Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಅಡ್ವಾಣಿ ಮತ್ತೆ ನೆನಪಿಸಿರುವ ಜಿನ್ನಾರ ಸುತ್ತ....

ಅಡ್ವಾಣಿ ಮತ್ತೆ ನೆನಪಿಸಿರುವ ಜಿನ್ನಾರ ಸುತ್ತ….

- Advertisement -
- Advertisement -

ನಮ್ಮ ಸ್ವಾತಂತ್ರ್ಯ ಸಂಗ್ರಾಮ ಅಂತ್ಯಗೊಂಡಿದ್ದರಲ್ಲಿನ ಒಂದು ವಿಚಿತ್ರ ವಿಶಿಷ್ಟತೆ ಯಾವುದೆಂದರೆ; ನನ್ನ ನರನಾಡಿಗಳಲ್ಲಿ ನಾನು ಸಂಪೂರ್ಣವಾಗಿ ಹಿಂದೂ ಎಂದು ಹೇಳಿದ್ದ ಮಹಾತ್ಮ ಗಾಂಧಿ ಜಾತ್ಯಾತೀತ ಭಾರತದ ರಾಷ್ಟ್ರಪಿತ ಆದದ್ದು. ಹಾಗೆಯೇ ದೇವರು-ಧರ್ಮದಲ್ಲಿ ನಂಬಿಕೆ ಇರದಿದ್ದ, ಉರ್ದು ಭಾಷೆ ಇರಲಿ, ಇಂಗ್ಲಿಷ್ ಬಿಟ್ಟರೆ ಭಾರತದ ಒಂದೇಒಂದು ಭಾಷೆಯಲ್ಲಿ ಮಾತನಾಡಲು ಬಾರದಿದ್ದ, ಇಸ್ಲಾಂನಲ್ಲಿ ನಿಷೇಧಿಸಲ್ಪಟ್ಟಿರುವ ‘ತೀರ್ಥ’ ಮತ್ತು ಆಹಾರವನ್ನು ಸೇವಿಸುತ್ತಿದ್ದ, ನಾಸ್ತಿಕರಾಗಿದ್ದ ಮೊಹ್ಮದ್ ಅಲಿ ಜಿನ್ನಾರವರು ಇಸ್ಲಾಂ ಧರ್ಮದ ಹೆಸರಿನಲ್ಲಿ ಸ್ಥಾಪಿತವಾದ ಪಾಕಿಸ್ತಾನದ ರಾಷ್ಟ್ರಪಿತ ಆದದ್ದು!!

ಇಂಥಾ ವೈಚಿತ್ರ್ಯದ ನಡುವೆಯೂ ಇವರಿಬ್ಬರ ಮಧ್ಯೆ ಹಲವು ಸಾಮ್ಯತೆಗಳಿವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ-ಜಿನ್ನಾ, ಇಬ್ಬರೂ ಹಿಂದೂ-ಮುಸ್ಲೀಮರ ನಡುವೆ ಸೌಹಾರ್ದವ ಬಯಸಿದವರು.

ಬಾಲಗಂಗಾಧರ ತಿಲಕ್‌ರವರು ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂಬ ಹೇಳಿಕೆಯ ಮೂಲಕ ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದಾಗ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದವರಲ್ಲಿ ಜಿನ್ನಾ ಕೂಡಾ ಒಬ್ಬರು. ಗೋಪಾಲ್ ಕೃಷ್ಣ ಗೋಖಲೆಯವರು ಒಂದುಕಡೆ ಜಿನ್ನಾರ ಬಗ್ಗೆ ಧಾರ್ಮಿಕ ಪೂರ್ವಗ್ರಹಗಳಿಂದ ಕಳಂಕಿತರಾಗದಿರುವ ಜಿನ್ನಾ ಹಿಂದೂ-ಮುಸ್ಲಿಂ ಐಕ್ಯತೆಗೆ ಹೇಳಿ ಮಾಡಿಸಿದಂತಹ ರಾಯಭಾರಿ ಎಂದು ಹೇಳಿದ್ದು ಅತಿಶಯೋಕ್ತಿಯ ಮಾತಲ್ಲ.

ಮುಸ್ಲಿಂ ಲೀಗ್‌ನವರು ಜಿನ್ನಾರನ್ನು ಅದೆಷ್ಟೇ ಓಲೈಸಿದರೂ ಸ್ವಾತಂತ್ರ್ಯ ಸಿಗಬೇಕಿದ್ದರೆ ಹಿಂದೂಗಳು ಹಾಗೂ ಮುಸ್ಲಿಮರು ಒಗ್ಗಟ್ಟಾಗಿಯೇ ಇರಬೇಕು ಎಂದು ಹೇಳುತ್ತಿದ್ದ ಜಿನ್ನಾ ಕಾಂಗ್ರೆಸ್‌ನಲ್ಲೇ ಉಳಿದರು. ಆದರೆ ಕಾಲಕ್ರಮೇಣ ಕಾಂಗ್ರೆಸ್ ಮೇಲೆ ಗಾಂಧಿಯವರ ಹಿಡಿತ ಬಿಗಿಗೊಂಡಿತು. ಅದರಲ್ಲಿದ್ದ ಹಿಂದೂ ನಾಯಕರೆಲ್ಲರೂ ಗಾಂಧಿಗೆ ಡೊಗ್ಗು ಸಲಾಮು ಹೊಡೆಯುವುದು ಹೆಚ್ಚಾಗಿ ನೆಹರೂರವರ ಬಗ್ಗೆ ಗಾಂಧಿ ಹೆಚ್ಚು ಒಲವು ತೋರಿಸಲಾರಂಭಿಸಿದರು. ಇದೇ ಹೊತ್ತಿಗೆ ಸರಿಯಾಗಿ ಹಿಂದೂ ಮಹಾಸಭಾದವರ ‘ಹಿಂದೂ ರಾಷ್ಟ್ರ’ದ ಗದ್ದಲ ಹೆಚ್ಚಾಗಿತ್ತಲ್ಲದೆ ‘ದ್ವಿರಾಷ್ಟ್ರ ನೀತಿ’ಯೂ ಹೆಚ್ಚು ಮನ್ನಣೆ ಪಡೆಯಲಾರಂಭಿಸಿತು.

