- Advertisement -
ಮಲ್ಲಿ |
2014ರ ಲೋಕಸಭಾ ಚುನಾವಣೆಯ ಪ್ರಚಾರದಿಂದ ಇಲ್ಲಿವರೆಗೆ ‘ಅಕೌಂಟಿಗೆ ರೊಕ್ಕ’ ಎಂಬುದನ್ನು ನರೇಂದ್ರ ಮೋದಿ ಬಡಬಡಿಸುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಕೌಂಟ್ಲೆಸ್ (ಎಣಿಸಲಾಗದಷ್ಟು!) ಸುಳ್ಳುಗಳನ್ನು ‘ಸಚ್ಚಾ’ ಪ್ರಧಾನಿ ಹೇಳುತ್ತಲೇ ಬಂದಿದ್ದು, ಆದರೆ 2016ರ ನಂತರ ಕಪ್ಪುಹಣದ ವಿಷಯವನ್ನು ಡ್ರಾಪ್ ಮಾಡಿಬಿಟ್ಟರು!
ಆದರೆ ಅಕೌಂಟು ಎಂಬ ಪದ ಮಾತ್ರ ಅವರ ನಾಲಿಗೆ ಮೇಲೆ ಸೀಟ್ ರಿಸರ್ವ್ ಮಾಡಿಕೊಂಡು ಕೂತು ಬಿಟ್ಟಿದೆ.
ಮೊದಲಿಗೆ, 2014ರ ಚುನಾವಣಾ ಪ್ರಚಾರದಲ್ಲಿ, ವಿದೇಶದಲ್ಲಿರುವ ಕಪ್ಪುಹಣ ವಾಪಸ್ ತರ್ತೇನೆ, ಎಲ್ಲರ ಅಕೌಂಟಿಗೂ ೧೫ ಲಕ್ಷ ಹಾಕ್ತೇನೆ ಎಂದರು.
* ಕಪ್ಪುಹಣ ತರೋದು ಗೋಲ್ವಾಲ್ಕರಾಣೆಗೂ ಸಾಧ್ಯವಿಲ್ಲ ಎಂದು ಅರಿವಾಯಿತು. ತಾವೂ ಗೆದ್ದಿದ್ದು ಅಂಥದೇ ಹಣದಿಂದ ಅಲ್ವಾ ಅಂತಾ ಆ ಹಣದ ಮೇಲೆ ಕರುಣೆ ಉಕ್ಕಿತು, ಅಂತಹ ಹಣದಾತರ ಸೇವೆ ಮಾಡಲು ಶುರು ಮಾಡಿದರು.
* ’15 ಲಕ್ಷ ಹಾಕಬೇಕು ಅನಕೊಂಡಿದ್ದೆ. ಆದರೆ ಈ ದೇಶದ ಕೋಟ್ಯಂತರ ಬಡವರಿಗೆ ಬ್ಯಾಂಕ್ ಅಕೌಂಟೇ ಇಲ್ಲ ಎಂಬುದು ಗೊತ್ತಾಗಿತು. ಅದಕ್ಕೇ ಜನಧನ್ ಅಕೌಂಟು ಆರಂಭಿಸಿದೆ…’ ಎಂದರು.
ಈ ಅಕೌಂಟುಗಳಿಗೆ ಝೀರೋ ಅಕೌಂಟು ಎಂದೂ ಕರೆಯಲಾಗುತ್ತಿದೆ. ಹೆಸರು ಸರಿಯಾಗಿಯೇ ಇದೆ.
* ‘ಡಿಜಿಟಲ್ ಇಂಡಿಯಾ’ ಶುರುವಾದ ಮೇಲೆ ಡಿಜಿಟಲ್ಲಾಗಿಯೇ ಹಣ ಟ್ರಾನ್ಸ್ಫರ್ ಮಾಡೋ ಯೋಚನೆ ಬಂತಂತೆ. ಅಂದರೆ ಮುಟ್ಟಲಾಗದ, ತಟ್ಟಲೂ ಆಗದ ಡಿಜಿಟಲ್ ಹಣ!
