ರೈತ ವಿರೋಧಿ, ವಿವಾದಿತ ಮೂರು ಕೃಷಿ ಕಾಯ್ದೆಗಳು ರದ್ದಾಗಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಬೇಕು ಎಂದು ದೆಹಲಿಯ ನಾಲ್ಕು ಗಡಿಗಳಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಐತಿಹಾಸಿಕ ರೈತ ಹೋರಾಟಕ್ಕೆ 130 ದಿನಗಳಾಗಿದೆ.
ವಿಶ್ವದ ಗಮನ ಸೆಳೆದಿರುವ ರೈತ ಹೋರಾಟದ ವಿಶೇಷತೆಗಳಲ್ಲಿ ಟ್ರ್ಯಾಲಿಗಳು ಕೂಡ ಒಂದು. ತಣ್ಣಗೆ ಕೊರೆಯುವ ದೆಹಲಿಯ ಚಳಿಯಿಂದ ರಕ್ಷಣೆ ಪಡೆಯಲು ರೈತರು ಟ್ಯ್ರಾಲಿಗಳನ್ನು ಆಶ್ರಯಿಸಿದ್ದರು. ಆದರೆ ಈಗ ಬಿರು ಬೇಸಿಗೆಯಿದೆ. ಟ್ಯ್ರಾಲಿಗಳಲ್ಲಿ ಇರುವುದು ನಿಜಕ್ಕೂ ಕಷ್ಟ. ಜೊತೆಗೆ ವರ್ಷವಿಡೀ ಬೆಳೆ ಬೆಳೆಯುವ ಪಂಜಾಬ್, ಹರಿಯಾಣದಲ್ಲಿ ಈಗ ಗೋದಿ ಕೊಯ್ಲಿನ ಸಮಯ. ಬಿತ್ತನೆ ಮುಗಿಸಿ ಟ್ರ್ಯಾಲಿಗಳೊಂದಿಗೆ ಬಂದಿದ್ದ ರೈತರು ಈಗ ಸುಗ್ಗಿ ಮಾಡಲು ಟ್ರ್ಯಾಲಿಗಳನ್ನು ತಮ್ಮ ಹಳ್ಳಿಗೆ ವಾಪಸ್ಸು ಕಳುಹಿಸುತ್ತಿದ್ದಾರೆ.
ನವೆಂಬರ್ನಿಂದ ಜೊತೆಗಿದ್ದು ಮನೆಗಳಾಂತಾಗಿದ್ದ ಟ್ಯ್ರಾಲಿಗಳ ಜಾಗದಲ್ಲಿ ರೈತರು ಈಗ ಬಿದಿರಿನ, ಹುಲ್ಲಿನ ಶೆಡ್ಗಳನ್ನು ನಿರ್ಮಿಸುತ್ತಿದ್ದಾರೆ. ಸುಡುವ ಬಿಸಿಲಿನಿಂದ ಕಾಪಾಡಲು ಈ ಶೆಡ್ಗಳು ಸಹಕಾರಿಯಾಗಿವೆ. ಈ ಬೇಸಿಗೆ ಕಾಲಕ್ಕೆ ಟ್ಯ್ರಾಲಿಗಳಿಗಿಂತ ಈ ಶೆಡ್ಗಳೇ ಹೆಚ್ಚು ತಂಪಾಗಿರುತ್ತವೆ. ಜೊತೆಗೆ ಈಗಾಗಲೇ ನಿರ್ಮಾಣಗೊಂಡಿರುವ ಹಲವು ಶೆಡ್ಗಳಲ್ಲಿ, ಎಸಿ, ಕೂಲರ್ಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!