ಈ ಹಂತದಲ್ಲೂ ಅವರು ಕಾಂಗ್ರೆಸ್‌ನಿಂದ ಹೊರಹೋಗಲು ಇಚ್ಛಿಸಲಿಲ್ಲ. ಆದರೆ ಬಹುಸಂಖ್ಯಾತ ಜನಾಂಗ ದಬ್ಬಾಳಿಕೆ ಮತ್ತು ಕ್ರೌರ್ಯವನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರಲ್ಲಿ ತಮ್ಮ ಹಕ್ಕು ಮತ್ತು ಹಿತಾಸಕ್ತಿಗಳ ಬಗ್ಗೆ ಆತಂಕ ಮೂಡುವುದು ಸಹಜ. ಅದನ್ನು ನಿವಾರಿಸಬೇಕಾದರೆ ಕಾನೂನಿನಲ್ಲಿ ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು. ಎಂದು ಎಚ್ಚರಿಕೆ ನೀಡಿದ್ದರು. ಅವರ ಈ ಎಚ್ಚರಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದಿದ್ದಾಗ ನಿರಾಶೆಗೊಂಡ ಜಿನ್ನಾ ಕಾಂಗ್ರೆಸ್ ಪಕ್ಷದಿಂದಲೇ ದೂರ ಸರಿಯಲಾರಂಭಿಸಿದರು.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಗುವ ನಾಲ್ಕು ದಿನ ಮುನ್ನ ಜಿನ್ನಾರವರು ಮಾಡಿದ ಭಾಷಣವೇ ಇವತ್ತು ಅಡ್ವಾಣಿಗೆ ಬಹಳ ಮೆಚ್ಚುಗೆಯಾಗಿದೆ. ಆದರೆ ಜಿನ್ನಾರವರು ಹಿಂದೂ-ಮುಸ್ಲಿಂ ಐಕ್ಯತೆ ಬಗ್ಗೆ ಹಾಗೆ ಮಾತನಾಡಿದ್ದು ಅದೊಂದೇ ಬಾರಿ ಅಲ್ಲ. ಪಾಕಿಸ್ತಾನಕ್ಕಾಗಿ ಹೋರಾಡಿದ್ದ ಜಿನ್ನಾ ಮೂಲಭೂತವಾಗಿ ಇಸ್ಲಾಂ ಧರ್ಮಕ್ಕೆ ಬದ್ದರಾಗಿಯೂ ಇರಲಿಲ್ಲ. ಹಾಗೆಯೇ ಹಿಂದೂ ದ್ವೇಷಿಯೂ ಆಗಿರಲಿಲ್ಲ. ಅವರು ಪಾಕಿಸ್ತಾನದಲ್ಲಿ ಅಧಿಕಾರ ವಹಿಸಿಕೊಂಡ ಹಲವೇ ದಿನಗಳ ನಂತರ ಎಂ.ಎಸ್.ಎಂ ಶರ್ಮ ಎಂಬ ಹಿಂದೂ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ನಾನು ಈಗಲೂ ಹಿಂದೂ-ಮುಸ್ಲಿಂರ ಐಕ್ಯತೆಯನ್ನು ಬಯಸುತ್ತೇನಲ್ಲದೆ, ಸದ್ಯದಲ್ಲೇ ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆಗೆಂದು ನಾನೇ ‘ಪ್ರೊಟೆಕ್ಟರ್ ಜನರಲ್’ಆಗಿ ನಿಲ್ಲುತ್ತೇನೆ ಎಂದು ಹೇಳಿದ್ದರು.

ಅಂದಹಾಗೆ, ಇಲ್ಲಿ ದಾಖಲಿಸಿರುವುದಕ್ಕೆಲ್ಲಾ ಮೂಲ ಪ್ರೇರಣೆ ‘ಅಂಡರ್‌ಸ್ಟಾಂಡಿಂಗ್ ದಿ ಮುಸ್ಲಿಂ ಮೈಂಡ್’ ಎಂಬ ಪುಸ್ತಕದಲ್ಲಿ ಜಿನ್ನಾರವರನ್ನು ಕುರಿತ ಅಧ್ಯಾಯ. ಈ ಪುಸ್ತಕವನ್ನು ಬರೆದವರಿರುವವರು ಮತ್ತಿನ್ಯಾರೂ ಅಲ್ಲ… ಪ್ರಖ್ಯಾತ ಸಂಶೋಧಕರೂ, ಮಹಾತ್ಮ ಗಾಂಧಿಯವರ ಮೊಮ್ಮಗನೂ ಆಗಿರುವ ರಾಜ್‌ಮೋಹನ್ ಗಾಂಧಿಯವರು!!

ಗೌರಿ ಲಂಕೇಶ್,
ಜೂನ್ 22, 2005 (‘ಕಂಡಹಾಗೆ’ ಸಂಪಾದಕೀಯದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...