Homeಮುಖಪುಟಸರ್ಕಾರದೊಂದಿಗೆ ಶಾಮೀಲಾದರೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ? ಉತ್ತರ ಕೇಳುತ್ತಿದೆ ಖಟ್ಜು ಬರೆದ ಆ ನಾಲ್ಕು...

ಸರ್ಕಾರದೊಂದಿಗೆ ಶಾಮೀಲಾದರೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ? ಉತ್ತರ ಕೇಳುತ್ತಿದೆ ಖಟ್ಜು ಬರೆದ ಆ ನಾಲ್ಕು ಪ್ರಶ್ನೆಗಳ ಪತ್ರ

- Advertisement -
- Advertisement -

ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶರ ಹುದ್ದೆ ಅಂದ್ರೆ, ಸೀಸರನ ಮಡದಿಯಂತೆ ಶಂಕೆಗೂ ಆಸ್ಪದವಿಲ್ಲದ ಸ್ಥಾನ. ರಾಮಜನ್ಮಭೂಮಿ ಪ್ರಕರಣದ ವಿಪರೀತ ವಿಳಂಬ ಮತ್ತು ಪದೇಪದೇ ಮುಂದೂಡುವಿಕೆಯೂ ಒಳಗೊಂಡು, ಇತ್ತೀಚಿನ ದಿನಗಳಲ್ಲಿ ಭಾರತದ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಖ್ಯ ನ್ಯಾಯಾಧೀಶರ ನಡವಳಿಕೆಗಳ ಬಗ್ಗೆಯೇ ಗುಸುಗುಸು ಪ್ರಶ್ನೆಗಳು ತಲೆ ಎತ್ತುವಂತೆ ಮಾಡಿವೆ, ಅವುಗಳಿಗೆ ಅವರೇ ಸೂಕ್ತ ಉತ್ತರ ಕೊಟ್ಟು ತೆರೆ ಎಳೆಯಬೇಕಾಗಿದೆ.

ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶನಾಗಿ, ನಾನು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದ ಪವಿತ್ರ ಸಂಸ್ಥೆಯಲ್ಲಿ ನಡೆಯುತ್ತಿರುವುದರ ಬಗ್ಗೆ ನನಗೆ ಅತೀವ ಕಾಳಜಿ ಇದೆ. ಹಾಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿರುವ ರಂಜನ್ ಗೊಗೊಯ್ ಅವರಿಗೆ ಭಾರತದ ಜನರ ಪರವಾಗಿ ನಾನು ಕೆಳಕಂಡ ನಾಲ್ಕು ಪ್ರಶ್ನೆಗಳನ್ನು ಕೇಳಬಯಸುತ್ತೇನೆ, ಅವುಗಳಿಗೆ ಅವರು ಸಾರ್ವಜನಿಕವಾಗಿಯೇ ಉತ್ತರಿಸಲಿ.

  1. ಗೊಗೊಯ್ ಅವರ ಮಗಳನ್ನು ದೆಹಲಿ ಹೈಕೋರ್ಟಿನ ನ್ಯಾಯಾಧೀಶರಾದ ವಾಲ್ಮೀಕಿ ಮೆಹ್ತಾ ಅವರ ಮಗನನ್ನು ಮದುವೆ ಮಾಡಿಕೊಡಲಾಗಿದೆ. ವಾಲ್ಮೀಕಿ ಮೆಹ್ತಾ ಅವರ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು, ಅಂದಿನ ಸಿಜೆಐ ಆಗಿದ್ದ ನ್ಯಾ.ಥಾಕೂರ್ ಅವರೇ ಖುದ್ದಾಗಿ ವಿಚಾರಣೆ ಮಾಡಿ, ಆ ಆರೋಪಗಳೆಲ್ಲ ನಿಜ ಎಂಬ ತೀರ್ಮಾನಕ್ಕೆ ಬಂದಿದ್ದರು. ಹಾಗಾಗಿ ಮಾರ್ಚ್ 2016ರಲ್ಲಿ ಥಾಕೂರರೇ ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಡಳಿಯು ನ್ಯಾ.ವಾಲ್ಮೀಕಿ ಮೆಹ್ತಾರನ್ನು ಬೇರೊಂದು ಕೋರ್ಟಿಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಿತ್ತು.

