Homeಅಂಕಣಗಳುಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

ಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

- Advertisement -
- Advertisement -

ನವೆಂಬರ್ 30ರಂದು ದೆಹಲಿಯಲ್ಲಿ ನಡೆಯಲಿರುವ ರೈತ ಹೋರಾಟದ ಕುರಿತು ಕಳೆದ ವಾರವೇ ಪತ್ರಿಕೆಯಲ್ಲಿ ಕಾದಂಬಿನಿಯವರು ಬರೆದಿದ್ದರು. ಅದೀಗ ಮುಗಿದಿದೆ. ಆ ಹೋರಾಟ ನಡೆಯಲು 4-5 ದಿನಗಳಿರುವವರೆಗೂ ಏನೂ ಮಾತಾಡದಿದ್ದ ದೊಡ್ಡ ಮಾಧ್ಯಮಗಳೂ ತಿರುಗಿ ನೋಡುವಂತೆ, ಇದು ದೇಶದೆಲ್ಲೆಡೆ ಸದ್ದು ಮಾಡಿದೆ. ನಮ್ಮ ಪತ್ರಿಕಾ ತಂಡವೂ ಇದರ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿತ್ತು ಮತ್ತು ನಮ್ಮ ಬಳಗದ ಹಲವರು ಖುದ್ದಾಗಿ ಭಾಗವಹಿಸಿದ್ದರು. ಅವರಿಂದ ನೇರವಾಗಿ ತಿಳಿದುಕೊಂಡ ಕೆಲವು ಅಂಶಗಳು ಆಸಕ್ತಿದಾಯಕವಾಗಿವೆ. ದೊಡ್ಡ ಹೋರಾಟಗಳಿಲ್ಲ ಎಂಬ ಭಾವನೆ ಸ್ಥಿರಗೊಂಡಿರುವ ಸಂದರ್ಭದಲ್ಲಿ ಈ ಪ್ರಯೋಗವು ಕೆಲವು ಸಂಗತಿಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಕಾಲಕ್ಕೆ ತಕ್ಕುನಾದ ರೀತಿಯಲ್ಲಿ ಕಟ್ಟುವ ಹೋರಾಟದಿಂದ ಇರುವ ಸ್ಥಗಿತ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದು ಬಹಳ ಮುಖ್ಯವಾದ ಸಂಗತಿ.

ಹಲವರ ಅನಿಸಿಕೆಗಳಿಗೆ ವಿರುದ್ಧ ರೀತಿಯಲ್ಲಿ, ಈ ದೆಹಲಿ ಹೋರಾಟವು ಇದ್ದಕ್ಕಿದ್ದಂತೆ ಆರಂಭವಾದ ಒಂದು ದಿನದ ಪ್ರತಿಭಟನೆಯಲ್ಲ. ಅದು ಸುಮಾರು ಒಂದೂವರೆ ವರ್ಷಗಳ ಪ್ರಕ್ರಿಯೆ. ಅದರಲ್ಲೂ ಮಧ್ಯಪ್ರದೇಶದ ಮಂಡಸೂರಿನಲ್ಲಿ ಆದ ಗೋಲೀಬಾರ್ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಭೇಟಿಯಿತ್ತು ಹೋರಾಟದಲ್ಲಿ ಭಾಗಿಯಾದ ಸಂಘಟನೆಗಳು ಸಂಕಲ್ಪ ತೊಟ್ಟಂದಿನಿಂದ ಇದು ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಹಂತ ಹಂತವಾಗಿ ಬೆಳೆದು ಬಂದ ಈ ಆಂದೋಲನದ ಕುರಿತು ಯಾರೂ ಬೆರಳು ಮಾಡಿ ತೋರಿಸಲಾಗದಂತೆ ಗಟ್ಟಿ ನೆಲೆಯಲ್ಲಿ ಅದನ್ನು ಕಟ್ಟಲಾಯಿತು.

ಸ್ವರಾಜ್ ಅಭಿಯಾನದ ಭಾಗವಾಗಿರುವ ಜೈಕಿಸಾನ್ ಆಂದೋಲನದವರು ಈ ಪ್ರಕ್ರಿಯೆಯನ್ನು ಆರಂಭಿಸಿದರಾದರೂ, ಬಹುಬೇಗನೇ ಸುಮಾರು ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾದವು. ಸಮಿತಿಗಳು ರಚನೆಯಾಗುವ ಹೊತ್ತಿಗೆ ಅದರ ಸಂಖ್ಯೆ 175 ಮುಟ್ಟಿತ್ತು. ಅಂತಿಮವಾಗಿ ಸುಮಾರು 200 ಸಂಘಟನೆಗಳು ಜೊತೆಯಾಗಿದ್ದವು. ಸಾಂಪ್ರದಾಯಿಕ ರೈತ ಸಂಘಟನೆಗಳಲ್ಲದೇ, ಎಡಪಕ್ಷಗಳ ಜೊತೆಗಿರುವ ರೈತ, ಕೃಷಿಕಾರ್ಮಿಕ ಸಂಘಟನೆಗಳೂ ಇದರ ಭಾಗವಾದವು.

