Homeಅಂಕಣಗಳುಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

ಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

- Advertisement -
- Advertisement -

ನವೆಂಬರ್ 30ರಂದು ದೆಹಲಿಯಲ್ಲಿ ನಡೆಯಲಿರುವ ರೈತ ಹೋರಾಟದ ಕುರಿತು ಕಳೆದ ವಾರವೇ ಪತ್ರಿಕೆಯಲ್ಲಿ ಕಾದಂಬಿನಿಯವರು ಬರೆದಿದ್ದರು. ಅದೀಗ ಮುಗಿದಿದೆ. ಆ ಹೋರಾಟ ನಡೆಯಲು 4-5 ದಿನಗಳಿರುವವರೆಗೂ ಏನೂ ಮಾತಾಡದಿದ್ದ ದೊಡ್ಡ ಮಾಧ್ಯಮಗಳೂ ತಿರುಗಿ ನೋಡುವಂತೆ, ಇದು ದೇಶದೆಲ್ಲೆಡೆ ಸದ್ದು ಮಾಡಿದೆ. ನಮ್ಮ ಪತ್ರಿಕಾ ತಂಡವೂ ಇದರ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿತ್ತು ಮತ್ತು ನಮ್ಮ ಬಳಗದ ಹಲವರು ಖುದ್ದಾಗಿ ಭಾಗವಹಿಸಿದ್ದರು. ಅವರಿಂದ ನೇರವಾಗಿ ತಿಳಿದುಕೊಂಡ ಕೆಲವು ಅಂಶಗಳು ಆಸಕ್ತಿದಾಯಕವಾಗಿವೆ. ದೊಡ್ಡ ಹೋರಾಟಗಳಿಲ್ಲ ಎಂಬ ಭಾವನೆ ಸ್ಥಿರಗೊಂಡಿರುವ ಸಂದರ್ಭದಲ್ಲಿ ಈ ಪ್ರಯೋಗವು ಕೆಲವು ಸಂಗತಿಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಕಾಲಕ್ಕೆ ತಕ್ಕುನಾದ ರೀತಿಯಲ್ಲಿ ಕಟ್ಟುವ ಹೋರಾಟದಿಂದ ಇರುವ ಸ್ಥಗಿತ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದು ಬಹಳ ಮುಖ್ಯವಾದ ಸಂಗತಿ.

ಹಲವರ ಅನಿಸಿಕೆಗಳಿಗೆ ವಿರುದ್ಧ ರೀತಿಯಲ್ಲಿ, ಈ ದೆಹಲಿ ಹೋರಾಟವು ಇದ್ದಕ್ಕಿದ್ದಂತೆ ಆರಂಭವಾದ ಒಂದು ದಿನದ ಪ್ರತಿಭಟನೆಯಲ್ಲ. ಅದು ಸುಮಾರು ಒಂದೂವರೆ ವರ್ಷಗಳ ಪ್ರಕ್ರಿಯೆ. ಅದರಲ್ಲೂ ಮಧ್ಯಪ್ರದೇಶದ ಮಂಡಸೂರಿನಲ್ಲಿ ಆದ ಗೋಲೀಬಾರ್ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಭೇಟಿಯಿತ್ತು ಹೋರಾಟದಲ್ಲಿ ಭಾಗಿಯಾದ ಸಂಘಟನೆಗಳು ಸಂಕಲ್ಪ ತೊಟ್ಟಂದಿನಿಂದ ಇದು ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಹಂತ ಹಂತವಾಗಿ ಬೆಳೆದು ಬಂದ ಈ ಆಂದೋಲನದ ಕುರಿತು ಯಾರೂ ಬೆರಳು ಮಾಡಿ ತೋರಿಸಲಾಗದಂತೆ ಗಟ್ಟಿ ನೆಲೆಯಲ್ಲಿ ಅದನ್ನು ಕಟ್ಟಲಾಯಿತು.

ಸ್ವರಾಜ್ ಅಭಿಯಾನದ ಭಾಗವಾಗಿರುವ ಜೈಕಿಸಾನ್ ಆಂದೋಲನದವರು ಈ ಪ್ರಕ್ರಿಯೆಯನ್ನು ಆರಂಭಿಸಿದರಾದರೂ, ಬಹುಬೇಗನೇ ಸುಮಾರು ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾದವು. ಸಮಿತಿಗಳು ರಚನೆಯಾಗುವ ಹೊತ್ತಿಗೆ ಅದರ ಸಂಖ್ಯೆ 175 ಮುಟ್ಟಿತ್ತು. ಅಂತಿಮವಾಗಿ ಸುಮಾರು 200 ಸಂಘಟನೆಗಳು ಜೊತೆಯಾಗಿದ್ದವು. ಸಾಂಪ್ರದಾಯಿಕ ರೈತ ಸಂಘಟನೆಗಳಲ್ಲದೇ, ಎಡಪಕ್ಷಗಳ ಜೊತೆಗಿರುವ ರೈತ, ಕೃಷಿಕಾರ್ಮಿಕ ಸಂಘಟನೆಗಳೂ ಇದರ ಭಾಗವಾದವು.