ಸಾಮಾನ್ಯವಾಗಿ ಭಾರತ ಸರ್ಕಾರವು ಕೆಲವೇ ವಾರಗಳಲ್ಲಿ ಇಂಥಾ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ವಿಚಿತ್ರವೆಂದರೆ ಭಾರತ ಸರ್ಕಾರವು ಈ ಪ್ರಕರಣದ ಫೈಲನ್ನು ಒಂದು ವರ್ಷದ ಕಾಲ ಮೂಲೆಯಲ್ಲಿಟ್ಟಿತು. ಅದೇ ವೇಳೆ, ತಮ್ಮ ಶಿಫಾರಸ್ಸನ್ನು ಜಾರಿಗೆ ತರದಿದ್ದಕ್ಕೆ ಸಿಜೆಐ ಥಾಕೂರ್ ಹಲವು ಬಾರಿ ಕಿಡಿಕಾರಿದ್ದುಂಟು, ಮುಕ್ತ ನ್ಯಾಯಾಲಯದಲ್ಲೂ ಸಹಾ. ಅಲ್ಲದೇ ವಾಲ್ಮೀಕಿ ಮೆಹ್ತಾ ವಿರುದ್ಧ ಗಂಭೀರ ಆರೋಪಗಳು ಇರುವುದರಿಂದ ಅವರಿಗೆ ವಹಿಸಿದ ನ್ಯಾಯಾಂಗ ಕಾರ್ಯವನ್ನು ವಾಪಾಸ್ಸು ಪಡೆಯುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೂ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅವ್ಯಾವುವೂ ಪ್ರಯೋಜನವಾಗಲಿಲ್ಲ. 2017ರ ಜನವರಿಯಲ್ಲಿ ನ್ಯಾ.ಥಾಕೂರ್ ಅವರು ನಿವೃತ್ತರಾಗಿ, ಅವರ ಜಾಗಕ್ಕೆ ಹೊಂದಾಣಿಕೆ-ಸಾಧ್ಯ ನ್ಯಾ.ಖೆಹರ್ ಅವರು ಸಿಜೆಐ ಆಗಿ ನೇಮಕಗೊಂಡ ನಂತರವಷ್ಟೇ ಸರ್ಕಾರ ಆ ಫೈಲನ್ನು ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಿಕೊಡುವ ಬದಲು ಸುಪ್ರೀಂ ಕೋರ್ಟಿಗೆ ವಾಪಾಸು ಕಳಿಸಿತು. ಸಿಜೆಯ ಖೆಹರ್ ಅವರು ಅಧ್ಯಕ್ಷರಾಗಿದ್ದ ಹೊಸ ಕೊಲಿಜಿಯಂ ಮಂಡಳಿ ಹಳೆಯ ಶಿಫಾರಸ್ಸುಗಳನ್ನು ವಾಪಾಸ್ ಪಡೆಯಿತು. ಆ ಕಾರಣದಿಂದಾಗಿ ವಾಲ್ಮೀಕಿ ಮೆಹ್ತಾ ಅವರು ಇವತ್ತಿಗೂ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ಮುಂದುವರೆದಿದ್ದಾರೆ. ಈ ನಿಗೂಢತೆಯ ಹಿಂದಿರುವ ಸತ್ಯ ಯಾವುದು?

ನನಗೆ ಬಂದಿರುವ ಮಾಹಿತಿ ಪ್ರಕಾರ, ಅದು ಸರಿಯೋ ತಪ್ಪೋ ಎಂಬುದನ್ನು ಗೊಗೊಯ್ ಮಾತ್ರ ಉತ್ತರಿಸಬಹುದು, ವಾಸ್ತವ ಹೀಗಿದೆ: ತನ್ನ ಸಂಬಂಧಿಯ ವರ್ಗಾವಣೆ ಶಿಫಾರಸ್ಸಿನ ಬಗ್ಗೆ ತಿಳಿಯುತ್ತಿದ್ದಂತೆಯೇ, ಗೊಗೊಯ್ ಅವರು ಪ್ರಧಾನಿ ಮೋದಿಯವರನ್ನು (ಅಥವಾ ಸಂಪುಟದ ಹಿರಿಯ ಸಚಿವರನ್ನು) ಭೇಟಿಯಾಗಿ, ವಾಲ್ಮೀಕಿ ಮೆಹ್ತಾರನ್ನು ವರ್ಗಾವಣೆ ಮಾಡದಂತೆ ಬೇಡಿಕೊಂಡಿದ್ದಾರೆ. ಸೀನಿಯಾರಿಟಿ ಆಧಾರದಲ್ಲಿ ಸದ್ಯದಲ್ಲೇ ಸುಪ್ರೀಂ ಕೋರ್ಟಿನ ಸಿಜೆಐ ಆಗುವ ಸಾಲಿನಲ್ಲಿದ್ದ ಗೊಗೊಯ್ ಅವರನ್ನು ಕಳೆದುಕೊಳ್ಳಲಿಚ್ಚಿಸದೆ, ಸರ್ಕಾರ ಅವರ ಮನವಿಗೆ ಓಗೊಟ್ಟು, ಫೈಲನ್ನು ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳಿಸುವ ಬದಲು ತೆಗೆದು ಮೂಲೆಗಿಟ್ಟಿದೆ.