ರೈತರ ನೂರಾರು ಸಮಸ್ಯೆಗಳ ಕೇಂದ್ರದಲ್ಲಿರುವ ಎರಡು ಅಂಶಗಳನ್ನು ಪಟ್ಟಿ ಮಾಡಲಾಯಿತು. ಇದುವರೆಗಿನ ಬಿಕ್ಕಟ್ಟಿನ ಕಾರಣದಿಂದ ಸಂಚಯಿತವಾಗಿರುವ ಸಾಲಮನ್ನಾ, ಮುಂದೆ ಸಾಲ ಮಾಡದಂತಹ, ಲಾಭ ಕಾಣಲು ಸಾಧ್ಯವಾಗುವಂತೆ ಎಲ್ಲಾ ಬೆಳೆಗಳಿಗೂ ಲಾಭದಾಯಕವಾದ ಬೆಲೆ ಖಾತರಿ. ಇದನ್ನು ಮೇಲ್ನೋಟದ ಘೋಷಣೆಯಾಗಿಯಷ್ಟೇ ಅಲ್ಲದೇ, ಕಾಯ್ದೆ ಬದ್ಧವಾಗಿ ಇವು ಸರಿಯಾಗಿ ಜಾರಿಗೊಳ್ಳಲು ಋಣ ಮುಕ್ತ ಕಾಯ್ದೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾಗಿರುವ ಸಿ 2 + 50% ಬೆಲೆಗಿಂತ ಕಡಿಮೆ ಮಾರಾಟವಾಗದಂತೆ ತಡೆದು ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾಯ್ದೆ ಜಾರಿಗೆ ಬರಬೇಕೆಂಬುದು ಪ್ರಮುಖ ಒತ್ತಾಯವಾಗಿತ್ತು.

ಇದಕ್ಕಾಗಿ ತಜ್ಞರ ತಂಡಗಳು ರೂಪುಗೊಂಡವು ಮತ್ತು ಅವರು ಆ ಕಾಯ್ದೆಯ ಕರಡುಗಳನ್ನೂ ರೂಪಿಸಿಕೊಟ್ಟರು. ಈ ಹೊತ್ತಿಗೆ ಇದರ ಸಕ್ರಿಯ ಸಹಭಾಗಿಗಳಾಗಿದ್ದ ಮಹಾರಾಷ್ಟ್ರದ ರೈತ ಸಂಘಟನೆಯ ನಾಯಕ ಮತ್ತು ಲೋಕಸಭಾ ಸದಸ್ಯ ರಾಜುಶೆಟ್ಟಿ ಮತ್ತು ಸಿಪಿಎಂನ ರಾಜ್ಯಸಭಾ ಸದಸ್ಯ ರಾಜೇಶ್ ಅವರುಗಳು ತಮ್ಮ ಸದನಗಳ ಮುಖ್ಯಸ್ಥರಿಗೆ ಖಾಸಗಿ ಮಸೂದೆಗಳಾಗಿ ಇವನ್ನು ಸಲ್ಲಿಸಿಯೂ ಬಿಟ್ಟರು. ಆದರೆ, ಮೋದಿ ಸರ್ಕಾರವು ಈ ಸಾರಿ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚದ ಮೇಲೆ 50­%ನಷ್ಟು ಲಾಭದಾಯಕ ಬೆಲೆಯನ್ನು ಖಾತರಿಗೊಳಿಸುವುದಾಗಿ ಬುರುಡೆ ಬಿಟ್ಟಿದ್ದರು. ಸ್ವರಾಜ್ ಅಭಿಯಾನವು ಇದನ್ನೊಂದು ಸವಾಲಾಗಿ ಸ್ವೀಕರಿಸಿ, ಈಗಾಗಲೇ ಘೋಷಿಸಲಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಹೇಗೆ ನೂರಕ್ಕೆ 95 ಎಪಿಎಂಸಿ ಮಂಡಿಗಳಲ್ಲಿ ಲಭ್ಯವಿಲ್ಲ ಎಂಬುದನ್ನು ತನಿಖೆ/ಸಮೀಕ್ಷೆಯ ಮೂಲಕ ಸಾಬೀತುಪಡಿಸಿತು.