ರೈತರ ನೂರಾರು ಸಮಸ್ಯೆಗಳ ಕೇಂದ್ರದಲ್ಲಿರುವ ಎರಡು ಅಂಶಗಳನ್ನು ಪಟ್ಟಿ ಮಾಡಲಾಯಿತು. ಇದುವರೆಗಿನ ಬಿಕ್ಕಟ್ಟಿನ ಕಾರಣದಿಂದ ಸಂಚಯಿತವಾಗಿರುವ ಸಾಲಮನ್ನಾ, ಮುಂದೆ ಸಾಲ ಮಾಡದಂತಹ, ಲಾಭ ಕಾಣಲು ಸಾಧ್ಯವಾಗುವಂತೆ ಎಲ್ಲಾ ಬೆಳೆಗಳಿಗೂ ಲಾಭದಾಯಕವಾದ ಬೆಲೆ ಖಾತರಿ. ಇದನ್ನು ಮೇಲ್ನೋಟದ ಘೋಷಣೆಯಾಗಿಯಷ್ಟೇ ಅಲ್ಲದೇ, ಕಾಯ್ದೆ ಬದ್ಧವಾಗಿ ಇವು ಸರಿಯಾಗಿ ಜಾರಿಗೊಳ್ಳಲು ಋಣ ಮುಕ್ತ ಕಾಯ್ದೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾಗಿರುವ ಸಿ 2 + 50% ಬೆಲೆಗಿಂತ ಕಡಿಮೆ ಮಾರಾಟವಾಗದಂತೆ ತಡೆದು ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾಯ್ದೆ ಜಾರಿಗೆ ಬರಬೇಕೆಂಬುದು ಪ್ರಮುಖ ಒತ್ತಾಯವಾಗಿತ್ತು.

ಇದಕ್ಕಾಗಿ ತಜ್ಞರ ತಂಡಗಳು ರೂಪುಗೊಂಡವು ಮತ್ತು ಅವರು ಆ ಕಾಯ್ದೆಯ ಕರಡುಗಳನ್ನೂ ರೂಪಿಸಿಕೊಟ್ಟರು. ಈ ಹೊತ್ತಿಗೆ ಇದರ ಸಕ್ರಿಯ ಸಹಭಾಗಿಗಳಾಗಿದ್ದ ಮಹಾರಾಷ್ಟ್ರದ ರೈತ ಸಂಘಟನೆಯ ನಾಯಕ ಮತ್ತು ಲೋಕಸಭಾ ಸದಸ್ಯ ರಾಜುಶೆಟ್ಟಿ ಮತ್ತು ಸಿಪಿಎಂನ ರಾಜ್ಯಸಭಾ ಸದಸ್ಯ ರಾಜೇಶ್ ಅವರುಗಳು ತಮ್ಮ ಸದನಗಳ ಮುಖ್ಯಸ್ಥರಿಗೆ ಖಾಸಗಿ ಮಸೂದೆಗಳಾಗಿ ಇವನ್ನು ಸಲ್ಲಿಸಿಯೂ ಬಿಟ್ಟರು. ಆದರೆ, ಮೋದಿ ಸರ್ಕಾರವು ಈ ಸಾರಿ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚದ ಮೇಲೆ 50­%ನಷ್ಟು ಲಾಭದಾಯಕ ಬೆಲೆಯನ್ನು ಖಾತರಿಗೊಳಿಸುವುದಾಗಿ ಬುರುಡೆ ಬಿಟ್ಟಿದ್ದರು. ಸ್ವರಾಜ್ ಅಭಿಯಾನವು ಇದನ್ನೊಂದು ಸವಾಲಾಗಿ ಸ್ವೀಕರಿಸಿ, ಈಗಾಗಲೇ ಘೋಷಿಸಲಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಹೇಗೆ ನೂರಕ್ಕೆ 95 ಎಪಿಎಂಸಿ ಮಂಡಿಗಳಲ್ಲಿ ಲಭ್ಯವಿಲ್ಲ ಎಂಬುದನ್ನು ತನಿಖೆ/ಸಮೀಕ್ಷೆಯ ಮೂಲಕ ಸಾಬೀತುಪಡಿಸಿತು.