ಈ ಮಾಹಿತಿ ಸತ್ಯವೇ ಆದಲ್ಲಿ, ಗೊಗೊಯ್ ಅವರು ಬಿಜೆಪಿ ಸರ್ಕಾರದ ಋಣಕ್ಕೆ ಸಿಕ್ಕಿಬಿದ್ದಿದ್ದು, ಈಗದನ್ನು ತೀರಿಸಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಸುಪ್ರೀಂ ಕೋರ್ಟಿನ ಬಹಳಷ್ಟು ಆಗುಹೋಗುಗಳನ್ನು ಈ ಮಾಹಿತಿ ವಿವರಿಸುತ್ತದೆ.

ಗೊಗೊಯ್ ಅವರು ಈಗ ಭಾರತದ ಸರ್ವೋಚ್ಛ ನ್ಯಾಯಮೂರ್ತಿಗಳು, ಹಾಗಾಗಿ ಸುಪ್ರೀಂ ಕೋರ್ಟಿನ ಎಲ್ಲಾ ರೆಕಾರ್ಡು ದಾಖಲೆಗಳು ಅವರಿಗೆ ಸುಲಭವಾಗಿ ಲಭ್ಯವಿರುತ್ತವೆ. ಹಾಗಾಗಿ ನಾನು ಕೇಳುವ ಈ ದಾಖಲೆಗಳನ್ನು ಅವರು ಸಾರ್ವಜನಿಕರ ಮುಂದಿಡಲಿ, (1) ವಾಲ್ಮೀಕಿ ಮೆಹ್ತಾರನ್ನು ವರ್ಗಾವಣೆ ಮಾಡುವಂತೆ ಅಂದಿನ ಸಿಜೆಐ ಥಾಕೂರ್ ನೇತೃತ್ವದ ಕೊಲಿಜಿಯಂ ಮಂಡಳಿ ಮಾಡಿದ್ದ ಶಿಫಾರಸ್ಸು ವರದಿ, (2) ವರ್ಗಾವಣೆ ಶಿಫಾರಸ್ಸನ್ನು ಯಾಕೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಅಂದಿನ ಸಿಜೆಐ ಥಾಕೂರ್ ಅವರು ಸರ್ಕಾರಕ್ಕೆ ಬರೆದಿದ್ದ ಪತ್ರಗಳು ಮತ್ತು ಆ ಪತ್ರಗಳಿಗೆ ಸರ್ಕಾರದ ಉತ್ತರಗಳು, (3) ಹೊಸ ಸಿಜೆಐ ಖೆಹರ್ ನೇತೃತ್ವದ ಸುಪ್ರೀಂ ಕೋರ್ಟಿಗೆ ಶಿಫಾರಸ್ಸನ್ನು ವಾಪಾಸು ಕಳುಹಿಸಿಕೊಡುತ್ತಿರುವುದಾಗಿ ಸರ್ಕಾರ ಬರೆದ ಪತ್ರ, (4) ನ್ಯಾ.ಖೆಹರ್ ಅವರ ನೇತೃತ್ವದ ಕೊಲಿಜಿಯಂ ಮಂಡಳಿಯು ನ್ಯಾ.ಮೆಹ್ತಾ ಅವರ ವರ್ಗಾವಣೆ ಶಿಫಾರಸ್ಸನ್ನು ವಾಪಾಸು ಪಡೆದ ನಿರ್ಣಯ.