ಹಾಗೆಯೇ ರೈತರು ಮತ್ತು ಕೃಷಿಯ ವಿಚಾರದಲ್ಲಿ ಮೋದಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ದಾಖಲೆಗಳೊಂದಿಗೆ ವಿವರಿಸುವ ಪುಸ್ತಕವನ್ನು ತಂದರು. ದೀರ್ಘವಾಗಿ ಓದಲು ಸಾಧ್ಯವಾಗದವರಿಗೆ ಜೇಬಿನಲ್ಲಿಟ್ಟುಕೊಳ್ಳಬಹುದಾದ ಪುಸ್ತಕವನ್ನೂ ಹೊರತಂದರು.

ಎಡಪಕ್ಷಗಳು ಮತ್ತು ರೈತ ಸಂಘಟನೆಗಳು ಈ ರೀತಿಯಲ್ಲಿ ಒಂದಾಗಿ ಕೆಲಸ ಮಾಡಿ ಒಂದು ತಕ್ಷಣದ ಗುರಿ ಮುಟ್ಟಲು ದುಡಿದ ಉದಾಹರಣೆಗಳು ಹೆಚ್ಚಿಲ್ಲ. ಆದರೆ, ಈ ಸಾರಿ ಅದು ಸಾಧ್ಯವಾಯಿತು. ಮಹಾರಾಷ್ಟ್ರ, ರಾಜಸ್ತಾನ, ಉತ್ತರಖಂಡ್‌ಗಳಲ್ಲಿ ಭಾರೀ ಬೃಹತ್ ಪ್ರಮಾಣದ ಕಾಲ್ನಡಿಗೆಗಳನ್ನು ಆಯೋಜಿಸಿದ್ದ ಎಡಪಕ್ಷಗಳು ಈ ಸಮಿತಿಯ ಜೊತೆಗೂ ಸಕ್ರಿಯವಾಗಿ ಕೆಲಸ ಮಾಡಿದವು. ವಿಜು ಕೃಷ್ಣನ್‌ರಂತಹ ಯುವ ನಾಯಕರು ಅದರ ನಾಯಕತ್ವ ವಹಿಸಿದ್ದರಿಂದಾಗಿಯೂ ಇದು ಸಾಧ್ಯವಾಗಿರಬಹುದು. ಆದರೆ, ಸಾಧ್ಯವಾಗಿದ್ದು ವಾಸ್ತವ.

ವಿವಿಧ ಧಾರೆಗಳ ಕನಿಷ್ಠ 25 ಸಂಘಟನೆಗಳನ್ನೂ ಒಂದೆಡೆ ಸೇರಿಸಿ ನಿರಂತರವಾಗಿ ಕೆಲಸ ಮಾಡುವುದು ಸುಲಭವಲ್ಲವೆಂಬುದು ಅದರಲ್ಲಿ ತೊಡಗಿಕೊಂಡಿರುವ ಯಾರಿಗೇ ಆಗಲಿ ಗೊತ್ತಿರುತ್ತದೆ. ಅಂತಹ ಕಷ್ಟದ ಕೆಲಸವನ್ನು ಸಾಧ್ಯವಾಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು. ಹಾಗೆಂದು ಇದರಲ್ಲಿ ಸಮಸ್ಯೆಗಳಿರುವುದಿಲ್ಲವೆಂದೇನಲ್ಲ. ನೂರೆಂಟು ಬಗೆಯ ಕಿತ್ತಾಟಗಳು ಇದರಲ್ಲಿ ಸಹಜವಾಗಿಯೇ ಇರುತ್ತವೆ. ಅವೆಲ್ಲವನ್ನೂ ಹೊರಗೆ ಬರದೇ ನಿಭಾಯಿಸಿದ ಜಾಣ್ಮೆಗೆ ‘ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ’ಯ ನಾಯಕತ್ವವನ್ನು ಅಭಿನಂದಿಸಲೇಬೇಕು.