* ಈಗ 2019ರ ಚುನಾವಣೆ ಬಂತಲ್ಲ, ಸಣ್ಣ ರೈತರ ಅಕೌಂಟುಗಳಿಗೆ ಅದರಲ್ಲೂ ಝೀರೋ ಅಕೌಂಟುಗಳಿಗೆ ದಿನಕ್ಕೆ 15 ರೂ. ಹಾಕೋದಾಗಿ ರೀಲು ಬಿಟ್ರು. ‘15 ಲಕ್ಷ ರೂ.’ದಲ್ಲಿನ ಲಕ್ಷ ಅಲಕ್ಷ್ಯಕ್ಕೊಳಗಾದ ಕತೆ ಹೀಗಿದೆ ನೋಡಿ!
ಈಗ ತಮ್ಮ ಸ್ವಂತ 15 ರೂ.ನಲ್ಲಿ ಒಂದು ಚಾ ಕುಡಿದು, ಎಲೆ-ಅಡಿಕೆ-ಸುಣ್ಣ-ತಂಬಾಕು ತಿಂದು ಮೋದಿ ಮಕಕ್ಕ ಉಗಿಯಲು ರೈತರಷ್ಟೇ ಅಲ್ಲ, ನಿರುದ್ಯೋಗಿ ಯುವ ಜನರೂ ರೆಡಿಯಾಗಿದ್ದಾರೆ.
ರೈತರ ಆದಾಯ ದ್ವಿಗುಣ ಆಗೇ ಬಿಟ್ಟಿದೆ!
ಮೋದಿ ಮತ್ತೆ ಮತ್ತೆ ಹೇಳುವುದು ರೈತರ ಆದಾಯವನ್ನು ದ್ವಿಗುಣ ಮಾಡ್ತೀವಿ ಅಂತಾ. ಆದರೆ ಆ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. ಆದರೆ ಒಂದರ್ಥದಲ್ಲಿ ಮೋದಿ ಕಾರಣದಿಂದಾಗಿ ರೈತರ ಆದಾಯ ದ್ವಿಗುಣಗೊಂಡಿದೆ:
ಉದಾಹರಣೆಗೆ: ಒಬ್ಬ ಸಣ್ಣ ರೈತನ ಸಾಲ ೫ ಲಕ್ಷ ಅಂತಾ ಇಟ್ಟುಕೊಳ್ಳಿ. ಅದನ್ನು ಹೀಗೂ ಹೇಳಬಹುದು: ‘ಆತನ/ಆಕೆಯ ಆದಾಯ –5 ಲಕ್ಷ ರೂ (ಮೈನಸ್ 5 ಲಕ್ಷ ರೂ)’…..ಈಗ ಮೋದಿಯ ಕೃಷಿ ವಿರೋಧಿ ನೀತಿಯಿಂದಾಗಿ ಆ ರೈತನ ಸಾಲ 10 ಲಕ್ಷಕ್ಕೆ ಏರಿದೆ. ಅಂದರೆ ಆ ರೈತನ ಆದಾಯ ಈಗ -10 ಲಕ್ಷ ರೂ! ಆಯಿತಲ್ಲ ರೈತನ ಆದಾಯ ದ್ವಿಗುಣ!
****
೨೦೧೪ರ ಚುನಾವಣಾ ಪ್ರಚಾರದಿಂದ ಇಲ್ಲಿವರೆಗೆ ಸುಳ್ಳುಗಳನ್ನೇ ಹೇಳುತ್ತ ಜನದ್ರೋಹಿ ಆಡಳಿತ ನೀಡಿದ, ಅಕೌಂಟೆಬಿಲಿಟಿಯೇ (ಹೊಣೆಗಾರಿಕೆ) ಇಲ್ಲದ ಈ ಮನುಷ್ಯನನ್ನು ಇನ್ನೂ ಹಾಡಿ ಹೊಗಳುವ ಭಕ್ತರಿದ್ದಾರಲ್ಲ, ಅವರಿನ್ನೂ ಮೋದಿಯ ಪೆಪ್ಪರಮೆಂಟು ಚೀಪುತ್ತಲೇ ಇದ್ದಾರೆ….
- Advertisement -