2. ವಾಲ್ಮೀಕಿ ಮೆಹ್ತಾ ಅವರ ಮಗ (ಗೊಗೊಯ್ ಅವರ ಅಳಿಯ) ಒಬ್ಬ ಲಾಯರ್. ಮದುವೆಯ ನಂತರ ಆತನ ಪ್ರಾಕ್ಟೀಸ್ ಮತ್ತು ಆದಾಯ ಇದ್ದಕ್ಕಿದ್ದಂತೆ ಜಿಗಿದಿದೆ ಎಂಬ ವರ್ತಮಾನಗಳಿವೆ. ಹಾಗಾಗಿ, ಗೊಗೊಯ್ ಅವರು, ಮದುವೆಗೆ ಮುನ್ನ ಮತ್ತು ಮದುವೆಯ ನಂತರ ತಮ್ಮ ಅಳಿಯನ ಆದಾಯ ಎಷ್ಟು ಎಂಬುದನ್ನು ತಿಳಿಸಲಿ.

3. ದೆಹಲಿ ಹೈಕೋರ್ಟಿನ ನ್ಯಾ.ಪ್ರದೀಪ ನಂದ್ರಜೋಗ್ (ಹಾಲಿ ರಾಜಸ್ಥಾನ ಹೈಕೋರ್ಟ್ ಸಿಜೆ), ನ್ಯಾ. ಗೀತಾ ಮಿತ್ತಲ್ (ಹಾಲಿ ಜಮ್ಮು-ಕಾಶ್ಮೀರ್ ಹೈಕೋರ್ಟ್ ಸಿಜೆ) ಮತ್ತು ನ್ಯಾ.ರವೀಂದ್ರ ಭಟ್, ಈ ಮೂವರೂ ಸೇವಾ ಹಿರಿತನದಲ್ಲಿ ನ್ಯಾ.ಸಂಜೀವ್ ಖನ್ನಾ ಅವರಿಗಿಂತ ಸೀನಿಯರ್.ಗಳು. ಆದರೂ ಅವರನ್ನು ಪಕ್ಕಕ್ಕೆ ಸರಿಸಲಾಯಿತು (ಸೂಪರ್ ಸೀಡ್). ಯಾಕೆ? ನಾನು ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದವನು, ಈ ಮೂವರನ್ನೂ ವೈಯಕ್ತಿಕವಾಗಿ ಚೆನ್ನಾಗಿ ಬಲ್ಲೆ (ಆ ಸಮಯದಲ್ಲಿ ಈ ಮೂವರು ಕೆಳಹಂತದ ಜಡ್ಜ್ ಗಳಾಗಿದ್ದರು), ಕರ್ತವ್ಯನಿಷ್ಠೆ ಮತ್ತು ಸಾಮರ್ಥ್ಯದ ವಿಚಾರದಲ್ಲಿ ಕಳಂಕರಹಿತ ರೆಕಾರ್ಡ್ ಉಳ್ಳವರು. ನಿಜ ಹೇಳಬೇಕೆಂದರೆ 12.12.2018ರಲ್ಲಿ ಸಭೆ ಸೇರಿದ್ದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಡಳಿಯು ನ್ಯಾ.ನಂದ್ರಜೋಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಪದೋನ್ನತಿಗೆ ಶಿಫಾರಸ್ಸು ಮಾಡಿತ್ತು. ಆ ಶಿಫಾರಸ್ಸಿಗೆ ಕೊಲಿಜಿಂ ಮಂಡಳಿಯ ಎಲ್ಲಾ 5 ಸದಸ್ಯರು ಸಹಿ ಹಾಕಿದ್ದರು, ಆದರೆ ಸಿಜೆಐ ಗೊಗೊಯ್ ಅವರು ಅದನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಡುವ ಬದಲು ತಮ್ಮ ಜೇಬಿಗಿಳಿಸಿಕೊಂಡು ಸುಮ್ಮನಾದರು. ಯಾಕೆ? ಆ ಕೊಲಿಜಿಯಂ ಮಂಡಳಿಯಲ್ಲಿದ್ದ ನ್ಯಾ.ಲೊಕೂರ್ ಅವರ ಬಳಿ (ಗೊಗೊಯ್ ನಂತರದ ಸೀನಿಯಾರಿಟಿಯಲ್ಲಿದ್ದವರು) ನಾನು ಈ ವಿಚಾರವಾಗಿ ಮಾತನಾಡಿದೆ, ಆ ಶಿಫಾರಸ್ಸನ್ನು ಅನುಮೋದಿಸಿ ಅವರೆಲ್ಲ ಸಹಿ ಮಾಡಿದ ನಂತರ, ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಯಿತೆ ಎಂದು ತಿಳಿದುಕೊಳ್ಳಲು ಲೊಕುರ್ ಅವರು ಗೊಗೊಯ್ ಅವರ ನಿವಾಸಕ್ಕೆ ಪದೇಪದೇ ಫೋನ್ ಮಾಡಿದರಂತೆ, ಪ್ರತಿ ಬಾರಿ ಅವರ ಸೆಕ್ರೆಟರಿ ಫೋನ್ ಎತ್ತಿಕೊಂಡು ಸಿಜೆಐ ಅವರಿಗೆ ಹುಶಾರಿಲ್ಲ ಎಂದು ಹೇಳುತ್ತಿದ್ದರಂತೆ, ಗೊಗೊಯ್ ಯಾವತ್ತೂ ವಾಪಸ್ ಫೋನ್ ಕೂಡಾ ಮಾಡಲಿಲ್ಲವಂತೆ. ನಂತರದಲ್ಲಿ, ಕನ್ಸಲ್ಟಿಂಗ್ ಜಡ್ಜ್ ಗಳಿಂದ ಕನ್ಸಲ್ಟೇಷನ್ ಪಡೆದಿಲ್ಲವಾದ್ದರಿಂದ ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿಲ್ಲ ಎಂಬ ಉತ್ತರ ಕೊಟ್ಟರು ಗೊಗೊಯ್. ನನಗಿರುವ ವೈಯಕ್ತಿಕ ಅನುಭವದ ಪ್ರಕಾರ ಇಂಥಾ ಕನ್ಸಲ್ಟೇಷನ್ ಅನ್ನು ಒಂದು ಅಥವಾ ಎರಡು ದಿನಗಳಲ್ಲಿ ಪಡೆದುಬಿಡಬಹುದು.