ರೈತರ ಹೋರಾಟಕ್ಕೆ ಇತರ ಸಮುದಾಯಗಳ ಬೆಂಬಲವನ್ನು ಸಂಘಟಿಸಿದ್ದು ಇನ್ನೊಂದು ಜಾಣ್ಮೆಯ ನಡೆ. ಕರ್ನಾಟಕದಲ್ಲೂ ಸಿಪಿಎಂ ಪಕ್ಷದ ಮುತುವರ್ಜಿಯಿಂದ ಅದು ನಡೆದದ್ದನ್ನು ಎಲ್ಲರೂ ಗಮನಿಸಿರಬಹುದು. ದೆಹಲಿಯಲ್ಲಿ ನೇಷನ್ ಫಾರ್ ಫಾiರ‍್ಸ್, ಡಿಯು ಫಾರ್ ಫಾರ್ಮರ್ಸ್, ವಕೀಲರು, ಪತ್ರಕರ್ತರು, ವೈದ್ಯರು ಇತ್ಯಾದಿ ಪ್ರಯತ್ನಗಳು ನಡೆದವು. ಇಷ್ಟೇ ಪ್ರಮುಖವಾಗಿ ಮಾಡಿದ ಮತ್ತೊಂದು ಪ್ರಯತ್ನವೆಂದರೆ, ಕೇವಲ ಆಡಳಿತ ಪಕ್ಷವನ್ನು ಗುರಿ ಮಾಡಿದ್ದಲ್ಲದೇ, ವಿರೋಧ ಪಕ್ಷಗಳ ಸಭೆ ಕರೆದು ಅವರ ನಿಲುವನ್ನು ಸ್ಪಷ್ಟಮಾಡಲು ಆಗ್ರಹಿಸಲಾಯಿತು. ಅಂತಿಮವಾಗಿ ಅವರುಗಳು ನ.೩೦ರಂದು ಬಂದು ವೇದಿಕೆಯ ಮೇಲೆಯೇ ತಮ್ಮ ನಿಲುವನ್ನು ಬಹಿರಂಗಪಡಿಸಬೇಕಾಯಿತು.

ವಿರೋಧ ಪಕ್ಷಗಳ ನಾಯಕರುಗಳು ರೈತರ ಪ್ರಮುಖ ಹಕ್ಕೊತ್ತಾಯಗಳ ಮೇಲೆ ಕೇಂದ್ರೀಕರಿಸದೇ ಮೋದಿ ಸರ್ಕಾರವನ್ನು ಬಯ್ಯುವುದರಲ್ಲೇ ಕಾಲ ಕಳೆದರು ಮತ್ತು ಇದು ರೈತ ಸಂಘಟನೆಗಳು ಶ್ರಮದಿಂದ ಸಂಘಟಿಸಿದ ಘನತೆಯುಳ್ಳ ಹೋರಾಟವೆಂಬುದನ್ನು ಮರೆತು, ತಮ್ಮ ‘ಮಹಾಘಟಬಂಧನ್’ ರ‍್ಯಾಲಿಯೇನೋ ಎಂಬಂತೆ ಕೈ ಮೇಲೆತ್ತಿ ಹಿಡಿದು ನಿಂತರು! ಇವೇ ಪಕ್ಷಗಳು (ಶರದ್‌ಪವಾರ್‌ರಂತಹ ವ್ಯಕ್ತಿ ವೇದಿಕೆಯ ಮೇಲೆ ರೈತ ಪರವಾಗಿ ಮಾತಾಡುವುದನ್ನು ನೋಡುವುದು ಕಷ್ಟವಾಗುತ್ತಿತ್ತು) ತಮ್ಮ ಅವಧಿಯಲ್ಲಾದ ಸಮಸ್ಯೆಗಳ ಕುರಿತ ಕನಿಷ್ಠ ಆತ್ಮಾವಲೋಕನವನ್ನೂ ಮಾಡಿಕೊಳ್ಳಲಿಲ್ಲ. ಯುಪಿಎ ಅವಧಿಯಲ್ಲಿ ಸಾಲಮನ್ನಾ ಮಾಡಿದುದರ ಕುರಿತು ರಾಹುಲ್‌ಗಾಂಧಿ ಮಾತನಾಡಿದರಾದರೂ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಾವೇಕೆ ಜಾರಿ ಮಾಡಲಿಲ್ಲ ಎಂಬುದರ ಕುರಿತು ಹೇಳಲಿಲ್ಲ.

ಇಂತಹ ಕೆಲವು ಸಂಗತಿಗಳ ಹೊರತಾಗಿ ದೆಹಲಿಯ ರೈತ ಹೋರಾಟವು ಈ ಸಂದರ್ಭದ ಅತ್ಯಂತ ಮಹತ್ವದ ವಿದ್ಯಮಾನಗಳಲ್ಲೊಂದಾಗಿದೆ. ಇದರ ಆಧಾರದ ಮೇಲೆಯೇ ದೇಶಾದ್ಯಂತ ರೈತರು ಮತ ಚಲಾಯಿಸುತ್ತಾರೆಂದೇನೂ ಹೇಳಲಾಗದು. ಆದರೆ, ಮೋದಿ ಸರ್ಕಾರದ ಅತ್ಯಂತ ಕರಾಳ ರೈತವಿರೋಧಿ ನೀತಿಗಳನ್ನು ದೇಶದ ರೈತರು ಒಪ್ಪಿಲ್ಲವೆಂದು ಈ ಹೋರಾಟವು ದೇಶಕ್ಕೆ ತೋರಿಸಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...