ಹಾಗೆಯೇ ರೈತರು ಮತ್ತು ಕೃಷಿಯ ವಿಚಾರದಲ್ಲಿ ಮೋದಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ದಾಖಲೆಗಳೊಂದಿಗೆ ವಿವರಿಸುವ ಪುಸ್ತಕವನ್ನು ತಂದರು. ದೀರ್ಘವಾಗಿ ಓದಲು ಸಾಧ್ಯವಾಗದವರಿಗೆ ಜೇಬಿನಲ್ಲಿಟ್ಟುಕೊಳ್ಳಬಹುದಾದ ಪುಸ್ತಕವನ್ನೂ ಹೊರತಂದರು.

ಎಡಪಕ್ಷಗಳು ಮತ್ತು ರೈತ ಸಂಘಟನೆಗಳು ಈ ರೀತಿಯಲ್ಲಿ ಒಂದಾಗಿ ಕೆಲಸ ಮಾಡಿ ಒಂದು ತಕ್ಷಣದ ಗುರಿ ಮುಟ್ಟಲು ದುಡಿದ ಉದಾಹರಣೆಗಳು ಹೆಚ್ಚಿಲ್ಲ. ಆದರೆ, ಈ ಸಾರಿ ಅದು ಸಾಧ್ಯವಾಯಿತು. ಮಹಾರಾಷ್ಟ್ರ, ರಾಜಸ್ತಾನ, ಉತ್ತರಖಂಡ್‌ಗಳಲ್ಲಿ ಭಾರೀ ಬೃಹತ್ ಪ್ರಮಾಣದ ಕಾಲ್ನಡಿಗೆಗಳನ್ನು ಆಯೋಜಿಸಿದ್ದ ಎಡಪಕ್ಷಗಳು ಈ ಸಮಿತಿಯ ಜೊತೆಗೂ ಸಕ್ರಿಯವಾಗಿ ಕೆಲಸ ಮಾಡಿದವು. ವಿಜು ಕೃಷ್ಣನ್‌ರಂತಹ ಯುವ ನಾಯಕರು ಅದರ ನಾಯಕತ್ವ ವಹಿಸಿದ್ದರಿಂದಾಗಿಯೂ ಇದು ಸಾಧ್ಯವಾಗಿರಬಹುದು. ಆದರೆ, ಸಾಧ್ಯವಾಗಿದ್ದು ವಾಸ್ತವ.

ವಿವಿಧ ಧಾರೆಗಳ ಕನಿಷ್ಠ 25 ಸಂಘಟನೆಗಳನ್ನೂ ಒಂದೆಡೆ ಸೇರಿಸಿ ನಿರಂತರವಾಗಿ ಕೆಲಸ ಮಾಡುವುದು ಸುಲಭವಲ್ಲವೆಂಬುದು ಅದರಲ್ಲಿ ತೊಡಗಿಕೊಂಡಿರುವ ಯಾರಿಗೇ ಆಗಲಿ ಗೊತ್ತಿರುತ್ತದೆ. ಅಂತಹ ಕಷ್ಟದ ಕೆಲಸವನ್ನು ಸಾಧ್ಯವಾಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು. ಹಾಗೆಂದು ಇದರಲ್ಲಿ ಸಮಸ್ಯೆಗಳಿರುವುದಿಲ್ಲವೆಂದೇನಲ್ಲ. ನೂರೆಂಟು ಬಗೆಯ ಕಿತ್ತಾಟಗಳು ಇದರಲ್ಲಿ ಸಹಜವಾಗಿಯೇ ಇರುತ್ತವೆ. ಅವೆಲ್ಲವನ್ನೂ ಹೊರಗೆ ಬರದೇ ನಿಭಾಯಿಸಿದ ಜಾಣ್ಮೆಗೆ ‘ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ’ಯ ನಾಯಕತ್ವವನ್ನು ಅಭಿನಂದಿಸಲೇಬೇಕು.