ಪ್ರತಿಭಾವಂತ ಮೂವರು ನ್ಯಾಯಮೂರ್ತಿಗಳನ್ನು ಸೂಪರ್ ಸೀಡ್ ಮಾಡಿದ ಈ ಪ್ರಕರಣವು ಇಂದಿರಾ ಗಾಂಧಿಯವರ ಸರ್ಕಾರ ಮೂವರು ಸೀನಿಯರ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಪಕ್ಕಕ್ಕೆ ಸರಿಸಿದ ಪ್ರಕರಣವನ್ನು ನೆನಪಿಸುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಸಂದೇಶ ರವಾನಿಸುವುದಷ್ಟೇ ಅಲ್ಲ, ಆ ಮೂವರು ನ್ಯಾಯಮೂರ್ತಿಗಳ ಮೇಲೆ ಅನೈತಿಕ ಪರಿಣಾಮವನ್ನು ಬೀರುತ್ತದೆ. ಸುಪ್ರೀಂ ಕೋರ್ಟಿನ ಹಿರಿಯ ವಕೀಲರೊಬ್ಬರು ಹೇಳುವ ಪ್ರಕಾರ ಬಿಜೆಪಿ ಸರ್ಕಾರ ನಿರ್ದೇಶನದಂತೆ ಹೀಗೆ ಮಾಡಲಾಗಿದೆ. ನ್ಯಾ.ಖನ್ನಾ ಹೆಸರನ್ನು ಶಿಫಾರಸ್ಸು ಮಾಡಿದ ಕೊಲಿಜಿಯಂನಲ್ಲಿ ಇತರೆ ನ್ಯಾಯಮೂರ್ತಿಗಳೂ ಇದ್ದರು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ, ಆದರೆ ನ್ಯಾ.ಖನ್ನಾ ಹೆಸರನ್ನು ಗಟ್ಟಿಯಾಗಿ ಪ್ರತಿಪಾದಿಸಿದ ಗೊಗೊಯ್ ಮುಂದೆ ಅವರೆಲ್ಲ ಸಣ್ಣ ಪ್ರತಿರೋಧವನ್ನಷ್ಟೇ ಒಡ್ಡಿ ಶರಣಾಗಿದ್ದಾರೆ (ಸುಪ್ರೀಂ ಕೋರ್ಟಿನ ಹಲವಾರು ನ್ಯಾಯಮೂರ್ತಿಗಳು ನಾನೇ ಖುದ್ದಾಗಿ ಭೇಟಿ ಮಾಡಿ, ಮಾತಾಡಿಸಿದಾಗ ಈ ವಿಚಾರ ತಿಳಿದುಬಂದಿದೆ).