ಪಂಜಾಬ್ನ ರೂಪರ್ ಜಿಲ್ಲೆಯ ಬೆಹ್ರಾಂಪುರ ಗ್ರಾಮದ ರೈತರು ಸಿಂಘು ಗಡಿಯಲ್ಲಿ ಎರಡು ವಾರದ ಹಿಂದೆಯೇ ಒಣಹುಲ್ಲಿನ ಚಾವಣಿ, ಹೂಕುಂಡಗಳು, ಕರ್ಟನ್ಗಳು ಹಾಗೂ ಭಗತ್ಸಿಂಗ್ನ ಫೋಟೊ ಇರುವ ಗುಡಿಸಲನ್ನು ನಿರ್ಮಿಸಿದ್ದಾರೆ. ಈ ಕುರಿತು ಮಾತನಾಡಿದ ಅದೇ ಗ್ರಾಮದ ಗುರ್ಮೀತ್ ಸಿಂಗ್, ‘ನಾವು ತಂದಿದ್ದರಲ್ಲಿ ಎರಡು ಟ್ರ್ಯಾಲಿಗಳನ್ನು ಸುಗ್ಗಿಗಾಗಿ ಹಳ್ಳಿಗೆ ಕಳಿಸಿದ್ದೇವೆ. ಈಗ ನಿರ್ಮಿಸಿರುವ ಗುಡಿಸಲು ತಣ್ಣಗಿದ್ದು, ಕಬ್ಬಿಣ ಮತ್ತು ಟಾರ್ಪಲಿನ್ನಿಂದ ಉಂಟಾಗುತ್ತಿದ್ದ ಹಬೆ ಈಗಿಲ್ಲ ಎಂದಿದ್ದಾರೆ.
‘ಗೋದಿ ಕೊಯ್ಲಿನ ಕಾರಣಕ್ಕೆ ಪ್ರತಿಭಟನಾ ಗಡಿಗಳಲ್ಲಿರುವವರ ಸಂಖ್ಯೆ ಕಡಿಮೆಯಿದ್ದು, ಸುಗ್ಗಿಯ ನಂತರ ರೈತರೆಲ್ಲರೂ ಮತ್ತೆ ಸೇರಲಿದ್ದಾರೆ. ಪ್ರಸ್ತುತ ಪಂಜಾಬಿನ ಪ್ರತಿ ಗ್ರಾಮದಿಂದ 10 ಜನ ರೈತರು ಪ್ರತಿಭಟನೆಯಲ್ಲಿದ್ದಾರೆ’ ಎಂದು ಲೂಧಿಯಾನ ಜಿಲ್ಲೆ ಜತನ ಗ್ರಾಮದ ರಾಜ್ವಿಂದರ್ ಸಿಂಗ್ ತಿಳಿಸಿದರು.
ಇದನ್ನೂ ಓದಿ: ಬಿಸಿಲಿಗೂ ಬಗ್ಗುವುದಿಲ್ಲ: ಹೋರಾಟನಿರತ ರೈತರ ಟ್ಯ್ರಾಲಿ, ಟೆಂಟ್ಗಳಿಗೆ ಬಂದ ಎಸಿ, ಕೂಲರ್ಗಳು!
‘ಪ್ರತಿಭಟನೆ ಆರಂಭದಿಂದಲೂ ಹಳ್ಳಿಗೆ 20-30 ಜನ ರೈತರು ಈ ಹೋರಾಟಕ್ಕೆ ಬಂದು ಒಂದು ವಾರದಿಂದ ಹತ್ತು ದಿನಗಳವರೆಗೆ ಇಲ್ಲಿಗೆ ಬಂದಿರುತ್ತಿದ್ದರು. ನಾವು ಇದೇ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಈಗ ಸುಗ್ಗಿಯ ಕಾರಣದಿಂದ ಜನರ ಸಂಖ್ಯೆ ಕಡಿಮೆ ಇದೆ ಅಷ್ಟೆ. ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಈ ಹೋರಾಟ ನಿಲ್ಲಿಸುವ ಮಾತೇ ಇಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ವಿಂದರ್ ಸೇರಿದಂತೆ ಮೂರು ಜನರು ರೈತ ಹೋರಾಟ ಶುರುವಾದಂದಿನಿಂದ ಗಡಿಗಳಲ್ಲಿಯೇ ಇದ್ದು ಹೋರಾಟದ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿರುವುದರಿಂದ ಅವರ ಹೊಲದ ಸುಗ್ಗಿಯನ್ನು ಗ್ರಾಮದ ರೈತರೇ ನೋಡಿಕೊಳ್ಳುವುದಾಗಿ ಗ್ರಾಮದ ಸರ್ಪಂಚ್ ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ: ಇನ್ನು 8 ತಿಂಗಳು ಈ ರೈತ ಹೋರಾಟ ನಡೆಯಲಿದೆ- ರಾಕೇಶ್ ಟಿಕಾಯತ್