ರೈತರ ಹೋರಾಟಕ್ಕೆ ಇತರ ಸಮುದಾಯಗಳ ಬೆಂಬಲವನ್ನು ಸಂಘಟಿಸಿದ್ದು ಇನ್ನೊಂದು ಜಾಣ್ಮೆಯ ನಡೆ. ಕರ್ನಾಟಕದಲ್ಲೂ ಸಿಪಿಎಂ ಪಕ್ಷದ ಮುತುವರ್ಜಿಯಿಂದ ಅದು ನಡೆದದ್ದನ್ನು ಎಲ್ಲರೂ ಗಮನಿಸಿರಬಹುದು. ದೆಹಲಿಯಲ್ಲಿ ನೇಷನ್ ಫಾರ್ ಫಾiರ‍್ಸ್, ಡಿಯು ಫಾರ್ ಫಾರ್ಮರ್ಸ್, ವಕೀಲರು, ಪತ್ರಕರ್ತರು, ವೈದ್ಯರು ಇತ್ಯಾದಿ ಪ್ರಯತ್ನಗಳು ನಡೆದವು. ಇಷ್ಟೇ ಪ್ರಮುಖವಾಗಿ ಮಾಡಿದ ಮತ್ತೊಂದು ಪ್ರಯತ್ನವೆಂದರೆ, ಕೇವಲ ಆಡಳಿತ ಪಕ್ಷವನ್ನು ಗುರಿ ಮಾಡಿದ್ದಲ್ಲದೇ, ವಿರೋಧ ಪಕ್ಷಗಳ ಸಭೆ ಕರೆದು ಅವರ ನಿಲುವನ್ನು ಸ್ಪಷ್ಟಮಾಡಲು ಆಗ್ರಹಿಸಲಾಯಿತು. ಅಂತಿಮವಾಗಿ ಅವರುಗಳು ನ.೩೦ರಂದು ಬಂದು ವೇದಿಕೆಯ ಮೇಲೆಯೇ ತಮ್ಮ ನಿಲುವನ್ನು ಬಹಿರಂಗಪಡಿಸಬೇಕಾಯಿತು.

ವಿರೋಧ ಪಕ್ಷಗಳ ನಾಯಕರುಗಳು ರೈತರ ಪ್ರಮುಖ ಹಕ್ಕೊತ್ತಾಯಗಳ ಮೇಲೆ ಕೇಂದ್ರೀಕರಿಸದೇ ಮೋದಿ ಸರ್ಕಾರವನ್ನು ಬಯ್ಯುವುದರಲ್ಲೇ ಕಾಲ ಕಳೆದರು ಮತ್ತು ಇದು ರೈತ ಸಂಘಟನೆಗಳು ಶ್ರಮದಿಂದ ಸಂಘಟಿಸಿದ ಘನತೆಯುಳ್ಳ ಹೋರಾಟವೆಂಬುದನ್ನು ಮರೆತು, ತಮ್ಮ ‘ಮಹಾಘಟಬಂಧನ್’ ರ‍್ಯಾಲಿಯೇನೋ ಎಂಬಂತೆ ಕೈ ಮೇಲೆತ್ತಿ ಹಿಡಿದು ನಿಂತರು! ಇವೇ ಪಕ್ಷಗಳು (ಶರದ್‌ಪವಾರ್‌ರಂತಹ ವ್ಯಕ್ತಿ ವೇದಿಕೆಯ ಮೇಲೆ ರೈತ ಪರವಾಗಿ ಮಾತಾಡುವುದನ್ನು ನೋಡುವುದು ಕಷ್ಟವಾಗುತ್ತಿತ್ತು) ತಮ್ಮ ಅವಧಿಯಲ್ಲಾದ ಸಮಸ್ಯೆಗಳ ಕುರಿತ ಕನಿಷ್ಠ ಆತ್ಮಾವಲೋಕನವನ್ನೂ ಮಾಡಿಕೊಳ್ಳಲಿಲ್ಲ. ಯುಪಿಎ ಅವಧಿಯಲ್ಲಿ ಸಾಲಮನ್ನಾ ಮಾಡಿದುದರ ಕುರಿತು ರಾಹುಲ್‌ಗಾಂಧಿ ಮಾತನಾಡಿದರಾದರೂ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಾವೇಕೆ ಜಾರಿ ಮಾಡಲಿಲ್ಲ ಎಂಬುದರ ಕುರಿತು ಹೇಳಲಿಲ್ಲ.

ಇಂತಹ ಕೆಲವು ಸಂಗತಿಗಳ ಹೊರತಾಗಿ ದೆಹಲಿಯ ರೈತ ಹೋರಾಟವು ಈ ಸಂದರ್ಭದ ಅತ್ಯಂತ ಮಹತ್ವದ ವಿದ್ಯಮಾನಗಳಲ್ಲೊಂದಾಗಿದೆ. ಇದರ ಆಧಾರದ ಮೇಲೆಯೇ ದೇಶಾದ್ಯಂತ ರೈತರು ಮತ ಚಲಾಯಿಸುತ್ತಾರೆಂದೇನೂ ಹೇಳಲಾಗದು. ಆದರೆ, ಮೋದಿ ಸರ್ಕಾರದ ಅತ್ಯಂತ ಕರಾಳ ರೈತವಿರೋಧಿ ನೀತಿಗಳನ್ನು ದೇಶದ ರೈತರು ಒಪ್ಪಿಲ್ಲವೆಂದು ಈ ಹೋರಾಟವು ದೇಶಕ್ಕೆ ತೋರಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....