ನ್ಯಾ. ಖನ್ನಾ ಅವರಿಗಿಂತ ಸೇವಾ ಹಿರಿತನ ಹೊಂದಿದ್ದ ಈ ಮೂವರ ವಿರುದ್ಧ ಯಾವುದೇ ಆರೋಪಗಳಿದ್ದರೆ ಸಾರ್ವಜನಿಕರಿಗೆ ಅವು ಗೊತ್ತಾಗಲಿ. 12.12.2018ರಂದು ಕೊಲಿಜಿಯಂ ಮಂಡಳಿಯಿಂದ ಶಿಫಾರಸ್ಸು ಮಾಡಲ್ಪಟ್ಟ ನ್ಯಾ.ನಂದ್ರಜೋಗ್ ಅವರ ವಿರುದ್ಧ ಆ ದಿನಾಂಕಕ್ಕೆ ಸರಿಯಾಗಿ ಯಾವ ಆರೋಪಗಳೂ ಇಲ್ಲ ಎಂದಾದರೆ, ಅದರಾಚೆಗಿನ ಮೂರು ವಾರಗಳಲ್ಲಿ ಹುಟ್ಟಿಕೊಂಡವಾ? ಇದೊಂದು ನಿಗೂಢ.

ಈಗ ಸುಪ್ರೀಂ ಕೋರ್ಟಿಗೆ ಪದೋನ್ನತಿ ನೀಡಲಾಗಿರುವ ನ್ಯಾ.ಮಹೇಶ್ವರಿಯವರ ಹೆಸರನ್ನು ನಿರ್ದಿಷ್ಟವಾಗಿ, 12.12.2018ರಂದು ಸಭೆ ಸೇರಿದ್ದ ಕೊಲಿಜಿಯಂ ಮಂಡಳಿ ತಿರಸ್ಕರಿಸಿತ್ತು (ಆ ಕೊಲಿಜಿಯಂ ಮಂಡಳಿಯಲ್ಲಿದ್ದ ನ್ಯಾ.ಲೋಕೂರ್ ಅವರು ನನಗೆ ತಿಳಿಸಿರುವಂತೆ). ಮೂರೇ ವಾರಗಳ ಅಂತರದಲ್ಲಿ ತಿರಸ್ಕಾರ ಗೊಂಡಿದ್ದ ಅವರು ಪದೋನ್ನತಿಗೆ ಅರ್ಹತೆ ಸಂಪಾದಿಸಿಕೊಂಡುಬಿಟ್ಟರೇ?

4. ಒಂದಲ್ಲ ಒಂದು ಕಾರಣಕ್ಕೆ ರಾಮಜನ್ಮಭೂಮಿ ಪ್ರಕರಣವನ್ನು ಪದೇಪದೇ ಯಾಕೆ ಮುಂದೂಡಲಾಗುತ್ತಿದೆ? ವಿಚಾರಣೆ ಶುರು ಮಾಡುವ ದಿನಾಂಕ ಗೊತ್ತು ಮಾಡುವುದಕ್ಕೇ ಯಾಕೆ ದಿನಾಂಕಗಳನ್ನು ಪದೇಪದೇ ಗೊತ್ತು ಮಾಡಲಾಗುತ್ತಿದೆ? ಇದೂ, ನಿಗೂಢ. ಇದು ಒಂದು ಬಗೆಯ ಋಣ ಸಂದಾಯ ಇದ್ದಿರಬಹುದಾ? ಗೊಗೊಯ್ ಮಾತ್ರ ಉತ್ತರಿಸಬಲ್ಲರು.

ನ್ಯಾ. ಮಾರ್ಖಂಡೇಯ ಖಟ್ಜು
ಲೇಖಕರು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿಗಳು ಮತ್ತು
ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷರು.

ಲೇಖನದಲ್ಲಿರುವುದು ಅವರ ಸ್ವಂತ ಅಭಿಪ್ರಾಯಗಳು ಎಂದು ಹೇಳಿ, ಇಂಡಿಕಾ ನ್ಯೂಸ್ ಪ್ರಕಟಿಸಿರುವ ಸುದ್ದಿ ಇದು. ಅದರ ಮೂಲ ಇಂಗ್ಲಿಷ್ ಲೇಖನ ನೋಡಲು ಈ ಲಿಂಕನ್ನ ಕ್ಲಿಕ್ಕಿಸಿ.

Four questions for Ranjan Gogoi

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...