರಂದು ನಡೆದ ಈ "ಅನಧಿಕೃತ"...

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...